Advertisement

ಸಂಬರಗಿ: ಗಡಿಯಲ್ಲಿ ಮಹಾರಾಷ್ಟ್ರ ಬಸ್‌ಗಳು ಖಾಲಿ ಖಾಲಿ!

06:02 PM Jun 17, 2023 | Team Udayavani |

ಸಂಬರಗಿ: ರಾಜ್ಯ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಯೋಜನೆ ಜಾರಿಗೆ ತಂದಿದ್ದು, ರಾಜ್ಯಾದ್ಯಂತ
ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಮಹಾರಾಷ್ಟ್ರ ಗಡಿಯಲ್ಲಿ ಕೂಡ ಮಹಿಳೆಯರು ಯೋಜನೆ ಲಾಭ ಪಡೆಯುತ್ತಿದ್ದು, ಮಹಾರಾಷ್ಟ್ರದ ಬಸ್‌ಗಳು ಪ್ರಯಾಣಿಕರಿಲ್ಲದೆ ಒಡಾಡುತ್ತಿವೆ.

Advertisement

ಅಥಣಿ ಘಟಕದಿಂದ ಸಾಂಗಲಿ, ಮಿರಜಗೆ ಬಸ್‌ ಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತವೆ. ಅದೇ ರೀತಿ ಮಹಾರಾಷ್ಟ್ರದ ಸಾಂಗಲಿ, ಮಿರಜ, ಜತ್ತ, ಕವಟೆ ಮಹಾಂಕಾಳ ಘಟಕದಿಂದ ಈ ಭಾಗಕ್ಕೆ ಮಹಾರಾಷ್ಟ್ರದ ಬಸ್ಸುಗಳ ಸಂಖ್ಯೆ ಹೆಚ್ಚಿದೆ. ಕರ್ನಾಟಕ ಬಸ್ಸುಗಳಲ್ಲಿ ರಾಜ್ಯದ ಗುರುತಿನ ಚೀಟಿ ತೋರಿಸುವ ಮಹಿಳೆಯರಿಗೆ ಉಚಿತ ಪ್ರಯಾಣ ಇರುವ ಕಾರಣ ಕರ್ನಾಟಕದಲ್ಲಿ ಒಡಾಡುವ ಮಹಾರಾಷ್ಟ್ರದ ಬಸ್ಸುಗಳು ಪ್ರಯಾಣಿಕರಿಲ್ಲದೇ ಆರ್ಥಿಕ ಹಾನಿ ಅನುಭವಿಸುತ್ತಿವೆ.

ಮಹಾರಾಷ್ಟ್ರದ ಸರ್ಕಾರ ಕೂಡ ಈ ಮುಂಚಿನಿಂದ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರಿಗಾಗಿ ಯೋಜನೆಯೊಂದನ್ನು ಜಾರಿಗೊಳಿಸಿದ್ದು, ಆ ಯೋಜನೆ ಪ್ರಕಾರ ಮಹಿಳೆಯರಿಗೆ ಟಿಕೆಟ್‌ನ ಅರ್ಧ ದರ ಮಾತ್ರ ಆಕರಿಸಲಾಗುತ್ತದೆ. ಕರ್ನಾಟಕದ
ಫ್ರೀ ಯೋಜನೆ ರಾಜ್ಯದ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದರೆ ಮಹಾರಾಷ್ಟ್ರದ ಯೋಜನೆ ಯಾವುದೇ ರಾಜ್ಯದ ಎಲ್ಲ ಮಹಿಳೆಯರಿಗೆ ಅನ್ವಯಿಸುತ್ತದೆ.

ಹೀಗಾಗಿ ಕರ್ನಾಟಕದ ಗಡಿಭಾಗದ ಕಾಗವಾಡವರೆಗೆ ರಾಜ್ಯದ ಬಸ್‌ನಲ್ಲಿ ಸಂಚರಿಸುವ ಮಹಿಳೆಯರು ಅಲ್ಲಿಂದ ಅರ್ಧ ಹಣ ಕೊಟ್ಟು ಮಹಾರಾಷ್ಟ್ರದ ಬಸ್‌ ಗಳಲ್ಲಿ ಸಂಚರಿಸುತ್ತಾರೆ. ಒಬ್ಬ ಮಹಿಳೆಗೆ ಕಾಗವಾಡದಿಂದ ಮೀರಜ್‌ವರೆಗೆ ರಾಜ್ಯದ ಬಸ್‌ನಲ್ಲಿ 35 ರೂ. ಟಿಕೆಟ್‌ ಇದ್ದರೆ ಮಹಾರಾಷ್ಟ್ರದ ಬಸ್‌ನಲ್ಲಿ 20 ರೂ. ಮಾತ್ರ ಇದೆ. ಹೀಗಾಗಿ ಗಡಿವರೆಗೆ ರಾಜ್ಯದ ಬಸ್‌ನಲ್ಲಿ ಉಚಿತವಾಗಿ ಸಂಚರಿಸುವ ಮಹಿಳೆಯರು ನಂತರ ಅಲ್ಲಿಂದ ಅರ್ಧ ದರ ಇರುವ ಮಹಾ ಬಸ್‌ಗಳನ್ನು ಏರುತ್ತಾರೆ. ಮಹಾರಾಷ್ಟ್ರದಲ್ಲಿ ಯಾವುದೇ ರಾಜ್ಯದ ಮಹಿಳೆಯರು ಸಂಚರಿಸಿದರೂ ಕೂಡ ಯೋಜನೆ ಲಾಭ ಪಡೆಯುತ್ತಿದ್ದಾರೆ. ಆದರೆ ಆ ಸೌಲಭ್ಯ ಕರ್ನಾಟಕ ರಾಜ್ಯದಲ್ಲಿ ಇಲ್ಲ ಎಂದು ಮಹಾರಾಷ್ಟ್ರದ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

39,406 ಮಹಿಳೆಯರು ಪ್ರಯಾಣ
ಅಥಣಿ ಘಟಕದ ಬಸ್ಸುಗಳಲ್ಲಿ ಜೂ. 11 ರಿಂದ 13ವರೆಗೆ 39406 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಅದರ ಒಟ್ಟು ಮೊತ್ತ 12,62,557 ರೂ. ಆಗಿರುತ್ತದೆ. ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಾರಿಗೆ ಇಲಾಖೆ ಅಥಣಿ ಘಟಕದ ವ್ಯವಸ್ಥಾಪಕ ನಿಜಗುಣಿ ಕೆರಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next