Advertisement

ಅವಧಿ ಮೀರಿದ ಔಷಧಿಗೆ ಆಕ್ಷೇಪ

03:46 PM Feb 19, 2020 | Naveen |

ಸಾಗರ: ತಾಲೂಕಿನ ತುಮರಿ, ಬ್ಯಾಕೋಡ್‌ ಇನ್ನಿತರ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಿರುವ ಔಷಧಗಳು ಅವಧಿ ಮೀರಿದ್ದು, ಸ್ಥಳೀಯರು ಇದನ್ನು ಗುರುತಿಸಿದ್ದಾರೆ. ತುಮರಿ ಮತ್ತು ಬ್ಯಾಕೋಡು ಭಾಗದಲ್ಲಿ ಸುಮಾರು 80 ಸಾವಿರ ರೂ. ಮೌಲ್ಯದ ಅವಧಿ ಮೀರಿದ ಔಷ ಧಗಳನ್ನು ಸರಬರಾಜು ಮಾಡಿದ್ದು ಆರೋಗ್ಯ ಇಲಾಖೆ ಇದರ ಬಗ್ಗೆ ಯಾಕೆ ಗಮನಿಸಿಲ್ಲ ಎಂದು ತಾಪಂ ಅಧ್ಯಕ್ಷ ಬಿ.ಎಚ್‌. ಮಲ್ಲಿಕಾರ್ಜುನ ಹಕ್ರೆ ಪ್ರಶ್ನಿಸಿದರು.

Advertisement

ನಗರದ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ತಾಪಂ ಅಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹದ್ದೊಂದು ಜಾಲವೇ ಇದೆ ಎಂದು ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡುತ್ತಿದೆ. ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ. ನಗರದ ಕೆಲವು ಮೆಡಿಕಲ್‌ ಶಾಪ್‌ ಗಳಲ್ಲಿ ಸಹ ಅವಧಿ ಮೀರಿದ ಔಷಧ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಆರೋಗ್ಯ ಇಲಾಖೆ ಗಮನ ಹರಿಸುವಂತೆ ಸೂಚನೆ ನೀಡಿದರು.

ಈಗ ಸರಬರಾಜು ಮಾಡುತ್ತಿರುವ ಎ1 ಹಾಲಿನ ಸೇವನೆಯಿಂದ ಬಿ.ಪಿ., ಶುಗರ್‌, ಹೃದಯ ಸಂಬಂಧಿ  ಕಾಯಿಲೆ ಬರುತ್ತದೆ ಎನ್ನುವ ಮಾಹಿತಿ ಇದೆ. ಅದನ್ನೇ ಸರಬರಾಜು ಮಾಡಲಾಗುತ್ತಿದೆ. ಈ ಬಗ್ಗೆ ಜಿಪಂ ಸಭೆಯಲ್ಲಿ ಚರ್ಚೆ ಮಾಡಿದ್ದರ ಫಲವಾಗಿ ಬೆಂಗಳೂರು ಹಾಲು ಮಾರಾಟ ಮಹಾ ಮಂಡಳಿಯವರು ಎ1 ಹಾಲಿನ ಬದಲು ಎ2 ಹಾಲು ಸರಬರಾಜಿಗೆ ಮುಂದಾಗಿದ್ದಾರೆ. ಆದರೆ ಶಿವಮೊಗ್ಗದ ಕೆಎಂಎಫ್‌ನಲ್ಲಿ ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ದೇಶಿಯ ಗೋತಳಿಗಳ ಸಂರಕ್ಷಣೆ ಹಾಗೂ ಗುಣಮಟ್ಟದ ಹಾಲನ್ನು ಗ್ರಾಹಕರಿಗೆ ವಿತರಿಸುವ ನಿಟ್ಟಿನಲ್ಲಿ ಕೆಎಂಎಫ್‌ ಎ2 ಹಾಲು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಳೆದ ಸಾಲಿನಲ್ಲಿ ವಿಪರೀತ ಮಳೆಯಿಂದಾಗಿ ತಾಲೂಕಿನಲ್ಲಿ 596 ಜಾನುವಾರುಗಳು ಮೃತಪಟ್ಟಿವೆ. ಈತನಕ ಮೃತ ಜಾನುವಾರುಗಳ ಪಾಲಕರ ಕುಟುಂಬಕ್ಕೆ ಪರಿಹಾರ ಬಂದಿಲ್ಲ. ಪ್ರಮುಖವಾಗಿ ಸಾಮಾನ್ಯ ವರ್ಗದವರಿಗೆ ಪರಿಹಾರ ಬಂದಿಲ್ಲ ಎನ್ನುವ ಮಾಹಿತಿ ಪಶುಪಾಲನಾ ಇಲಾಖೆಯಿಂದ ಲಭ್ಯವಾಗಿದ್ದು, ತಕ್ಷಣ ಮುಖ್ಯಮಂತ್ರಿಗಳಿಗೆ, ಸಂಬಂಧಪಟ್ಟ ಖಾತೆ ಸಚಿವರಿಗೆ, ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡುವಂತೆ ಪತ್ರ ಬರೆಯುವಂತೆ ತಾಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ 70 ಹಳ್ಳಿಗಳಲ್ಲಿ ಮಂಗನ ಕಾಯಿಲೆ ಶಂಕಿತ ಪ್ರದೇಶವೆಂದು ಗುರುತಿಸಲಾಗಿದೆ. ಯಶೋದಮ್ಮ ಎಂಬುವವರು ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. ಅವರಿಗೆ ತಕ್ಷಣ ಚಿಕಿತ್ಸೆ ಸಿಗದೆ ಇರುವುದೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ನನ್ನ ಬಳಿ ದೂರು ನೀಡಿದ್ದಾರೆ.

Advertisement

ವೈದ್ಯರು ಯಾವುದೇ ಕಾರಣಕ್ಕೂ ಮಂಗನ ಕಾಯಿಲೆ ಕುರಿತು ನಿರ್ಲಕ್ಷ್ಯ ತೋರಿಸಬಾರದು. ಸಾಗರದಲ್ಲಿಯೇ ಕೆಎಫ್‌ಡಿ ಸಂಶೋಧನಾ ಕೇಂದ್ರವನ್ನು ತಕ್ಷಣ ಪ್ರಾರಂಭಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಅಶೋಕ ಬರದವಳ್ಳಿ, ಕಾರ್ಯನಿರ್ವಹಣಾಧಿಕಾರಿ ಮಂಜುನಾಥಸ್ವಾಮಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next