ಯಾದಗಿರಿ: ನಗರದ ಹಳೆ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಟ್ರೂನ್ಯಾಟ್ ಲ್ಯಾಬ್ ಕಟ್ಟಡದ ಪಕ್ಕದಲ್ಲಿ ಕೋವಿಡ್-19 ಸಂಬಂಧ ಹೊಸದಾಗಿ ಸ್ಥಾಪಿಸುತ್ತಿರುವ ಗಂಟಲು ದ್ರವ ಮಾದರಿ ಸಂಗ್ರಹ ಮತ್ತು ಜ್ವರ ತಪಾಸಣೆ ಕೇಂದ್ರಗಳ ಸಿದ್ಧತೆಯನ್ನು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ರೋಗಿಗಳಿಗೆ ಥರ್ಮಲ್ ಸ್ಕ್ರಿನಿಂಗ್ ಮಾಡುವುದು, ರೋಗಿಗಳು ಸೇರಿದಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲನೆ ಮಾಡುವುದು ಕಡ್ಡಾಯ. ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಉಸಿರಾಟದ ತೊಂದರೆ, ಕೆಮ್ಮು, ಜ್ವರ, ನೆಗಡಿಯಂತಹ ಲಕ್ಷಣ ಕಂಡುಬಂದರೆ ಜ್ವರ ತಪಾಸಣೆ ಕೇಂದ್ರದಲ್ಲಿ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯ ಕಂಟೇನ್ಮೆಂಟ್ ಝೋನ್ ಗಳಿಂದ ಬರುವ ರೋಗಿಗಳಲ್ಲಿ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಐಎಲ್ಐ, ಸ್ಯಾರಿ ಲಕ್ಷಣಗಳು ಕಂಡುಬಂದಲ್ಲಿ ಅವರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ಟ್ರೂನ್ಯಾಟ್ ಲ್ಯಾಬ್ನಲ್ಲಿ ಪರೀಕ್ಷೆ ನಡೆಸಬೇಕು. ಅಲ್ಲದೇ, ಗರ್ಭಿಣಿಯರ ಹೆರಿಗೆ ದಿನಾಂಕದ 14 ದಿನಗಳ ಮೊದಲು ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.
ಟ್ರೂನ್ಯಾಟ್ ಲ್ಯಾಬ್ನಲ್ಲಿ ನೆಗೆಟಿವ್ ವರದಿ ಬಂದರೆ ನೆಗೆಟಿವ್ ಎಂದರ್ಥ. ಒಂದು ವೇಳೆ ಪಾಸಿಟಿವ್ ಬಂದರೆ ಅದನ್ನು ಆರ್ಟಿಪಿಸಿಆರ್ ಲ್ಯಾಬ್ಗ ಕಳುಹಿಸಿದ ನಂತರ ಬರುವ ವರದಿ ಪರಿಗಣಿಸಬೇಕು. ಶಂಕಿತರ ಮಾದರಿ ಸಂಗ್ರಹಿಸಲು ಬೇಕಾಗಿರುವ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಗಂಟಲು ದ್ರವ ಮಾದರಿ ಸಂಗ್ರಹ ಮತ್ತು ಜ್ವರ ತಪಾಸಣೆ ಕೇಂದ್ರಗಳಿಗೆ ಒಬ್ಬರು ವೈದ್ಯರು, ಒಬ್ಬರು ಪ್ರಯೋಗಾಲಯ ತಜ್ಞರು, ಒಬ್ಬರು ಶುಶ್ರೂಷಕರು ಹಾಗೂ ಒಬ್ಬರು ಗ್ರೂಪ್ ಡಿ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಪ್ರಭಾರಿ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ|ನೀಲಮ್ಮ ಎಂ.ರೆಡ್ಡಿ ಮಾಹಿತಿ ನೀಡಿದರು. ಡಿಎಚ್ಒ ಡಾ| ಎಂ.ಎಸ್. ಪಾಟೀಲ ಇದ್ದರು