Advertisement

ಮಹರ್ಷಿ ವಾಲ್ಮೀಕಿಗೆ ಜಿಲ್ಲಾದ್ಯಂತ ನಮನ

09:14 PM Oct 13, 2019 | Lakshmi GovindaRaju |

ಜಿಲ್ಲಾದ್ಯಂತ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಡಗರದಿಂದ ಭಾನುವಾರ ಆಚರಿಸಲಾಯಿತು. ರಜೆ ದಿನವಾದರೂ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿ ರೂಪಿಸಿತ್ತು. ಜಿಲ್ಲಾ ಕೇಂದ್ರದಲ್ಲಿ ವಾಲ್ಮೀಕಿ ಭಾವಚಿತ್ರದಿಂದ ಅಲಂಕೃತಗೊಂಡಿದ್ದ ಸ್ತಬ್ದಚಿತ್ರಗಳು ಸಾಕಷ್ಟು ಸದ್ದು ಮಾಡಿದರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು. ಮಹರ್ಷಿ ವಾಲ್ಮೀಕಿ ಛದ್ಮವೇಷ ಧರಿಸಿದ್ದ ವಿದ್ಯಾರ್ಥಿಗಳು ವೇದಿಕೆಯಲ್ಲಿ ಕಾಣಿಸಿಕೊಂಡು ವಾಲ್ಮೀಕಿ ಪ್ರತಿರೂಪದಂತೆ ಕಂಡರು.

Advertisement

ಚಿಕ್ಕಬಳ್ಳಾಪುರ: ರಾಮಾಯಣದಲ್ಲಿ ರಾಮನ ಜೀವನದ ವೃತ್ತಾಂತವನ್ನಷ್ಟೇ ಹೇಳದೆ ರಾಜನೀತಿ, ಮಾನವೀಯ ಮೌಲ್ಯಗಳು, ಪ್ರಾಮಾಣಿಕತೆ ಮತ್ತು ಪರಿಶ್ರಮವನ್ನು ಸಮಾಜಕ್ಕೆ ಸಾರಿದ ಮಹಾನ್‌ ಮೇದಾವಿ ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳು, ಚಿಂತನೆಗಳು ಇಂದಿಗೂ ಜೀವಂತವಾಗಿವೆ ಎಂದು ಎಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದರು. ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಂಗವಾಗಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಪರಿಸರದಿಂದ ಪ್ರೇರಣೆ: ವಾಲ್ಮೀಕಿ ಸಾಮಾನ್ಯ ಬುಡಕಟ್ಟು ಜನಾಂಗದ ಬೇಟೆಗಾರ. ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಸುತ್ತಮುತ್ತಲಿನ ಪರಿಸರದಿಂದ ಪ್ರೇರಣೆಗೊಂಡು ಮಹಾಕವಿಯಾದರು. ರಾಯಾಯಣ ಅನ್ನುವ ಬಹುದೊಡ್ಡ ಗ್ರಂಥ ಬರೆದು ಇಡೀ ವಿಶ್ವಕ್ಕೆ ಪ್ರಸಿದ್ಧಿಯಾದರು. ಈ ಕೃತಿ ಇಡೀ ಜಗತ್ತಿನ ಗಮನಾರ್ಹ ಕೃತಿಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇದನ್ನು ಬರೆದ ವಾಲ್ಮೀಕಿ ಋಷಿಯವರ ಪಾಂಡಿತ್ಯ ದೊಡ್ಡದು ಎಂಬುದು ನಮಗೆಲ್ಲರಿಗೂ ತಿಳಿಯುತ್ತದೆ ಎಂದರು.

ಸಮಾಜ ಸುಧಾರಕ: ಮುಖ್ಯ ಭಾಷಣಕಾರ ಎನ್‌ಎಂಕೆಆರ್‌ವಿ ಮಹಿಳಾ ಪದವಿ ಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಎಚ್‌.ಕೆ.ನರಸಿಂಹಮೂರ್ತಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಸಮಾಜ ಸುಧಾರಕರು ಕೂಡ ಆಗಿದ್ದಾರೆ. ರಾಮರಾಜ್ಯದ ಬಗ್ಗೆ ಸಂದೇಶ ನೀಡಿದ್ದಾರೆ. ರಾಜನು ಎಷೇr ದೊಡ್ಡವನಿದ್ದರೂ ಪ್ರಜೆಗಳ ಹತ್ತಿರ ಹೋಗಿ ಅವರ ನೋವು ನಲಿವು ಆಲಿಸಬೇಕು ಎಂದು ವಾಲ್ಮೀಕಿ ಋಷಿಗಳು ಹೇಳಿದ್ದಾರೆ. ಎಲ್ಲರೂ ಒಳ್ಳೆಯ ಕೆಲಸ ಮಾಡಿದಾಗಲೇ ಸಮಾಜ ಸುಧಾರಣೆಯಾಗುತ್ತದೆ ಎಂದು ರಾಮಾಯಣ ಕೃತಿಯಲ್ಲಿ ಸಂದೇಶವಿದೆ ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಿಗೆ ಹಾಗೂ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಮಕ್ಕಳನ್ನು ಸನ್ಮಾನಿಸಲಾಯಿತು. ಕಾಯಕ್ರಮದಲ್ಲಿ ಜಿಪಂ ಪ್ರಭಾರಿ ಅಧ್ಯಕ್ಷೆ ನಿರ್ಮಲಾ, ಸಿಇಒ ಬಿ.ಫೌಜಿಯಾ ತರುನ್ನುಮ್‌, ಉಪವಿಭಾಗಾಧಿಕಾರಿ ಎ.ಎನ್‌.ರಘುನಂದನ್‌, ನಗರ ಕೋಶಾಭಿವೃದ್ಧಿ ಅಧಿಕಾರಿ ರೇಣುಕಾ, ಡಿವೈಎಸ್‌ಪಿ ಪ್ರಭುಶಂಕರ್‌, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜ್‌ ಆನಂದ ರೆಡ್ಡಿ ಉಪಸ್ಥಿತರಿದ್ದರು.

Advertisement

ಪಲ್ಲಕ್ಕಿಗಳ ಮೆರವಣಿಗೆ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಅವರ ಭಾವಚಿತ್ರ, ಸ್ತಬ್ಧಚಿತ್ರಗಳು ಹಾಗೂ ಪಲ್ಲಕ್ಕಿಯೊಂದಿಗೆ ಶ್ರೀ ರಂಗನಾಥಸ್ವಾಮಿ ದೇವಾಲಯದಿಂದ ನಗರದ ಬಿ.ಬಿ. ರಸ್ತೆಯಲ್ಲಿರುವ ಒಕ್ಕಲಿಗರ ಕಲ್ಯಾಣ ಮಂಟಪದವರೆಗೆ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಿತು. ಸುಮಾರು 50 ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ವಿಶೇಷ ಅಲಂಕಾರದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಮಹರ್ಷಿಗಳ ಜಯಂತಿಗೆ ಕಳೆ ತಂದುಕೊಟ್ಟವು. ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಗಾರಡಿಬೊಂಬೆ ಹಾಗೂ ಕೀಲುಕುದುರೆ ಮತ್ತಿತರ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಗಮನ ಸೆಳೆದವು. ಮೆರವಣಿಗೆ ಉದ್ದಕ್ಕೂ ಪಟಾಕಿ ಸಿಡಿಸಿ ಸಮುದಾಯದ ಯುವಕರು ನೃತ್ಯ ಪ್ರದರ್ಶಿಸಿದರು.

ಸಂಸದರು ಬಂದರೂ ಸ್ವಾಗತಿಸಲು ಯಾರು ಇರಲಿಲ್ಲ: ಜಿಲ್ಲಾಡಳಿತದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಸದ ಬಿ.ಎನ್‌.ಬಚ್ಚೇಗೌಡ ಆಗಮಿಸಿದರೂ ಅವರನ್ನು ಸ್ವಾಗತಿಸಲು ಸ್ಥಳದಲ್ಲಿ ಯಾರು ಇರಲಿಲ್ಲ. ಸಂಸದರು ಬರುವಷ್ಟರದಲ್ಲಿ ಮೆರವಣಿಗೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ, ಸಿಇಒ ಉದ್ಘಾಟಿಸಿದ್ದರು. ಮೊದಲು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದ ಸಂಸದರಿಗೆ ಖಾಲಿ ಕುರ್ಚಿಗಳ ದರ್ಶನ ಆಯಿತು.

ಅಲ್ಲಿಂದ ಮೆರವಣಿಗೆ ಬಳಿ ಬರುವಷ್ಟರಲ್ಲಿ ಮೆರವಣಿಗೆ ಆರಂಭಗೊಂಡಿತು. ಕೊನೆಗೂ ಸಂಸದರು ಮೆರವಣಿಗೆಯಲ್ಲಿ ಕೆಲಕಾಲ ಪಾಲ್ಗೊಂಡು ಅಲ್ಲಿಂದ ದೇವನಹಳ್ಳಿ, ಹೊಸಕೋಟೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳಿಸಿದರು. ಸಂಸದರ ಆಪ್ತ ಸಹಾಯಕರು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದರೂ ಫ‌ಲ ಕೊಡಲಿಲ್ಲ. ಸಂಸದರು ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸದೇ ಮೆರವಣಿಗೆಯಲ್ಲಿದ್ದು ಹೊರಟರು. ಇನ್ನೂ ಅಧಿಕಾರಿಗಳು ಶಿಷ್ಟಾಚಾರ ಮರೆತು ತಾವೇ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿದ್ದು, ಚರ್ಚೆಗೆ ಗ್ರಾಸವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next