Advertisement

ವಿದ್ಯಾಭ್ಯಾಸಕ್ಕೆ ಕ್ರೀಡೆ ಪೂರಕ

12:21 PM Aug 28, 2019 | Naveen |

ಸಾಗರ: ಕ್ರೀಡೆ ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕೂಡ ಆತ್ಮವಿಶ್ವಾಸ ಹೆಚ್ಚಿಸಿ ಅವರ ಶೈಕ್ಷಣಿಕ ಪ್ರಗತಿಗೆ ಕಾರಣವಾದ ಹಲವಾರು ಉದಾಹರಣೆಗಳಿವೆ. ಆಟದಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುವುದರ ಜೊತೆಗೆ ವಿದ್ಯಾಭ್ಯಾಸಕ್ಕೂ ಪೂರಕವಾಗುತ್ತದೆ ಎಂಬುದನ್ನು ಪೋಷಕರಿಗೆ ಮನದಟ್ಟು ಮಾಡಬೇಕಾಗಿದೆ ಎಂದು ಜಿಪಂ ಸದಸ್ಯ ರಾಜಶೇಖರ ಗಾಳಿಪುರ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಮ್ಮ ವನಶ್ರೀ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ನಗರ ವ್ಯಾಪ್ತಿಯ ವಲಯ ಮಟ್ಟದ ಕ್ರೀಡಾಕೂಟವನ್ನು ಅವರು ಜಾವಲಿನ್‌ ಥ್ರೋ ಮೂಲಕ ಉದ್ಘಾಟಿಸಿ ಮಾತನಾಡಿದರು.

ಆಟದ ಬಗ್ಗೆ ಇದ್ದ ಹಿಂಜರಿಕೆ ನಿಧಾನವಾಗಿ ಕಡಿಮೆ ಆಗುತ್ತಿದೆ. ಇಂದು ಪೋಷಕರು ಮಕ್ಕಳಿಗೆ ವಿವಿಧ ವೃತ್ತಿಪರ ಆಟಗಳಲ್ಲಿ ಕಠಿಣ ತರಬೇತಿಗಳನ್ನು ಒದಗಿಸಿ ಸಜ್ಜುಗೊಳಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಸಾಗರದಂತಹ ಭಾಗದಲ್ಲಿ ಹೆಚ್ಚು ಹೆಚ್ಚು ಕ್ರೀಡಾ ತರಬೇತಿ ಕೇಂದ್ರಗಳ ಸ್ಥಾಪನೆಯಾದರೆ ಇನ್ನಷ್ಟು ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಪ್ರತಿಪಾದಿಸಿದರು. ಸಾಗರದಲ್ಲಿ ಉತ್ತಮವಾದ ಆ್ಯಥ್ಲೆಟಿಕ್‌ ಕ್ರೀಡಾಂಗಣದ ಕೊರತೆಯಿದೆ. ಮಳೆ ಸುರಿಯುತ್ತಿರುವ ಸಂದರ್ಭದಲ್ಲಿಯೂ ಕ್ರೀಡಾ ಚಟುವಟಿಕೆ ನಡೆಸುವಂತ ವ್ಯವಸ್ಥೆಯನ್ನು ನಾವು ಛಾವಣಿ ಹೊಂದಿರುವ ಕ್ರೀಡಾಂಗಣ ಸ್ಥಾಪಿಸಿದರೆ ಮಲೆನಾಡಿನ ಮಳೆಗಾಲದ ಕ್ರೀಡಾಕೂಟಗಳ ಸಮಸ್ಯೆ ಬಗೆಹರಿಯುತ್ತದೆ. ಈ ನಿಟ್ಟಿನಲ್ಲಿ ತಾಲೂಕಿನ ಆಡಳಿತ ಚಿಂತಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್‌, ಭಾರತಕ್ಕೆ ಉಜ್ವಲ ಭವಿಷ್ಯವಿದೆ. ಯುವಜನಾಂಗ ನಮ್ಮ ದೇಶದಲ್ಲಿ ಹೆಚ್ಚಿದ್ದು, ಅವರ ಮೇಲೆ ದೊಡ್ಡಮಟ್ಟದ ನಿರೀಕ್ಷೆಯನ್ನು ದೇಶವಾಸಿಗಳು ಇರಿಸಿಕೊಂಡಿದ್ದಾರೆ. ದೇಶವು ಭವಿಷ್ಯದಲ್ಲಿ ಒಲಿಂಪಿಕ್ಸ್‌ನಂತಹ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುವ ಎಲ್ಲ ಅವಕಾಶಗಳಿದ್ದು, ಇಂತಹ ಸ್ಥಳೀಯ ಕ್ರೀಡಾಕೂಟಗಳ ಮೂಲಕ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಿ ಉನ್ನತ ಮಟ್ಟಕ್ಕೆ ತಲುಪಲು ಅವಕಾಶ ಸಿಗುವ ಸಾಧ್ಯತೆಯೂ ಇರುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಎಡಜಿಗಳೇಮನೆ ಗ್ರಾಪಂ ಅಧ್ಯಕ್ಷ ಎಂ.ಡಿ. ರಾಮಚಂದ್ರ, ನಗರಸಭೆ ಸದಸ್ಯರಾದ ಕೆ.ಆರ್‌. ಗಣೇಶಪ್ರಸಾದ್‌, ಡಿ. ತುಕಾರಾಮ, ದೈಹಿಕ ಶಿಕ್ಷಣ ಪರಿವೀಕ್ಷಕ ಉಮಾಪತಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗುರುರಾಜ್‌, ಪರಮೇಶ್ವರ ಬರದವಳ್ಳಿ ಇದ್ದರು. ದುರ್ಗಾನಾಯಕ್‌ ಸ್ವಾಗತಿಸಿದರು. ಅಶೋಕ್‌ ವಂದಿಸಿದರು. ಮಂಜಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next