Advertisement

ಚಂದ್ರಗಿರಿ ತೀರದಿಂದ ಬೀಸಿ ಬಂದ ಸಾಹಿತ್ಯ ಮಾರುತ

01:54 AM Jan 11, 2023 | Team Udayavani |

ಮಂಗಳೂರು : ಚಂದ್ರಗಿರಿ ತೀರದಲ್ಲಿ ಕಾದಂಬರಿಯ ಮೂಲಕ ಖ್ಯಾತಿಗೆ ಬಂದ ಡಾ. ಸಾರಾ ಅಬೂಬಕ್ಕರ್‌ ಕಾಸರಗೋಡು ಜಿಲ್ಲೆಯವರು.

Advertisement

ಅಲ್ಲಿಯ “ಪುದಿಯಾಪುರ್‌’ ತರವಾಡು ಮನೆಯಲ್ಲಿ ಜೂನ್‌ 30, 1936 ರಂದು ವಕೀಲ ಪಿ. ಅಹ್ಮದ್‌-ಜೈನಾಬಿ ದಂಪತಿ ಪುತ್ರಿಯಾಗಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟೂರಲ್ಲೇ ನಡೆಸಿ, ಕಾಸರಗೋಡಿನಲ್ಲಿ ಹೈಸ್ಕೂಲ್‌ ಪೂರೈಸಿದರು. ತಮ್ಮ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡವರು.

ವಿವಾಹದ ಕಾರಣ ಶಿಕ್ಷಣ ಮೊಟಕು
ಗೊಳಿಸಿದರು. ಪತಿ ಎಂಜಿನಿಯರ್‌ ಆಗಿದ್ದು, ಸಂಸಾರದ ಜವಾಬ್ದಾರಿಯೊಂದಿಗೆ ಮನದಲ್ಲೇ ಸುಪ್ತವಾಗಿದ್ದ ಸಾಹಿತ್ಯದ ಆಸಕ್ತಿಗೆ ಸಾರಾ ಅವರು ಪುಸ್ತಕಗಳ ಓದಿನ ಮೂಲಕ ನೀರೆರೆದು ಪೋಷಿಸಿದರು. ಈ ಮೂಲಕ ಅವರಲ್ಲಿದ್ದ ಸಾಹಿತಿಯ ಮನಸ್ಸು ಹೊರ ಜಗತ್ತಿಗೆ ಪ್ರಕಟವಾಗಿದ್ದು 44ರ ಪ್ರಾಯದಲ್ಲಿ. ಹಿರಿಯ ಸಾಹಿತಿಗಳಾದ ಡಾ| ಶಿವರಾಮ ಕಾರಂತ, ಡಾ| ಯು.ಆರ್‌.ಅನಂತಮೂರ್ತಿ ಮತ್ತಿತರರ ಪುಸ್ತಕಗಳನ್ನು ಹೆಚ್ಚು ಓದಿಕೊಂಡಿದದ ಸಾರಾ ಅವರು, ಲೇಖಕಿ ತ್ರಿವೇಣಿಯವರ ಕಾದಂಬರಿಗಳನ್ನು ಮೆಚ್ಚಿಕೊಂಡಿದ್ದರು. ತನ್ನ ಸಹೋದರ ತಂದುಕೊಡುತ್ತಿದ್ದ ವೈಕಂ ಮಹಮದ್‌ ಬಶೀರ್‌ ಅವರ ಕಾದಂಬರಿಗಳ ಓದಿನ ಪ್ರಭಾವ ಅವರ ಮೇಲೆ ಸಾಕಷ್ಟು ಪರಿಣಾಮ ಬೀರಿತಲ್ಲದೇ, ಆಸಕ್ತಿ ಹೆಚ್ಚಿಸಿತು.

ಸಾರಾ ಅವರ ಚೊಚ್ಚಲ ಕಾದಂಬರಿ “ಚಂದ್ರಗಿರಿಯ ತೀರದಲ್ಲಿ’ ಲಂಕೇಶ್‌ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ಈ ಕಾದಂಬರಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಯಿತು. ಈ ಕಾದಂಬರಿ ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಒರಿಯಾ ಭಾಷೆಗೆ ಅನುವಾದಗೊಂಡಿದೆ. “ಹೊತ್ತು ಕಂತುವ ಮುನ್ನ’ ಅವರ ಆತ್ಮಕತೆ. ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ, ತಳ ಒಡೆದ ದೋಣಿ, ಪಂಜರ, ಇಳಿಜಾರು, ಕಾಣಿಕೆ ಇತ್ಯಾದಿ ಕಾದಂಬರಿಗಳು. ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ ಮುಂತಾದ ಕಥಾ ಸಂಕಲನ, ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು ಮುಂತಾದ ಬಾನುಲಿ ನಾಟಕಗಳು, ಲೇಖನ ಗುತ್ಛ, ಮನೋಮಿ, ಬಲೆ, ನಾನಿನ್ನು ನಿದ್ರಿಸುವೆ ಇತ್ಯಾದಿ ಅನುವಾದಗಳನ್ನು ರಚಿಸಿದರು. ಐಷಾರಾಮದಲ್ಲಿ ಎಂಬ ಪ್ರವಾಸ ಕಥನವನ್ನೂ ಬರೆದಿದ್ದಾರೆ.

ಮನೆಮಾತು ಕನ್ನಡ-ಮಲಯಾಳ ಆದರೂ ಸಾಹಿತ್ಯ ರಚನೆ ಕನ್ನಡದಲ್ಲೇ ಆಯಿತು. ಮಲಯಾಳದ ಅನೇಕ ಕೃತಿಗಳನ್ನೂ ಡಾ| ಸಾರಾ ಕನ್ನಡಕ್ಕೆ ಅನುವಾದಿಸಿದ್ದರು.

Advertisement

ಗೌರವ, ಪ್ರಶಸ್ತಿಗಳು
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಶ್ರೀ ಮುರುಘ ರಾಜೇಂದ್ರ ಮಠದ ಸಾಹಿತ್ಯ ಭೂಷಣ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ ಮತ್ತು ರತ್ನಮ್ಮ ಹೆಗಡೆ ಮಹಿಳಾ ಸಾಹಿತ್ಯ ಪ್ರಶಸ್ತಿ, ಕೇಂದ್ರ ಸರಕಾರದ ಭಾಷಾ ಭಾರತಿ ಸಮ್ಮಾನ (2001), ಸರೋಜಾದೇವಿ ಶ್ರೀ ಹರ್ಷ ಪ್ರಶಸ್ತಿ, ಶಿವಾನಂದ ಪಾಟೀಲ ಪ್ರಶಸ್ತಿ ಗೊರೂರು ಪ್ರತಿಷ್ಠಾನದ ಬಾಬಾ ಸಾಹೇಬ ಅಂಬೇಡ್ಕರ್‌ ಪ್ರಶಸ್ತಿ, ಸಾವಿತ್ರಮ್ಮ ದೇ. ಜವರೇಗೌಡ ದತ್ತಿನಿಧಿ ಬಹುಮಾನ, ಆಳ್ವಾಸ ನುಡಿಸಿರಿ ಪ್ರಶಸ್ತಿ, ಸಂದೇಶ ಸಾಹಿತ್ಯ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾ ನಿಲಯದಿಂದ ನಾಡೋಜ ಪ್ರಶಸ್ತಿ, ಶಾಶ್ವತಿ ಪ್ರತಿಷ್ಠಾನದಿಂದ ತಿರುಮ
ಲಾಂಬಾ ಸಾಹಿತ್ಯ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯ ದಿಂದ ಗೌರವ ಡಾಕ್ಟರೇಟ್‌, ಬಿಬಿಎಂಪಿ ಬೆಂಗಳೂರು ನೃಪತುಂಗಾ ಪ್ರಶಸ್ತಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಸಾಹಿತ್ಯ ಪ್ರಶಸ್ತಿ, ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರ- 2014 ಗೌರವಗಳು ಲಭಿಸಿವೆ. ಕರಾವಳಿ ಲೇಖಕಿಯರ, ವಾಚಕಿಯರ ಸಂಘದ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದವರು. ಕರ್ನಾಟಕ ಲೇಖಕಿಯರ ಸಂಘದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸ್ವೀಕರಿಸಿದವರು. ಚಂದ್ರಗಿರಿ’ ಇವರಿಗೆ ಸಮರ್ಪಿತವಾಗಿರುವ ಅಭಿನಂದನಾ ಗ್ರಂಥ.

Advertisement

Udayavani is now on Telegram. Click here to join our channel and stay updated with the latest news.

Next