Advertisement

ಸೈದಾಪುರ: ದುರಸ್ತಿ ಕಾಣದ ಶಿಥಿಲಗೊಂಡ ಶಾಲಾ ಕಟ್ಟಡ ; ಸೋರುತಿಹುದು ಶಾಲೆ ಮಾಳಿಗಿ

05:47 PM Jul 16, 2022 | Team Udayavani |

ಸೈದಾಪುರ: ಜೋರು ಮಳೆ ಬಂದರೆ ಸೋರುವ ಸೂರು, ಶಿಥಿಲಗೊಂಡಿರುವ ಕೊಠಡಿಯಲ್ಲಿ ಮಳೆ ನೀರು, ಮಳೆ ನಿಲ್ಲುವವರೆಗೆ ಮಕ್ಕಳು ಕೈಯಲ್ಲಿ ಪುಸ್ತಕದ ಚೀಲಗಳನ್ನು ಹಿಡಿದುಕೊಂಡು ಮಕ್ಕಳು ಜೀವ ಭಯದಲ್ಲಿ ಪಾಠ ಕೇಳುವಂತಾಗಿದೆ.

Advertisement

ಪಟ್ಟಣದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ  15 ಕೋಣೆಗಳು ಶಿಥಿಲಗೊಂಡಿದ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದಿನ ನಿತ್ಯ ಭೀತಿ ಎದುರಿಸುವಂತಾಗಿದೆ. 1959ರಲ್ಲಿ ಸುಮಾರು 11826 ಚದರ ಅಡಿ ವಿಸ್ತಾರದಲ್ಲಿ 15 ಕೋಣೆಗಳ ಶಾಲಾ ಕಟ್ಟಡ ನಿರ್ಮಾಣಗೊಂಡಿದೆ. ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 220 ವಿದ್ಯಾರ್ಥಿಗಳಿದ್ದಾರೆ. ಶಾಲಾ ಕಟ್ಟಡವು ಸುಮಾರು 60 ವರ್ಷಗಳ ಹಳೆಯದಾದ ಕಾರಣ ಕಟ್ಟಡದ ಮೇಲ್ಛಾವಣಿ ಶಿಥಿಲಗೊಂಡಿದ್ದು ಸ್ವಲ್ಪ ಮಳೆ ಬಂದರು ಕೂಡ ತರಗತಿ ಕೋಣೆಗಳು ಸೋರುತ್ತವೆ. ಗೋಡೆಗಳ ಮತ್ತು ಚಾವಣಿಯ ಸಿಮೆಂಟ್ ಪದರು ಕೆಲವೊಮ್ಮೆ ಶಾಲಾವಧಿಯಲ್ಲಿಯೇ ಉದುರಿ ಬೀಳುತ್ತಿದೆ. ಅಲ್ಲದೇ ಕಬ್ಬಿಣದ ಕಂಬಿಗಳು ಹೊರಗಡೆ ಕಾಣುತ್ತಿವೆ. 15 ಕೋಣೆಗಳಲ್ಲಿ 4 ಕೋಣೆಗಳು ಸ್ವಲ್ಪ ಉತ್ತಮವಾಗಿವೆ. ಉಳಿದ 08 ಕೋಣೆಗಳು ಶಿಥಿಲಗೊಂಡಿವೆ. ಅದರಲ್ಲಿ 3 ಕೋಣೆಗಳು ಸಂಪೂರ್ಣ ಶಿಥಿಲಗೊಂಡು ತರಗತಿ ನಡೆಸಲು ಯೋಗ್ಯವಾಗಿರದೆ ಇರುವುದರಿಂದ ಅವುಗಳನ್ನು ಮುಚ್ಚಲಾಗಿದೆ.

ಮಳೆಗಾಲದಲ್ಲಿ ಸ್ವಲ್ಪ ಮಳೆ ಬಂದರೆ ಸಾಕು ತರಗತಿಯಲ್ಲಿ ನೀರು ಸೋರುತ್ತದೆ. ಮಳೆ ನಿಲ್ಲುವವರೆಗೆ ಅಲ್ಪ-ಸ್ವಲ್ಪ ಸೋರದೆ ಇರುವ ಕೋಣೆಯ ಯಾವುದಾದರೊಂದು ಮೂಲೆಯಲ್ಲಿ ಮಕ್ಕಳು ಪುಸ್ತಕ, ಚೀಲಗಳನ್ನು ಹಿಡಿದು ನಿಲ್ಲುಬೇಕಾಗಿದೆ.  ಒಂದು ಕಾಲದಲ್ಲಿ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇಂದು ಅದೇ ಶಾಲೆಯ ಪರಿಸ್ಥಿತಿ ಗಮನಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ಜಾಣ ಕುರುಡುತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿ ವರ್ಷವು ಕೂಡ ಶಾಲೆಯ ಮುಖ್ಯ ಗುರುಗಳು ಶಾಲಾವಸ್ಥೆಯನ್ನು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಮನವಿಯನ್ನು ನೀಡಿದರು ಪ್ರಯೋಜನವಾಗಿಲ್ಲ.

ದೈಹಿಕ ಶಿಕ್ಷಕರಿದ್ದರೂ ಆಟದ ಮೈದಾನವಿಲ್ಲ: ಈ ಶಾಲೆಯಲ್ಲಿ ದೈಹಿಕ ಶಿಕ್ಷಕರಿದ್ದರೂ ಮಕ್ಕಳಿಗೆ ಆಟವಾಡಲು ಆಟದ ಮೈದಾನವಿಲ್ಲ. ಇದೇ ಶಾಲೆಯಲ್ಲಿ ಹಿಂದೆ ಅಕ್ಕ-ಪಕ್ಕದ ಖಾಲಿ ಜಾಗದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದರು.

ಈ ಶಾಲೆಯ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುತೆವೆ ಹಾಗೂ ಗ್ರಾಮದ ಮುಖಂಡರು ಸಹಕಾರ ನೀಡಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಲು ಪ್ರಯತ್ನಿಸುತ್ತೇವೆ. -ಸ್ನೇಹಲ್ ಆರ್, ಜಿಲ್ಲಾಧಿಕಾರಿ ಯಾದಗಿರಿ

Advertisement

ಈ ಭಾಗದಲ್ಲಿ ಮಾದರಿ ಶಾಲೆ ಎಂಬ ಖ್ಯಾತಿ ಪಡೆದುಕೊಂಡು ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡಿದಂತಹ ಶಾಲೆ ಇಂದು ಶಿಥಿಲಾವಸ್ಥೆ ತಲುಪಿರುವುದು ರ್ದುದೈವದ ಸಂಗತಿಯಾಗಿದೆ. ದಯವಿಟ್ಟು ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು,  ಮತ್ತು ಗ್ರಾಮದ ಮುಖಂಡರು ನೂತನ ಕಟ್ಟಡವನ್ನು ನಿರ್ಮಿಸಲು ಸಹಾಯ ಸಹಕಾರ ನೀಡಬೇಕು.-ಬಸವರಾಜ ನಾಯಕ ಸೈದಾಪುರ ಎಸ್‍ಡಿಎಂಸಿ ಅಧ್ಯಕ್ಷ

-ಭೀಮಣ್ಣ ಬ ವಡವಟ್

Advertisement

Udayavani is now on Telegram. Click here to join our channel and stay updated with the latest news.

Next