Advertisement

ನನ್ನ ಖಾಸಗಿತನ ನನ್ನ ಹಕ್ಕು; ಸುಪ್ರೀಂಕೋರ್ಟ್‌

06:00 AM Aug 25, 2017 | Team Udayavani |

ನವದೆಹಲಿ: ಖಾಸಗಿತನ’ವನ್ನು “ಮೂಲಭೂತ ಹಕ್ಕಿ’ನ ಪರಿಧಿಯೊಳಗೆ ಸೇರಿಸಿರುವ ಸುಪ್ರೀಂಕೋರ್ಟ್‌, ಇದು “ಮಾನವ ಘನತೆಯ ಪ್ರಧಾನ ಮತ್ತು ಅವಿಭಾಜ್ಯ ಅಂಗ’ ಎಂದು ಐತಿಹಾಸಿಕ ತೀರ್ಪು ನೀಡಿದೆ.

Advertisement

ದೇಶದ 125 ಕೋಟಿ ಜನರಿಗೂ ಅನ್ವಯವಾಗುವಂಥ ಬೃಹತ್‌ ತೀರ್ಪು ನೀಡಿರುವ ಕೋರ್ಟ್‌, “”ಖಾಸಗಿ ಹಕ್ಕು ಎಂಬುದು ಸಂವಿಧಾನದ ಭಾಗ 3ರಲ್ಲಿನ ಪರಿಚ್ಛೇದ 21ರಲ್ಲಿ ಖಚಿತವಾಗಿ ಹೇಳಿರುವಂತೆ ಜೀವಿತ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗ” ಎಂದು ಘೋಷಿಸಿದೆ.

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೆಹರ್‌ ಅವರ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಿದ್ದು, ಈ ಹಿಂದಿನ ಅಂದರೆ 1950 ಮತ್ತು 1962ರ ಸಾಂವಿಧಾನಿಕ ಪೀಠಗಳು ಖಾಸಗಿತನ ಮೂಲಭೂತ ಹಕ್ಕಲ್ಲ ಎಂದು ಕೊಟ್ಟಿದ್ದ  ತೀರ್ಪನ್ನು ತೆಗೆದು ಬದಿಗಿರಿಸಿದೆ.

ಆಧಾರ್‌ ಕುರಿತಂತೆ ಸ್ಪಷ್ಟವಾಗಿ ಏನನ್ನೂ ಹೇಳದ ಈ ಪೀಠ, ಈ ವಿಚಾರವನ್ನು ಐದು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನೋಡಿಕೊಳ್ಳಲಿದೆ ಎಂದಿದೆ.

ಸಂವಿಧಾನದ ಅಡಿಯಲ್ಲಿ ಖಾಸಗಿತನಕ್ಕೆ ಮೂಲಭೂತ ಸ್ಥಾನಮಾನ ನೀಡುವುದು ಅಸಾಧ್ಯ ಎಂಬ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಾದವನ್ನು ತಿರಸ್ಕರಿಸಿರುವ ಈ ಬೃಹತ್‌ ಪೀಠ, “ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆ ಪ್ರತಿಬಂಧಿಸುವ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಹಾಗೂ ಶಿಕ್ಷಣದ ಹಕ್ಕು, ಸಾಂವಿಧಾನಿಕ ಸೌಲಭ್ಯಗಳ ಪಡೆಯುವ ಹಕ್ಕಿನ’ ಜತೆಗೆ “ಖಾಸಗಿ ಹಕ್ಕ’ನ್ನೂ ಸೇರಿಸಿದೆ.

Advertisement

ಒಟ್ಟಾರೆ ಒಂಬತ್ತು ನ್ಯಾಯಮೂರ್ತಿಗಳು ಆರು ರೀತಿಯ ತೀರ್ಪು ಬರೆದಿದ್ದಾರೆ. ಪ್ರಧಾನ ತೀರ್ಪು ಬರೆದ ನ್ಯಾ.ಡಿ.ವೈ.ಚಂದ್ರಚೂಡ್‌, ಸಿಜೆಐ ಜೆ.ಎಸ್‌.ಖೆಹರ್‌, ನ್ಯಾ.ಆರ್‌.ಕೆ.ಅಗರ್ವಾಲ್‌ ಮತ್ತು ನ್ಯಾ. ಎಸ್‌.ಎ.ನಜೀರ್‌ ಅವರು, ಆಧುನಿಕ ಯುಗದಲ್ಲಿ ಡೇಟಾ ಸುರಕ್ಷತೆಗೆ ಸದೃಢವಾದ ಕಾನೂನು ರಚಿಸುವಂತೆ ಸೂಚಿಸಿದೆ.

ಆಧಾರ್‌ ಮಾಹಿತಿ ರಕ್ಷಣೆ ಬಗ್ಗೆ ಈಗಾಗಲೇ ಚಿಂತಿತವಾಗಿರುವ ಕೇಂದ್ರ ಸರ್ಕಾರಕ್ಕೆ, ಡೇಟಾ ಸುರಕ್ಷತೆಯ ಪಾಠ ಹೇಳಿರುವ ಸಾಂವಿಧಾನಿಕ ಪೀಠ, ವೈಯಕ್ತಿಕ ಹಿತಾಸಕ್ತಿಗಳು ಮತ್ತು ಸರ್ಕಾರವೊಂದರ ಕಾನೂನಾತ್ಮಕ ಕಳವಳದ ಬಗ್ಗೆ ಸೂಕ್ಷ್ಮ ಮತ್ತು ಎಚ್ಚರಿಕೆಯ ಹೊಂದಾಣಿಕೆ ಇರಬೇಕಾಗುತ್ತದೆ ಎಂದಿದೆ. 

ಸರ್ಕಾರಗಳು ರಾಷ್ಟ್ರೀಯ ಭದ್ರತೆ, ಅಪರಾಧಗಳ ನಿಗ್ರಹ, ನಾವೀನ್ಯತೆಗೆ ಪ್ರೋತ್ಸಾಹ ಮತ್ತು ಜ್ಞಾನದ ಪ್ರಸಾರ ಹಾಗೂ ಸಮಾಜ ಕಲ್ಯಾಣ ಸೌಲಭ್ಯಗಳ ಹಂಚುವಿಕೆಯ ನಿಗ್ರಹವನ್ನು ತಡೆಯುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದಿದೆ.ಗುರುವಾರ ಬೆಳಗ್ಗೆ 10.35ಕ್ಕೆ ತೀರ್ಪು ಓದಲು ಶುರು ಮಾಡಿದ ಸಿಜೆಐ ಖೆಹರ್‌ ಅವರು, 1950ರ ಎಂ ಪಿ ಶರ್ಮಾ ಹಾಗೂ 1962ರ ಖರಕ್‌ ಸಿಂಗ್‌ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪನ್ನು ಬದಿಗಿರಿಸಲು ನಿರ್ಧರಿಸಲಾಗಿದೆ ಎಂದರು. ಈ ಎರಡು ತೀರ್ಪುಗಳನ್ನು ಬದಿಗಿರಿಸುವ ಮೂಲಕ ಕಾನೂನಿನ ಸ್ಥಾನವನ್ನು ಸರಿಪಡಿಸಲಾಗಿದೆ ಎಂದು ಹೇಳಿದರು.

ಖಾಸಗಿ ಹಕ್ಕನ್ನು ಸಂವಿಧಾನದ ಮೂರನೇ ಭಾಗದಲ್ಲಿ ಸೇರಿಸುವಂತೆ ಪೀಠ ಆದೇಶಿಸಿತು. ಆದರೆ ಮೂಲಭೂತ ಹಕ್ಕುಗಳನ್ನು ಖಾತ್ರಿ ಮಾಡಿರುವ ಪರಿಚ್ಛೇದ 21 ಮತ್ತು ಪರಿಚ್ಛೇದ 19ರಲ್ಲಿ ಹೇಗೆ ಸೇರಿಸಬೇಕು ಎಂಬ ಬಗ್ಗೆ ಪೀಠ ಯಾವುದೇ ಮಾಹಿತಿ ನೀಡಲಿಲ್ಲ.

1962ರ ತೀರ್ಪು ಉಲ್ಲೇಖೀಸಿದ ಸಾಂವಿಧಾನಿಕ ಪೀಠ, ಜಗತ್ತಿನಲ್ಲಿ ಪ್ರಾಣಿಗಳ ಉಗಮವಾಗುವ ಮುನ್ನವೇ ಖಾಸಗಿ ಹಕ್ಕು ಜಾರಿಯಲ್ಲಿದೆ ಎಂದು ಹೇಳಿತು.

ಹುಟ್ಟಿನಿಂದ ಬಂದು ಸಾಯುವಾಗ ಹೋಗುತ್ತೆ!
ಖಾಸಗಿ ಹಕ್ಕಿನ ಬಗ್ಗೆ ತೀರ್ಪು ನೀಡುವಾಗ ನ್ಯಾ. ಅಭಯ್‌ ಮನೋಹರ ಸಪ್ರ ಅವರು, ಖಾಸಗಿತನವೆಂಬುದು ಹುಟ್ಟಿನಿಂದ ಬಂದು ಸತ್ತ ಮೇಲೆ ಹೋಗುತ್ತದೆ ಎಂದು ಹೇಳಿದರು. ಇದು ಪ್ರತಿಯೊಬ್ಬರಲ್ಲೂ ಸ್ವಾಭಾವಿಕವಾಗಿ, ಪ್ರತ್ಯೇಕಿಸಲಾಗದ, ಜತೆಯಲ್ಲೇ ಇರುವ, ಅವರ ಜತೆಯಲ್ಲೇ ಹೊಂದಿಕೊಂಡೇ ಇರುವ ಸ್ಥಿತಿಯಲ್ಲಿ ಇರುತ್ತದೆ ಎಂದರು. ಪ್ರತ್ಯೇಕವಾಗಿಯೇ ತೀರ್ಪು ಬರೆದ ಅವರು, ಖಾಸಗಿ ಹಕ್ಕಿಲ್ಲದೇ ಜನ ಅರ್ಥಯುತವಾಗಿ ಮತ್ತು ಗೌರವಯುತವಾಗಿ ಬದುಕುವುದು ಅಸಾಧ್ಯ ಎಂದು ಹೇಳಿದರು. ಆದರೂ, ಈ ಹಕ್ಕು ಪರಿಪೂರ್ಣವಲ್ಲ ಎಂದ ಅವರು, ಸರ್ಕಾರ ಕೆಲವು ಉದ್ದೇಶಿತ ನಿಯಮಗಳಿಗಾಗಿ ನಿರ್ಬಂಧಿಸಬಹುದು ಎಂದೂ ತೀರ್ಪಿನಲ್ಲಿ ಬರೆದರು.

ಕೇಂದ್ರ ಸರ್ಕಾರದ ಸ್ವಾಗತ
ಸುಪ್ರೀಂಕೋರ್ಟ್‌ ತೀರ್ಪನ್ನು ಸ್ವಾಗತಿಸಿದ ಕೇಂದ್ರ ಸರ್ಕಾರ, ಜನರ ಮೂಲಭೂತ ಹಕ್ಕುಗಳನ್ನು ಕಾಯುವುದು ನಮ್ಮ ಕರ್ತವ್ಯ ಎಂದಿದೆ. ತೀರ್ಪು ಪ್ರಕಟವಾಗುತ್ತಿದ್ದಂತೆ ಮಾತನಾಡಿದ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ತೀರ್ಪಿನಲ್ಲೇ ಕೆಲವು ಉದ್ದೇಶಗಳಿಗಾಗಿ ಖಾಸಗಿ ಹಕ್ಕನ್ನೂ ನಿರ್ಬಂಧಿಸಬಹುದು ಎಂಬ ಅಂಶ ಸೇರಿದೆ ಎಂದು ಹೇಳಿದರು. ಕಾಂಗ್ರೆಸ್‌ನ ಸೈದ್ಧಾಂತಿಕ ಟೀಕೆಗೆ ಉತ್ತರಿಸಿದ ಅವರು, ತುರ್ತು ಪರಿಸ್ಥಿತಿ ಕಾಲದಲ್ಲಿ ಹೇಗೆ ಜನರ ಮೂಲಭೂತ ಹಕ್ಕುಗಳನ್ನು ಆ ಪಕ್ಷದ ಕಾಯ್ದುಕೊಂಡಿತು ಎಂಬುದು ಗೊತ್ತಿದೆಯಲ್ಲ ಎಂದು ತಿರುಗೇಟು ನೀಡಿದರು.

ಸಂಜೆ ಮಾತನಾಡಿದ ಅರುಣ್ ಜೇಟ್ಲಿ ಅವರು, ಆಧಾರ್‌ ಸಂಸ್ಥೆಯನ್ನು ಸಾಂವಿಧಾನಿಕ ಸಂಸ್ಥೆಯಾಗಿ ಪರಿವರ್ತಿಸಿರುವುದರಿಂದ ಅದು ಜನರ ಮೂಲಭೂತ ಹಕ್ಕನ್ನು ಕಾದುಕೊಳ್ಳಬೇಕಾದ ಕರ್ತವ್ಯ ಹೊಂದಿದೆ. ಅಲ್ಲದೆ ಯುಪಿಎ ಕಾಲದಲ್ಲೇ ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ ನೀಡಿದ್ದರೆ ಇಂಥ ಸ್ಥಿತಿಯೇ ಉದ್ಭವವಾಗುತ್ತಿರಲಿಲ್ಲ ಎಂದರು.

ಸಾಂವಿಧಾನಿಕ ಪೀಠದಲ್ಲಿದ್ದ ನ್ಯಾಯಮೂರ್ತಿಗಳು
ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೆಹರ್‌, ನ್ಯಾ.ಆರ್‌.ಕೆ.ಅಗರ್ವಾಲ್‌, ನ್ಯಾ.ಡಿ.ವೈ. ಚಂದ್ರಚೂಡ್‌, ನ್ಯಾ. ಎಸ್‌.ಎ.ನಜೀರ್‌, ನ್ಯಾ.ಜೆ.ಚಲಮೇಶ್ವರ್‌, ನ್ಯಾ.ಎಸ್‌.ಎ.ಬೋಬೆx, ನ್ಯಾ. ಆರ್‌.ಎಫ್.ನಾರಿಮನ್‌, ನ್ಯಾ.ಎ.ಎಂ.ಸಪ್ರ, ನ್ಯಾ. ಎಸ್‌.ಕೆ.ಕೌಲ್‌.

ಆಧಾರ ಕಳೆದುಕೊಂಡೀತೇ?
ಆಧಾರ್‌ ಕಥೆ ಅಂತ್ಯ?

ಈಗಾಗಲೇ ಸುಪ್ರೀಂಕೋರ್ಟ್‌ನ 5 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಆಧಾರ್‌ ಮಾಹಿತಿ ಸೋರಿಕೆ ಆತಂಕದ ಬಗ್ಗೆ ವಿಚಾರಣೆ ನಡೆಸುತ್ತಿದೆ. ಕೇಂದ್ರ ಸರ್ಕಾರ ಆಧಾರ್‌ಗಾಗಿ ಜನರ ಬಯೋಮೆಟ್ರಿಕ್‌  ಗುರುತನ್ನು ಪಡೆಯುತ್ತಿದ್ದು, ಇದು ಖಾಸಗಿತನದ ಸ್ಪಷ್ಟ ಉಲ್ಲಂಘನೆ ಎಂದು ಅರ್ಜಿದಾರರು ದೂರಿದ್ದಾರೆ. ಇದೀಗ ಖಾಸಗಿ ಹಕ್ಕನ್ನೂ ಮೂಲಭೂತ ಪರಿಧಿಗೆ ಸೇರಿಸಿರುವುದರಿಂದ ಜನರ ಬಯೋಮೆಟ್ರಿಕ್‌ ಸೇರಿದಂತೆ ಯಾವುದೇ ರೀತಿಯ ಮಾಹಿತಿ ಪಡೆಯುವುದು ತಪ್ಪಾಗುತ್ತದೆ.

ವಾಟ್ಸ್‌ಆéಪ್‌ನಲ್ಲಿ ಸರ್ಕಾರಕ್ಕೆ ಗೆಲುವು?
ವಾಟ್ಸ್‌ ಆ್ಯಪ್‌ ಖಾಸಗಿತನ ಪ್ರಕರಣದ ಕುರಿತು ಸುಪ್ರೀಂಕೋರ್ಟ್‌ನ 5 ನ್ಯಾಯಮೂರ್ತಿಗಳುಳ್ಳ ಇನ್ನೊಂದು ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿದೆ. 2016ರಲ್ಲಿ ವಾಟ್‌Âಆ್ಯಪ್‌ ಸಂಸ್ಥೆ ಗ್ರಾಹಕರ ಮಾಹಿತಿಯನ್ನು ಗುಪ್ತವಾಗಿ, ಯಾರೊಂದಿಗೂ ಹಂಚಿಕೊಳ್ಳದಂತೆ ಇರಿಸುವುದಾಗಿ ಮಾತು ಕೊಟ್ಟಿತ್ತು. ಆದರೆ 2017ರಲ್ಲಿ ಇದು ತನ್ನ ಮಾತೃಸಂಸ್ಥೆಯಾದ ಫೇಸ್‌ಬುಕ್‌ ಜತೆಗೆ ಮಾಹಿತಿ ಹಂಚಿಕೊಳ್ಳುವುದಾಗಿ ತನ್ನ ನಿಯಮಾವಳಿಗಳನ್ನು ಮಾರ್ಪಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಮಾಹಿತಿ ಸುರಕ್ಷತೆಗಾಗಿ ಅಗತ್ಯ ನಿಯಮಾವಳಿ ರೂಪಿಸುವುದಾಗಿ ಹೇಳಿದೆ. ಅಲ್ಲದೆ ವಾಟ್ಸ್‌ಆ್ಯಪ್‌ ಕೂಡ ಗ್ರಾಹಕರ ಮಾಹಿತಿ ಸೋರಿಕೆ ಮಾಡುವುದಿಲ್ಲ ಎಂದಿದೆ. ಆದರೂ ಈ ಬಗ್ಗೆಯೂ ತೀರ್ಪು ಹೊರಬೀಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next