Advertisement

SC, ST Welfare Grant: ಹಿಂದುಳಿದ ವರ್ಗಕ್ಕೆ ಮೀಸಲಿಟ್ಟ 312 ಕೋ. ರೂ. ವಾಪಸ್‌!

12:00 AM Jul 28, 2024 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ ಎಂಬ ಆರೋಪದ ನಡುವೆಯೇ ಸರಕಾರ ಹಿಂದುಳಿದ ವರ್ಗಗಳ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಮಂಜೂರಾಗಿದ್ದ ನೂರಾರು ಕೋಟಿ ರೂ.ಗಳನ್ನು ವಾಪಸ್‌ ಪಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ 2022-23ನೇ ಸಾಲಿನಲ್ಲಿ 1,093 ಸಂಘ-ಸಂಸ್ಥೆಗಳಿಗೆ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯ ಕಾಮಗಾರಿಗಳಿಗೆ 312.13 ಕೋಟಿ ರೂ. ಸಹಾಯಧನ ಮಂಜೂರು ಮಾಡಲಾಗಿತ್ತು. ಇದೀಗ ಸಾಮೂಹಿಕವಾಗಿ ಮಂಜೂರಾತಿ ಆದೇಶವನ್ನೇ ರದ್ದುಪಡಿಸುವ ಮೂಲಕ ಹಿಂದುಳಿದ ವರ್ಗಗಳಿಗೆ ಆಘಾತ ಉಂಟುಮಾಡಿದೆ.

ಬಜೆಟ್‌ನಲ್ಲಿ ಅನುದಾನ ಒದಗಿಸದಿದ್ದರೂ ಈ ಹಿಂದಿನ ವರ್ಷಗಳಲ್ಲಿ 1,093 ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯಗಳಿಗೆ ಅನುದಾನ ನೀಡಿ ಆದೇಶ ಹೊರಡಿಸಿರುವುದು ಸರಿಯಲ್ಲ. ಆಯಾ ವರ್ಷಗಳಲ್ಲಿ ಅನುದಾನ ಒದಗಿಸಿಕೊಳ್ಳದ ಕಾರಣ ಮಂಜೂರಾತಿಯನ್ನು ರದ್ದುಪಡಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಖ್ಯಮಂತ್ರಿ ಸೂಚಿಸಿದ್ದರು.

2014ರಲ್ಲಿ ಯೋಜನೆ ಜಾರಿ
ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ 2014ರಲ್ಲಿ ಈ ಯೋಜನೆಯನ್ನು ಪರಿಚಯಿಸಲಾಯಿತು. ಅದರಂತೆ ಸಮುದಾಯ ಭವನ/ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕಾಗಿ ಪಟ್ಟಣ ಪಂಚಾಯತ್‌/ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 10 ಲಕ್ಷ ರೂ., ತಾಲೂಕು ಕೇಂದ್ರ ಸ್ಥಾನ 25 ಲಕ್ಷ ರೂ. ಹಾಗೂ ಜಿಲ್ಲಾ ಕೇಂದ್ರ ಸ್ಥಾನ 50 ಲಕ್ಷ ರೂ.ಗಳಂತೆ ಗರಿಷ್ಠ ಮಿತಿಗೊಳಪಟ್ಟು ಪ್ರವರ್ಗ- 2, 2ಎ, 3ಎ, 3ಬಿಗೆ ಸೇರಿದ ಜಾತಿಗಳ ನೋಂದಾಯಿತ ಸ್ವಯಂ ಸೇವಾ ಸಂಘ-ಸಂಸ್ಥೆ ಅಥವಾ ಟ್ರಸ್ಟ್‌ಗಳಿಗೆ ಸಹಾಯಧನ ಮಂಜೂರು ಮಾಡಲಾಗುತ್ತದೆ. ಈ ಅನುದಾನದ ಮಿತಿಯನ್ನು ಅಗತ್ಯ ಸಂದರ್ಭಗಳಲ್ಲಿ ಸಡಿಲಗೊಳಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ, ಹೆಚ್ಚುವರಿಯಾಗಿ ಮಂಜೂರು ಮಾಡಲಿಕ್ಕೂ ಅವಕಾಶ ಕಲ್ಪಿಸಲಾಗಿದೆ.

ಮೂಲಗಳ ಪ್ರಕಾರ ಈ ಹಿಂದೆಯೂ ಹಲವು ಸಂಘ-ಸಂಸ್ಥೆಗಳ ದಾಖಲೆಗಳ ಕೊರತೆ, ಬಜೆಟ್‌ ಮುಗಿದ ಅನಂತರ ಅರ್ಜಿ ಸಲ್ಲಿಕೆ ಯಂತಹ ಕಾರಣಗಳಿಗಾಗಿ ಮಂಜೂರಾತಿ ರದ್ದುಪಡಿಸಲಾಗುತ್ತದೆ. ಆದರೆ ಸಾಮೂಹಿಕವಾಗಿ ಸಾವಿರಕ್ಕೂ ಅಧಿಕ ಸಂಘ-ಸಂಸ್ಥೆಗಳ ಮಂಜೂರಾತಿ ರದ್ದುಪಡಿಸಿರುವುದು ಇದೇ ಮೊದಲು ಎನ್ನಲಾಗಿದೆ. 73 ಸಂಘ-ಸಂಸ್ಥೆಗಳಿಗೆ ಮೊದಲ ಕಂತು ಬಿಡುಗಡೆ ಮಾಡಬೇಕಿತ್ತು. ಅದು ಕೂಡ ಇದರಲ್ಲಿ ಸೇರಿದೆ.

Advertisement

ಈ ಅನುದಾನವನ್ನು ಸರಕಾರಿ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗ‌ಳ ಮೂಲಸೌಕರ್ಯ ವೃದ್ಧಿಗೆ ವಿನಿಯೋಗಿಸಿದರೆ ಹೆಚ್ಚು ಸೂಕ್ತ ಎಂಬಅಭಿಪ್ರಾಯವೂ ಆ ಸಮುದಾಯಗಳಿಂದ ಕೇಳಿಬರುತ್ತಿದೆ.

ಸಂಘ-ಸಂಸ್ಥೆಗಳಿಗೂ ಕತ್ತರಿ?
2,400ಕ್ಕೂ ಅಧಿಕ ಸಂಘ-ಸಂಸ್ಥೆಗಳಿಗೆ ಇದೇ ಸಮುದಾಯ ಭವನ/ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಎರಡು ಮತ್ತು ಮೂರನೇ ಕಂತಿನಲ್ಲಿ ಅಂದಾಜು 559 ಕೋಟಿ ರೂ. ಬಿಡುಗಡೆ ಆಗಬೇಕಿದೆ. ಆದರೆ ಬಜೆಟ್‌ ಇರುವುದೇ 100 ಕೋಟಿ ರೂ. ಹಾಗಾಗಿ ಆ ಸಂಘ-ಸಂಸ್ಥೆಗಳಲ್ಲೂ ಕೆಲವರಿಗೆ ಸಹಾಯಧನದಲ್ಲಿ ಈ ಬಾರಿ ಕತ್ತರಿ ಬೀಳುವ ಸಾಧ್ಯತೆ ಇದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.


-ವಿಜಯ ಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next