Advertisement

ದೇಶಿಯ, ಸಾಂಸ್ಕೃತಿಕ ಕಲಾ ಪರಂಪರೆ ಉಳಿಸಿ

10:17 PM Oct 25, 2019 | Lakshmi GovindaRaju |

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಬಿತ್ತುವತಂಹ ಕಲಾ ಪ್ರಕಾರಗಳನ್ನು ವ್ಯಾಪಕವಾಗಿ ಪುನಶ್ಚೇತನಗೊಳಿಸುವ ಮೂಲಕ ದೇಶಿಯ, ಪುರಾಶತನವಾದ ಸಾಂಸ್ಕೃತಿಕ ಕಲಾ ಪರಂಪರೆ ಉಳಿಸಿ, ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿ, ಯುವ ಸಮುದಾಯದ ಮೇಲಿದೆ ಎಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ತಿಳಿಸಿದರು. ನಗರದ ಬಿಬಿ ರಸ್ತೆಯ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಪ್ರಾಥಮಿಕ, ಪ್ರೌಢ ಶಾಲಾ ಹಾಗೂ ಕಾಲೇಜು ವಿಭಾಗದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಪರಿಶ್ರಮದಿಂದ ಕಲೆ ಕರಗತ: ಸಾಂಸ್ಕೃತಿಕವಾದ ಕಲಾ ಪ್ರಕಾರಗಳು ನಿನ್ನೆ, ಮೊನ್ನೆ ನಮ್ಮ ನಡುವೆ ಹುಟ್ಟಿಲ್ಲ. ಪುರಾತನ ಕಾಲದಿಂದಲೂ ಒಬ್ಬರಿಂದ ಒಬ್ಬರ ನಡುವೆ ಬೆಳೆದು ಬಂದಿರುವ ಕಲಾ ಪ್ರಕಾರಗಳಿಗೆ ತನ್ನದೇ ವೈಶಿಷ್ಟತೆ ಇದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಪರಂಪರೆಯ ಭಾಗವಾಗಿದ್ದ ಅನೇಕ ಕಲೆಗಳು ನಶಿಸಿ ಹೋಗುತ್ತಿರುವುದರಿಂದ ಸರ್ಕಾರ, ಶಾಲಾ ಹಂತದಲ್ಲಿ ಗ್ರಾಮೀಣ ಸೊಗಡಿನ ಕಲೆಗಳನ್ನು ಮಕ್ಕಳಿಗೆ ಪರಿಚಯಿಸಿ ಅವುಗಳ ಬಗ್ಗೆ ಅಭಿರುಚಿ ಮೂಡಿಸುವುದರ ಜೊತೆಗೆ ಮಕ್ಕಳಲ್ಲಿರುವ ಪ್ರತಿಭೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಗಳು ಆಯೋಜಿಸಿದೆ.

ಇದು ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮದೇ ಆದ ಒತ್ತಡದಲ್ಲಿ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಉಲ್ಲಾಸ, ಮನರಂಜನೆ ಅವಶ್ಯಕ. ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತು ಅಲ್ಲ. ಪರಿಶ್ರಮಪಟ್ಟಾಗ ಮಾತ್ರ ಯಾವುದೇ ಕಲೆಯನ್ನು ಕರಗತ ಮಾಡಿಕೊಳ್ಳಬಹುದು ಎಂದರು.

ವಿದ್ಯಾರ್ಥಿಗಳ ಸ್ಪರ್ಧಾ ಕೈಪಿಡಿ ಬಿಡುಗಡೆ: ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಸಾರ್ವಜನಿಕ ಶಿಕ್ಷಣ ಇಲಾಖೆ ವಿಶೇಷವಾಗಿ ಸಿದ್ಧಪಡಿಸಿರುವ ಸ್ಪರ್ಧಾ ಕೈಪಿಡಿಯನ್ನು ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ ಬಿಡುಗಡೆಗೊಳಿಸಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಶಾಲಾ ಹಂತದಲ್ಲಿಯೇ ಗುರುತಿಸಿ ಅವರನ್ನು ಸಮಾಜಕ್ಕೆ ಪರಿಚಯಿಸಿದಾಗ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದರು. ಯಾವುದೇ ಪ್ರತಿಭೆಗೆ ಪ್ರೋತ್ಸಾಹ, ಬೆಂಬಲ ಸಿಕ್ಕಾಗ ಮಾತ್ರ ಅರಳಲು ಸಾಧ್ಯವಾಗುತ್ತದೆ. ಈ ಕೆಲಸ ಶಿಕ್ಷಕರಿಂದ ಪ್ರಾಮಾಣಿಕವಾಗಿ ನಡೆಯಬೇಕೆಂದರು.

ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ತಿರುಮಳಪ್ಪ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಶಾಂತಲಾ, ಡಯಟ್‌ ಪ್ರಾಂಶುಪಾಲ ಕೃಷ್ಣಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಈಶ್ವರರರೆಡ್ಡಿ, ಏಕಾಬರಂ, ಸರ್ಕಾರಿ ನೌಕರರ ಸಂಘದ ಚಿಂತಾಮಣಿ ಅಧ್ಯಕ್ಷ ಬಿ.ಜನಾರ್ದನರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಂತಾಮಣಿ ಅಧ್ಯಕ್ಷ ಅಶೋಕ್‌ ಕುಮಾರ್‌, ಜಿಲ್ಲಾ ನೋಡಲ್‌ ಅಧಿಕಾರಿ ಶಿವಲಿಂಗಯ್ಯ, ಡಿವೈಪಿಸಿ ರಘುನಾಥರೆಡ್ಡಿ, ದೈಹಿಕ ಶಿಕ್ಷಣ ಶಿಕ್ಷಕ ಸಂಯೋಜಕ ಶಿವಪುತ್ರಪ್ಪ, ನೌಕರರ ಸಂಘದ ನಿರ್ದೇಶಕ ಸುನೀಲ್‌ ಉಪಸ್ಥಿತರಿದ್ದರು.

Advertisement

ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢ ಶಾಲಾ ಹಾಗೂ ಕಾಲೇಜು ವಿಭಾಗದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳಲ್ಲಿ ಪ್ರಮುಖವಾಗಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 1 ರಿಂದ 4 ಹಾಗೂ 5 ರಿಂದ 7ನೇ ತರಗತಿ ವಿದೈಆರ್ಥಿಗಳಿಗೆ ಕೋಲಾಟ, ನೃತ್ಯ, ಭಜನೆ, ಸಾಮೂಹಿಕ ಗಾಯನ, ಏಕಪಾತ್ರ ಅಭಿನಯ, ಛದ್ಮವೇಷ, ಕನ್ನಡ, ಆಂಗ್ಲ, ಉರ್ದು ಕಂಠಪಾಠ ಸ್ಪರ್ಧೆ, ಧಾರ್ಮಿಕ ಪಠಣ, ಲಘು ಸಂಗೀತ, ಅಭಿನಯ ಗೀತೆ, ಭಕ್ತಿಗೀತೆ, ಆಶುಭಾಷಣ, ರಂಗೋಲಿ, ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು.

8 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ಧಾರ್ಮಿಕ ಪಠಣ, ಜನಪದ ಗೀತೆ, ಭಾವಗೀತೆ, ಆಶುಭಾಷಣ ಸ್ಪರ್ಧೆ, ಮಿಮಿಕ್ರಿ, ಭರತನಾಟ್ಯ, ಗಜಲ್‌, ಸಂಗೀತ (ಕಲೋತ್ಸವ) ನೃತ್ಯ, ನಾಟಕ, ದೃಶ್ಯಕಲೆಗಳಾದ ಚಿತ್ರಕಲೆ, ಶಿಲ್ಪಕಲೆ, ರೇಖಾಚಿತ್ರ ಹಾಗೂ ಕರಕುಶಲ ಸ್ಪರ್ಧೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ಕಲಾ ಪ್ರಕಾರಗಳಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿ ಗಮನ ಸೆಳೆದರು. ಅನೇಕ ಜಿಲ್ಲೆಗಳಿಂದ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next