Advertisement

ಸಿದ್ದು-ಎಚ್‌ಡಿಕೆ ಮುಗಿಯದ ಮುನಿಸು

06:45 AM Aug 16, 2018 | Team Udayavani |

ಬೆಂಗಳೂರು:ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಶೀತಲ ಸಮರ ಮುಂದುವರೆದಿದ್ದು ಅದಕ್ಕೆ ಪುಷ್ಠಿ ನೀಡುವಂತೆ ಕಾರ್ಯಕ್ರಮವೊಂದರಲ್ಲಿ  ಇಬ್ಬರೂ ಎದುರು ಬದುರಾದರೂ ಮಾತನಾಡದ ಪ್ರಸಂಗ ನಡೆದಿದೆ.

Advertisement

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನಾಚರಣೆ ಅಂಗವಾಗಿ ನಗರದ  ಮೆಜೆಸ್ಟಿಕ್‌ ಬಳಿ ಇರುವ  ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಹಾಕುವ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಎದುರು ಬದುರಾದರೂ ಮಾತನಾಡಿಲ್ಲ. ಒಂದೇ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ, ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 221ನೇ ಜಯಂತಿ ಅಂಗವಾಗಿ ರಾಯಣ್ಣನ ಪ್ರತಿಮೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿ, ರಾಯಣ್ಣ ನ ಶೌರ್ಯದ ಬಗ್ಗೆ ಭಾಷಣ ಮಾಡುತ್ತಿದ್ದರು. ಅದೇ ಹೊತ್ತಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಣೆಕ್‌ ಷಾ ಪರೇಡ್‌ ಮೈದಾನದ ಸ್ವಾತಂತ್ರೊéàತ್ಸವ ಕಾರ್ಯಕ್ರಮ ಮುಕ್ತಾಯಗೊಳಿಸಿ ನೇರವಾಗಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯ ಮೇಲೆ ಭಾಷಣ ಮಾಡುತ್ತಿದ್ದರಿಂದ ಕುಮಾರಸ್ವಾಮಿ ಸ್ವಲ್ಪ ಹೊತ್ತು ಕಾರಿನಿಂದ ಕೆಳಗಿಳಿಯದೆ ಕಾರಿನಲ್ಲಿಯೇ ಕುಳಿತುಕೊಂಡರು.  ಸಿದ್ದರಾಮಯ್ಯ ಭಾಷಣ ಮುಗಿಸಿ ಕಾರ್ಯಕರ್ತರಿಗೆ ಕೈ ಬೀಸಿ ತಮ್ಮ ಕಾರು ಹತ್ತಲು ಹೊರಟರು.

ಮುಖ್ಯಮಂತ್ರಿ ಕುಮಾರಸ್ವಾಮಿ ಬಂದಿರುವುದನ್ನು ಅರಿತ ಸಂಘಟಕರು, ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮದಲ್ಲಿ ಉಳಿಯುವಂತೆ ಕೋರಿದರು. ಆದರೆ, ಸಿದ್ದರಾಮಯ್ಯ ಸ್ಪಂದಿಸದೆ ನೇರವಾಗಿ ಕಾರು ಹತ್ತಿ ತೆರಳಿದರು. ಸಿದ್ದರಾಮಯ್ಯ ನಿರ್ಗಮನದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರಿನಿಂದ ಇಳಿದು ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

Advertisement

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ವರ್ಷ ರಾಯಣ್ಣನ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಿದ್ದರು. ಆದರೆ, ಈ ವರ್ಷ ಕುಮಾರಸ್ವಾಮಿಯವರ ಅಧಿಕೃತ ಕಾರ್ಯಕ್ರಮ ಪಟ್ಟಿಯಲ್ಲಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮ ಇರಲಿಲ್ಲ. ಆದರೂ, ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ಮುಗಿಸಿ ನೇರವಾಗಿ ಆಗಮಿಸಿದರು.

ಆದರೆ, ಒಂದೇ ಕಾರ್ಯಕ್ರಮದ ಬಳಿ ದೋಸ್ತಿ ಸರ್ಕಾರದ ಇಬ್ಬರೂ ನಾಯಕರು ಎದುರು ಬದುರಾದರೂ ಮಾತನಾಡದೇ ಅಂತರ ಕಾಯ್ದುಕೊಂಡಿರುವುದು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೇಲೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ಹಲವಾರು ತೀರ್ಮಾನಗಳನ್ನು ಬದಲಿಸಿದ್ದರು. ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಕಡಿತ, ಸಿಂಡಿಕೇಟ್‌ ಸದಸ್ಯರನ್ನು ಬದಲಾಯಿಸಲಾಗಿತ್ತು. ಸ್ವ ಕ್ಷೇತ್ರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿಕೊಂಡಿದ್ದರೂ ಬಜೆಟ್‌ನಲ್ಲಿ ಸೇರ್ಪಡೆ ಮಾಡಿರಲಿಲ್ಲ. ಹಿಂದಿನ ಅವಧಿಯಲ್ಲಿ ನಡೆಸಿದ್ದ ಜಾತಿ ಸಮೀಕ್ಷೆ ವರದಿ ಬಿಡುಗಡೆ ಮಾಡುವ ಕುರಿತಂತೆಯೂ ಇಬ್ಬರೂ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಗುಟ್ಟಾಗಿ  ಉಳಿದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next