ಕೋಲಾರ: ಬೇಸಿಗೆಯ ರಜೆಯ ಮಜಾ ಮುಗಿಸಿ ಮೇ 31 ರಿಂದ ಶಾಲೆಯತ್ತ ಹೆಜ್ಜೆ ಹಾಕಲಿರುವ ಚಿಣ್ಣರನ್ನು ಸ್ವಾಗತಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಕಲ ಸಿದ್ದತೆ ನಡೆಸಿದ್ದು, ಮೇ 29 ರಿಂದಲೇ ಶಿಕ್ಷಕರು ಶಾಲೆಯಲ್ಲಿ ಹಾಜರಿದ್ದು, ಶಾಲಾಕೊಠಡಿ, ಆವರಣ, ಶೌಚಾಲಯ, ಅಡುಗೆ ಮನೆ ಸ್ವಚ್ಚತೆಯೊಂದಿಗೆ ಶಾಲೆ ಪ್ರಾರಂಭೋತ್ಸವಕ್ಕೆ ನಡೆಸಿರುವ ಸಿದ್ದತೆಗಳ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಖುದ್ದು ಭೇಟಿ ನೀಡಿ ಪರೀಶೀಲಿಸಿದರು.
ಸೋಮವಾರ ಜಿಲ್ಲೆಯ ವಿವಿಧ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ, ಶಾಲಾರಂಭಕ್ಕಾಗಿ ನಡೆಸುತ್ತಿರುವ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದ ಅವರು, ಶಾಲಾ ಆರಂಭೋತ್ಸವವನ್ನು ಹಬ್ಬದಂತೆ ಆಚರಿಸುತ್ತಿದ್ದು, ಮಕ್ಕಳಿಗೆ ಆಹ್ಲಾದಕರ ವಾತಾವರಣ ಸೃಷ್ಟಿಗೆ ಸೂಚನೆ ನೀಡಿದರು.
ಮಕ್ಕಳನ್ನು ಶಾಲೆಗಳತ್ತ ಸೆಳೆಯುವ ಕಾರ್ಯ: ಕಲಿಕೆ, ಪರೀಕ್ಷೆ, ಫಲಿತಾಂಶದ ನಂತರ ಸಿಕ್ಕ ವಾರ್ಷಿಕ ಬೇಸಿಗೆ ರಜೆ ಮುಗಿಸಿ ಇದೀಗ ಶಾಲೆಗಳತ್ತ ಮುಖ ಮಾಡಿರುವ ಚಿಣ್ಣರು, ಹೊಸ ಪಠ್ಯಪುಸ್ತಕಗಳನ್ನು ಪಡೆದು ಮತ್ತೆ ಕಲಿಕೆಯಲ್ಲಿ ಮಗ್ನರಾಗಲು ಸಿದ್ದರಾಗಿದ್ದು, ಇದೇ ಮೊದಲ ಬಾರಿಗೆ ಶಾಲಾ ಆರಂಭದ ದಿನವೇ ಮಕ್ಕಳಿಗೆ ಹೊಸ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲು ಇಲಾಖೆ ಸಕಲ ಸಿದ್ದತೆ ನಡೆಸಿದೆ ಎಂದು ತಿಳಿಸಿದರು. ತರಗತಿ ಶಿಕ್ಷಕರು ಮೇ 31ರಿಂದಲೇ ಕಡ್ಡಾಯವಾಗಿ ಶಾಲೆಗೆ ಮಕ್ಕಳು ಬರುವಂತೆ ಮೊಬೈಲ್ ಮೆಸೇಜ್ ಅನ್ನು ಪೋಷಕರಿಗೆ ಕಳುಹಿಸುವ ಮೂಲಕ ಅರಿವು ಮೂಡಿಸಿ ಎಂದು ತಿಳಿಸಿದರು.
ಮಕ್ಕಳ ವ್ಯಾಸಂಗದ ಅವಧಿಯಲ್ಲಿ ಶಾಲಾ ಪ್ರಾರಂಭದ ದಿನವನ್ನು ಮಕ್ಕಳ ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲುವ ರೀತಿ ಹಬ್ಬದಂತೆ ಆಚರಿಸಿ ಅವರಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸುವುದೇ ಶಿಕ್ಷಣ ಇಲಾಖೆ ಉದ್ದೇಶವಾಗಿದ್ದು, ಮಕ್ಕಳನ್ನು ಶಾಲೆಗಳತ್ತ ಸೆಳೆಯುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
Related Articles
ಚಿಣ್ಣರಿಗೆ ಸ್ವಾಗತ ಕೋರಲು ಸಜ್ಜು: ಜಿಲ್ಲೆಯಲ್ಲಿ 1 ರಿಂದ 7ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಗಳು ಒಟ್ಟು 1802 ಇವೆ, ಹಾಗೂ 125 ಸರ್ಕಾರಿ ಪ್ರೌಢಶಾಲೆಗಳಿದ್ದು, ಇಲಾಖೆ ಮಾರ್ಗಸೂಚಿಯಂತೆ ಶಾಲೆಗಳಿಗೆ ತಳಿರು ತೋರಣಗಳಿಂದ ಅಲಂಕರಿಸಿ ಮಕ್ಕಳನ್ನು ಶಾಲೆಗೆ ಆಹ್ವಾನಿಸಲು ಸಿದ್ಧತೆ ನಡೆಸಲು ಸೂಚಿಸಲಾಗಿದೆ ಎಂದರು. ಉಳಿದಂತೆ ಅನುದಾನಿತ 44 ಪ್ರಾಥಮಿಕ ಹಾಗೂ 59 ಪ್ರೌಢಶಾಲೆಗಳು, ಅನುದಾನರಹಿತ 359 ಪ್ರಾಥಮಿಕ ಹಾಗೂ 203 ಪ್ರೌಢಶಾಲೆಗಳು ಸೇರಿದಂತೆ ಒಟ್ಟಾರೆ 1204 ಕಿರಿಯ ಪ್ರಾಥಮಿಕ, 1035ಹಿರಿಯ ಪ್ರಾಥಮಿಕ ಹಾಗೂ 420 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 2659 ಶಾಲೆಗಳು ಜಿಲ್ಲೆಯಲ್ಲಿದ್ದು, ಎಲ್ಲಾ ಶಾಲೆಗಳಲ್ಲೂ ಶಾಲಾ ಪ್ರಾರಂಭೋತ್ಸವಕ್ಕೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಇವುಗಳ ಜತೆಗೆ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 16 ಮೊರಾರ್ಜಿದೇಸಾಯಿ, 4 ಕಿತ್ತೂರು ರಾಣಿ ಚೆನ್ನಮ್ಮ, 3 ಅಂಬೇಡ್ಕರ್ ಹಾಗೂ 1 ಏಕಲವ್ಯ ವಸತಿ ಶಾಲೆಗಳಿದ್ದು, ಇಲ್ಲಿಯೂ 1200ಕ್ಕೂ ಹೆಚ್ಚು ಮಕ್ಕಳು ಶಾಲೆಯತ್ತ ಮೇ 31 ರಂದು ಆಗಮಿಸಲಿದ್ದಾರೆ. ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಿಲು ತಾಲ್ಲೂಕುಗಳಲ್ಲಿ ತಲಾ ಒಂದೊಂದು ಕಸ್ತೂರಿ ಬಾ ಶಾಲೆ ಹಾಗೂ ಆದರ್ಶ ಶಾಲೆಗಳು ಇದ್ದು, ಅವುಗಳಲ್ಲೂ ಸಹಾ ಮೇ 29,30 ರಂದು ಸಿದ್ದತೆ ನಡೆಸಿ ಮೇ 31 ರಂದೇ ಶಾಲಾ ಪ್ರಾರಂಭೋತ್ಸವ ಆಚರಿಸಲು ಸೂಚಿಸಲಾಗಿದೆ.
ಶಾಲೆಗಳು ಆರಂಭಕ್ಕೆ ಹಬ್ಬದಂತೆ ಸಿಹಿ ಊಟ : ಪ್ರಾರಂಭೋತ್ಸವದಂದು ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಚಗೊಳಿಸುವುದು, ಕುಡಿಯಲು ನೀರು ಒದಗಿಸುವುದು, ಶೌಚಾಲಯವನ್ನು ಸುಸ್ಥಿತಿಯಲ್ಲಿಡುವುದು, ಬಿಸಿಯೂಟದ ವ್ಯವಸ್ಥೆ ಹಾಗೂ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸುವ ಕಾರ್ಯ ಮಾಡುವಂತೆ ಸೂಚಿಸಲಾಗಿದೆ. ಒಂದನೇ, ಆರನೇ ಹಾಗೂ 8ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭದ ದಿನ ಆಹ್ಲಾದಕರ ಸಂದರ್ಭವಾಗಿರುವಂತೆ ಶಿಕ್ಷಕರು ಗಮನಹರಿಸಬೇಕು, ಇದು ಮಕ್ಕಳ ವ್ಯಾಸಂಗದ ಅವಧಿಯಲ್ಲಿ ಲವಲವಿಕೆಯಿಂದ ಕಳೆಯಲು ಪ್ರೇರಣೆ ನೀಡುತ್ತದೆ ಎಂದು ಇಲಾಖೆ ಸೂಚಿಸಿದೆ ಎಂದರು.
ಪಠ್ಯಪುಸ್ತಕ , ಸಮವಸ್ತ್ರ ವಿತರಣೆ: ಶಾಲಾ ಹಬ್ಬಕ್ಕೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಗ್ರಾಮದ ಗಣ್ಯರನ್ನು ಕರೆಸಿ ಶಾಲಾ ಹಬ್ಬವನ್ನು ಸಡಗರದಿಂದ ಆಚರಿಸಬೇಕು ಮತ್ತು ಅಂದು ಮಕ್ಕಳಿಗೆ ಸಿಹಿ ಹಂಚುವುದು ಜತೆಗೆ ಇಲಾಖೆ ನೀಡಿರುವ ಪಠ್ಯಪುಸ್ತಕ, ಸಮವಸ್ತ್ರ ಮೊದಲ ದಿನವೇ ವಿತರಿಸಲು ಸೂಚಿಸಲಾಗಿದೆ. ಈ ನಡುವೆ ಇಲಾಖೆ ಮಿಂಚಿನ ಸಂಚಾರಕ್ಕಾಗಿ ಅಧಿಕಾರಿಗಳ ತಂಡಗಳನ್ನು ರಚಿಸಿದ್ದು, ಜೂ.1 ರಿಂದ 15 ರವರೆಗೂ ತಂಡಗಳು ದಿಢೀರ್ ಶಾಲೆಗಳಿಗೆ ಭೇಟಿ ನೀಡಲಿವೆ, ಶಾಲೆಗಳಲ್ಲಿ ಶಾಲಾ ಆರಂಭೋತ್ಸವ ಮಾಡಿರುವ ಕುರಿತು, ಪಠ್ಯಪುಸ್ತಕ,ಬಟ್ಟೆ ವಿತರಣೆ ಕುರಿತು ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.