Advertisement

ಆಸಕ್ತರೆಲ್ಲರಿಗೂ ಭಕ್ತಿ ದೀಕ್ಷೆ ಕೊಡುವ ಹಂಬಲ ಹೊಂದಿದ್ದ ಸಂತ ಕುಲತಿಲಕ

08:25 PM Dec 29, 2019 | Lakshmi GovindaRaj |

* ಭಕ್ತರಿಗೆ “ಭಕ್ತಿ ದೀಕ್ಷೆ’ ಕೊಡುವುದಿದೆಯೆ?
ಹೌದು. ಪರ್ಯಾಯದ ಅವಧಿಯಲ್ಲಿ ಹಿಂದಿನಂತೆ ಆಸಕ್ತರೆಲ್ಲ ಭಕ್ತರಿಗೂ ಭಕ್ತಿ ದೀಕ್ಷೆ ಕೊಡಲಿದ್ದೇವೆ. ವಿಷ್ಣು ಮಂತ್ರದೊಂದಿಗೆ ಶಿವ ಪಂಚಾಕ್ಷರಿ ಮಂತ್ರದ ದೀಕ್ಷೆಯನ್ನೂ ಕೊಡುತ್ತೇವೆ. ನಮ್ಮಿಂದ ಈ ಹಿಂದೆ ಭಕ್ತಿ ದೀಕ್ಷೆ ಸ್ವೀಕರಿಸಿದ ಯಾದವ ಸಮುದಾಯದ ಭಕ್ತರ ಗುಂಪೊಂದು ಇತ್ತೀಚೆಗೆ ಧಾರವಾಡ ಸಮೀಪದ ನವಲಗುಂದದಲ್ಲಿ ಭೇಟಿ ಮಾಡಿದಾಗ ತಮಗಾದ ಒಳಿತನ್ನು ತಿಳಿಸಿದರು. ಮದ್ಯ ಮೊದಲಾದ ವ್ಯಸನಗಳನ್ನು ಬಿಡುವವರಿಗೆ ಹುಂಡಿಯೊಂದನ್ನು ಆರಂಭಿಸಲಿದ್ದೇವೆ.

Advertisement

* ಕೋಮು ಸೌಹಾರ್ದ, ಸಹಿಷ್ಣುತೆ-ಅಸಹಿಷ್ಣುತೆ ಬಗೆಗೆ ತಮ್ಮ ಅನಿಸಿಕೆಗಳೇನು?
ಹಿಂದಿನ ಪರ್ಯಾಯದಲ್ಲಿ ಈದ್‌ ಹಬ್ಬವನ್ನೂ ಆಚರಿಸಿದ್ದೆವು. ಮುಸ್ಲಿಮರು, ಕ್ರೈಸ್ತರೂ ಪರ್ಯಾಯ ಉತ್ಸವಕ್ಕೆ ಬೆಂಬಲ ಕೊಡುತ್ತಿದ್ದಾರೆ. ಹಿಂದೂಗಳಿಗೆ ಅನ್ಯಾಯವಾಗಬಾರದು ಎಂಬುದು ನಮ್ಮ ಕಾಳಜಿ. ಯಾರಿಗೂ ಅನ್ಯಾಯವಾಗಬಾರದು. ಒಂದು ಸಮುದಾಯ ಅನ್ಯಾಯ ಎದುರಿಸುತ್ತಿದ್ದರೆ ಅದನ್ನು ಸಹಿಸಿಕೊಳ್ಳಬೇಕೆಂದು ನಾವು ಹೇಳುವುದಿಲ್ಲ.

* ವಿವಿಧ ಮತಧರ್ಮಗಳ ಕುರಿತು?
ವಿವಿಧ ಮತಧರ್ಮಗಳಲ್ಲಿ ಸಮಾನ ಅಂಶಗಳೂ ಇವೆ. ಭಿನ್ನ ಅಭಿಪ್ರಾಯಗಳೂ ಇವೆ. ಸಮಾನ ಅಂಶ ಗಳ ಆಧಾರದಲ್ಲಿ ಸಹಕಾರ ಕೊಟ್ಟು, ಭಿನ್ನ ಅಭಿ ಪ್ರಾಯಗಳಲ್ಲಿ ಅಸಹನೆ ಇಲ್ಲದೆ ತಾಳ್ಮೆ ವಹಿಸಬೇಕು.

* ತಮ್ಮ ಸಮಾಜ ಸೇವಾಸಕ್ತಿಗೆ ಮಠಾಧಿಪತ್ಯ ತೊಡಕು ಎಂದು ಅನಿಸಿದ್ದಿದೆಯೆ?
ಹಾಗೇನೂ ಇಲ್ಲ. ಮಠಾಧಿಪತ್ಯ ಸಮಾಜಸೇವೆಗೆ ಮತ್ತಷ್ಟು ಬಲವನ್ನೇ ನೀಡಿದೆ. ಒಬ್ಬ ವ್ಯಕ್ತಿಯಾಗಿ ಮಾಡುವುದಕ್ಕಿಂತ ಮಠಾಧಿಪತಿಯಾಗಿ ಮಾಡುವುದು ಹೆಚ್ಚಿನ ಬಲ ಕೊಡುತ್ತದೆ. ಜೀವನ ಮತ್ತೂಬ್ಬರಿಗೆ ಉಪಕಾರವಾಗುವಂತಿರಬೇಕು ಎಂಬುದೇ ಇದರ ಸಾರ.

* ತಮ್ಮ ಮೇಲೆ ಪ್ರಭಾವ ಬೀರಿದ ಧಾರ್ಮಿಕೇತರ ನಾಯಕರು ಯಾರು?
ಗಾಂಧೀಜಿ ಮತ್ತು ವಿನೋಬಾ ಭಾವೆ. ಗಾಂಧೀಜಿ ಯವರ ಅನೇಕ ಪುಸ್ತಕಗಳನ್ನು ಓದಿದ್ದೇವೆ. ಅವರ ಆದರ್ಶಗಳನ್ನು ನಾವು ಅನುಸರಿಸಲು ಯತ್ನಿಸುತ್ತಿದ್ದೇವೆ. ವಿನೋಬಾ ಭಾವೆಯವರನ್ನು 1956ರಲ್ಲಿ ಸೇಲಂ ಬಳಿ ಭೇಟಿಯಾಗಿ ಭೂಮಿಯ ಮೇಲೆ ಎಲ್ಲರಿಗೂ ಹಕ್ಕಿರುವ ಕುರಿತು ಶಾಸನವಚನ ತಿಳಿಸಿ ಭೂದಾನ ಚಳವಳಿಗೆ ಶಾಸನದಲ್ಲಿರುವ ಮನ್ನಣೆಯನ್ನು ತಿಳಿಸಿದ್ದೆ. ಅನಂತರ ನಾಗಪುರಕ್ಕೆ ಹೋದಾಗ ಪವನಾರ್‌ ಆಶ್ರಮಕ್ಕೆ ಹೋದೆ. ಆಗ ಅವರಿಗೆ ಮಾತನಾಡುವ ಶಕ್ತಿ ಇದ್ದಿರಲಿಲ್ಲ.

Advertisement

* ದೇವರು ಅನ್ನುವುದಕ್ಕೆ ಏನು ವ್ಯಾಖ್ಯಾನ? ದೇವರು, ದೇವತೆಗಳು ಮತ್ತು ಸಂತರ ನಡುವಿನ ವ್ಯತ್ಯಾಸ ಏನು? ಆರಾಧನಾ ಕ್ರಮ ಹೇಗೆ?
ದೇವರೆಂದರೆ ಜಗತ್ತನ್ನು ಸೃಷ್ಟಿಸಿದವ. ದೋಷರಹಿತ ಮತ್ತು ಅನಂತ ಗುಣಪೂರ್ಣ. ಜಗತ್ತಿನ ಒಡೆಯ (ಜಗದೊಡೆಯ). ಆತನಿಗೆ ಯಾವುದೇ ದೋಷಗಳಿರುವುದಿಲ್ಲ. ಆತ ಒಬ್ಬನೇ ಒಬ್ಬ. ರಾಮ, ಕೃಷ್ಣ ಇತ್ಯಾದಿ ರೂಪಗಳು ಭಗವಂತನ ಅವತಾರಗಳು. ದೇವರು ನಮ್ಮ ಪಂಚೇಂದ್ರಿಯಗಳಿಗೆ ಗೋಚರವಾಗುವುದಿಲ್ಲ, ಅಂತರ್‌ ದೃಷ್ಟಿಗೆ ಗೋಚರವಾಗುವವನು ಎಂದು ಉಪನಿಷತ್ತುಗಳಲ್ಲಿ ಋಷಿಗಳು ತಮ್ಮ ಅನುಭೂತಿಯಿಂದ ತಿಳಿಸಿದ್ದಾರೆ.

ಸಾಧಕರೆಲ್ಲರೂ ದೇವರ ಭಕ್ತರು, ಸಂತರು. ಸಂತರನ್ನು ದೇವರ ಭಕ್ತರೆಂದು, ಸಾಧಕರೆಂದು, ಉತ್ತಮ ಜೀವರೆಂದು ಆರಾಧಿಸಬಹುದು. ನಾವು ಆಂಜನೇಯನನ್ನೂ, ಇಂದ್ರ, ಅಗ್ನಿ ಮೊದಲಾದ ದೇವತೆಗಳನ್ನೂ ಪರಮಾತ್ಮನ ಪರಿವಾರವಾಗಿ ಪೂಜಿಸುತ್ತೇವೆ. ದೇವತೆಗಳನ್ನೂ ಪರಮಾತ್ಮನ ಪರಿವಾರವಾಗಿ ಪೂಜಿಸಬೇಕು. ಸಂತರನ್ನೂ ಆರಾಧಿಸಿ ಅವರ ಅನುಗ್ರಹ ಪಡೆಯಬಹುದು.

(ಶ್ರೀಪಾದರು ದಾಖಲೆಯ ಐದನೆಯ ಬಾರಿಗೆ ಪರ್ಯಾಯ ಪೀಠವೇರುವ ಸಂದರ್ಭದಲ್ಲಿ, 2016ರ ಜನವರಿ 15ರಂದು ಉದಯವಾಣಿ ದಿನಪತ್ರಿಕೆಗೆ ನೀಡಿದ ಸಂದರ್ಶನದ ಆಯ್ದು ಭಾಗವಿದು.)

ಸಾಮರಸ್ಯ ಯಾತ್ರೆ: ಪೇಜಾವರ ಶ್ರೀ ನೇತೃತ್ವದಲ್ಲಿ ಕರ್ನಾಟಕದ ಗಡಿ ಪ್ರದೇಶವಾದ ತಲಪಾಡಿಯಿಂದ ಉಳ್ಳಾಲದ ವರೆಗೆ ಸಾಮರಸ್ಯ ಯಾತ್ರೆ ನಡೆಯಿತು. ಈ ಸಂದರ್ಭ ವಿವಿಧ ಸ್ವಾಮೀಜಿಗಳು ಉಪಸ್ಥಿತರಿದ್ದರು.

ಪ್ರೇರೇಪಿಸಿದ ಘಟನೆ: ಶ್ರೀ ವಿಶ್ವೇಶತೀರ್ಥರು 1970ರಲ್ಲಿ ದಲಿತರ ಕೇರಿಗೆ ಭೇಟಿ ನೀಡಿದ್ದು ದೊಡ್ಡ ಸುದ್ದಿಯಾಯಿತು. ದಲಿತರ ಕುರಿತು ತನ್ನಲ್ಲಿ ಸಹಾನುಭೂತಿ ಮೂಡಲು ಕಾರಣವಾದ ಒಂದು ಘಟನೆಯನ್ನು ಅವರು ನೆನಪಿಸಿಕೊಳ್ಳುತ್ತಿದ್ದರು- “ಒಮ್ಮೆ ಮಠದಲ್ಲಿ ರೈತರ ಜತೆ ಮಠದ ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದೆ. ಅವರಲ್ಲಿ ಮುಸಲ್ಮಾನ, ಕ್ರೈಸ್ತ ಮತಕ್ಕೆ ಸೇರಿದ ರೈತರೂ ಇದ್ದರು. ಆ ಸಂದರ್ಭದಲ್ಲಿಯೇ ಹಿಂದುಳಿದ ಪಂಗಡಕ್ಕೆ ಸೇರಿದ ರೈತರೂ ಆಗಮಿಸಿ ದರು. ಅವರು ಮಠದ ಒಳಗೆ ಬರಲು ಸಂಕೋಚ ಪಟ್ಟಾಗ, ನಾನು ಒಳಬರುವಂತೆ ಹೇಳಿದೆ.

ನನ್ನ ಎದುರಿಗೆ ಕುಳಿತು ಮುಸಲ್ಮಾನ, ಕ್ರೈಸ್ತ ಮತ ರೈತರು, “ಅವರು ಒಳಗೆ ಬರಲು ಅರ್ಹ ಜಾತಿಗೆ ಸೇರಿದವರಲ್ಲ’ ಎಂದು ತಿಳಿಸಿದರು. ಇತರ ಧರ್ಮಕ್ಕೆ ಸಂಬಂಧಿಸಿದ ರೈತರು ನನ್ನ ಎದುರಿಗೇ ಕುಳಿತುಕೊಂಡು, ನಮ್ಮ ಧರ್ಮದ ಅನುಯಾಯಿಗಳನ್ನು ತಮ್ಮಂತೆ ಒಳಗೆ ಬರಲು ಅರ್ಹರಲ್ಲವೆಂದು ಹೇಳಿರುವುದು ನಮ್ಮ ಧರ್ಮಕ್ಕೆ ಅವಮಾನವೆಂದು ನನಗೆ ಅರಿವಾಯಿತು. ಇಂಥ ಕೆಲವು ಸನ್ನಿವೇಶಗಳೇ ಹರಿಜನರ ಸಮಸ್ಯೆಯ ಬಗ್ಗೆ ಗಮನ ಕೊಡಲು ಪ್ರಚೋದಿಸಿದ್ದವು.”

Advertisement

Udayavani is now on Telegram. Click here to join our channel and stay updated with the latest news.

Next