Advertisement

ನಿತ್ಯ ಕಲಿತು ಕಲೆಯನ್ನು ಉಳಿಸಿ: ಡಾ|ಹೆಗ್ಗಡೆ

07:00 AM Aug 23, 2017 | Team Udayavani |

ಬೆಳ್ತಂಗಡಿ: ಯಕ್ಷಗಾನ ಕಲಾವಿದರು ಪರಕಾಯ ಪ್ರವೇಶ ಮಾಡಿ ಪಾತ್ರಗಳಿಗೆ ಜೀವಂತಿಕೆ ತುಂಬುವ ಪ್ರಯತ್ನ ಮಾಡಬೇಕು. ನಿತ್ಯವೂ ಕಲಿತು ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಸೋಮವಾರ ಸಂಜೆ ಧರ್ಮಸ್ಥಳದಲ್ಲಿ ಸುರತ್ಕಲ್‌ನ ಶೇಣಿ ಗೋಪಾಲಕೃಷ್ಣ ಭಟ್‌ ಚಾರಿಟೆಬಲ್‌ ಟ್ರಸ್ಟ್‌ ಆಶ್ರಯದಲ್ಲಿ ಆಯೋಜಿಸಲಾದ ಶೇಣಿ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಶೇಣಿ ಅವರ ವಾಕ್‌ ಚಾತುರ್ಯದಿಂದ ಯಕ್ಷಗಾನ ಕಲೆಯ ದಿಗ್ಗಜರಾಗಿ ಮೆರೆದರು, ವಿಜೃಂಭಿಸಿದರು. ಇಂತಹ ಶ್ರೇಷ್ಠ ಕಲಾವಿದರಿಂದಾಗಿ ಕೌತುಕ ವಾಗಿದ್ದ ಯಕ್ಷಗಾನ ಬೌದ್ಧಿಕವಾಗಿ ಪ್ರಬುದ್ಧರಾದ ಹಾಗೂ ವಿಮರ್ಶಕರಾದ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು ಎಂದು ಹೇಳಿದರು. ಧರ್ಮಸ್ಥಳ ಮೇಳದಲ್ಲಿ  ಶೇಣಿಯವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಹರಿದಾಸ ಗಂಭೀರ, ಪಿ.ವಿ. ರಾವ್‌ ಮತ್ತು ಭುಜಬಲಿ ಧರ್ಮಸ್ಥಳ ಅಭಿನಂದನ ಭಾಷಣ ಮಾಡಿದರು. ಹಿರಿಯ ಯಕ್ಷಗಾನ ಕಲಾವಿದ ಎಂ. ಕೆ. ರಮೇಶ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು.

ಸಮ್ಮಾನಕ್ಕೆ  ಕೃತಜ್ಞತೆ ವ್ಯಕ್ತಪಡಿಸಿದ ಎಂ. ಕೆ . ರಮೇಶ ಆಚಾರ್ಯ ಯಕ್ಷಗಾನ ರಂಗದಲ್ಲಿ ತನಗೆ ನೋವಿಗಿಂತ ಹೆಚ್ಚು ನಲಿವೇ ಸಿಕ್ಕಿದೆ. ಆರ್ಥಿಕ ಸಂಗ್ರಹಕ್ಕಿಂತಲೂ ಸಜ್ಜನರ ಅಭಿಮಾನ ಮತ್ತು ಪ್ರೋತ್ಸಾಹ ಪಡೆದಿರುವುದು ತನಗೆ ಅತ್ಯಂತ ತೃಪ್ತಿ ಮತ್ತು ಸಂತೋಷವನ್ನುಂಟುಮಾಡಿದೆ ಎಂದವರು ತಿಳಿಸಿದರು. ತಾನು ಶೇಣಿ ಒಡನಾಡಿಯಾಗಿ 19 ವರ್ಷಗಳ ಕಾಲ ಕಲಾ ಸೇವೆ ಮಾಡಿರುವುದನ್ನು ಸ್ಮರಿಸಿದ ಅವರು ಶೇಣಿ ಯಕ್ಷಗಾನ ರಂಗದ ಶಕ ಪುರುಷ ಎಂದು ಬಣ್ಣಿಸಿದರು. ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್‌ ಸ್ವಾಗತಿಸಿದರು. ಹರಿಕೃಷ್ಣ  ಪುನರೂರು ವಂದಿಸಿದರು. ಬಳಿಕ ‘ಸತ್ಯ ಹರಿಶ್ಚಂದ್ರ’ ಯಕ್ಷಗಾನ ಬಯಲಾಟ ನಡಯಿತು.

ಕಲೆಗೆ ಮೌಲ್ಯ ತುಂಬಿದ್ದ ಶೇಣಿ
ಕಲಾವಿದರು ಪರಕಾಯ ಪ್ರವೇಶ ಮಾಡಿ ಆ ಪಾತ್ರವಾಗಿಯೇ ರಂಗಸ್ಥಳಕ್ಕೆ ಬರಬೇಕು. ಪಾತ್ರಧಾರಿಯಾಗುವ ಬದಲು ಪಾತ್ರವಾಗಿಯೇ ಮಾತನಾಡಬೇಕು, ಅಭಿನಯಿಸಬೇಕು. ಹರಿಕಥೆ, ತಾಳಮದ್ದಳೆ ಹಾಗೂ ಯಕ್ಷಗಾನದಲ್ಲಿ ಪರಿಣತರಾಗಿ ಅಪಾರ ಪಾಂಡಿತ್ಯ ಮತ್ತು ಪ್ರೌಢ ಅನುಭವ ಹೊಂದಿದ ಶೇಣಿ ಗೋಪಾಲಕೃಷ್ಣ ಭಟ್‌ ಯಕ್ಷಗಾನ ಕಲೆಗೆ ಮೌಲ್ಯ ತುಂಬಿದರು.
– ಡಾ| ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next