ಲಕ್ನೋ/ಹೊಸದಿಲ್ಲಿ: ಸಮಾಜವಾದಿ ಪಕ್ಷದಲ್ಲಿ ಏರ್ಪಟ್ಟಿರುವ ಅಂತರ್ಯುದ್ಧವು ಈಗ ಲಕ್ನೋದಿಂದ ದಿಲ್ಲಿಗೆ ಸ್ಥಳಾಂತರಗೊಂಡಿದೆ. ಪಕ್ಷದ ಚಿಹ್ನೆ “ಸೈಕಲ್’ಗಾಗಿ ಉಭಯ ಬಣಗಳು ಕಾದಾಟ ಆರಂಭಿಸಿವೆ.
“ಸೈಕಲ್ ಚಿಹ್ನೆ ನಮ್ಮದು’ ಎಂದು ಅಖೀಲೇಶ್, ರಾಮ ಗೋಪಾಲ್ ಯಾದವ್ ಬಣ ಮಂಗಳವಾರ ಚುನಾವಣಾ ಆಯೋಗದ ಮೊರೆಹೋಗಲು ಸಿದ್ಧತೆ ನಡೆಸಿದೆ. ಇದಕ್ಕಿಂತ ಮೊದಲೇ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್, “ಸೈಕಲ್ ಚಿಹ್ನೆ ನಮ್ಮದಾಗಿದ್ದು ಅದನ್ನು ವಿರೋಧಿ ಬಣಕ್ಕೆ ಕೊಡಬಾರದು’ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ನಡುವೆ, ಮುಲಾಯಂ ಜ. 5ರಂದು ಹಮ್ಮಿಕೊಂಡಿದ್ದ ಪಕ್ಷದ ಅಧಿಕೃತ ರಾಷ್ಟ್ರೀಯ ಸಮಾವೇಶವನ್ನು ದಿಢೀರ್ ಮುಂದೂಡಿದ್ದಾರೆ.
ಅಖೀಲೇಶ್ ಬಣದ ಯತ್ನ: ತಮ್ಮದೇ ನಿಜ ವಾದ ಸಮಾಜವಾದಿ ಪಾರ್ಟಿ ಎಂದು ಅಖೀಲೇಶ್ ಮತ್ತು ರಾಮಗೋಪಾಲ್ ಯಾದವ್ ಬಣ ಯತ್ನಿಸುತ್ತಿದ್ದು, ರಾಮಗೋಪಾಲ್ ಮಂಗಳವಾರ ಬೆಳಗ್ಗೆ 11.30ಕ್ಕೆ ಚುನಾ ವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಚಿಹ್ನೆಗೆ ಮನವಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಎಚ್ಚೆತ್ತಿರುವ ಮುಲಾಯಂ ಅವರು, ರಾಮಗೋಪಾಲ್ ಅವರಿಗಿಂತ ಮೊದಲೇ ದಿಲ್ಲಿಗೆ ಆಗಮಿಸಿದ್ದು, ತಮ್ಮದೇ ನೈಜ ಪಕ್ಷ ಎಂದು ಮನವಿ ಮಾಡಲು ಚುನಾವಣಾ ಆಯೋಗದ ಮೊರೆ ಹೋದರು.
ಈ ನಡುವೆ, ಸೋಮವಾರ ಅಖೀಲೇಶ್ ಎಲ್ಲೂ ಹೊರಗೆ ಕಾಣಿಸಿಕೊಳ್ಳಲಿಲ್ಲ. ಎಸ್ಪಿ ಮುಖಂಡರು ಮತ್ತು ಬೆಂಬಲಿಗರ ಜೊತೆ ಮುಂದಿನ ನಡೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಸಮಾವೇಶ ಮುಂದಕ್ಕೆ: ಈ ನಡುವೆ, ಜ.5ರ ಸಮಾವೇಶವನ್ನು ಮುಲಾಯಂ ಏಕಾಏಕಿ ಮುಂದಕ್ಕೆ ಹಾಕಿದ್ದಾರೆ. ಈ ಬಗ್ಗೆ ಎಸ್ಪಿ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಹೇಳಿಕೆ ನೀಡಿದ್ದು, ಮುಲಾಯಂ ಅವರೇ ಅಧ್ಯಕ್ಷ’ ಎಂದು ಪದೇ ಪದೇ ಟ್ವೀಟ್ಗಳನ್ನು ಮಾಡಿದ್ದಾರೆ. ಅಲ್ಲದೆ ಕೊನೆಯ ಉಸಿರು ಇರುವವರೆಗೆ ಮುಲಾಯಂ ಜತೆಗೆ ಇರುವೆ ಎಂದಿದ್ದಾರೆ. ಆದರೆ ಸಮಾವೇಶ ಮುಂದೂ
ಡಿಕೆ ಬಗ್ಗೆ ಶಿವಪಾಲ್ ಕಾರಣ ನೀಡಿಲ್ಲ. ಮೂಲಗಳ ಪ್ರಕಾರ, ಕಡಿಮೆ ಸಂಖ್ಯೆ ಯಲ್ಲಿ ಜನ ಆಗಮಿಸಬಹುದು’ ಎಂಬ ಭೀತಿಯೇ ಕಾರಣವಾಗಿದೆ.