Advertisement

ಶಶಿಕಲಾರ ರಾಜಕೀಯ ನಿವೃತ್ತಿಯ ಅಸಲಿ ಕಹಾನಿ ಏನು?

11:17 PM Mar 04, 2021 | Team Udayavani |

ಪಂಚರಾಜ್ಯಗಳಿಗೆ ಚುನಾವಣೆ ದಿನಾಂಕ ನಿಗದಿ ಯಾಗಿ ಅಖಾಡ ಕಾವೇರುತ್ತಿರುವಾಗಲೇ ತಮಿಳುನಾಡಿನ ರಾಜಕೀಯಕ್ಕೆ ದೊಡ್ಡ ಟ್ವಿಸ್ಟ್‌ ದೊರೆತಿದೆ. ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ 4 ವರ್ಷಗಳ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿರುವ ಶಶಿಕಲಾ ನಟರಾಜನ್‌ ಅವರು 2 ಪುಟಗಳ ಭಾವುಕ ಪತ್ರ ದೊಂದಿಗೆ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ. ಈ ಮೂಲಕ ತಮಿಳುನಾಡು ರಾಜಕೀಯ ಹೊಸ ಬೆಳ ವಣಿಗೆಗಳಿಗೆ ತೆರೆದುಕೊಂಡಿದೆ. ಎಪ್ರಿಲ್‌ 6ರಂದು ಡ್ರಾವಿಡರ ನಾಡಿನಲ್ಲಿ ಚುನಾವಣೆ ನಡೆಯಲಿದ್ದು ಇಂಥ ಸಂದರ್ಭದಲ್ಲಿ ಶಶಿಕಲಾ ದಿಢೀರನೆ ಈ ನಿರ್ಧಾರ ಕೈಗೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Advertisement

ಜೈಲು ವಾಸ ಮುಗಿಸಿ ಬೆಂಗಳೂರಿನಿಂದ ಚೆನ್ನೈಗೆ ಆಗಮಸಿದ ಶಶಿಕಲಾ ಆವರನ್ನು ಭಾರೀ ಜನಸಮೂಹ ರಸ್ತೆಯ ಇಕ್ಕೆಲಗಳಲ್ಲೂ ನಿಂತು ಬರಮಾಡಿಕೊಂಡಿತ್ತು. ಅಂದು ಶಶಿಕಲಾ ಅವರಿಗಿದ್ದ ಜನಬೆಂಬಲ ನೋಡಿ ಸ್ವತಃ ರಾಜ್ಯ ನಾಯಕರೇ ಆಶ್ಚರ್ಯಕ್ಕೆ ಒಳಗಾಗಿದ್ದರು. ಅಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು, ಇಂದಿನಿಂದಲೇ ಸಕ್ರಿಯ ರಾಜಕೀಯದಲ್ಲಿ ಭಾಗಿಯಾಗುವುದಾಗಿ ಹೇಳಿದ್ದರು. ಆದರೆ ಬುಧವಾರ ಇದ್ದಕ್ಕಿದ್ದಂತೇ ಯು-ಟರ್ನ್ ತೆಗೆದುಕೊಂಡಿದ್ದಾರೆ. ಇದು ಶಶಿಕಲಾ ಅವರ ಸ್ವಯಂ ನಿರ್ಧಾರವೇ? ಅಥವಾ ಬೇರೆ ಯಾರಾದರೂ ಶಶಿಕಲಾ ಅವರ ಈ ರಾಜಕೀಯ ಚಿತ್ರಕಥೆಯನ್ನು ಹೆಣೆದಿದ್ದಾರೆಯೇ ಅಥವಾ ನಿರ್ದೇಶಿಸಿದ್ದಾರೆಯೇ? ಎಂಬ ಅನುಮಾನ ಮೂಡುತ್ತದೆ.

ಕಾರಾಗೃಹದಿಂದ ಹೊರಬಂದ ಒಂದು ತಿಂಗಳ ಅನಂತರ ಈ ತೀರ್ಮಾನ ಪ್ರಕಟಿಸಿದ್ದು, ಸಹಜವಾಗಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. 66ರ ಹರೆಯದ ಶಶಿಕಲಾ ಅವರ ಈ ನಿರ್ಧಾರ ಎಲ್ಲರನ್ನೂ ಆಶ್ಚರ್ಯಚಕಿ ತರನ್ನಾಗಿಸಿದೆ. ಜೆ.ಜಯಲಲಿತಾ ಅವರ ನಿಧನದ ಬಳಿಕ ಎಐಎಡಿಎಂಕೆಯನ್ನು ಮುನ್ನಡೆಸಲು ಸಮರ್ಥ ನಾಯಕಿ ಎಂದೇ ಶಶಿಕಲಾ ಪರಿಗಣಿಸಲ್ಪಟ್ಟಿದ್ದರು. ಜಯಲಲಿತಾ ಹಲವು ನಾಯಕರನ್ನು ಬೆಳೆಸಿದ್ದರೂ ಅವರಲ್ಲಿ ಹೆಚ್ಚು ಆಪ್ತರಾಗಿದ್ದುದು ಶಶಿಕಲಾ ಮಾತ್ರ. ಹೀಗಾಗಿ ಶಶಿಕಲಾ ಅವರೇ ಜಯಲಲಿತಾ ಅವರ ಅಘೋಷಿತ ಉತ್ತರಾಧಿಕಾರಿ ಎಂದೇ ಭಾವಿಸಲಾಗಿತ್ತು. ಆದರೆ ಈಗ ಈ ಎಲ್ಲ ಲೆಕ್ಕಾಚಾರ ಬದಲಾಗಿದೆ.

ಶಶಿಕಲಾ ಅವರ ರಾಜಕೀಯ ನಿವೃತ್ತಿಯ ಹೇಳಿಕೆಯನ್ನು ಗಮನಿಸುವುದಾದರೆ  ಈ ನಿರ್ಧಾರ ಘೋಷಿಸುವಾಗ ಬಹಳ ಎಚ್ಚರಿಕೆಯಿಂದ ಪದಗಳನ್ನು ಆರಿಸಿಕೊಂಡಿದ್ದಾರೆ. ತಮಿಳು ನುಡಿಗಟ್ಟು “ಒಧುಂಗಿ ಇರುಂಧು’ ಪದ ಬಹಳ ಗಮನ ಸೆಳೆದಿತ್ತು. ಹೀಗೆಂದರೆ “ಪಕ್ಕಕ್ಕೆ ಹೆಜ್ಜೆ ಹಾಕುವುದು’ ಎಂದರ್ಥ. ಹೀಗಾಗಿ ಶಶಿಕಲಾ ಅವರ “ನಿವೃತ್ತಿ’ ನಿರ್ಧಾರವು ಕೇವಲ ತಾತ್ಕಾಲಿಕ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಆದರೆ ಶಶಿಕಲಾ ಪಾಲಿಗೆ ಇಂಥ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವೂ ಆಗಿತ್ತು. ಯಾಕೆಂದರೆ ಕಾನೂನಿನ ಚೌಕಟ್ಟಿನ ಪ್ರಕಾರ ಜೈಲು ಶಿಕ್ಷೆ ಅನುಭವಿಸಿ ದವರು ಮುಂದಿನ 6 ವರ್ಷ ಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಯಾವುದೇ ಪಕ್ಷದ ಸದಸ್ಯತ್ವ ಹೊಂದಿರದೇ ಇದ್ದದ್ದು ಅವರಿಗೆ ಹಿನ್ನಡೆಯಾಗಿತ್ತು. ಬಹಳ ಮುಖ್ಯವಾಗಿ ಶಶಿಕಲಾ ಅವರು ಜಯಲಲಿತಾ ಅವರ ಉತ್ತರಾಧಿಕಾರಿಯಾಗಲು ಹೊರಟವರು. ಹೀಗಾಗಿ ಮಾತೃ ಪಕ್ಷದ ಮೇಲೆ ಹಿಡಿತ ಮತ್ತು ಅಧಿಕಾರ ಇವೆರಡನ್ನೂ ಅನುಭವಿಸಬೇಕು ಎಂದು ಕನಸು ಕಂಡವರು.

Advertisement

ಶಶಿಕಲಾ ನಟರಾಜನ್‌ ಅವರ “ರಾಜಕೀಯಕ್ಕೆ ವಿದಾಯ’ ಕೇವಲ ತಾತ್ಕಾಲಿಕ ಎಂಬುದು ರಾಜ ಕೀಯ ವಿಶ್ಲೇಷಕರ ಅಭಿಪ್ರಾಯ. ಈ ನಿರ್ಧಾರಕ್ಕೆ ಹಲವು ಕಾರಣಗಳನ್ನು ಪಟ್ಟಿ ಮಾಡಬಹುದಾಗಿದೆ. ಮೊದಲನೆ ಯದಾಗಿ ಶಶಿಕಲಾ ಅವರು ಎಐಎಡಿಎಂಕೆ ಪಕ್ಷಕ್ಕೆ ಮತ್ತೆ ಸೇರ್ಪಡೆಯಾಗುವ ಬಯಕೆಯನ್ನು ಹೊಂದಿದ್ದರು. ಇದಕ್ಕಾಗಿಯೇ ಬೆಂಗಳೂರಿನಿಂದ ಚೆನ್ನೈಗೆ ತೆರಳಿದ ಕಾರಿನಲ್ಲಿ ಪಕ್ಷದ ಬಾವುಟವನ್ನು ಅಳವಡಿಸಲಾಗಿತ್ತು. ಇದನ್ನು ಎಐಎಡಿಎಂಕೆ ನಾಯಕರು ವಿರೋಧಿಸಿದ್ದರು. ಪಕ್ಷವನ್ನು  ಶಶಿಕಲಾ ತನ್ನ ಹಿಡಿತಕ್ಕೆ ತೆಗೆದುಕೊಂಡರೆ ತಮಗೆ ಹಿನ್ನಡೆಯಾದೀತು ಎಂಬ ಭಯ  ಪಳನಿಸ್ವಾಮಿ ಮತ್ತು ಪನ್ನೀರ್‌ ಸೆಲ್ವಂ ಅವರಿಗಿತ್ತು.

ಶಶಿಕಲಾ ಒಂದು ವೇಳೆ ಎಐಎಡಿಎಂಕೆಯ ಒಳಕ್ಕೆ ಬಂದದ್ದೇ ಆದರೆ ಪಕ್ಷ ಮೂರು ಹೋಳಾಗಲಿದೆ ಎಂಬ ಎಚ್ಚರಿಕೆಯನ್ನು ರಾಜಕೀಯ ವಿಶ್ಲೇಷಕರು ಕೊಟ್ಟಿದ್ದರು. ಇದು ವಾಸ್ತವಕ್ಕೆ ತೀರಾ ಹತ್ತಿರವೂ ಆಗಿತ್ತು. ಯಾಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಪಳನಿಸ್ವಾಮಿ ಮತ್ತು ಪನ್ನೀರ್‌ ಸೆಲ್ವಂ ಅವರನ್ನು ಬದಿಗೆ ಸರಿಸಿ ಶಶಿಕಲಾ ಅವರು ಪಕ್ಷದ ಮೇಲೆ ಹಿಡಿತ ಸಾಧಿಸಿದರೆ ಎಐಎಡಿಎಂಕೆಯಲ್ಲಿ ಭಿನ್ನಮತ ಸ್ಫೋಟಗೊಳ್ಳುತ್ತಿತ್ತು. ಹೀಗಾಗಿ ಪರೋಕ್ಷ ವಾಗಿ ಪಳನಿಸ್ವಾಮಿ ಮತ್ತು ಪನ್ನೀರ್‌ ಸೆಲ್ವಂ ಅವರ ಮೇಲೆ ಕುಪಿತರಾಗಿರುವ ಶಶಿಕಲಾ ಅವರು ಅಖಾಡ ದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ತನ್ನ ಸಹಾಯವಿಲ್ಲದೇ ಎಐಎಡಿಎಂಕೆ ಎಷ್ಟರ ಮಟ್ಟಿಗೆ ಬಲಿಷ್ಠ ಎಂಬುದನ್ನೂ ನೋಡುವ ತಂತ್ರವಾಗಿದೆ. ಇಲ್ಲಿ ಎಐಎಡಿಎಂಕೆ ಒಂದು ವೇಳೆ ಸೋತರೇ ಶಶಿಕಲಾ ಅವರು ಗೆದ್ದಂತೆ. ಯಾಕೆಂದರೆ ಶಶಿಕಲಾ ಅವರ ಇಮೇಜ್‌ ಮತ್ತಷ್ಟು ಬಲಿಷ್ಠವಾಗುತ್ತದೆ.

“ಬಾಜೀಗರ್‌’ ಸಿನೆಮಾದಲ್ಲಿನ ಸಂಭಾಷಣೆಯ ಈ ಸಾಲೊಂದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. “ಕಭೀ ಕಭೀ ಜೀತ್ನೆà ಕೆ ಲಿಯೇ ಕುಚ್‌ ಹಾರ್‌ನಾ ಪಡ್ತಾ ಹೈ, ಔರ್‌ ಹಾರ್‌ ಕರ್‌ ಜೀತ್ನೆವಾಲೇ ಕೋ, ಬಾಜಿಗರ್‌ ಕೆಹೆತೇ ಹೈ’ (ಕೆಲವೊಮ್ಮೆ ನಾವು ಗೆಲ್ಲಲು ಏನನ್ನಾದರೂ ಕಳೆದುಕೊಳ್ಳಬೇಕಾಗುತ್ತದೆ ಮತ್ತು ಸೋತು ಗೆದ್ದವನನ್ನು ಜಾದೂಗಾರ ಎನ್ನುತ್ತೇವೆ). ಸದ್ಯ ತಮಿಳುನಾಡು ರಾಜಕೀಯದಲ್ಲಿ ಇದೇ ಬೆಳವಣಿಗೆಗಳು ಆಗುತ್ತಿ ರುವಂಥದ್ದು. ಶಶಿಕಲಾ ಪಕ್ಷದಲ್ಲಿ ಇದ್ದರೂ ಇಲ್ಲದೇ ಇದ್ದರೂ ದಿ| ಜಯಲಲಿತಾ ಅನಂತರದ ಸ್ಥಾನದ ಲ್ಲಂತೂ ಇರಲಿದ್ದಾರೆ. ಶಶಿಕಲಾ ಅವರು ತನ್ನ ವೈಯಕ್ತಿಕ ಇಮೇಜ್‌ ಅನ್ನು ಮತ್ತಷ್ಟು ಬೆಳೆಸಿಕೊಳ್ಳಲು ಮುಂದಾಗುತ್ತಿದ್ದಾರೆ.

ಮೇಲ್ನೋಟಕ್ಕೆ ಯಾರಿಗೆ ಗೆಲುವು? :

ಶಶಿಕಲಾ ಅವರ ಪ್ರಭಾವ ತಗ್ಗಿಸಲು ಎಐಎಡಿ ಎಂಕೆಯ ಹಾಲಿ ನಾಯಕರು ಮುಂದಾಗಿದ್ದರು ಎಂಬ ಮಾತುಗಳಿದ್ದವು. ಪಕ್ಷದಿಂದ ಹೊರಹೋಗಿರುವ ಶಶಿಕಲಾ ಅವರನ್ನು ರಾಜಕೀಯವಾಗಿ ಮೂಲೆ ಗುಂಪು ಮಾಡುವ ಪ್ರಯತ್ನಗಳು ಭರದಿಂದಲೇ ನಡೆಯುತ್ತಿದ್ದವು. ಶಶಿಕಲಾ ಮತ್ತು ಅವರ ಸಂಬಂಧಿ ಟಿಟಿವಿ ದಿನಕರನ್‌ ಎಐಎಡಿಎಂಕೆಯಲ್ಲಿ ಮತ್ತೆ ಅಧಿಪತ್ಯ ಸ್ಥಾಪಿಸದಂತೆ ತಡೆಯುವ ಪ್ರಯತ್ನವಾಗಿ ಇಬ್ಬರನ್ನೂ ರಾಜಕೀಯವಾಗಿ ಮೂಲೆಗುಂಪಾಗಿಸಲು ತೆರೆಮರೆಯಲ್ಲಿಯೇ ಯತ್ನಗಳು ನಡೆಯುತ್ತಿದ್ದವು. ಆದರೆ ಶಶಿಕಲಾ ಅವರ ರಾಜಕೀಯ ನಿವೃತ್ತಿಯಿಂದ ಎಐಎಡಿಎಂಕೆ ನಾಯಕರಿಗೆ ತಾತ್ಕಾಲಿಕ ಗೆಲುವಾಗಿದೆ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಪ್ರತ್ಯೇಕ ಪಕ್ಷ ಸ್ಥಾಪಿಸಿಕೊಂಡಿದ್ದ ಟಿಟಿವಿ ದಿನಕರನ್‌ ಮಾತೃಪಕ್ಷಕ್ಕೆ ಸೇರುವ ಕನಸು ಭಗ್ನಗೊಂಡಿದೆ.

ಬಿಜೆಪಿ ಹಾದಿ ಸುಗಮ? :

ಜಯಲಲಿತಾ ಕಾಲಾನಂತರ ಎಐಎಡಿಎಂಕೆಯಲ್ಲಿನ ದಿಢೀರ್‌ ಬೆಳವಣಿಗೆಗಳ ಹಿಂದೆ ಬಿಜೆಪಿಯ ಪಾತ್ರ ಇರುವಿಕೆ ಸ್ಪಷ್ಟ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ರಾಜ್ಯದಲ್ಲಿ ತಳವೂರಲು ಬಿಜೆಪಿ ಅಂಚಿನಲ್ಲಿ ಕಾಯುತ್ತಿದೆ. ಅದಕ್ಕಿಂತಲೂ ಮುಂದುವರಿದು ನೋಡುವುದಾದರೆ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಮಾತುಕತೆ ಅಂತಿಮ ಹಂತದಲ್ಲಿದೆ. ಇಲ್ಲಿ ಶಶಿಕಲಾ ಅವರನ್ನು ಪಕ್ಷದಲ್ಲೇ ಉಳಿಸಿಕೊಂಡರೇ ಬಿಜೆಪಿ ಜತೆ ಮೈತ್ರಿಗೆ ತೊಂದರೆಯಾಗಲಿದೆ. ಯಾಕೆಂದರೆ ಈಗಾಗಲೇ ಕೇಂದ್ರ ಬಿಜೆಪಿ ನಾಯಕರು ಡಿಎಂಕೆ ಮತ್ತು ಕಾಂಗ್ರೆಸ್‌ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಭ್ರಷ್ಟಾಚಾರ ದಲ್ಲಿ ಜೈಲು ಪಾಲಾಗಿದ್ದ ಶಶಿಕಲಾ ಎಐಎಡಿಎಂಕೆಯ ಭಾಗವಾಗಿದ್ದು ಅವರ ಜತೆ ಮೈತ್ರಿಗೆ ಮುಂದಾದರೆ ಕೇಸರಿ ಪಕ್ಷದ ವರ್ಚಸ್ಸಿಗೆ ಚ್ಯುತಿ ಬರುವ ಸಾಧ್ಯತೆ ಇದೆ. ಹೀಗಾಗಿ ಚಿನ್ನಮ್ಮ ರಾಜಕೀಯದಿಂದ ಹಿಂದೆ ಸರಿದಿರುವುದು ಬಿಜೆಪಿ ಮಟ್ಟಿಗೆ ಧನಾತ್ಮಕ ಬೆಳವಣಿಗೆ.

ರಾಜ್ಯದಲ್ಲಿ ಬಿಜೆಪಿ ತನ್ನ ನೆಲೆಯನ್ನು ಕಂಡುಕೊ ಳ್ಳುವ ಪ್ರಯತ್ನ ಮಾಡಲಿದ್ದು, 5 ವರ್ಷಗಳ ಬಳಿಕ ಎಐಎಡಿಎಂಕೆಯಲ್ಲಿ ಬದಲಾವಣೆಯಾಗಲಿದ್ದು, ಈ ಸಂದರ್ಭ ಶಶಿಕಲಾ ಅವರ ನಡೆ ಕುತೂಹಲವಾಗಲಿದೆ. ಸದ್ಯ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡು ಏಕಾಂಗಿ ಎದುರಾಳಿ ಡಿಎಂಕೆಯನ್ನು ಸುಲಭವಾಗಿ ಚುನಾವಣೆಯಲ್ಲಿ ಮಣಿಸಿ ಅಧಿಕಾರದ ಭಾಗವಾಗುವ ಯೋಜನೆ ಬಿಜೆಪಿಯದ್ದಾಗಿದೆ. ಬಿಜೆಪಿಯ ಲಕ್ಷ್ಯ ಏನಿದ್ದರೂ 2024ರ ಲೋಕಸಭಾ ಚುನಾವಣೆಯಾಗಿದ್ದು ಈ ಬಾರಿಯ ವಿಧಾನಸಭೆ ಚುನಾವಣೆಯನ್ನೇ ಇದಕ್ಕೆ ಬುನಾದಿಯನ್ನಾಗಿಸಿಕೊಳ್ಳಲು ಚಿಂತನೆ ನಡೆಸಿದೆ. ಇದಕ್ಕೆ ಪೂರಕವಾದ ವಾತಾವರಣವನ್ನು ಪಕ್ಷ ತಮಿಳುನಾಡಿನಲ್ಲಿ ರೂಪಿಸಿಕೊಳ್ಳುತ್ತಿದೆ.

 

ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next