Advertisement

ಸಿಆರ್‌ಝಡ್‌ ಮರಳಿಲ್ಲದೆ ದರ ಏರಿಕೆ ಭೀತಿ ?

11:43 PM May 24, 2022 | Team Udayavani |

ಮಂಗಳೂರು: ಸಿಆರ್‌ಝಡ್‌ ಪ್ರದೇಶದಲ್ಲಿ ತೆಗೆದ ಮರಳನ್ನು ಮಾರಾಟ ಮಾಡುವಂತಿಲ್ಲ ಎಂಬ ರಾಷ್ಟ್ರೀಯ ಹಸುರು ನ್ಯಾಯಾಧಿಕರಣ (ಎನ್‌ಜಿಟಿ) ತೀರ್ಪು ಒಂದೆಡೆ ಪರಿಸರವಾದಿಗಳ ಖುಷಿಗೆ ಕಾರಣವಾದರೆ ಕಾನೂನು ಬದ್ಧವಾಗಿ ಮರಳು ತೆಗೆಯುವವರನ್ನು ಚಿಂತೆಗೀಡು ಮಾಡಿದೆ. ಇದರ ನಡುವೆ ಜನಸಾಮಾನ್ಯರು ಮರಳಿಗಾಗಿ ಇನ್ನಷ್ಟು ಕಷ್ಟಪಡಬೇಕಾದ ಪ್ರಮೇಯ ಗೋಚರಿಸಿದೆ.

Advertisement

ಸಿಆರ್‌ಝಡ್‌ ಪ್ರದೇಶದಲ್ಲಿ ವಾಸ್ತವದಲ್ಲಿ ಮರಳು ವಾಣಿಜ್ಯ ಉದ್ದೇಶಕ್ಕಾಗಿ ತೆಗೆಯುವಂತೆಯೇ ಇರಲಿಲ್ಲ, ಆದರೂ ಮರಳು ಮಾಫಿಯಾ ಒತ್ತಡದಿಂದ ಆಡಳಿತದವರು ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ದೋಣಿ ಸಂಚಾರಕ್ಕೆ ಪೂರಕವಾಗಿ ಎಂಬ ನೆಪವೊಡ್ಡಿ ಮರಳನ್ನು ತೆಗೆದು ಮಾರಾಟ ಮಾಡುತ್ತಿದ್ದರು, ಈಗ ಎನ್‌ಜಿಟಿ ಆದೇಶವು ಅದಕ್ಕೆ ತಡೆಯೊಡ್ಡಿದೆ ಎಂದು ಪರಿಸರವಾದಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

ಸದ್ಯ ನಾನ್‌ ಸಿಆರ್‌ಝಡ್‌ ಪ್ರದೇಶದ 17 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ನಡೆಯುವುದಕ್ಕೆ ಒಪ್ಪಿಗೆ ನೀಡಿದೆ, ಅಲ್ಲದೆ ಆದ್ಯಪಾಡಿ ಹಾಗೂ ತುಂಬೆಯ ಡ್ಯಾಂಗಳಲ್ಲಿ ಡ್ರೆಜ್ಜಿಂಗ್‌ ಮಾಡಿ ತೆಗೆಯಲಾದ ಮರಳನ್ನೂ ಬಳಸಬಹುದು, ಅದನ್ನು ಯಾರ್ಡ್‌ಗಳಲ್ಲಿ ಟನ್‌ಗೆ 700 ರೂ.ನಂತೆ ನೀಡಿ (ಆ್ಯಪ್‌ ಮೂಲಕ) ಪಡೆದುಕೊಳ್ಳಬಹುದೆಂದು ಜಿಲ್ಲಾಧಿಕಾರಿಯವರು ಈಗಾಗಲೇ ಮಾಹಿತಿ ನೀಡಿದ್ದಾರೆ.

ಆದರೆ ಡ್ಯಾಂನಿಂದ ತೆಗೆಯಲಾಗಿರುವ ಮರಳಿನಲ್ಲಿ ಹೂಳಿನ, ಕೆಸರಿನ ಅಂಶ ಜಾಸ್ತಿ ಇದೆ ಹಾಗಾಗಿ ಅದನ್ನು ಕಾಮಗಾರಿಯಲ್ಲಿ ಬಳಸುವುದು ಕಷ್ಟ ಎಂಬ ದೂರು ಗುತ್ತಿಗೆದಾರರಿಂದ ಕೇಳಿ ಬಂದಿದೆ.

ಇನ್ನು ನಾನ್‌ ಸಿಆರ್‌ಝಡ್‌ ಪ್ರದೇಶದಿಂದ ಬರುವ ಮರಳು ಹೆಚ್ಚು ದಪ್ಪ ಇರುತ್ತದೆ ಅದು ಕಾಂಕ್ರೀಟಿಗೆ ಉತ್ತಮವಾದರೂ ಪ್ಲಾಸ್ಟರಿಂಗ್‌ ಕೆಲಸಕ್ಕೆ ಸೂಕ್ತವಲ್ಲ, ಸಿಆರ್‌ಝಡ್‌ ಪ್ರದೇಶದಿಂದ ಬರುವ ನಯವಾದ ಹೊಗೆಯೇ ಅನುಕೂಲಕರ ಎನ್ನುತ್ತಾರೆ ಗುತ್ತಿಗೆದಾರರು.

Advertisement

ಸುಪ್ರೀಂಕೋರ್ಟಿಗೆ ಮೊರೆ
ಸಿಆರ್‌ಝಡ್‌ ಪ್ರದೇಶದಲ್ಲಿ ಕಾನೂನು ಬದ್ಧರೀತಿಯಲ್ಲಿ ನಾವು ಮರಳು ತೆಗೆಯುತ್ತಿದ್ದೆವು, ಈಗ ಎನ್‌ಜಿಟಿ ಆದೇಶದಿಂದ ನಮಗೆ ತೊಂದರೆಯೇ ಹೊರತು ಕದ್ದು ಮುಚ್ಚಿ ಅಕ್ರಮ ಮರಳುಗಾರಿಕೆ ಮಾಡುವುದು ನಿಲ್ಲುವುದಿಲ್ಲ. ಹಾಗಾಗಿ ನಮಗೆ ಯಾಕೆ ಈ ಶಿಕ್ಷೆ ? ಇದನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುತ್ತೇವೆ ಎಂದು ಮರಳು ಸಾಗಾಟಗಾರರ ಕ್ರಿಯಾ ಸಮಿತಿ ಅಧ್ಯಕ್ಷ ಮಯೂರ್‌ ಉಳ್ಳಾಲ್‌ ತಿಳಿಸಿದ್ದಾರೆ. ಅದೇ ರೀತಿ ಕರ್ನಾಟಕ ಜನಜಾಗೃತಿ ವೇದಿಕೆಯಿಂದಲೂ ಎನ್‌ಜಿಟಿ ಆದೇಶ ವಿರುದ್ಧ ಕೋರ್ಟ್‌ ಮೆಟ್ಟಿಲೇರಲು ತೀರ್ಮಾನಿಸಲಾಗಿದೆ.

ದರ ಏರಿಕೆಯ ಸಾಧ್ಯತೆ
ಸದ್ಯ ನಾನ್‌ ಸಿಆರ್‌ಝಡ್‌ ಮರಳು ಮಂಗಳೂರಿನಲ್ಲಿ 300 ಸಿಎಫ್‌ಟಿ-ಘನ ಅಡಿ(ಸುಮಾರು 8ರಿಂದ 10 ಟನ್‌) 12ರಿಂದ 13,500 ರೂ.ಗೆ ಸಿಗುತ್ತಿದೆ. ಒಂದು ವೇಳೆ ಸಿಆರ್‌ಝಡ್‌ ಮರಳು ತೆಗೆಯಲು ಪ್ರಾರಂಭವಾದರೆ ಮರಳಿನ ದರ ಸುಮಾರು 7ರಿಂದ 8,000 ರೂ.ಗೆ ಇಳಿಯಬಹುದು ಎನ್ನುವ ಲೆಕ್ಕಾಚಾರವಿದೆ.

ಕಳೆದ ಒಂದೆರಡು ತಿಂಗಳಿನಿಂದ ಸಿಆರ್‌ಝಡ್‌ ಮರಳಿಗಾಗಿ ಕಟ್ಟಡ ನಿರ್ಮಾಣದವರು ಕಾಯುತ್ತಿದ್ದರು, ಆದರೆ ಎನ್‌ಜಿಟಿ ಆದೇಶದಿಂದ ಈ ಸಾಧ್ಯತೆ ಈಗ ತಪ್ಪಿದಂತಾಗಿದೆ. ಇನ್ನು ಎಂ-ಸ್ಯಾಂಡ್‌ ಕೂಡ 300 ಸಿಎಫ್‌ಟಿಗೆ 15 ಸಾವಿರ ರೂಪಾಯಿಯಷ್ಟಿದೆ. ತುಂಬೆ, ಆದ್ಯಪಾಡಿ ಡ್ಯಾಂನ ಮರಳು ಸಿಕ್ಕಿದರೂ ಅದು ಸಾಗಾಟ ವೆಚ್ಚವೂ ಸೇರಿದರೆ 12-13 ಸಾವಿರ ರೂ. ಆಸುಪಾಸಿಗೆ ಬರಲಿದೆ, ಹೀಗಾಗಿ ಮರಳಿನ ದರವಿನ್ನು ಇಳಿಯಲಾರದು ಎನ್ನುತ್ತಾರೆ ಕಟ್ಟಡ ನಿರ್ಮಾಣ ಕ್ಷೇತ್ರದವರು.

Advertisement

Udayavani is now on Telegram. Click here to join our channel and stay updated with the latest news.

Next