Advertisement

ರಮಣೀಯ ತಾಣ, ಶಿವಪ್ಪನಾಯಕನ ಕೋಟೆ

02:12 PM Nov 08, 2018 | |

ಸಣ್ಣ ಮಟ್ಟದ ಪ್ರವಾಸ ಕೈಗೊಳ್ಳುವುದಿದ್ದರೆ ಕಾಸರಗೋಡು ಸಮೀಪದ ಬೇಕಲ್‌ ಕೋಟೆ ಒಂದು ಉತ್ತಮ ಆಯ್ಕೆ. ಬೀಚ್‌ ಹಾಗೂ ಕೋಟೆಯು ಪ್ರವಾಸಿಗರ ಮನಸೆಳೆಯುತ್ತದೆ.

Advertisement

ದಿನನಿತ್ಯದ ಕೆಲಸದ ಜಂಜಾಟದ ನಡುವೆ ಒಂದು ಬ್ರೇಕ್‌ ಬೇಕೆನಿಸಿತು. ಹೀಗಿರುವಾಗ ಒಂದು ದಿನ ಸಂಜೆ ತಂಪಾದ ಗಾಳಿ ಬೀಸುತ್ತಿತ್ತು, ಆಕಾಶದಲ್ಲಿ ಮೋಡಕವಿದ ವಾತಾವರಣವಿತ್ತು. ಇಂಥ ಚುಮುಚುಮು ಚಳಿಯಲ್ಲಿ ನಾವೆಲ್ಲ ನಾಲ್ಕೈದು ಗೆಳೆಯರು ಕೂಡಿ ಹರಟೆ ಹೊಡೆಯುತ್ತಿದ್ದೆವು. ಕೆಲವು ಸಮಯದ ಅನಂತರ ಗೆಳೆಯರೆಲ್ಲರೂ ಕೂಡಿ ಟೀ ಕುಡಿಯಲು ಹೋಟೆಲ್‌ಗೆ ಹೋದೆವು. ಅಲ್ಲಿ ಹಲವಾರು ವಿಷಯಗಳ ಚರ್ಚೆ ನಡೆಸುತ್ತಿರುವಾಗ ಗೆಳೆಯನೊಬ್ಬನು ಇಂಥ ಒಳ್ಳೆಯ ವಾತಾವರಣದಲ್ಲಿ ಯಾಕೆ ನಾವೆಲ್ಲರೂ ಒಂದೆರಡು ದಿನ ಟೂರ್‌ಗೆ ಹೋಗಬಾರದು ಎಂದನು. ಅದಕ್ಕೆ ಒಬ್ಬ ಗೆಳೆಯನು ಸದ್ಯ ಮಳೆಗಾಲದಲ್ಲಿ ಟೂರ್‌ ಬೇಡ ಎಂದನು. ಆಗ ಇನ್ನೊಬ್ಬ ಗೆಳೆಯ ಸದ್ಯ ಟೂರ್‌ ಮಾಡಬಹುದು ಎಂದು ಹಲವಾರು ರೀತಿಯ ಮಾಹಿತಿಗಳನ್ನು ನೀಡಿದನು.

ದೀರ್ಘ‌ ಪ್ರಯಾಣ
ಹೀಗೆ ಹಾಗೆ ಚಡಪಡಿಸುತ್ತಾ ಎಲ್ಲರ ಸಮ್ಮತದೊಂದಿಗೆ 8 ಮಂದಿ ಬೆಳಗ್ಗೆ 7:30ಕ್ಕೆ ಸರಿಯಾಗಿ ನಾವೆಲ್ಲರೂ ಗೆಳೆಯನ ಕಾರನ್ನು ಹತ್ತಿ ಮಂಗಳೂರಿನಿಂದ ಸುಮಾರು 63 ಕಿ.ಮೀ. ದೂರದಲ್ಲಿರುವ ಬೇಕಲ್‌ ಕೋಟೆಗೆ ಹೊರಟೆವು. ದೀರ್ಘ‌ ಕಾಲದ ಪ್ರಯಾಣದ ಅನಂತರ ಸಮಯ 9:15ಕ್ಕೆ ಶಿವಪ್ಪನಾಯಕನ ಕೋಟೆಯ ಮುಂದೆ ನಾವೆಲ್ಲರೂ ಹಾಜರಾಗಿದ್ದೆವು.

ಸೂರ್ಯಾಸ್ತಮಾನ
ಅನಂತರ ಅಲ್ಲಿಯೇ ಸ್ವಲ್ಪ ಹೊತ್ತು ಕಳೆದು ಎಲ್ಲರೂ ತಂದಿದ್ದ ತಿಂಡಿ ಪೊಟ್ಟಣಗಳನ್ನು ತಿನ್ನಲು ಆರಂಭಿಸಿದೆವು. ಕೋಟೆಯ ಒಳಕ್ಕೆ ಹೋಗಿ ಅಲ್ಲಿನ ಸೌಂದರ್ಯವನ್ನು ಅನುಭವಿಸಿದೆವು. ಗೆಳೆಯರೊಂದಿಗೆ ಕೂಡಿ ಹತ್ತಾರು ಆಟಗಳನ್ನು ಆಡಿ ತಮ್ಮ ಬಾಲ್ಯವನ್ನು ಮತ್ತೊಮ್ಮೆ ನೆನೆಪಿಸಿ ಕೊಂಡೆವು. ಕೋಟೆಯ ಪಕ್ಕದಲ್ಲೇ ಇದ್ದ ಬೀಚ್‌ ಗೆ ಇಳಿದು ಸಂತೋಷದಿಂದ ಕುಣಿದಾಡಿದೆವು. ಸಂಜೆಯ ಸೂರ್ಯಾಸ್ತಮಾನವನ್ನು ಕೋಟೆಯ ಮಧ್ಯೆ ನಿಂತು ನೋಡಿದ ಅನುಭವ ನಯನಮನೋಹರವಾಗಿತ್ತು ಮನಸಿಲ್ಲದ ಮನಸ್ಸಿಂದ ಕೋಟೆಯಿಂದ ಮತ್ತೆ ಮನೆಯ ಹಾದಿ ಹಿಡಿದೆವು. ನಮಗೆಲ್ಲರಿಗೂ ಈ ಬೇಕಲ್‌ ಕೋಟೆಯ ಪ್ರವಾಸ ಇನ್ನೂ ನಮ್ಮ ಮನದಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ.

ಕೋಟೆಯ ವಿಶೇಷತೆ
ಪ್ರಕೃತಿ ರಮಣೀಯ, ಇತಿಹಾಸ ಸ್ಮರಣೀಯ ಬೇಕಲ ಕೋಟೆ ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳ ಲ್ಲೊಂದು. ಇಲ್ಲಿ ಸಿನೆಮಾ ಮತ್ತು ಧಾರವಾಹಿಯ ಅನೇಕ ಚಿತ್ರೀಕರಣಗಳು ನಡೆದಿವೆ. 385 ವರ್ಷಗಳ ಚಾರಿತ್ರಿಕ ಬೇಕಲ ಕೋಟೆಯನ್ನು ಕಟ್ಟಿದವನು ಬಿದನೂರಿನ ಕನ್ನಡಿಗ ಅರಸ ಶಿವಪ್ಪ ನಾಯಕ. ಇಂದಿಗೂ ಈ ಅತ್ಯಂತ ಮನೋಹರವಾದ ಕೋಟೆಯನ್ನು ನೋಡುವಾಗ ಸಿಗುವ ಖುಷಿಯೇ ಬೇರೆ. ಬೇಕಲ ಕೋಟೆಯ ವಿಹಂಗಮ ನೋಟದ ಜತೆಗೆ ಕೋಟೆ ಮೇಲೆ ನಿಂತು ನೀಲಿಗೆಂಪು ಕಡಲಂಚಿನಲ್ಲಿ ಸೂರ್ಯಾಸ್ತ ವೀಕ್ಷಣೆಯ ಸೊಬಗು ಸವಿಯುವುದೇ ಅದ್ಭುತ ಅನುಭವ.

Advertisement

ಪಕ್ಕದಲ್ಲೇ ಬೀಚ್‌ ಪಾರ್ಕ್‌ ಇದೆ. ಇತಿಹಾಸಬೇಕಲ್‌ ಕೋಟೆ ಸುಮಾರು 15 ನೇ ಶತಮಾನದಲ್ಲಿ ನಿರ್ಮಾಣವಾದ ಕೋಟೆ. ಸ್ಥಳೀಯ ಆಡಳಿತಗಾರ ಹಿರಿಯ ವೆಂಕಟಪ್ಪನ್‌ ನಾಯಕ ಎಂಬವರು ಇದನ್ನು ನಿರ್ಮಿಸಲು ಪ್ರಾರಂಭಿಸಿದರು. ಅನಂತರ ಇದನ್ನು ಶಿವಪ್ಪ ನಾಯಕ ಎಂಬವರು ಪೂರ್ಣಗೊಳಿಸಿದರು. ಬಳಿಕ ಇದು ಹೈದರಾಲಿಯ ಅಧೀನಕ್ಕೆ ಒಳಪಟ್ಟಿತು. ಮುಂದೆ ಟಿಪ್ಪು ಇದನ್ನು ತನ್ನ ಮುಖ್ಯ ಸೇನಾ ಕೆಂದ್ರವನ್ನಾಗಿ ಮಾಡಿಕೊಂಡನು. 1799ರಲ್ಲಿ ಬ್ರಿಟಿಷರೊಂದಿಗಿನ ಯುದ್ಧದಲ್ಲಿ ಟಿಪ್ಪು ಮರಣದ ಅನಂತರ ಈಸ್ಟ್‌ ಇಂಡಿಯಾ ಕಂಪೆನಿ ಈ ಕೋಟೆಯನ್ನು ವಶಪಡಿಸಿಕೊಂಡಿತು. ವಿಸ್ತೀರ್ಣದಲ್ಲಿ ಇದು ಸುಮಾರು 40 ಎಕರೆಗಳಷ್ಟು ಇದ್ದು ವೀಕ್ಷಣಾ ಗೋಪುರ, ಪಿರಂಗಿಗಳು ಮತ್ತು ರಕ್ಷಣೆಗಾಗಿ ಗೋಡೆಯಲ್ಲಿ ಕಿಂಡಿಗಳನ್ನು ಒಳಗೊಂಡಿದೆ. ಇದು ಕೇರಳದಲ್ಲಿರುವ ಅತಿ ದೊಡ್ಡದಾದ ಕೋಟೆ. ಇದರಲ್ಲಿ ಅರಮನೆ ಇದ್ದ ಕುರುಹು ಏನೂ ಇಲ್ಲ. ಇದನ್ನು ಕೇವಲ ರಕ್ಷಣೆಗಾಗಿ ಮಾತ್ರ ನಿರ್ಮಿಸಲಾಗಿದೆ. ಕೋಟೆಯ ಮುಖ್ಯ ದ್ವಾರದಲ್ಲಿ ಮುಖ್ಯ ಪ್ರಾಣ (ಹನುಮಾನ್‌) ದೇವಾಲಯ ಮತ್ತು ಮಸೀದಿಗಳಿವೆ. ಇದು ಸಮುದ್ರ ತೀರದಲ್ಲಿದ್ದು ಕೊಟೆಯ ಒಳಗಿನಿಂದ ಸಮುದ್ರಕ್ಕೆ ಹೋಗಲು ಸುರಂಗ ಮಾರ್ಗವಿದೆ.

ರೂಟ್‌ ಮ್ಯಾಪ್‌
· ಮಂಗಳೂರಿನಿಂದ -ಬೇಕಲಕೋಟೆಗೆ ಸುಮಾರು 68 ಕಿ.ಮೀ. ದೂರ.
· ನೀರು, ಸ್ನ್ಯಾಕ್ಸ್‌ ಸಹಿತ ತಿಂಡಿ- ತಿನಿಸುಗಳು ಇಲ್ಲಿಯೇ ಲಭ್ಯ. 

ಸುಶಾಂತ್‌ ತೊಕ್ಕೊಟ್ಟು 

Advertisement

Udayavani is now on Telegram. Click here to join our channel and stay updated with the latest news.

Next