Advertisement

ಸಕಲೇಶ್ವರಸ್ವಾಮಿ ಅದ್ದೂರಿ ರಥೋತ್ಸವ

09:32 AM Feb 21, 2019 | |

ಸಕಲೇಶಪುರ: ಸಕಲೇಶ್ವರಸ್ವಾಮಿ ದಿವ್ಯ ರಥೋತ್ಸವ ಬುಧವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಜಾತ್ರೋತ್ಸವದ ಅಂಗವಾಗಿ ಸೋಮವಾರದಿಂದಲೇ ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜೆ ಕೈಂಕರ್ಯಗಳು ಆರಂಭಗೊಂಡಿದ್ದು ಮಂಗಳವಾರ ಸಕಲೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಬ್ರಾಹ್ಮಣರ ಬೀದಿಯಲ್ಲಿ ಮೆರವಣಿಗೆ ನಡೆಸಿದ ನಂತರ ಘಳಿಗೆ ತೇರನ್ನು ಎಳೆಯಲಾಗಿತ್ತು.

Advertisement

ಮಧ್ಯಾಹ್ನ 12ಕ್ಕೆ ಆರಂಭ: ಬುಧವಾರ ನಡೆದ ವಿವಿಧ ಪೂಜೆ ಕಾರ್ಯಗಳ ನಂತರ 12 ಗಂಟೆಗೆ ಸರಿಯಾಗಿ ದಿವ್ಯ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬ್ರಾಹ್ಮಣರ ಬೀದಿ ಮೂಲಕ ಮುಖ್ಯರಸ್ತೆಯಲ್ಲಿ ಪುರಸಭೆವರೆಗೆ ಎಳೆದು ನಂತರ ಸಂಜೆ 7 ಗಂಟೆಗೆ ರಥವನ್ನು ಹಿಂತಿರುಗಿ ಎಳೆದು ತಂದು ಪಟಾಕಿ ಸಿಡಿಸಿ ಸಂಭ್ರಮಿ ಸಲಾಯಿತು. ಈ ವೇಳೆ ಸಾವಿರಾರು ಭಕ್ತಾದಿಗಳು ಹಣ್ಣುಕಾಯಿ,ಈಡು ಗಾಯಿ ಅರ್ಪಿಸಿದರು. ಮುಖ್ಯ ಬೀದಿಯ ಹಲವರು ರಥಕ್ಕೆ ಆರತಿ ಬೆಳಗುವ ಮೂಲಕ ಸ್ವಾಗತಿಸಿದರು. ಯುವಕರು ರಥದ ಮೇಲೆ ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ಗಮನ ಸೆಳೆದ ಸಾಂಸ್ಕೃತಿಕ ಮೇಳ: ಸಾವಿರಾರು ಯುವಕರು ವಾದ್ಯ ವೃಂದಕ್ಕೆ ನರ್ತನ ಮಾಡುತ್ತ ಸಂತೋಷ ಪಡೆದರು. ರಾಮದೇವರಹಳ್ಳಿಯ ವೀರಗಾಸೆ ತಂಡದ ಈಶ್ವರ ಹಾಗೂ ಗಣಪತಿ ವೇಷಧಾರಿಗಳು ಸಾರ್ವಜನಿಕರ ಗಮನ ಸೆಳೆದರು. ರಥೋತ್ಸವದ ಅಂಗವಾಗಿ ಪಟ್ಟಣದ ಮುಖ್ಯ ಬೀದಿಯಲ್ಲಿ ಸಂಚಾರ ನಿಷೇಧಿಸಿ ಅಶೋಕ ರಸ್ತೆ ಹಾಗೂ ಅಜಾದ್‌ ರಸ್ತೆಯ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಕಲೇಶ್ವರಸ್ವಾಮಿ ದೇವಸ್ಥಾನ ದಿಂದ ಪುರಸಭೆಯವರಗೆ ಹಲವೆಡೆ ವಿವಿಧ ಸಂಘಸಂಸ್ಥೆಗಳಿಂದ ಅನ್ನ ಸಂತರ್ಪಣೆ, ಮಜ್ಜಿಗೆ,ಐಸ್‌ಕ್ರೀಮ್‌ ಹಾಗೂ ತಂಪು ಪಾನೀಯ ವಿತರಣೆ ಮಾಡಲಾಯಿತು.

ಘರ್ಷಣೆ- ಲಾಠಿ ಚಾರ್ಜ್‌: ಸಾವಿ ರಾರು ಯುವಕರು ತೇರಿನಲ್ಲಿ ಭಾಗಿಯಾಗಿದ್ದು, ಅಲ್ಲಲ್ಲಿ ಯುವಕರ ಗುಂಪುಗಳ ನಡುವೆ ಸಣ್ಣಪುಟ್ಟ ಘರ್ಷಣೆಗಳು ನಡೆಯುತ್ತಲೇ ಇತ್ತು. ಎರಡು ಗುಂಪು ಗಳ ನಡುವೆ ಘರ್ಷಣೆ ಮಿತಿ ಮೀರಿದಾಗ ಪೋಲಿಸರು ಲಾಠಿ ಚಾರ್ಜ್‌ ಮೂಲಕ ಗುಂಪನ್ನು ಚದುರಿಸಿದ ಘಟನೆ ನಡೆಯಿತು. ಸಕಲೇಶಪುರದ ಪುರಸಭಾ ಸದಸ್ಯರುಗಳು, ರಾಜಕೀಯ ಪಕ್ಷಗಳ ಮುಖಂಡರು ರಥೋತ್ಸವದಲ್ಲಿ ಭಾಗಿಯಾಗಿದ್ದರು.  ರಥೋತ್ಸವದ ಅಂಗವಾಗಿ ಪಟ್ಟಣದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಿಗಿ ಪೋಲಿಸ್‌ ಬಂದೋ ಬಸ್ತ್ ಮಾಡಲಾಗಿತ್ತು.

 ಪರಿಶೀಲನೆ ನಂತರ ಪ್ರಸಾದ ವಿತರಣೆ 
ಸಕಲೇಶಪುರ: ಪುರಸಭೆಯ ಬಿಗಿ ನಿಯಮದ ನಡುವೆಯು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪಾನಕ, ಪ್ರಸಾದಗಳನ್ನು ಸಾವಿರಾರು ಭಕ್ತಾದಿಗಳಿಗೆ ರಥೋತ್ಸವದಲ್ಲಿ ಹಂಚಲಾಯಿತು. ರಾಜ್ಯದ ಕೆಲವು ಕಡೆಗಳಲ್ಲಿ ದೇವಸ್ಥಾನಗಳ ವತಿಯಿಂದ ಭಕ್ತಾದಿಗಳಿಗೆ ಪ್ರಸಾದ ನೀಡುವಾಗ ವಿಷ ಪ್ರಾಶನವಾದ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆ ಬಿಗಿಯಾದ ಕ್ರಮ ಅನುಸರಿಸಿತ್ತು. ಭಕ್ತಾದಿಗಳಿಗೆ ಪಾನಕ ಪ್ರಸಾದ ನೀಡುವ ವ್ಯಕ್ತಿಗಳು, ಸಂಘ ಸಂಸ್ಥೆಗಳು ಕಡ್ಡಾಯವಾಗಿ ಪುರಸಭೆಯಿಂದ ಅನುಮತಿ ಪತ್ರ ಪಡೆಯಬೇಕಿತ್ತು.

Advertisement

ಈ ಹಿನ್ನೆಲೆಯಲ್ಲಿ ಕೆಲವರು ಹೆದರಿ ಪಾನಕ ಪ್ರಸಾದ ವಿತರಿಸುವ ಗೋಜಿಗೆ ಹೋಗಲಿಲ್ಲ. ಆದರೂ ಸಹ ಹಲವಾರು ಸಂಘ ಸಂಸ್ಥೆಗಳ ವತಿಯಂದ ಭಕ್ತಾದಿಗಳಿಗೆ ಸಾಕಷ್ಟು ಮಜ್ಜಿಗೆ, ಐಸ್‌ ಕ್ರೀಮ್‌, ಕೇಸರಿ ಬಾತ್‌, ಮೊಸರನ್ನ, ಪಲಾವ್‌, ವಾಂಗೀಬಾತ್‌ ವಿತರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next