Advertisement

ಸಂಪಾಜೆ ನಾಡಕಚೇರಿ: ನೂರೆಂಟು ಸಮಸ್ಯೆ

04:43 AM Mar 17, 2019 | Team Udayavani |

ಅರಂತೋಡು: ಸಂಪಾಜೆ ಗೇಟ್‌ ಬಳಿಯ ಕೊಡಗು ಸಂಪಾಜೆ ನಾಡ ಕಚೇರಿ ಶಿಥಿಲಗೊಂಡಿದ್ದು, ನೂರೆಂಟು ಸಮಸ್ಯೆ ಎದುರಾಗಿದೆ. ಈ ನಾಡ ಕಚೇರಿ ವ್ಯಾಪ್ತಿಯ ಜನರು ಸಂಕಷ್ಟಕೊಳಗಾಗಿದ್ದಾರೆ.

Advertisement

ಕಟ್ಟಡದ ಛಾವಣಿ ಕುಸಿದಿದೆ. ಪಕ್ಕಾಸು, ರೀಪುಗಳು ಗೆದ್ದಲು ಹಿಡಿದು ಶಿಥಿಲಗೊಂಡಿವೆ. ಛಾವಣಿ ಕುಸಿದ ಹಿನ್ನೆಲೆಯಲ್ಲಿ ಹೆಂಚುಗಳು ಸಮರ್ಪಕವಾಗಿ ನಿಲ್ಲದೆ ಮಳೆಗಾಲದಲ್ಲಿ ಸೋರುತ್ತಿವೆ. ಈ ಹಿನ್ನೆಲೆಯಲ್ಲಿ ಛಾವಣಿಗೆ ಟಾರ್ಪಲ್‌ ಅಳವಡಿಸಲಾಗಿದೆ. ಇಲ್ಲಿರುವ ಸಿಬಂದಿ ದಿನನಿತ್ಯ ಭಯದಿಂದಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಲಭ್ಯರಿಲ್ಲದ ಕಂದಾಯ ನಿರೀಕ್ಷಕರು
ಕೊಡಗಿನ ಪ್ರಕೃತಿ ವಿಕೋಪದ ಬಳಿಕ ಇಲ್ಲಿಯ ಕಂದಾಯ ನಿರೀಕ್ಷಕರು ಜನರ ಸೇವೆಗೆ ಸಿಗುತ್ತಿಲ್ಲ ಎನ್ನುವ ಆರೋಪವಿದೆ. ಪ್ರಕೃತಿ ವಿಕೋಪದ ಮೊದಲು ವಾರಕ್ಕೆ ಎರಡು ದಿನವಾದರೂ ಅವರು ಲಭ್ಯರಿರುತ್ತಿದ್ದರು. ಅನಂತರದ ದಿನಗಳಲ್ಲಿ ಕಂದಾಯ ನಿರೀಕ್ಷಕರು ನಾಡಕಚೇರಿಗೆ ಬಂದಿಲ್ಲ ಎಂದು ಇಲ್ಲಿಯ ಜನರು ಹೇಳುತ್ತಾರೆ. ಮಡಿಕೇರಿ ತಾಲೂಕಿಗೆ ಸೇರಿದ ಸಂಪಾಜೆ ಹೋಬಳಿಯ ನಾಡಕಚೇರಿ ವ್ಯಾಪ್ತಿಗೆ ಪೆರಾಜೆ, ಸಂಪಾಜೆ, ಮದೆ, ಚೆಂಬು, ಕಾಟಿಕೇರಿ, ಮೇಕೇರಿ, ಬಿಳಿಗೇರಿ, ಹಾಕತ್ತೂರು, ಕಗ್ಗೊಡ್ಲು, ಹೆರವನಾಡು, ಅರ್ವತ್ತೂಕ್ಲು ಮೊದಲಾದ ಗ್ರಾಮಗಳು ಒಳಪಡುತ್ತಿವೆ. ಇಲ್ಲಿ ಸಾವಿರಾರು ಜನರ ಭೂಮಿಯ ಮೂಲ ದಾಖಲಾತಿಗಳಿದ್ದು, ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ದಾಖಲೆಗಳು ನಾಶವಾಗುವ ಭೀತಿ ಸ್ಥಳೀಯರಿಗೆ ಎದುರಾಗಿದೆ.

ಇಂಟರ್‌ನೆಟ್‌ ಸಂಪರ್ಕ ಇಲ್ಲ
ಆಧುನಿಕ ಕಾಲದಲ್ಲಿ ಎಲ್ಲ ವ್ಯವಹಾರಗಳೂ ಅಂತರ್ಜಾಲದ ಮೂಲಕ ನಡೆಯುತ್ತಿರುವುದರಿಂದ ಪ್ರತಿ ಕಚೇರಿಗೆ ಇಂಟರ್‌ನೆಟ್‌ ಸಂಪರ್ಕ ಅತ್ಯವಶ್ಯಕ.

ಆದರೆ ಇಲ್ಲಿಗೆ ಇಂಟರ್‌ನೆಟ್‌ ಸಂಪರ್ಕ ಇನ್ನೂ ಆಗದಿರುವುದು ವಿಪರ್ಯಾಸ. ನಾಡಕಚೇರಿಯಲ್ಲಿ ಇಂಟರ್‌ ನೆಟ್‌ ಸಂಪರ್ಕ ಇಲ್ಲದಿರುವುದರಿಂದ ಅಂತರ್ಜಾಲದ ಮೂಲಕ ಆಗುವ ಕೆಲಸಗಳು, ಸಾಮಾನ್ಯರಿಗೆ ಬೇಕಾಗುವ ಆರ್‌ಟಿಸಿ ಇತರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದ ನಾಡಕಚೇರಿ ವ್ಯಾಪ್ತಿಯ ಜನರು ಪ್ರತಿದಿನ ಕೆಲಸ ಕಾರ್ಯಗಳಿಗೆ ಮಡಿಕೇರಿ ತಾಲೂಕು ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಉಪತಹಶೀಲ್ದಾರ್‌ ಕೂಡ ಇಲ್ಲ
ಸಂಪಾಜೆ ನಾಡ ಕಚೇರಿ 10 ಗ್ರಾಮ ಹೊಂದಿದ್ದು, ಇಲ್ಲಿ ಉಪತಹಶೀಲ್ದಾರ್‌ ಇರಬೇಕಾಗಿದೆ. ಆದರೆ ಉಪತಹಶೀಲ್ದಾರರ ನಾಮಫ‌ಲಕ ಮಾತ್ರವಿದ್ದು, ಕಚೇರಿಗೆ ಉಪತಹಶೀಲ್ದಾರ್‌ ಬಂದಿಲ್ಲ. ಗ್ರಾಮಕರಣಿಕರು ಬಂದು ಹೋಗುತ್ತಾರೆ. ಆದರೆ ಅವರೂ ಜನರ ಸೇವೆಗೆ ಲಭ್ಯರಿಲ್ಲ ಎನ್ನುವ ದೂರಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ, ಮುಖ್ಯಮಂತ್ರಿ, ಕಂದಾಯ ಮಂತ್ರಿಗಳಿಗೆ ಕಟ್ಟಡ ಸಮಸ್ಯೆ ಬಗ್ಗೆ ಮನವಿ ನೀಡಿದರೂ ಈ ತನಕ ಯಾವುದೇ ಪರಿಹಾರ ದೊರೆತಿಲ್ಲ. ನಾಡ ಕಚೇರಿಯಲ್ಲಿ ಒಂದಲ್ಲ ಎರಡಲ್ಲ ಹತ್ತಾರು ಸಮಸ್ಯೆಗಳಿವೆ. ಸರಕಾರ, ಜನಪ್ರತಿನಿಧಿಗಳು ಗಂಭೀರವಾಗಿ ಆಲೋಚಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸೌಲಭ್ಯ ಇಲ್ಲ
ನಾಡಕಚೇರಿಯ ಪ್ರಮುಖ ಸಮಸ್ಯೆ ಬಗೆಹರಿಸುವುದು ಜನತೆಯ ಹಲವಾರು ವರ್ಷಗಳ ಬೇಡಿಕೆ. ಆದರೆ ಈ ಸಮಸ್ಯೆ ಈಡೇರದೆ ಜನಸಾಮಾನ್ಯರು ಕಷ್ಟಪಡುವಂತಾಗಿದೆ. ಕಚೇರಿಯಲ್ಲಿ ಇಂಟರ್‌ನೆಟ್‌ ಸೇರಿದಂತೆ ಇತರ ಆಧುನಿಕ ಸೌಲಭ್ಯಗಳಿಲ್ಲ. ಕಂದಾಯ ನಿರೀಕ್ಷರು ಕಚೇರಿಯಲ್ಲಿ ಇರುವುದಿಲ್ಲ. ಜನಪ್ರತಿನಿಧಿಗಳು, ಸರಕಾರ ಗಂಭೀರವಾಗಿ ಪರಿಗಣಿಸಬೇಕು.
– ಬಾಲಚಂದ್ರ ಕಳಗಿ,
ಕೊಡಗು ಸಂಪಾಜೆ ಗ್ರಾ.ಪಂ. ಸದಸ್ಯರು

ಸೂಚನೆ ಕೊಡುತ್ತೇನೆ
ಸಂಪಾಜೆ ನಾಡಕಚೇರಿ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇನೆ. ಕಂದಾಯ ನಿರೀಕ್ಷಕರು ಕಚೇರಿಯಲ್ಲಿ ಜನರ ಸೇವೆಗೆ ಲಭ್ಯರಿರುವಂತೆ ಸೂಚನೆ ಕೊಡುತ್ತೇನೆ. ಮುಂದಿನ ದಿನದಲ್ಲಿ ಇಂಟರ್‌ನೆಟ್‌ ವ್ಯವಸ್ಥೆ ಮಾಡಿಕೊಳ್ಳುತ್ತೇವೆ.
-ಜವರೇ ಗೌಡ
ಸಹಾಯಕ ಆಯುಕ್ತರು, ಕೊಡಗು 

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next