Advertisement

ಜಪಾನಿನ ಹೆರಿಟೇಜ್‌ ಸೈಟ್‌ ನಾರಾ

10:05 AM Feb 03, 2020 | mahesh |

ಸೂರ್ಯನು ಉದಯಿಸುವ ನಾಡೆಂದೇ ಪ್ರಖ್ಯಾತವಾದ ದೇಶ ಜಪಾನ್‌. ಸುಮಾರು 6,000ಕ್ಕೂ ಅಧಿಕ ದ್ವೀಪಗಳುಳ್ಳ ಜಪಾನಿಗೆ ಸದಾ ಭೂಕಂಪ, ನೆರೆ, ಸುನಾಮಿ, ಜ್ವಾಲಾಮುಖೀಯ ಸ್ಫೋಟದಂತಹ ಪ್ರಕೃತಿ ವಿಕೋಪಗಳ ವಕ್ರದೃಷ್ಟಿಯೂ ಇದೆ. ಜಪಾನಿನ ಈಗಿನ ರಾಜಧಾನಿ ಟೋಕಿಯೋ ಆಗಿದ್ದರೂ 8ನೆಯ ಶತಮಾನದಲ್ಲಿ ನಾರಾ ರಾಜಧಾನಿಯಾಗಿತ್ತು. ಜಪಾನಿನ ಕೈಗಾರಿಕಾ ನಗರವಾದ ಒಸಾಕದಿಂದ ಕೆಲವೇ ಮೈಲಿ ದೂರದಲ್ಲಿದೆ ನಾರಾ. ನಗರದ ಏಳು, ಬೀಳು ರಾಜಕೀಯವಾಗಿ, ಧಾರ್ಮಿಕವಾಗಿ ಅಚ್ಚರಿ ಹುಟ್ಟಿಸುವಂತಹದ್ದು ಹಾಗೂ ರೋಚಕವಾದದ್ದು.

Advertisement

ನಾರಾದಲ್ಲಿ ಹತ್ತು ಹಲವು ಇತಿಹಾಸ ಪ್ರಸಿದ್ಧ ಮಂದಿರಗಳು, ಹೆಗ್ಗುರುತುಗಳು, ರಾಷ್ಟ್ರೀಯ ಸ್ಮಾರಕಗಳಿವೆ, ಕೆಲವೊಂದು ಯೂನಿಸ್ಕೊ ವರ್ಲ್ಡ್ ಹೆರಿಟೇಜ ಸೈಟ್‌ ಎಂದೂ ಗುರುತಿಸಲ್ಪಟ್ಟಿದೆ. ನಾರ ನಗರವು ಇತಿಹಾಸವನ್ನು ಉಳಿಸಿಕೊಂಡು, ಹಳತು-ಹೊಸತುಗಳ ಕೊಂಡಿಯಾಗಿ ನಿಂತು ವಿಶ್ವದ ಜನತೆಗೆ ತನ್ನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲೆಯ ಪರಂಪರೆಯ ಪರಿಚಯ ಮಾಡಿಕೊಡುತ್ತಿದೆ. ಆದರೆ, ಇತ್ತೀಚಿನ ಬೆಳವಣಿಗೆಯೆಂದರೆ ಆಧುನಿಕತೆಗೆ ಮಾರು ಹೋಗುವ ಯುವ ಪೀಳಿಗೆಯು ಹೆಚ್ಚು ಹೆಚ್ಚು ನಗರಗಳತ್ತ ವಲಸೆ ಹೋಗುತ್ತಿದ್ದು ನಾರಾದ ಜನಸಂಖ್ಯೆ ಇಳಿಮುಖವಾಗಿದೆ. ನಾರಾದಲ್ಲಿರುವ ನೋಡಲೇಬೇಕಾದ ಸ್ಥಳಗಳಲ್ಲಿ ಟೊಡೈಜಿ ಮಂದಿರವೂ ಒಂದು.

ಟೊಡೈಜಿ ಮಂದಿರ
ಟೊಡೈಜಿ ಮಂದಿರ ಐತಿಹಾಸಿಕವಾಗಿಯೂ ಮಹತ್ವಪೂರ್ಣ ದ್ದಾಗಿದ್ದು ವಿಶ್ವಪ್ರಸಿದ್ಧಿಯನ್ನು ಪಡೆದಿದೆ, ಇದು ನಾರಾದ ಹೆಗ್ಗುರುತಾಗಿಯೂ ಗುರುತಿಸಲ್ಪಟ್ಟಿದೆ. ಜಪಾನಿನ ರಾಜಧಾನಿ ನಾರಾ ಆಗಿದ್ದ ಕಾಲ. ಕ್ರಿ.ಶ. 752ರಲ್ಲಿ ಜಪಾನಿನ ಎಲ್ಲಾ ಬೌದ್ಧ ಮಂದಿರಗಳಿಗೆ ಮುಖಂಡವಾಗುವಂತೆ ಟೊಡೈಜಿ ಮಂದಿರವನ್ನು ಕಟ್ಟಿಸಿದರಂತೆ. ಮಂದಿರದ ಪ್ರಭಾವ ಎಷ್ಟು ಹೆಚ್ಚಾಯಿತೆಂದರೆ ಧರ್ಮ ಮತ್ತು ರಾಜಕೀಯವನ್ನು ಬೇರ್ಪಡಿಸಲು ಕೆಲವೇ ವರ್ಷಗಳಲ್ಲಿ ಜಪಾನಿನ ರಾಜಧಾನಿಯನ್ನು ನಾರಾದಿಂದಲೇ ವರ್ಗಾಯಿಸಲಾಯಿತು.

ಟೊಡೈಜಿ ಮಂದಿರಕ್ಕೆ ವಿಶಾಲವಾದ ಅಂಗಳವಿದ್ದು ಸುತ್ತ ಚೆರ್ರಿ ಮರಗಳಿವೆ, ಮಾರ್ಚ ತಿಂಗಳ ಕೊನೆ ಅಥವ ಎಪ್ರೀಲ್‌ ಚೆರ್ರಿ ಮರಗಳು ಹೂವು ಬಿಡುವ ಸಮಯ, ಆ ಸಮಯದಲ್ಲಿ ಇಲ್ಲಿಗೆ ಸಂದರ್ಶಿಸಿದರೆ ಮರದ ತುಂಬ ಅರಳಿದ ಹೂವುಗಳು ಮತ್ತು ಅರಳಿ ಉದುರಿದ ಹೂವಿನ ಹಾಸಿಗೆ ನಮ್ಮನ್ನು ಸ್ವಾಗತಿಸುತ್ತದೆ. ನಾವೂ ಇದೇ ಸಮಯದಲ್ಲಿ ಜಪಾನಿಗೆ ಪ್ರವಾಸ ಹೋಗಿದ್ದು.

ಮಂದಿರವನ್ನು ನಂದಾಮೊನ್‌ ಹೆಸರಿನ ಎತ್ತರದ ಎರಡಂತಸ್ತಿನ ಮರದ ಗೇಟನ್ನು ದಾಟಿ ಒಳ ಬರಬೇಕು, ಎಡ-ಬಲದಲ್ಲಿ ನಿಯೊ ರಾಜರಕ್ಷಕರ ಮೂರ್ತಿಗಳಿವೆ. ಇಲ್ಲಿನ ಮುಖ್ಯಮಂದಿರ ಡೈಬುಟ್ಸು ಡೆನ್‌, ಮಂದಿರದಲ್ಲಿ ಜಪಾನಿನಲ್ಲೇ ಅತೀ ದೊಡ್ಡದಾದ ಡೈಬುಟ್ಸು (ಬುದ್ಧ) ನ ಮೂರ್ತಿಯಿದೆ. ಕೂತಿರುವ ಕಂಚಿನ ಬುದ್ಧನ ಮೂರ್ತಿಯು 15 ಮೀ. ಎತ್ತರವಿದ್ದು ಪಕ್ಕದಲ್ಲಿ ಎರಡು ಬೋಧಿಸತ್ವರ ಮೂರ್ತಿಗಳಿವೆ. ತಲೆಯೆತ್ತಿ ಬುದ್ಧನ ಮೂರ್ತಿಯನ್ನೊಮ್ಮೆ ನೋಡಿದಾಗ ಮನದಲ್ಲಿ ಭಕ್ತಿ, ಆಶ್ಚರ್ಯ, ಸಾರ್ಥಕತೆ ಮೂಡುವುದು ಸಹಜ. ಮಂದಿರದಲ್ಲಿ ಹಲವಾರು ಮರದ ಕಂಬಗಳಿವೆ, ಇಲ್ಲಿನ ಕಂಬವೊಂದರ ಬುಡ ಭಾಗದಲ್ಲಿ ತೂತಿದ್ದು ಅದು ಬುದ್ಧನ ಮೂರ್ತಿಯ ಮೂಗಿನ ಹೊಳ್ಳೆಯಷ್ಟು ದೊಡ್ಡದಾಗಿದೆಯೆಂಬ ನಂಬಿಕೆ ಇಲ್ಲಿನವರದ್ದು. ಕಂಬದ ತೂತಿನಲ್ಲಿ ಸಾರ್ವಜನಿಕರು ಅಂಬೆಗಾಲಿಟ್ಟು ಮುಂದೆ ಸಾಗಲು ಪ್ರಯತ್ನಿಸಬಹುದು, ಹಾಗೆ ಮುಂದೆ ಸಾಗಿದರೆ ಮುಂದಿನ ಜನ್ಮದಲ್ಲಿ ಜ್ಞಾನೋದಯವಾಗುತ್ತದಂತೆ. ಹಲವು ಪ್ರವಾಸಿಗರು ಪ್ರಯತ್ನಿಸುತ್ತಿದ್ದರು, ಹೌದೋ, ಸುಳ್ಳೋ ನೋಡಿದವರಿದ್ದಾರೆಯೇ?

Advertisement

ಹಲವು ಜಪಾನೀಸ್‌ ಸಿನೆಮಾಗಳಲ್ಲಿ ಟೊಡೈಜಿ ಮಂದಿರವನ್ನು ನೋಡಬಹುದು, ಇಲ್ಲಿ ಅಂತರಾಷ್ಟ್ರೀಯ ಸಂಗೀತ ಉತ್ಸವವೂ ನಡೆಯುತ್ತದಂತೆ.ನಾವು ಟೊಡೈಜಿ ಮಂದಿರಕ್ಕೆ ಹೋದಾಗ ಸೂರ್ಯನ ಕೃಪೆಯಿದ್ದರೂ ಸಣ್ಣದಾಗಿ ಚಳಿಯೂ ಇದ್ದು ಗಾಳಿಯೂ ಮಂದವಾಗಿ ಬೀಸುತ್ತಿತ್ತು.

ಗೀತಾ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next