Advertisement

ಸೇವ್‌ ಉಕ ಅಭಿಯಾನ

10:52 AM Aug 10, 2019 | Team Udayavani |

ಶಿರಸಿ: ಮಳೆ, ಮಹಾ ಮಳೆ ಇಡೀ ಉತ್ತರ ಕನ್ನಡವನ್ನೂ ದಿಕ್ಕೆಡಿಸಿದೆ. ಸಾರ್ವಜನಿಕ ಆಸ್ತಿಪಾಸ್ತಿ, ಕೃಷಿ ಭೂಮಿ, ತೋಟಗಳೂ ನಿರೀಕ್ಷೆಗೂ ಮೀರಿ ಹಾನಿಯಾಗುತ್ತಿದೆ.

Advertisement

ರಾಜ್ಯದಲ್ಲೇ ಅತಿ ಹೆಚ್ಚು ಅಣೆಕಟ್ಟು, ನದಿ, ಕೈಗಾ ಒಳಗೊಂಡು ಬೆಳಕು ಕೊಟ್ಟ ತ್ಯಾಗಮಯಿ ಉತ್ತರ ಕನ್ನಡ ಜಿಲ್ಲೆಗೆ ಕತ್ತಲು ಆವರಿಸಿದೆ. ಇಲ್ಲಿಯವರ ಬದುಕು ಅಕ್ಷರಶಃ ಒದ್ದೆಯಾಗಿದೆ.

ಮಳೆ ಗಾಳಿಗೂ ಆತಂಕ!: ಕಾಳಿ, ಅಘನಾಶಿನಿ, ವರದಾ, ಶರಾವತಿ, ಬೇಡ್ತಿ ನದಿಗಳು ಉಕ್ಕಿ ಹರಿಯುತ್ತಿವೆ. ದೇವಿಮನೆ, ಅರಬೈಲ್, ಕೋಗಾರ್‌, ಬಡಾಳ ಘಟ್ಟಗಳಲ್ಲಿ ಧರೆ ಕುಸಿಯುತ್ತಿವೆ.

ಯಲ್ಲಾಪುರ ಶಿರಸಿ ಸಂಪರ್ಕದ ಬೇಡ್ತಿ ನದಿ ಸೇತುವೆ ಕಷ್ಟಕಾಲದಲ್ಲಿದೆ. ಯಲ್ಲಾಪುರಕ್ಕೆ ಅರೆಬೈಲು, ಶಿರಸಿ ಸಂಪರ್ಕ ಕಡಿದು ಹೋಗಿದೆ. ಕತಗಾಲ ಸೇತುವೆ ಮೇಲೂ ನೀರು ಹರಿದರೆ ಕರಾವಳಿ ಸಂಪರ್ಕಕ್ಕೆ ಬೆಂಗಳೂರು ಹೊನ್ನಾವರ ಹೆದ್ದಾರಿ ಬಳಸಬೇಕಿದೆ. ರಸ್ತೆಗಳೆಂತೂ ಚಿಂದಿಯಾಗಿವೆ.

ಸಿದ್ದಾಪುರ ತಾಲೂಕಿನ ಹಲವು ಗ್ರಾಮಗಳು, ಶಿರಸಿ ತಾಲೂಕಿನ ವರದಾ, ಯಲ್ಲಾಪುರದ ಬೇಡ್ತಿ, ಕರಾವಳಿಯ ಗಂಗಾವಳಿ, ಅಘನಾಶಿನಿ, ಶರಾವತಿ, ಕಾಳಿ ಕೊಳ್ಳಗಳು ಪಕ್ಕದ ಊರುಗಳನ್ನೂ ಸುತ್ತುವರಿದಿದೆ. ರಸ್ತೆ ನದಿಯಾಗಿದೆ. ದೇವಾಲಯಗಳು, ಸೇತುವೆಗಳು, ಕೃಷಿ ಭೂಮಿಗಳು, ಮನೆಗಳೂ ಮುಳಗುತ್ತಿವೆ. ಕೊಡಸಳ್ಳಿಯ ಪುನರ್ವಸತಿ ಪಡೆದಿದ್ದ ವೈದ್ಯ ಹೆಗ್ಗಾರ ಭಾಗದಲ್ಲಿ ನೆರೆ ‘ಯಾತನೆ’ ಸೃಷ್ಟಿಸಿದೆ. ಜೀವ ಜಲವಾಗಿದ್ದ ನದಿಗಳು ಜೀವಕ್ಕೇ ಸಂಚಕಾರ ತಂದಿಟ್ಟಿವೆ.

Advertisement

ನಿರ್ಲಕ್ಷ್ಯ ಯಾಕೆ?: ಇಂಥ ಕಷ್ಟದಲ್ಲಿರುವ ಉತ್ತರ ಕನ್ನಡಕ್ಕೆ ರಾಜ್ಯ ಸರಕಾರ, ಕೇಂದ್ರ ಸರಕಾರ ನಿರ್ಲಕ್ಷ್ಯ ತಾಳಿವೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿದೆ. ಜಿಲ್ಲಾಡಳಿತ ಹರಸಾಹಸ ಮಾಡಿ ನೆರವಿಗೆ ಮುಂದಾದರೂ ಅವರ ಕೈ ಬಲಗೊಳಿಸುತ್ತಿಲ್ಲ ಎಂಬುದು ದೂರು.

ಇದೀಗ ಸೇವ್‌ ಉತ್ತರ ಕನ್ನಡ ಎಂಬ ಆಗ್ರಹಕ್ಕೆ ಸಾಮಾಜಿಕ ಜಾಲ ತಾಣದ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಭಿಯಾನಕ್ಕೆ ಚಿತ್ರ ನಟರು, ಬೇರೆ ಬೇರೆ ಉದ್ಯೋಗಸ್ಥರು ಬೆಂಬಲಿಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಪರ ಊರಿನಲ್ಲಿರುವವರು ಊರವರ ನೆರವಿಗೆ ವಾಪಸ್ಸಾಗುತ್ತಿದ್ದರೂ ಊರು ತಲುಪಲಾಗದ ಸ್ಥಿತಿಗೆ ಬಂದಿದ್ದಾರೆ. ನಮ್ಮವರು ಹೇಗಿದ್ದಾರೆ ಎಂದು ಕೇಳಲೂ ಮೊಬೈಲ್ ಸ್ವಿಚ್ಡ್ ಆಪ್‌ ಆಗಿದೆ.

ಎಲ್ಲ ಬೇಕು, ಆದರೆ..?: ಉತ್ತರ ಕನ್ನಡ ನದಿಗಳ ನೀರು ಬೆಂಗಳೂರಿಗೆ ಬೇಕು, ಇಲ್ಲಿ ಅಣೆಕಟ್ಟು ಕಟ್ಟಿ ಬೆಳಕು ಬೇಕು. ಕೈಗಾ ಅಣು ವಿದ್ಯುತ್‌ ಎಲ್ಲರಿಗೂ ಬೇಕು. ಆದರೆ, ಇಲ್ಲಿನ ಕಷ್ಟ ನಿವಾರಣೆಗೆ ಯಾರೂ ಬರುವುದಿಲ್ಲ, ಉತ್ತರ ಕರ್ನಾಟಕಕ್ಕೆ ಸಿಎಂ ಬರುತ್ತಾರೆ, ಅವರು ಉತ್ತರ ಕನ್ನಡಕ್ಕೇಕಿಲ್ಲ? ಎಂಬುದೂ ಇಲ್ಲಿನ ಪ್ರಶ್ನೆ.

ಈ ಮಧ್ಯೆ ಮಳೆ ನಿಂತರೂ ಇಲ್ಲಿನ ರೈತರ, ಜನರ ಆತಂಕ ನಿವಾರಣೆ ಆಗುವುದಿಲ್ಲ. ಅಡಕೆ, ಭತ್ತ ಬೇಸಾಯ ಕಷ್ಟದಲ್ಲಿದೆ. ಅಡಕೆಗೆ ಕೊಳೆ ರೋಗ ಈಗಲೇ ಶುರುವಾಗಿದೆ. ಹೆಸ್ಕಾಂನ ತಂತಿಗಳು, ಕಂಬಗಳನ್ನು ಮಳೆ ನಿಂತು ತಿಂಗಳಾದರೂ ಸಂಪರ್ಕ ಕೊಡಲು ಕಷ್ಟವಾಗಿದೆ. ಅನಾರೋಗ್ಯದ ಭೀತಿ ಕೂಡ ಶುರುವಾಗಲಿದೆ.

ನೆರೆ ಹಾವಳಿಗೆ ಲಕ್ಷಾಂತರ ರೂ. ಹಾನಿ

ತಾಲೂಕಿನಲ್ಲಿ ಸುರಿದ ಜೋರಾದ ಮಳೆಗಾಳಿಗೆ ವಿವಿಧ ಭಾಗಗಳಲ್ಲಿ ಮನೆಗಳ ಗೋಡೆ ಕುಸಿದು ಮತ್ತು ದನದ ಕೊಟ್ಟಿಗೆಗಳ ಮೇಲೆ ಗುಡ್ಡ ಬಿದ್ದು ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ವಿವರ ಹೀಗಿದೆ. ಬೀರನಗೋಡದ ಗಣಪತಿ ಮಾದೇವ ನಾಯ್ಕರ ಮನೆ ಮೇಲೆ ಮರಬಿದ್ದು ಅಂದಾಜು 15800ರೂ., ಬಳಕೂರದ ವಿಷ್ಣು ವೆಂಕ್ಟ ನಾಯ್ಕರ ಮನೆ ಮೇಲೆ ಮರ ಬಿದ್ದು 16000ರೂ., ಹಳದೀಪುರ ಬಗ್ರಾಣಿಯ ನಾರಾಯಣ ತಿಮ್ಮಪ್ಪ ಗೌಡ ಮನೆ ಮೇಲ್ಛಾವಣಿ 10000 ರೂ., ಖರ್ವಾ ನಾಥಗೇರಿ ಲಕ್ಷ್ಮೀ ನಾರಾಯಣ ನಾಯ್ಕ ಮನೆ ಮೇಲೆ ಮರ ಬಿದ್ದು 10000ರೂ., ಹಳದೀಪುರದ ಲಕ್ಷ್ಮೀ ವೆಂಕಟೇಶ ಉಪ್ಪಾರ ಮನೆ ಮೇಲೆ ಮರ ಬಿದ್ದು 30000ರೂ., ಹಡಿನಬಾಳ ವೆಂಕಟ್ರಮಣ ರಾಮ ಹೆಗಡೆ ಮನೆ ಮೇಲೆ ಮರ ಬಿದ್ದು 40000ರೂ., ಕರ್ಕಿ ಮಠದಕೇರಿ ಪ್ರಾನ್ಸಿಸ್‌ ಡಿಸೋಜಾ ಮನೆ ಮೇಲೆ ಮರಬಿದ್ದು 20000ರೂ., ಹೊನ್ನಾವರ ಗಂಧದಹಿತ್ಲದ ಸದಾನಂದ ಮಾಬ್ಲೇಶ್ವರ ಶೇಟ್ ಮನೆ ಗೋಡೆ ಕುಸಿದು 40000ರೂ., ಚಂದಾವರದ ಮಹಮ್ಮದ ಗೌಸ್‌ ಮನೆಯ ಗೋಡೆ ಕುಸಿದು 10000 ಹಾನಿಯಾಗಿದೆ. ಮಂಕಿ ಗುಳದಕೇರಿ, ಕಮಲಾ ಲಕ್ಷ್ಮಣ ನಾಯ್ಕ ಮಳೆಗಾಳಿಯಿಂದ ಕೊಟ್ಟಿಗೆ 20000ರೂ., ತಲಗೋಡದ ದಿನೇಶ ರಾಮಾ ಮರಾಠಿ ಅವರ ದನದ ಕೊಟ್ಟಿಗೆ ಮೇಲೆ ಗುಡ್ಡ ಕುಸಿದು 3000 ಹಾನಿಯಾಗಿದೆ. ಇನ್ನೂ ಹಲವುಕಡೆ ಮನೆಗಳಿಗೆ ಹಾನಿಯಾಗಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಅವಘಡ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿರಾಶ್ರಿತರಿಗೆ ಸ್ಪಂದಿಸದ ಕೆಪಿಸಿ ಆಡಳಿತ: ಆರೋಪ
ಜೋಯಿಡಾ-ಅಂಬಿಕಾನಗರ ಭಾಗದಲ್ಲಿ ಕರ್ನಾಟಕ ವಿದ್ಯುತ್‌ ನಿಗಮದವರು ಪ್ರವಾಹ ಸಂತ್ರಸ್ತರನ್ನು ನಿರ್ಲಕ್ಷಿಸಿದ್ದಾರೆ ಎಂದು ನಿರಾಶ್ರಿತರು ಆರೋಪಿಸುತ್ತಿದ್ದು ಜಿಲ್ಲಾಧಿಕಾರಿಗಳು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಿರಾಶ್ರಿತರ ಜೊತೆ ಸರಿಯಾಗಿ ಸ್ಪಂದಿಸದ ಕೆಪಿಸಿಯವರ ವರ್ತನೆಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಕಷ್ಟದಲ್ಲಿರುವವರ ಜೊತೆ ಬೆರೆತು ಕೆಲಸ ಮಾಡಿ ಹೊರತು ಸಂಘರ್ಷಕ್ಕೆ ಇಳಿಯಬೇಡಿ. ಇಲ್ಲವಾದಲ್ಲಿ ಮುಂದೆ ಇದು ದೊಡ್ಡ ಸಮಸ್ಯೆಯಾಗಲಿದೆ ಎಂದು ಕೆಪಿಸಿಯವರಿಗೆ ಎಚ್ಚರಿಕೆ ನೀಡಿದರು. ಹಳಿಯಾಳದ ಇತಿಹಾಸದಲ್ಲಿಯೇ ಕಂಡು ಕೇಳರಿಯದ ವರುಣನ ಆರ್ಭಟಕ್ಕೆ ನದಿ ಪಾತ್ರದಲ್ಲಿ ನೆರೆ ಉಂಟಾಗಿದ್ದು ತಾಲೂಕಾಡಳಿತ ಸ್ಪಂದಿಸುತ್ತಿದ್ದು ಇವರ ಜೊತೆಗಾರರಾಗಿ ತಾವು ಕೆಲಸ ಮಾಡಲು ಸದಾಸಿದ್ದ ಎಂದು ಭರವಸೆ ನೀಡಿದ ಸುನೀಲ್ ಹೆಗಡೆ ಸುಮಾರು 700 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಪಕ್ಕದ ಜಿಲ್ಲೆಯ ಧಾರವಾಡದ ಹುಲಿಕೇರಿ ಕೆರೆ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಹಳಿಯಾಳದ ನದಿ ಪಾತ್ರಗಳಲ್ಲಿ ಅವಘಡಗಳು ಸಂಭವಿಸಿದವು ಎಂದರು. ಪ್ರಕೃತಿ ವಿಕೋಪದಿಂದ ಹಾನಿಗಿಡಾಗಿರುವ ಕಟ್ಟ ಕಡೆ ನಾಗರಿಕನಿಗೂ ಪರಿಹಾರ ಸಿಗಬೇಕು ಎನ್ನುವ ಆಶಯ ತಮ್ಮದಾಗಿದೆ. ಅತಿಕ್ರಮಣದಾರರು ಮನೆ, ಮಠದ ಜೊತೆಗೆ ಬೆಳೆ ಹಾನಿಯನ್ನು ಅನುಭವಿಸಿದ್ದು ಅವರಿಗೂ ಪರಿಹಾರ ಸಿಗುವ ನಿಟ್ಟಿನಲ್ಲಿ ಅಧಿಕಾರಿಗಳು ಹಾನಿಯ ಸಮರ್ಪಕ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಿಳಿಸಿದರು. ಜನರು ಮೊದಲು ನಿಮ್ಮನ್ನು ರಕ್ಷಿಸಿಕೊಳ್ಳಿ ನಾವು ನಿಮ್ಮೊಂದಿಗಿದ್ದು ಆಶ್ರಯ ನೀಡುತ್ತೇವೆ ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂದು ಧೈರ್ಯ ತುಂಬಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ನೇತೃತ್ವದ ತಂಡ ಹಳಿಯಾಳದಲ್ಲಿ ಮಳೆಯಿಂದ ಉಂಟಾಗಿರುವ ನೆರೆ ಸಮೀಕ್ಷೆಗೆ ಶನಿವಾರ ಹಳಿಯಾಳಕ್ಕೆ ಆಗಮಿಸಲಿದ್ದು ಬೆಳಗ್ಗೆ ಅಧಿಕಾರಿಗಳ ಸಭೆ ನಡೆಸಿ ಬಳಿಕ ರಕ್ಷಣಾ ಕೇಂದ್ರಗಳು ಹಾಗೂ ನೆರೆ ಪಿಡಿತ, ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು. ಕೆನರಾ ಸಂಸದ ಅನಂತಕುಮಾರ ಹೆಗಡೆ ಭಾನುವಾರ ಹಳಿಯಾಳಕ್ಕೆ ಆಗಮಿಸಿ ನಿರಾಶ್ರಿತರನ್ನು ಭೇಟಿಯಾಗಲಿದ್ದಾರೆ ಎಂದರು. ಸಂಸದರು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಹಳಿಯಾಳದಿಂದ 25 ಕಿಮೀ ಅಂತರದಲ್ಲಿರುವ ಹುಲಿಕೇರಿ ಕೆರೆ ಒಡೆದು ಹೊಗುವ ಸಂಭವವಿರುವ ಕಾರಣ ಹಳಿಯಾಳದ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಉಂಟಾಗುವ ಮುನ್ಸೂಚನೆ ಇರುವ ಕಾರಣ ಹಳಿಯಾಳಕ್ಕೆ ಎನ್‌ಡಿಆರ್‌ಎಫ್‌ ತಂಡ ಹಾಗೂ ಅವಶ್ಯಕತೆ ಇದ್ದಲ್ಲಿ ಏರ್‌ಲಿಫ್ಟ್‌ ಮಾಡಲು ಮನವಿ ಮಾಡಿದ್ದು ಈ ತಂಡ ಆಗಮಿಸಲಿದೆ.
•ರಾಘವೇಂದ್ರ ಬೆಟ್ಟಕೊಪ್ಪ
Advertisement

Udayavani is now on Telegram. Click here to join our channel and stay updated with the latest news.

Next