Advertisement

ಸಮೃದ್ಧಿ, ಸರ್ವ ಶುಭ ತರಲಿ ಶುಭಕೃತ್‌ ಕ್ರತುಶಕ್ತಿ

11:42 PM Apr 14, 2022 | Team Udayavani |

“ಶುಭಂ ಕರೋತೀತಿ ಶುಭಕೃತ್‌’ -ಎಲ್ಲರಿಗೂ ಶುಭವನ್ನು ಸಾರುವ ಹೊಸ ವರುಷಕ್ಕೆ ಸ್ವಾಗತ. ಚತುರ್ಮುಖ ಬ್ರಹ್ಮನ ಶ್ವೇತವರಾಹಕಲ್ಪವೆಂಬ ಹಗಲಿನಲ್ಲಿ ಸ್ವಾಯಂಭುವಾದಿ 6 ಮನ್ವಂತರಗಳು ಕಳೆದು 7ನೇ ವೈವಸ್ವತ ಮನ್ವಂತರದಲ್ಲಿ 28ನೇ ಮಹಾಯುಗದ ನಾಲ್ಕನೇ ಪಾದವಾದ ಈ ಕಲಿಯುಗದಲ್ಲಿ ಈ ಸಂವತ್ಸರಾರಂಭಕ್ಕೆ ಕಳೆದ ವರ್ಷಗಳು 5123. ಶಾಲಿವಾಹನ ಶಕವರ್ಷದಲ್ಲಿ ಈ ಸಂವತ್ಸರಾರಂಭಕ್ಕೆ 1,944 ವರ್ಷಗಳು ಕಳೆದವು. ವರ್ತಮಾನ ಶಕ 1945ನೇ ಈ ಶುಭಕೃತ್‌ ಸಂವತ್ಸರದಲ್ಲಿ ಚಾಂದ್ರ ಪದ್ಧತಿಯಂತೆ ಶನಿಯು ರಾಜನೂ ಗುರುವು ಮಂತ್ರಿಯೂ ಆಗಿರುವನು. ಸೌರರೀತ್ಯಾ ಗುರು ರಾಜನಾಗಿ ಶನಿ ಸಚಿವನೆನಿಸುವನು.

Advertisement

ಸುಭಿಕ್ಷಮಾರೋಗ್ಯಮಶೇಷಸಸ್ಯಫ‌ಲಾಭಿವೃದ್ಧಿರ್ಧನಧಾನ್ಯಸಂಪದಃ |

ಕ್ಷೇಮಂ ಪ್ರಜಾನಾಂ ಸತತೋತ್ಸವಾಶ್ಚ ಶುಭಂ ಭವೇದ್ವೆ„ ಶುಭಕೃದ್‌ ಯದಾಬ್ಧೆà ||

ಈ ಶುಭಕೃತ್‌ ಸಂವತ್ಸರದಲ್ಲಿ ಜನರು ಉತ್ಸವ, ಮಂಗಲಸಮಾರಂಭಗಳನ್ನು ನೆರವೇರಿಸಿಕೊಂಡು ಸಂತೋಷಭರಿತರಾಗಿರುವರು. ಉತ್ತಮ ಮಳೆ ಯಾಗಿ ಭೂಮಿಯ ಮೇಲೆ ಸಸ್ಯಗಳು, ಫ‌ಲಗಳು, ಧಾನ್ಯಗಳು ಸಮೃದ್ಧವಾಗಿ ಬೆಳೆಯು ವವು. ಎಲ್ಲೆಡೆ ಸುಭಿಕ್ಷೆ, ಅಭಿವೃದ್ಧಿ ನೆಲೆಸುವುದು. ಸಂಪದ ಭಿವೃದ್ಧಿಯಿಂದ ಪ್ರಜೆಗಳಿಗೆ ಕ್ಷೇಮವಾಗುವುದು.

ಸಂವತ್ಸರಸಾಗರವನ್ನು ನಾವು ಪ್ಲವದಿಂದ ದಾಟಿ ಶುಭಕೃತ್‌ಗೆ ಪಾದಾರ್ಪಣೆ ಮಾಡುತ್ತಿ ದ್ದೇವೆ. ನಮ್ಮ ಈ ದುರ್ಭರ ಮಾನವಜೀವನದಲ್ಲಿ ಒಂದೊಂದು ವರ್ಷವೂ ಒಂದೊಂದು ಯುಗ ದಷ್ಟು ದೀರ್ಘ‌ವಾಗಿ ಕಂಡರೆ ಅಚ್ಚರಿಯಿಲ್ಲ. ಅಲ್ಲದೆ ಅತೀ ಕಡಿಮೆ ಅವಧಿಯ ಮಾನವ ಜೀವನ ದಲ್ಲಿ ಒಂದೊಂದು ವರ್ಷವೂ ಯುಗ ದಷ್ಟು ಮಹತ್ವವನ್ನು ಪಡೆದುಕೊಂಡಿ ರುವುದರಿಂದ ವರ್ಷಾರಂಭವನ್ನೇ ನಮ್ಮ ಪೂರ್ವಜರು ಯುಗಾದಿ ಎಂದು ಕರೆದರು. “ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂಬ ಕವಿವಾಣಿಯಂತೆ ಇಂದು ಶುಭಕೃತ್‌ ಸಂವತ್ಸರದ ಯುಗಾದಿ ಹಬ್ಬ. ವರ್ಷದ ಮೊದಲ ಹಬ್ಬ.

Advertisement

ಉತ್ತರ ಭಾರತದವರು ವಿಕ್ರಮಶಕೆಯ ಆರಂಭದ ದಿನ ಅಂದರೆ ನಮ್ಮ ಕಾರ್ತಿಕ ಶುದ್ಧ ಪಾಡ್ಯದಂದು ಯುಗಾದಿ ಎಂದು ಆಚರಿಸುತ್ತಾರೆ. ವರ್ಷಗಣನೆಯಲ್ಲಿ ಜ್ಯೋತಿಶಾÏಸ್ತ್ರದಲ್ಲಿ ಮೂರು ರೀತಿಯ ಲೆಕ್ಕಾಚಾರಗಳಿವೆ :

  1. ಬಾರ್ಹಸ್ಪತ್ಯಮಾನ
  2. ಸೌರಮಾನ
  3. ಚಾಂದ್ರಮಾನ

ಉತ್ತರ ಭಾರತದವರು ಬಾರ್ಹಸ್ಪತ್ಯ ಮಾನವನ್ನು, ದಕ್ಷಿಣ ಭಾರತದವರು ಚಾಂದ್ರ ಮತ್ತು ಸೌರಮಾನವನ್ನು ಆಚರಿಸುತ್ತಾರೆ. ನಮ್ಮ ತುಳುನಾಡು, ಕೇರಳ, ತಮಿಳುನಾಡುಗಳಲ್ಲಿ ಸೌರಮಾನ ಪದ್ಧತಿ ಬಳಕೆಯಲ್ಲಿದ್ದರೆ, ಕರ್ನಾಟಕ ದಲ್ಲಿ ಘಟ್ಟದ ಮೇಲ್ಭಾಗ, ಆಂಧ್ರ ಹಾಗೂ ಮಹಾರಾಷ್ಟ್ರಗಳಲ್ಲಿ ಚಾಂದ್ರಮಾನ ಪದ್ಧತಿ ರೂಢಿ ಯಲ್ಲಿದೆ. ಈ ಕಾರಣದಿಂದಾಗಿ ದಕ್ಷಿಣ ಭಾರತ ದಲ್ಲಿ ಸೌರಮಾನ, ಚಾಂದ್ರಮಾನ ಎರಡೂ ಪದ್ಧತಿಗನುಸಾರವಾಗಿ ಯುಗಾದಿ ಹಬ್ಬ ಆಚರಣೆಯಲ್ಲಿದೆ. ಋತುಗಳ ರಾಜನಾದ ವಸಂತನೊಡನೆ ಚೈತ್ರದ ಆಗಮನವಾಗಿ ಎಲ್ಲ ಗಿಡಮರಗಳು ಚಿಗುರಿ ಫ‌ಲಪುಷ್ಪಗಳೊಡನೆ ಹಸುರು ಕಂಗೊಳಿ ಸುವುದೇ ಯುಗಾದಿ ಹಬ್ಬದ ವೈಶಿಷ್ಟ್ಯವಾಗಿದೆ.

ವಿಷು ಹಬ್ಬ :

ಸೌರ ಯುಗಾದಿಯನ್ನು ವಿಷು ಹಬ್ಬ ಎಂದೂ ಕರೆಯಲಾಗುತ್ತದೆ. ಯುಗಾದಿ ಹಬ್ಬದ ನಿಮಿತ್ತ ಮನೆಯನ್ನು ತಳಿರುತೋರಣಗಳಿಂದ ಅಲಂಕರಿಸಬೇಕು. ಯುಗಾದಿಯ ಹಿಂದಿನ ದಿನ (ಮೇಷ ಸಂಕ್ರಾಂತಿಯಂದು) ರಾತ್ರಿಪೂಜೆಗೆ ಮೊದಲು ದೇವರ ಮುಂದೆ ಕಣಿಯನ್ನು ಇಡಲಾಗುತ್ತದೆ. ದೇವರ ಮುಂಭಾಗದಲ್ಲಿ ಅಷ್ಟದ ಲಪದ್ಮಾಕಾ ರದ ರಂಗೋಲಿಯನ್ನು ಬರೆದು ಅದರ ಮೇಲೆ ಹರಿವಾಣದಲ್ಲಿ ಅಕ್ಕಿಯನ್ನು ತುಂಬಿ ಸಿಪ್ಪೆ ಇರುವ ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ವಸಂತಕಾಲದ ಮುಳ್ಳುಸೌತೆ, ಹಸಿ ಗೋಡಂಬಿ ಮೊದಲಾದ ಕಾಯಿಪಲ್ಲೆ, ಫ‌ಲಪುಷ್ಪಗಳನ್ನು ಇಟ್ಟು ಬಂಗಾರದ ಹಾರವನ್ನು ಹಾಕಲಾಗುತ್ತದೆ. ಅದರಲ್ಲಿಯೇ ಒಂದು ಕನ್ನಡಿಯನ್ನು ದೇವರಿಗೆ ಬೆನ್ನು ಹಾಕಿ ನೋಡುಗರಿಗೆ ಪ್ರತಿಬಿಂಬ ಕಾಣುವಂತೆ ಇಟ್ಟು ಹೊಸ ವರ್ಷದ ಪಂಚಾಂಗ, ಕುಂಕುಮ, ದೀಪಗಳನ್ನು ಇಡಲಾಗುತ್ತದೆ. ಈ ಜೋಡಣೆಯನ್ನು “ಕಣಿ’ ಎಂದು ಕರೆಯುತ್ತಾರೆ. ಕಣಿ ಇಟ್ಟ ಮೇಲೆ ರಾತ್ರಿ ಪೂಜೆ, ಮಂಗಳಾರತಿ ಬೆಳಗಬೇಕು.

ಕಣಿ ದರ್ಶನ :

ಯುಗಾದಿಯಂದು ಬೆಳಗ್ಗೆ ಸೂರ್ಯೋದಯಕ್ಕಿಂತ 2 ಘಂಟೆ ಮುಂಚಿತವಾಗಿ ಎದ್ದು (ಉಷಃಕಾಲ) ಮುಖ ತೊಳೆದು ದೇವರಿಗೆ ನಮಿಸಿ, ಕಣಿದರ್ಶನ ಮಾಡಬೇಕು. ಪೂರ್ಣ ಫ‌ಲ ಧಾನ್ಯ ಸುವರ್ಣಾದಿಗಳನ್ನು ನೋಡಿ ದೀಪದ ಬೆಳಕಿನಲ್ಲಿ ಕನ್ನಡಿಯಲ್ಲಿ ಮುಖವನ್ನು ನೋಡಿ ಕುಂಕುಮವನ್ನು ಹಚ್ಚಿಕೊಂಡು ಮನೆಯಲ್ಲಿರುವ ಹಿರಿಯರಿಗೆ ನಮಿಸಬೇಕು. ಇದು ಯುಗಾದಿ ಹಬ್ಬದ ಮೊದಲ ಆಚರಣೆ.

ವತ್ಸರಾದೌ ವಸಂತಾದೌ ಬಲಿರಾಜ್ಯೇ ತಥೈವ ಚ |

ತೈಲಾಭ್ಯಂಗಮಕುರ್ವಾಣಃ ನರಕಂ ಪ್ರತಿಪದ್ಯತೇ || (ನಿರ್ಣಯಸಿಂಧು)

ಸೌರವರ್ಷಾದಿ, ಚಾಂದ್ರ ಯುಗಾದಿ, ಬಲಿಪಾಡ್ಯ, ನರಕ ಚತುರ್ದಶಿ – ಈ ನಾಲ್ಕು ದಿನಗಳಲ್ಲಿ ಎಣ್ಣೆ ಹಚ್ಚಿ ತೈಲಾಭ್ಯಂಗ ಸ್ನಾನವನ್ನು ಮಾಡದಿದ್ದರೆ ಜೀವನ ನರಕವಾಗು ತ್ತದೆ. ತೈಲಾಭ್ಯಂಗಸ್ನಾನವನ್ನು ಮುಗಿಸಿ ನಿತ್ಯಾನುಷ್ಠಾನ, ದೇವರ ಪ್ರಾರ್ಥನೆ, ಜಪಾದಿಗಳನ್ನು ನಡೆಸಿ ನೂತನ ವಸ್ತ್ರಧಾರಣೆಯನ್ನು ಮಾಡಬೇಕು. ಮಗದೊಮ್ಮೆ ದೇವರಿಗೂ ಗುರು- ಹಿರಿ ಯರಿಗೂ ವಂದಿಸಿ ಪಂಚಾಂಗ ಶ್ರವಣವನ್ನು ಮಾಡಬೇಕು.

ಪಂಚಾಗ ಪಠಣ, ಶ್ರವಣ :

ಕಣಿಯಲ್ಲಿ ಇಟ್ಟಿರುವ ಹೊಸ ವರ್ಷದ ಪಂಚಾಂಗವನ್ನು ತೆಗೆದು ನಮಿಸಿ ಓದಬೇಕು. ಪತ್ನಿಪುತ್ರರಾದಿಯಾಗಿ ಎಲ್ಲರೂ ಕುಳಿತು ಕೇಳಬೇಕು. ಪಂಚಾಂಗ ಪುಸ್ತಕದ ಆರಂಭದ ಪುಟ ಗಳಲ್ಲಿ ಬರೆದ ಸಂವತ್ಸರಫ‌ಲ, ಹೊಸ ವರ್ಷದ ರಾಜ, ಮಂತ್ರಿ ಮುಂತಾದ ವಿಷಯ ಗಳನ್ನು ಓದಿದ ಮೇಲೆ ಹೊಸ ಸಂವತ್ಸರದಲ್ಲಿ ಗ್ರಹಣ ಗಳು, ಅಧಿಕಮಾಸ, ಗುರು-ಶುಕ್ರಾಸ್ತಾದಿ ವಿಶೇಷ ಗಳನ್ನೂ ಗಮನಿಸಬೇಕು. ಕೊನೆಯಲ್ಲಿ ಯುಗಾದಿ ದಿನದ ತಿಥಿ- ವಾರ- ನಕ್ಷತ್ರ- ಯೋಗ- ಕರಣಗಳೆಂಬ ಪಂಚಾಂಗವನ್ನು ಶ್ರವಣ ಮಾಡಬೇಕು. ಈ ಪಂಚಾಂಗ ಪಠನವನ್ನು ಜ್ಯೋತಿ ಶಾÏಸ್ತ್ರವನ್ನು ತಿಳಿದ ವಿದ್ವಾಂಸರಿಂದ ಮಾಡಿಸ ಬಹುದು ಅಥವಾ ಮನೆಯ ಯಜಮಾನನೇ ಪಠಿಸಬಹುದಾಗಿದೆ. ಕೊನೆಗೆ “ಲೋಕಾಃ ಸಮಸ್ತಾಃ ಸುಖೀನೋ ಭವಂತು’ ಎಂದು ಪಂಚಾಂಗ ಪಠನವನ್ನು ಮುಗಿಸಬೇಕು.

ಜೀವನದಲ್ಲಿ ಒದಗುವ ಸುಖ-ದುಃಖಗಳ, ಸಿಹಿ-ಕಹಿಗಳ ಪ್ರತೀಕವೆನಿಸುವ ಬೇವು- ಬೆಲ್ಲಗಳನ್ನು ದೇವರಿಗೆ ನಿವೇದಿಸಿ,

ಶತಾಯು ರ್ವಜ್ರದೇಹಾಯ ಸರ್ವಸಂಪತ್ಸಮೃದ್ಧಯೇ |

ಸರ್ವಾರಿಷ್ಟ ವಿನಾಶಾಯ ಗುಡನಿಂಬಕಭಕ್ಷಣಮ್‌ ||

ಶತಾಯುಷ್ಯದ ಗಟ್ಟಿದೇಹಕ್ಕಾಗಿ, ಸರ್ವಸಂಪ ತ್ಸಮೃದ್ಧಿಗಾಗಿ, ಸರ್ವಾರಿಷ್ಟ ನಿವಾರಣೆಗಾಗಿ ಬೇವು- ಬೆಲ್ಲಗಳನ್ನು ತಿನ್ನುತ್ತೇನೆ. ಈ ಶ್ಲೋಕದ ಪಠನದೊಂದಿಗೆ ಸುಖದುಃಖೇ ಸಮೇ ಕೃತ್ವಾ ಎಂಬ ಗೀತಾಚಾರ್ಯ ಶ್ರೀಕೃಷ್ಣನ ಮಾತಿನ ಅನು ಸಂಧಾನದೊಂದಿಗೆ ಬೇವು-ಬೆಲ್ಲಗಳನ್ನು ಸವಿಯಬೇಕು. ನಮ್ಮ ಕರಾವಳಿ ಪ್ರದೇಶದಲ್ಲಿ ಬೇವು- ಬೆಲ್ಲಗಳ ಭಕ್ಷಣೆಯ ಸಂಪ್ರದಾಯವಿಲ್ಲ. ಅದರ ಬದಲಾಗಿ ತೆಂಗಿನಕಾಯಿ ಹಾಲು, ಮುಳ್ಳುಸೌತೆ ಅಥವಾ ತರಕಾರಿಗಳನ್ನು ಹಾಕಿದ ಪಾಯಸ ವನ್ನು ದೇವರಿಗೆ ನಿವೇದಿಸಿ ಕುಟುಂಬದ ಸದಸ್ಯರೆಲ್ಲ ಒಟ್ಟು ಸೇರಿ ಮಧ್ಯಾಹ್ನದ ಭೋಜನವನ್ನು ಸವಿಯುತ್ತಾರೆ.

ವಿಷುವಿನ ದಿನದಂದು ನೂತನ ಅಳಿಯನನ್ನು ಹಬ್ಬಕ್ಕೆ ಆಹ್ವಾನಿಸುವ ಪದ್ಧತಿಯೂ ಕೆಲವರಲ್ಲಿದೆ. ಅಲ್ಲದೆ ಅಕ್ಕತಂಗಿಯರು, ಅಣ್ಣತಮ್ಮಂದಿರನ್ನು ತಮ್ಮ ಮನೆಗೆ ಆಹ್ವಾನಿಸಿ ಹಬ್ಬದ ಅಡುಗೆಯನ್ನು ಬಡಿಸಿ ಪ್ರೀತಿವಿಶ್ವಾಸ ಹಂಚಿಕೊಳ್ಳುತ್ತಾರೆ. ಯುಗಾದಿಯ ದಿನದಂದು ನಾವು ಯಾವ ಸತ್ಕಾರ್ಯವನ್ನು ಮಾಡು ತ್ತೇವೆಯೋ ಅದನ್ನು ವರ್ಷಪೂರ್ತಿ ನಡೆಸು ತ್ತೇವೆಂಬ ನಂಬಿಕೆ ಜನಸಾಮಾನ್ಯರಲ್ಲಿ ಪ್ರಚಲಿತ ವಿದೆ. ಯುಗಾದಿ ದಿನ ಮಾಡಿದ ಸತ್ಸಂಕಲ್ಪವನ್ನು ಸತ್ಯಸಂಕಲ್ಪನಾದ ಭಗವಂತನು ಈಡೇರಿಸುತ್ತಾ ನೆಂಬ ವಿಶ್ವಾಸವಿದೆ. ಹೊಸತನವೇ ಮಾನವನ ಸಿರಿನೋಟ. ಪ್ರಗತಿಯ ಶುಭನೋಟ. ಹಳೆಯ ಕಹಿನೆನಪುಗಳನ್ನು ಮರೆತು ನವನವೋನ್ಮೆàಶಶಾಲಿ ಯಾದ ಚೈತನ್ಯ-ಹುರುಪು ಪಡೆಯಬೇಕೆಂಬುದೇ ಯುಗಾದಿ ಹಬ್ಬದ ಸಂದೇಶ.

 

ಡಾ| ಡಿ. ಶಿವಪ್ರಸಾದ ತಂತ್ರಿ, ಉಡುಪಿ

(ಲೇಖಕರು: ಜೋತಿಷ ಪ್ರಾಧ್ಯಾಪಕರು)

Advertisement

Udayavani is now on Telegram. Click here to join our channel and stay updated with the latest news.

Next