Advertisement

ಸಸಿಹಿತ್ಲು ಬೀಚ್‌: ಗೃಹರಕ್ಷಕ ದಳದ ಕಣ್ಗಾವಲು

03:00 AM Jun 09, 2018 | Karthik A |

ಸಸಿಹಿತ್ಲು: ಮಳೆಗಾಲದಲ್ಲಿ ಜಿಲ್ಲಾಡಳಿತ ವತಿಯಿಂದ ಸಮುದ್ರಗಳ ಸುತ್ತಮುತ್ತ ಸುರಕ್ಷತ ಕ್ರಮ ವಹಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸಸಿಹಿತ್ಲು ಮುಂಡ ಬೀಚ್‌ ನಲ್ಲಿಯೂ ಗೃಹ ರಕ್ಷಕ ದಳದ ಸಿಬಂದಿ ನೇಮಿಸುವ ಮೂಲಕ ಕಣ್ಗಾವಲು ಇಡಲಾಗಿದೆ. ಸಸಿಹಿತ್ಲು ಬೀಚ್‌ ಪ್ರದೇಶದಲ್ಲಿ ಕಳೆದ ವರ್ಷ ಜೂನ್‌ ತಿಂಗಳಿನಲ್ಲಿಯೇ ಮೂರು ಮಂದಿ ಜಲ ಸಮಾಧಿಯಾಗಿದ್ದರು. ಸಸಿಹಿತ್ಲು ಬೀಚ್‌ ಪ್ರದೇಶದಲ್ಲಿ ಅಪಾಯದ ಮುನ್ಸೂಚನೆ ನೀಡಿ ಎಚ್ಚರಿಕೆಯ ಫಲಕಗಳ ಮೂಲಕ ಪ್ರತಿಬಂಧಿಸಲಾಗಿದೆ. ಬೀಚ್‌ ಗಳಲ್ಲಿ ಸಾಂಪ್ರದಾಯಿಕ ಮೀನುಗಾರರನ್ನು ಹೊರತುಪಡಿಸಿ ಇತರ ಯಾವುದೇ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ಇಳಿಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

Advertisement

ಸಸಿಹಿತ್ಲುವಿನ ಕಡಲ ಕಿನಾರೆಗಳಿಗೆ ಆಗಮಿಸುವ ಪ್ರವಾಸಿಗರ ಸಹಿತ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಲು ಕೆಂಪು ಫಲಕಗಳನ್ನು ಜಿಲ್ಲಾಡಳಿತದ ಮೂಲಕ ಹಾಕಲಾಗಿದೆ. ಸಸಿಹಿತ್ಲುವಿನಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವ ಖಾಯಂ ಜೀವರಕ್ಷಕರ ಸಹಿತ ಗೃಹರಕ್ಷಕದಳದವರು ಕಾರ್ಯಪ್ರವೃತ್ತರಾಗಿದ್ದಾರೆ. ನಿರ್ಬಂಧಿತ ಪ್ರದೇಶವನ್ನು ಉಲ್ಲಂಘಿಸಿ ಅತಿಕ್ರಮಿಸಿ ಪ್ರವೇಶಿಸಿದಲ್ಲಿ ಅಥವಾ ಉದ್ಧಟತನದಿಂದ ವರ್ತಿಸಿದಲ್ಲಿ ಅಂತಹವರನ್ನು ಸಂಬಂಧಿಸಿದ ಸುರತ್ಕಲ್‌ ಪೊಲೀಸ್‌ ಠಾಣೆಗೆ ಒಪ್ಪಿಸಲು ಸಹ ಅವರಿಗೆ ಆದೇಶ ನೀಡಲಾಗಿದೆ. ಗುಂಪಾಗಿ ಬರುವ ಪ್ರವಾಸಿಗರು ಎಚ್ಚರಿಕೆಯ ಮಾತನ್ನು ಮೀರಿ ವರ್ತಿಸಬಾರದು ಎಂದು ಗೃಹರಕ್ಷಕದಳದವರು ಸೂಚಿಸಿದ್ದಾರೆ. ಬೆಳಗ್ಗೆ 9ರಿಂದ ಸಂಜೆ 7ರ ವರೆಗೆ ಮಾತ್ರ ಸಸಿಹಿತ್ಲು ಬೀಚ್‌ ತೆರೆದಿರುತ್ತದೆ. ಸಮಯದ ಪರಿಪಾಲನೆ ಹಾಗೂ ಪ್ರವಾಸಿಗರು ತಾಳ್ಮೆಯಿಂದ ವರ್ತಿಸಬೇಕು ಎಂದು ಆಗಾಗ ಸ್ಥಳದಲ್ಲಿಯೇ ಸೂಚಿಸಲಾಗುತ್ತಿದೆ ಎಂದು ಗೃಹ ರಕ್ಷಕದಳ ಸಿಬಂದಿ ರಾಜೇಶ್‌ ಪತ್ರಿಕೆಗೆ ಪ್ರತಿಕ್ರಿಯಿಸಿದರು.

ಆಗಸ್ಟ್‌ 30ರವರೆಗೆ
ಸಸಿಹಿತ್ಲುವಿನ ಕಡಲ ಕಿನಾರೆಗಳಲ್ಲಿ ಇಬ್ಬರು ಮಂದಿ ಗೃಹ ರಕ್ಷಕದಳದವರನ್ನು ನಿಯೋಜಿಸಲಾಗಿದೆ. ಇವರು ಪ್ರತಿದಿನ ಸುರತ್ಕಲ್‌ ಠಾಣೆಯಲ್ಲಿ ಹಾಜರಾತಿ ಹಾಕಿ ಸಸಿಹಿತ್ಲುವಿನ ಬೀಚ್‌ ನಲ್ಲಿ ಕರ್ತವ್ಯ ನಿರ್ವಹಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ಪ್ರಕ್ರಿಯೆ ಆಗಸ್ಟ್‌ 30ರವರೆಗೆ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next