Advertisement

ಪಾಲಿಕೆ ಶಾಲೆಯಲ್ಲೂ ಸ್ಕೌಟ್ಸ್‌-ಗೈಡ್ಸ್‌

01:09 AM Jul 09, 2019 | Lakshmi GovindaRaj |

ಬೆಂಗಳೂರು: “ಬಿಬಿಎಂಪಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 17 ಸಾವಿರ ವಿದ್ಯಾರ್ಥಿಗಳನ್ನು ಸ್ಕೌಟ್ಸ್‌ ಮತ್ತು ಗೈಡ್‌ಗೆ ಸೇರಿಸಲಾಗುವುದು’ ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಹೇಳಿದರು.

Advertisement

ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾಜ ಸೇವಕ ಮತ್ತು ಸ್ಕೌಟ್ಸ್‌ ಮತ್ತು ಗೈಡ್‌ನ‌ ನೋಡಲ್‌ ಅಧಿಕಾರಿ ಎಂ.ಎ.ಚೆಲ್ಲಯ್ಯ ಅವರ 75ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಕೌಟ್ಸ್‌ ಮತ್ತು ಗೈಡ್‌ ಮೂಲಕ ಮಕ್ಕಳು ಶಿಸ್ತು ಕಲಿಯುತ್ತಾರೆ. ಇದು ಅವರ ಜೀವನಕ್ಕೂ ಪ್ರೇರಣೆ ನೀಡುತ್ತದೆ. ಸ್ಕೌಟ್ಸ್‌ ಮತ್ತು ಗೈಡ್‌ ಅಭಿವೃದ್ಧಿಗೆ ಬಿಬಿಎಂಪಿ ಬಜೆಟ್‌ನಲ್ಲಿ ಒಂದು ಕೋಟಿ ರೂ. ಮೀಸಲಿಡಲಾಗಿದೆ. ಮಕ್ಕಳಿಗೆ ತ್ಯಾಜ್ಯ ಮತ್ತು ಪರಿಸರದ ಬಗ್ಗೆ ತಿಳಿವಳಿಕೆ ನೀಡಿದರೆ ಅವರು ಹಿರಿಯರ ತಪ್ಪುಗಳನ್ನೂ ತಿದ್ದುತ್ತಾರೆ. ಮಕ್ಕಳಿಗೆ ಸರ್ಮಪಕವಾದ ಶಿಕ್ಷಣ ನೀಡಿದರೆ ಅವರು ಹಿರಿಯರಿಗೂ ಹೇಳಿಕೊಡುತ್ತಾರೆ ಎಂದು ಹೇಳಿದರು.

ಜು.15ರಿಂದ ಪ್ಲಾಸ್ಟಿಕ್‌ ಬಳಸುವವರ ಮೇಲೆ ದಂಡ ಬೀಳಲಿದೆ. ಅದೇ ರೀತಿಯಲ್ಲಿ ಸಾರ್ವಜನಿಕರು ತ್ಯಾಜ್ಯ ವಿಂಗಡಣೆಯನ್ನು ಕಡ್ಡಾಯವಾಗಿ ಮಾಡದಿದ್ದರೆ ಈಗ ಇರುವ ದಂಡದ ಪ್ರಮಾಣ ಹೆಚ್ಚಾಗಬಹುದು ಎಂದರು.

ಎಂ.ಎ.ಚೆಲ್ಲಯ್ಯ ಅವರು ಸಮಾಜ ಸೇವೆಗೆ ತಮ್ಮನ್ನೇ ಮುಡಿಪಾಗಿ ಇಟ್ಟಿದ್ದಾರೆ. ಸಣ್ಣ ಮಕ್ಕಳನ್ನು ಸಣ್ಣ ವಯಸ್ಸಿನಲ್ಲಿ ತಿದ್ದದರೆ ಇದ್ದರೆ ದೊಡ್ಡವರಾದಮೇಲೆ ತಿದ್ದಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಎಂ.ಎ ಚೆಲ್ಲಯ್ಯ ಅವರು ಸಮಾಜದ ಸೇವೆಗೆ ತಮ್ಮನ್ನೇ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಅವರದೇ ಆದ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.

Advertisement

ಅವರಿಗೆ ಪ್ರೇರಣೆ ನೀಡುವ ಕೆಲಸವನ್ನು ಚೆಲ್ಲಯ್ಯ ಅವರು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಸರ್ಕಾರಿ, ಖಾಸಗಿ ಮತ್ತು ಬಿಬಿಎಂಪಿಯ ಎಲ್ಲ ಶಾಲೆಗಳ ಪ್ರಾಂಶುಪಾಲರ ಸಭೆ ಕರೆಯಲಾಗುವುದು ಎಲ್ಲ ಮಕ್ಕಳನ್ನು ಒಳಗೊಂಡ ಗುಂಪು ರಚನೆ ಮಾಡಿ, ಮಿತವಯ ನೀರು ಉಳಿಸುವ ಬಗ್ಗೆ ಮತ್ತು ಪರಿಸರ ಕಾಳಜಿ ಬಗ್ಗೆ ಜಾಥಾ ಮಾಡಲಾಗುವುದು ಎಂದು ಹೇಳಿದರು.

ಜಾನಪದ ವಿದ್ವಾಂಸ ಗೋ.ರು.ಚನ್ನಬಸಪ್ಪ ಮಾತನಾಡಿ, ನೀರನ್ನು ಮಿತವಾಗಿ ಬಳಸುವಂತೆ ಜಾಗೃತಿ ಮೂಡಿಸುವ ಮೂಲಕ ಚೆಲ್ಲಯ್ಯ ಅವರು ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಕೇರಳದವರಾದರೂ ಕನ್ನಡಿಗರಾಗಿ ಇಲ್ಲಿ ಸೇವೆ ಸಲ್ಲಿಸಿರುವ ಪರಿ ಅನನ್ಯ. ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಭ್ಯ ಸಮಾಜದ ನಿರ್ಮಾಣಕ್ಕೆ ನೆರವಾಗುತ್ತದೆ. ಇಲ್ಲಿ ತರಬೇತಿ ಪಡೆಯುವ ಮಕ್ಕಳು ಸಮಾಜಕ್ಕೆ ಮಾರ್ಗದರ್ಶಕರಾಗುತ್ತಾರೆ ಎಂದರು.

ಎಂ.ಎ ಚೆಲ್ಲಯ್ಯ ಅವರು ಮಾತನಾಡಿ, ಮನುಷ್ಯರಲ್ಲಿ ಮಾನವೀಯ ಗುಣಗಳನ್ನು ಬೆಳೆಸುವುದಕ್ಕೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ನೆರವಾಗುತ್ತಿದೆ. ಸಾವಿರಾರು ಯುವ ವಿದ್ಯಾರ್ಥಿಗಳು ಈ ಮೂಲಕ ಉತ್ತಮ ಜೀವನ ರೂಪಿಸಿಕೊಳುತ್ತಿದ್ದಾರೆ ಎಂದರು. ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಊಟವನ್ನು ಯಾರೂ ವ್ಯರ್ಥ ಮಾಡಬೇಡಿ.

ಇಂದಿಗೂ ಸಾವಿರಾರು ಮಕ್ಕಳು ಊಟವಿಲ್ಲದೆ ಸಾವನ್ನಪ್ಪುತ್ತಿದ್ದಾರೆ. ನಮ್ಮ ದೇಶದಲ್ಲಿ ಪ್ರತಿ ದಿನ ಅಂದಾಜು ಒಂದು ಲಕ್ಷ ಕಾರ್ಯಕ್ರಮಗಳು ನಡೆಯುತ್ತವೆ. ಅವುಗಳಲ್ಲಿ ನೀಡುವ ಆಹಾರದಲ್ಲಿ ಶೇ.30ರಷ್ಟು ವ್ಯರ್ಥವಾಗುತ್ತಿದೆ. ಆಹಾರ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್‌ ರಾಜ್ಯ ಕಾರ್ಯದರ್ಶಿ ಕೆ.ಗಂಗಪ್ಪಗೌಡ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌.ಸಿಂಧ್ಯ, ಬಿಬಿಎಂಪಿ ಸಹಾಯಕ ಆಯುಕ್ತೆ (ಶಿಕ್ಷಣ) ಕೆ.ಆರ್‌.ಪಲ್ಲವಿ, ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ವಿಶೇಷ ಆಯುಕ್ತ (ಶಿಕ್ಷಣ)ಎಸ್‌.ಜಿ.ರವೀಂದ್ರ ಮತ್ತು ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next