Advertisement

ವರ್ತಮಾನದ ವಿಲಾಪವನ್ನು ನಿಕಷಕ್ಕೊಡ್ಡುವ ಸಂಪಿಗೆ ನಗರ ಪೋಲಿಸ್‌ ಸ್ಟೇಷನ್

12:30 AM Jan 04, 2019 | |

ಶಶಿರಾಜ್‌ ರಚನೆ ಮೋಚ ನಿರ್ದೇಶನ ಪ್ರಥಮ ಪ್ರದರ್ಶನದ ದೌರ್ಬಲ್ಯಗಳು ಏನೇ ಇದ್ದರೂ ಇಡಿಯ ನಾಟಕ ವಸ್ತು, ನಟನೆ, ನಿರ್ದೇಶನ ನಿಮಿತ್ತವಾಗಿ ಬಾಯಾರಿದ ರಂಗಾಕಾಂಕ್ಷಿಗಳಿಗೆ ಬಹುದಿನಗಳವರೆಗೆ ಚರ್ಚಿಸಲು ಬೇಕಾದ ಆಹಾರ ಒದಗಿಸಿದೆ ಎಂಬುದಂತೂ ಸತ್ಯ.

Advertisement

ಎರಡು ದಿನಗಳೊಳಗೆ ಒಂದು ಪೋಲಿಸ್‌ ಸ್ಟೇಷನ್‌ ಎಷ್ಟು ತುಮುಲಗಳನ್ನು ಸೃಷ್ಟಿಸಬಲ್ಲುದು? ಎಷ್ಟೊಂದು ಜಾತಕಗಳನ್ನು ಬರೆಯಬಲ್ಲುದು? ಎಷ್ಟು ಘಟನೆಗಳನ್ನು ಉಳಿಸಬಲ್ಲುದು, ಅಳಿಸಬಲ್ಲವು ಎಂಬುದನ್ನು ಸಂಪಿಗೆ ನಗರದ ಒಂದು ಪೋಲಿಸ್‌ ಸ್ಟೇಷನ್ನು ನಮ್ಮ ಕಣ್ಣಮುಂದೆ ತಂದು ನಿಲ್ಲಿಸುತ್ತದೆ. ಈಗಾಗಲೇ ನಾಟಕಕಾರರಾಗಿ ಸ್ಥಾಪಿತರಾಗಿರುವ ನ್ಯಾಯವಾದಿ ಶಶಿರಾಜ್‌ರಾವ್‌ ಕಾವೂರರು ಕೋರ್ಟು-ಸ್ಟೇಷನ್‌ಗಳ ನಡುವೆ ಕಳೆದ ಒಂದೂವರೆ ದಶಕದಿಂದ ಅಲೆದಾಡಿ ಪಡೆದ ಅನುಭವವನ್ನು ಧಾರೆಯೆರೆದು ಕಟ್ಟಿಕೊಟ್ಟ ನಾಟಕವಿದು. ನಾಲ್ಕು ದಶಕಗಳಿಂದ ರಂಗಭೂಮಿಯನ್ನು ಬಗಲಲ್ಲಿ ನೇತುಹಾಕಿ ನಡೆದಾಡಿದ ಮೋಹನಚಂದ್ರ (ಮೋಚ)ನಿರ್ದೇಶಿತ ಕುತೂಹಲಕಾರಿ ನಾಟಕ. ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಮೊದಲ ಪ್ರದರ್ಶನ ಕಂಡ ಸಂಪಿಗೆ ನಗರ ಪೋಲಿಸ್‌ ಸ್ಟೇಷನ್‌ ಪೋಲಿಸರ ಹಿನ್ನೆಲೆಯಲ್ಲಿ ನ್ಯಾಯ ತೀರ್ಮಾನಗಳು ಹೇಗೆ ನಡೆಯುತ್ತವೆ ಎಂಬುದನ್ನು ಹಲವಾರು ಸೂಕ್ಷ್ಮ ದೃಷ್ಟಾಂತಗಳೊಂದಿಗೆ ಸಾದರ ಪಡಿಸುತ್ತದೆ. 

ಸಮಾಜಶಾಸ್ತ್ರದ ನಿವೃತ್ತ ಪ್ರೊಫೆಸರ್‌ ತನ್ನ ಶಿಷ್ಯ ಗುರುಕಾಣಿಕೆಯಾಗಿ ಕೊಟ್ಟ ಆಧುನಿಕ ಮೊಬೈಲ್‌ನ ಮೂಲಕ ಅಶ್ಲೀಲ ಚಿತ್ರವೊಂದನ್ನು ಗುಂಪಲ್ಲಿ ಹರಿಯಬಿಟ್ಟ ಅಪರಾಧಕ್ಕೆ ಗುರಿಯಾಗುತ್ತಾನೆ. ಪರಿಣಾಮವಾಗಿ ಸಂಪಿಗೆ ನಗರ ಪೋಲಿಸ್‌ ಸ್ಟೇಷನ್‌ಗೆ ಆತನ ಪ್ರವೇಶವಾಗುತ್ತದೆ. ಅಲ್ಲಿಂದ ನಾಟಕ ಪ್ರಾರಂಭ. ಸಕಲಗುಣ ಸಂಪನ್ನನಾದ ಎಸ್‌ಐ ಚೆಲುವರಾಜು(ಗೋಪಿನಾಥ ಭಟ್‌) ನಿಮಿಷ ನಿಮಿಷಕ್ಕೆ ತನ್ನ ಚರ್ಯೆ ಬದಲಾಯಿಸುತ್ತ ಪ್ರೊಫೆಸರನ್ನು ಸತಾಯಿಸುತ್ತ ಅಲ್ಲೇ ಆತನನ್ನು ಕೂಡಿಹಾಕುತ್ತಾನೆ. ಆತ ನಿರಪರಾಧಿ ಎಂಬುದು ಪ್ರೇಕ್ಷಕರಿಗೂ ಪೋಲೀಸರಿಗೂ ಗೊತ್ತು. ಆದರೆ ರಾಜಕೀಯ ಜಾಲದಿಂದ ತಪ್ಪಿಸಿಕೊಳ್ಳಲಾರರು. ನಕ್ಸಲೈಟ್‌ ಮಗ ಸೆರೆಯಾಗಬೇಕಿದ್ದರೆ ಗಾಂಧಿವಾದಿ ಅಪ್ಪನನ್ನು ಬಂಧಿಸಬೇಕು ಎಂಬ ಮಸಲತ್ತು.

ಸಂಪಿಗೆ ನಗರದಲ್ಲಿ ಅದೇ ಹೊತ್ತಿಗೆ ಒಂದು ಕೊಲೆಯಾಗುತ್ತದೆ. ಕೊಲೆಯ ಸುತ್ತ ಸಿನಿಮಾ ನಟ ರಂಜನ್‌, ದುಬಾಯಿಯಿಂದ ಬಂದ ಪ್ರೊಫೆಸರ್‌ರ ಶಿಷ್ಯ ಪವನ್‌, ಪಿಂಪ್‌ಗಿರಿ ಮಾಡುವ ಬಾಟಾಸ್ವಾಮಿ, ರಿಕ್ಷಾ ಡ್ರೈವರ್‌ ಮುರಳಿ, ಚಹಾದಂಗಡಿಯ ದಿನೇಶ-ಎಲ್ಲರೂ ಗಿರಕಿ ಹೊಡೆಯುವವರೆ. ಪೋಲಿಸರ ವೈಯಕ್ತಿಕ ಬದುಕಿನ ಮೇಲೆಯೂ ಬೆಳಕು ಚೆಲ್ಲುವ ಪ್ರಸ್ತುತ ನಾಟಕವು ಒಮ್ಮೆ ಕೊಲೆಯ ಸುತ್ತ ಚಲಿಸುವಂತೆ ತೋರಿದರೆ ಮರುಕ್ಷಣದಲ್ಲಿ ಪ್ರೊಫೆಸರ್‌ರ ಗಾಂಧಿತತ್ವ ಹಾಗೂ ಪುತ್ರ ಮನೋಹರನ ನಕ್ಸಲ್‌ಗಿರಿಯ ಸುತ್ತ ತಿರುಗುತ್ತದೆ. 

ಸ್ಟೇಷನ್ನಿನ ಎಎಸ್‌ಐ ರಜಾಕ್‌(ಲಕ್ಷ್ಮಣ್‌ ಕುಮಾರ್‌ ಮಲ್ಲೂರು) ಮನುಷ್ಯತ್ವ ಉಳ್ಳವನಾಗಿದ್ದರೆ, ಕಾನ್‌ಸ್ಟೆಬಲ್‌ ಮುನಿರತ್ನ (ಪ್ರಭಾಕರ್‌ ಕಾಪಿಕ್ಕಾಡ್‌) ಮುಟ್ಟಿದರೆ ಮುನಿ. ರಾತ್ರಿ ಪಾಳಿಯ ಕಾನ್‌ಸ್ಟೆಬಲ್‌ ಜಾರ್ಜ್‌ (ಮುರಳೀಧರ ಕಾಮತ್‌) ಕುಡುಕ, ಬೇಜವಾಬ್ದಾರಿಯವ. ಸ್ಟೇಷನ್ನಿನ ಖಾಯಂ ಗಿರಾಕಿ ಬಾಟಾಸ್ವಾಮಿ(ರಂಜನ್‌ ಬೋಳೂರು) ಕಳ್ಳನಾಗಿದ್ದರೂ ಪೋಲಿಸರ ಗೈರಿನಲ್ಲಿ ಸ್ಟೇಷನನ್ನೇ ಮುನ್ನಡೆಸಬಲ್ಲಷ್ಟು ಚಾಣಾಕ್ಷ, ನಾಟಕದ ರಂಜಕ. ಐಜಿ ಸಂತೋಷ್‌ ಶೆಟ್ಟಿಯ ಪಕ್ವ ನಟನೆ. ಶಶಿರಾಜ್‌ ಕಾವೂರು ಅಭಿವ್ಯಕ್ತಿಸಿದ ಆತಂಕ, ರಾಮದಾಸ್‌ ತೋರಿದ ಮಾತಿನ ದೃಢತೆ, ಸುಧಾಕರ ಸಾಲಿಯಾನರ ಸಿನಿಮಾ ಗಿಮ್ಮಿಕ್ಸ್‌ ಎಲ್ಲವೂ ನೆನಪಲ್ಲುಳಿಯುತ್ತದೆ. ಶತಮಾನಗಳಿಂದ ಪೋಲಿಸರಿಗೆ ಚಹಾ ಕೊಟ್ಟು ಸವೆದುಹೋದ ದಿನೇಶನದ್ದಂತೂ(ಶ್ರೀನಿವಾಸ ಕುಪ್ಪಿಲ) ಜನಸಾಮಾನ್ಯನ ಪ್ರಾತಿನಿಧಿಕ ಪಾತ್ರ. ನಾಟಕದುದ್ದಕ್ಕೂ ಪ್ರೇಕ್ಷಕರ ಮನಸ್ಸನ್ನು ಕಲಕುವುದು ಚಂದ್ರಹಾಸ ಉಳ್ಳಾಲ್‌ರ ಪ್ರೊಫೆಸರ್‌ ಪಾತ್ರ. ಪೋಲಿಸ್‌ ಸ್ಟೇಷನ್ನಿನಲ್ಲಿ ಈ ಬಗೆಯ ಅನುಭವ ಪಡೆದವರಂತೂ ತಮ್ಮ ಪ್ರತಿನಿಧಿಯಾಗಿ ಪ್ರೊಫೆಸರನ್ನು ಕಂಡರೆ ಅಚ್ಚರಿಯಿಲ್ಲ. 

Advertisement

ಇಡಿಯ ವೇದಿಕೆಯನ್ನು ನಿರ್ದೇಶಕರು ಹಲವು ಏರಿಯಾಗಳಾಗಿ ಒಡೆದಿದ್ದಾರೆ. ವೇದಿಕೆಯಲ್ಲಿ ಸ್ಥಳಾಭಾವ ನಿಚ್ಚಳವಾಗಿದು,ª ಪ್ರಮುಖ ಏರಿಯಾದಲ್ಲಿ ಅಭಿನಯಿಸುವ ಹೊತ್ತಿಗೆ ಹಿಂದಿರುವ ರಜಾಕ್‌ನ ಏರಿಯಾಕ್ಕೆ ಗ್ರಹಣ ಬಡಿಯುತ್ತದೆ. ಬೆಳಕಿನ ಆಟಕ್ಕೆ ಇಲ್ಲಿನ ಏರಿಯಾಗಳು ಅದ್ಭುತ ಕೊಡುಗೆ ನೀಡಬಲ್ಲುದು. ಅದಕ್ಕೆ ಹೊಂದಿಕೊಳ್ಳುವ ಬೆಳಕು ನೀಡಬೇಕೆಂಬುದಷ್ಟೇ ಮುಖ್ಯ. ಸಂಗೀತ ಆಧುನಿಕ ರಂಗಭೂಮಿಯಲ್ಲೂ ಹಿಂದೆ ಬೀಳುವಂತಿಲ್ಲ ಎಂಬುದು ನಮಗೆ ಬಿ.ವಿ.ಕಾರಂತರು ಕಲಿಸಿಕೊಟ್ಟ ಪಾಠ. ಅದನ್ನು ಇನ್ನಷ್ಟು ಎಚ್ಚರಿಕೆಯೊಂದಿಗೆ ಮುನ್ನಡೆಸಬೇಕು. 

ಡಾ. ನಾ. ದಾಮೋದರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next