Advertisement

ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಶಾಲಾ ತರಗತಿ ಆರಂಭಕ್ಕೆ ಚಿಂತನೆ : ಸುರೇಶ್‌ ಕುಮಾರ್‌ ಮಾಹಿತಿ

01:40 AM Jul 01, 2021 | Team Udayavani |

ಬೆಂಗಳೂರು : ಎಲ್ಲೆಲ್ಲಿ ಕೊರೊನಾ ಸೋಂಕು ಕಡಿಮೆ ಇದೆಯೋ ಅಲ್ಲಿ ಭೌತಿಕ ತರಗತಿ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದ್ದಾರೆ.

Advertisement

ಶಿಕ್ಷಣದ ಭವಿಷ್ಯ ಸಂಬಂಧ “ಉದಯವಾಣಿ’ ವೆಬಿನಾರ್‌ ನಲ್ಲಿ ಮಾತನಾಡಿದ ಅವರು, ಡಾ| ದೇವಿ ಶೆಟ್ಟಿ ಸಲ್ಲಿಸಿರುವ ವರದಿಯಲ್ಲಿ ವಿಕೇಂದ್ರಿಕೃತ ವ್ಯವಸ್ಥೆಯಲ್ಲಿ ತರಗತಿ ಆರಂಭಿಸಲು ಸಲಹೆ ನೀಡಿದ್ದಾರೆ. ಜಿಲ್ಲೆ, ತಾಲೂಕು ಮಟ್ಟದ ಕೊರೊನಾ ಸ್ಥಿತಿ ಅವಲೋಕಿಸಿ ಈ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ತಜ್ಞರ ವರದಿ ಮತ್ತು ಆರೋಗ್ಯ ಇಲಾಖೆಯ ಸಲಹೆಯಂತೆ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಕಲಿಕಾ ಅಂತರ ನಿವಾರಣೆ ಮತ್ತು ಭೌತಿಕ ತರಗತಿ ಆರಂಭ ಅಗತ್ಯ. ಶಿಕ್ಷಣ ವಂಚಿತ ಮಕ್ಕಳ ಸಂಖ್ಯೆ, ಬಾಲ ಕಾರ್ಮಿಕರು, ಬಾಲ್ಯ ವಿವಾಹ ಹೆಚ್ಚಾಗುತ್ತಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆಗಾಗಿ ನ್ಯಾಯಾಲಯದ ಸೂಚನೆ ಮೇರೆಗೆ ಪ್ರತ್ಯೇಕ ತಂಡಗಳ ರಚನೆ ಮಾಡಲಿದ್ದೇವೆ. ಮಕ್ಕಳ ಕಲಿಕೆ ನಿರಂತರತೆಯ ಹಿನ್ನೆಲೆಯಲ್ಲಿ ಓದು, ಬರಹ ಮತ್ತು ಗಣಿತಕ್ಕೆ ವಿಶೇಷ ಒತ್ತು ನೀಡಲಿದ್ದೇವೆ ಎಂದರು.

ವಿದ್ಯಾಗಮಕ್ಕಾಗಿ ಕಾರ್ಯಪಡೆ
ವಿದ್ಯಾಗಮವನ್ನು ಪರಿಷ್ಕೃತ ರೂಪದಲ್ಲಿ ಅನುಷ್ಠಾನಿಸಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಬಗ್ಗೆ ತಜ್ಞರ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಿದ್ಯಾಗಮ ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕಾಗಿ ಗ್ರಾ.ಪಂ. ಮಟ್ಟದಲ್ಲಿ ಸ್ವಯಂಸೇವಕರನ್ನು ಬಳಸಿಕೊಂಡು ಕಾರ್ಯಪಡೆ ರಚನೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.

ಏಕರೂಪದ ಶಿಕ್ಷಣ ಚಟುವಟಿಕೆ
ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಿಬಿಎಂಪಿ ಶಾಲೆ, ಏಕಲವ್ಯ ವಸತಿ ಶಾಲೆ ಸಹಿತ ವಿವಿಧ ಇಲಾಖೆಗಳು ನಡೆಸುವ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ಏಕರೂಪಕ್ಕೆ ತರಲು ಚಿಂತನೆ ನಡೆಸಲಾಗುತ್ತದೆ. ಈ ಶಾಲೆಗಳ ಆಡಳಿತವನ್ನು ಆಯಾ ಇಲಾಖೆ ನೋಡಿಕೊಳ್ಳಲಿದೆ. ಶೈಕ್ಷಣಿಕ ಅಂಶದತ್ತ ಮಾತ್ರ ಶಿಕ್ಷಣ ಇಲಾಖೆ ಗಮನ ಹರಿಸಲಿದೆ. ಈ ನಿಟ್ಟಿನಲ್ಲಿ ಅಲ್ಲಿನ ಶಿಕ್ಷಕರಿಗೆ ತರಬೇತಿ ನೀಡಲಿದ್ದೇವೆ ಎಂದರು.

Advertisement

ನೆಟ್‌ ವರ್ಕ್‌ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ
ಗ್ರಾಮೀಣ ವಿದ್ಯಾರ್ಥಿಗಳ ಮೊಬೈಲ್‌ ನೆಟ್‌ ವರ್ಕ್‌ ಸಮಸ್ಯೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಮತ್ತು ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರೊಂದಿಗೆ ಇನ್ನೆರಡು ದಿನಗಳಲ್ಲಿ ಮಾತುಕತೆ ನಡೆಸುವುದಾಗಿ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ನೆಟ್‌ವರ್ಕ್‌ ಕಂಪೆನಿಗಳ ತುರ್ತು ಸಭೆ ಕರೆದು ಸಮಸ್ಯೆಗೆ ಶೀಘ್ರ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದೇನೆ ಎಂದರು.

ವಿದ್ಯಾರ್ಥಿಗಳು ನೆಟ್‌ ವರ್ಕ್‌ಗಾಗಿ ಕಷ್ಟ ಪಡುವುದು ಗಮನಕ್ಕೆ ಬಂದಿದೆ. ಕಲಿಕೆಗಾಗಿ ಗ್ರಾ.ಪಂ. ಗ್ರಂಥಾಲಯಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬಹುದು. ಶಾಲಾವರಣ ಮತ್ತು ಸಮುದಾಯ ಭವನ, ಸರಕಾರಿ ಕಟ್ಟಡಗಳ ಬಳಕೆಯ ಬಗ್ಗೆಯೂ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಭಾರತ್‌ ಸೇವಾ ನೆಟ್‌ವರ್ಕ್‌ ವ್ಯವಸ್ಥೆಯನ್ನು ಉನ್ನತೀಕರಿಸುವ ವ್ಯವಸ್ಥೆಯೂ ನಡೆಯುತ್ತಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತದೆ ಎಂದರು.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಸಮೀಕ್ಷೆ ಪ್ರಕಾರ ಶೇ. 39 ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣಕ್ಕೆ ಅಗತ್ಯ ಪರಿಕರ ಇಲ್ಲ. ಹೀಗಾಗಿ ಚಂದನದಲ್ಲಿ ಸಂವೇದ ಪಾಠ ಆರಂಭಿಸಲಿದ್ದೇವೆ. ಒಂದು ತಿಂಗಳ ಸೇತುಬಂಧ ಕಾರ್ಯಕ್ರಮವನ್ನು ಅಗತ್ಯ ಬಿದ್ದರೆ ವಿಸ್ತರಿಸುತ್ತೇವೆ ಎಂದು ಸಚಿವರು ತಿಳಿಸಿದರು.

ರಾಜ್ಯವ್ಯಾಪಿ ಮೊಬೈಲ್‌ ಬ್ಯಾಂಕ್‌
ಮೊಬೈಲ್‌ ಬ್ಯಾಂಕ್‌ ಪರಿಕಲ್ಪನೆಯನ್ನು ರಾಜ್ಯವ್ಯಾಪಿ ವಿಸ್ತರಿಸುವ ಸಾಧ್ಯತೆ ಇದೆ. ದಾನಿಗಳಿಂದ ಮೊಬೈಲ್‌ ಪಡೆದು ವಿದ್ಯಾರ್ಥಿಗಳಿಗೆ ನೀಡುವುದಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಮೊಬೈಲ್‌ ಬ್ಯಾಂಕ್‌ ಆರಂಭಕ್ಕೆ ಚಿಂತನೆ ನಡೆಸುತ್ತಿದ್ದೇವೆ ಎಂದು ಸಚಿವರು ಹೇಳಿದರು.

ಆನ್‌ಲೈನ್‌ ಶಿಕ್ಷಣದಲ್ಲಿ ತರಗತಿ ಕೋಣೆಯ ವಾತಾವರಣ ಬರಬೇಕು. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಪರಸ್ಪರ ಮಾತುಕತೆ ನಡೆಯಬೇಕು. ಹೆತ್ತವರಿಗೆ ಆನ್‌ಲೈನ್‌ ತರಗತಿಯ ಬಳಕೆಯ ಬಗ್ಗೆ ಅರಿವು, ಮಾಹಿತಿ ನೀಡಬೇಕು.
-ಧನಲಕ್ಷ್ಮೀ ಬಿ.ಕೆ., ನಿವೃತ್ತ ಮುಖ್ಯ ಶಿಕ್ಷಕಿ, ವಿಷಯ ತಜ್ಞರು, ಉಡುಪಿ

ಭೌತಿಕ ತರಗತಿ ಸಾಧ್ಯವಾಗದೆ ಇದ್ದರೂ ವಿದ್ಯಾಗಮ ಆರಂಭಿಸಿ, ಶಾಲಾವರಣದಲ್ಲಿ ಪಾಳಿ ಪದ್ಧತಿಯಂತೆ ವಿದ್ಯಾಗಮಕ್ಕೆ ಅವಕಾಶ ಒದಗಿಸಬೇಕು. ಓದು, ಬರಹ ಮತ್ತು ಗಣಿತ ವಿದ್ಯಾರ್ಥಿಗಳಿಗೆ ಅತೀ ಮುಖ್ಯ .
-ಮುಕುಂದ ಪಿ., ಶಿಕ್ಷಣ ತಜ್ಞರು, ಸೇವಾ ಭಾರತಿ ಹಿ. ಪ್ರಾ. ಶಾಲೆ, ತೀರ್ಥಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next