Advertisement

ಗಡಿಬಿಡಿಯ ಮಾಘಸ್ನಾನವಾದ ಸ್ಥಳೀಯ ಸಂಸ್ಥೆಗಳ ಚುನಾವಣೆ

01:28 PM May 04, 2019 | Naveen |

ಸಾಗರ: ಸಾಗರ ನಗರಸಭೆಯ 31 ವಾರ್ಡ್‌ ಗಳಿಗೆ ಮೇ 29ರಂದು ಚುನಾವಣೆ ದಿನಾಂಕ ಘೋಷಣೆಯಾಗಿರುವುದು ರಾಜಕೀಯ ಪಕ್ಷಗಳಿಗೆ ಅನಿರೀಕ್ಷಿತವಾಗಿದ್ದು, ಅವು ತಬ್ಬಿಬ್ಟಾಗಿವೆ. ಪ್ರಮುಖವಾಗಿ ಸಾಗರದಲ್ಲಿ ಕಾಣಿಸಿಕೊಳ್ಳುವ ಕಾಂಗ್ರೆಸ್‌ ಹಾಗೂ ಬಿಜೆಪಿಗಳೆರಡೂ ಪಕ್ಷಕ್ಕೆ ಚುನಾವಣೆ ತುಸು ವಿಳಂಬವಾಗಿ ನಡೆದರೂ ಒಳ್ಳೆಯದು ಎಂಬ ಮನಃಸ್ಥಿತಿಯಲ್ಲಿಯೇ ಇದ್ದಿದ್ದರಿಂದ ಈ ಚುನಾವಣೆ ಗಡಿಬಿಡಿಯ ಮಾಘಸ್ನಾನದಂತಾಗಿದೆ.

Advertisement

ನಗರ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್‌ಗಳಿವೆ. ಸ್ಥಳೀಯ ಸಂಸ್ಥೆಗಳ ವಾರ್ಡ್‌ ಮೀಸಲಾತಿ ವಿವಾದ ರಾಜ್ಯದ ಹೈಕೋರ್ಟ್‌ ಮೆಟ್ಟಿಲು ಏರಿರುವುದರಿಂದ ಅದು ಬಗೆಹರಿಯುವವರೆಗೂ ಚುನಾವಣೆ ದಿನಾಂಕ ಪ್ರಕಟವಾಗುವುದಿಲ್ಲ ಎಂಬ ನಿರೀಕ್ಷೆಯಲ್ಲಿದ್ದ ರಾಜಕೀಯ ಪಕ್ಷಗಳ ಪ್ರಮುಖರಿಗೆ ದಿಢೀರನೆ ಚುನಾವಣೆ ದಿನಾಂಕ ಪ್ರಕಟವಾಗಿರುವುದು ಅಚ್ಚರಿ ಮೂಡಿಸಿದೆ.ಮೇ 29ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಮೇ 9ರಂದು ಜಿಲ್ಲಾಧಿಕಾರಿ ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರಗಳನ್ನು ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ಮೇ 17ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಮೇ 20 ಕೊನೆಯ ದಿನ. ಮೇ 29ಕ್ಕೆ ಮತದಾನ ನಡೆದರೆ, 31ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೇ 23ರವರೆಗೆ ನೀತಿಸಂಹಿತೆಯ ಪಾಶದಲ್ಲಿರುವ ಆಡಳಿತಕ್ಕೆ, ಈ ಸಂಹಿತೆ ಮತ್ತೂ ಒಂದು ವಾರ ಮುಂದುವರಿಯಲಿದೆ.

ನೀತಿಸಂಹಿತೆಯ ಸಂಕಷ್ಟ: ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 24, ಬಿಜೆಪಿ 4, ಜೆಡಿಎಸ್‌ 1, ಕೆಜೆಪಿ 1 ಗೆದ್ದಿದ್ದವು. ಒಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದರು. ನಂತರ ನಡೆದ ರಾಜಕೀಯ ಸಮೀಕರಣಗಳಲ್ಲಿ ಪಕ್ಷೇತರ ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದರೆ ಜೆಡಿಎಸ್‌ನಿಂದ ಗೆದ್ದಿದ್ದ ಎಸ್‌.ಎಲ್.ಮಂಜುನಾಥ್‌ ಬಿಜೆಪಿ ಪಾಲಾಗಿದ್ದರು. ಆದರೆ ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಕಾಂಗ್ರೆಸ್‌ ಸೇರಿದ್ದರೂ ಬಿಜೆಪಿ ನಗರಸಭೆ ಸದಸ್ಯರು ಕಾಂಗ್ರೆಸ್‌ ಕಡೆಗೆ ಹೋಗದ ವಿದ್ಯಮಾನಕ್ಕೂ ಸಾಗರ ಸಾಕ್ಷಿಯಾಗಿತ್ತು.

ಅಧ್ಯಕ್ಷ ಸ್ಥಾನದ ಪೈಪೋಟಿ ಹಾಗೂ ಹಣ ಮಾಡುವ ದಂಧೆಗೆ ಆಡಳಿತ ಕಾಂಗ್ರೆಸ್‌ ಮಗ್ನರಾಗಿದ್ದ ಹಿನ್ನೆಲೆಯಲ್ಲಿ ನಗರದ ಆಡಳಿತ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿತ್ತು ಎಂಬ ಆಕ್ರೋಶ ಜನರಲ್ಲಿದೆ. ಕಳೆದ 5 ವರ್ಷಗಳ ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿನ ವೈಫಲ್ಯಗಳನ್ನು ಎತ್ತಿ ತೋರಿಸಲು ಬಿಜೆಪಿ ಸಿದ್ಧವಾಗಿದೆ. ಚುನಾವಣಾ ನೀತಿ ಸಂಹಿತೆಯ ಸಂಕಷ್ಟ ಎದುರಾಗದೆ ಲೋಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯ ಸರ್ಕಾರದ ಅನುದಾನಗಳನ್ನು ನಗರಕ್ಕೆ ಹರಿದುಬಂದಿರುವ ಸುದ್ದಿ, ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಮೊದಲಾದ ಕಾರ್ಯಕ್ರಮಗಳ ಮೂಲಕ ಜನರ ಕಹಿ ಭಾವನೆಯನ್ನು ತೊಡೆದುಹಾಕಿ ಮತ್ತೆ ಆಡಳಿತ ಗದ್ದುಗೆ ಏರಬಹುದು ಎಂದು ಕಾಂಗ್ರೆಸ್‌ ಆಶಿಸಿತ್ತು.

ಪಕ್ಷದ ನೂತನ ತಾಲೂಕು ಅಧ್ಯಕ್ಷ ಬಿ.ಆರ್‌. ಜಯಂತ್‌ ಅವರ ನೇತೃತ್ವ ಹಾಗೂ ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ತಶ್ರೀಫ್‌ ಇಬ್ರಾಹಿಂ ಅವರ ಉದ್ಯಮ ಸದೃಶ ನಿರ್ವಹಣೆ ಪಕ್ಷಕ್ಕೆ ಅನುಕೂಲವಾಗಬಹುದು ಎಂಬ ನಿರೀಕ್ಷೆ ಆ ಪಕ್ಷಕ್ಕಿತ್ತು. ದಿಢೀರ್‌ ಚುನಾವಣಾ ಘೋಷಣೆ ತಂತ್ರಗಾರಿಕೆ ಬಗ್ಗೆಯೇ ಕಾಂಗ್ರೆಸ್‌ ಮತ್ತೂಮ್ಮೆ ಯೋಚಿಸುವಂತೆ ಮಾಡಿದೆ. ಐದು ವರ್ಷಗಳ ಆಡಳಿತದಲ್ಲಿ ಗಣಾಧೀಶ್‌, ಎನ್‌. ಲಲಿತಮ್ಮ, ಉಷಾ ಎಸ್‌.ಎನ್‌., ಬಿ.ಬಿ. ಫಸಿಹಾ ಹಾಗೂ ವೀಣಾ ಪರಮೇಶ್ವರ್‌ ಅವರನ್ನು ಅಧ್ಯಕ್ಷರನ್ನಾಗಿಸಲು ತೋರಿದ ತರಾತುರಿಯನ್ನು ಕಾಂಗ್ರೆಸ್‌ ಆಡಳಿತದಲ್ಲಿ ತೋರಿಸಲಿಲ್ಲ ಎಂದೇ ಜನ ಆರೋಪಿಸುತ್ತಾರೆ.

Advertisement

ಪಾಪಪ್ರಜ್ಞೆಯಿಂದ ಪ್ರತಿಭಟನೆಗಿಳಿಯದ ಬಿಜೆಪಿ!: ಆಡಳಿತ ಕಾಂಗ್ರೆಸ್‌ ಪಕ್ಷ ಆಡಳಿತದಲ್ಲಿ ಚುರುಕು ತೋರದ ಸಂದರ್ಭದಲ್ಲಿ ಅದನ್ನು ಧರಣಿ, ಪ್ರತಿಭಟನೆ ಮೊದಲಾದವುಗಳ ಮೂಲಕ ಜನರ ಮುಂದಿಡಬೇಕಾಗಿದ್ದ ಬಿಜೆಪಿ ಹಿಂದಿನ ಐದು ವರ್ಷಗಳ ತನ್ನ ಆಡಳಿತದ ಪಾಪಪ್ರಜ್ಞೆಯಿಂದ ಅಂತಹ ಕ್ರಮಕ್ಕೆ ಮುಂದಾಗಲೇ ಇಲ್ಲ ಎಂಬ ವ್ಯಂಗ್ಯದ ಮಾತು ಕೂಡ ಕೇಳಿಬರುತ್ತಿದೆ. ವಾಸ್ತವವಾಗಿ ಹಿಂದಿನ ಅವಯಲ್ಲಿ ಆಡಳಿತ ನಡೆಸಿದ ಬಿಜೆಪಿಯ ವಿರುದ್ಧದ ಅಲೆ ಕೂಡ ಕಾಂಗ್ರೆಸ್‌ ಮುನ್ನಡೆಗೆ ಕಾರಣವಾಗಿತ್ತು.

ಜನರಿಗೆ ಪರ್ಯಾಯಗಳೇ ಇಲ್ಲದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಆಡಳಿತದಿಂದ ಜನ ರೋಸಿ ಹೋಗುತ್ತಿರುವಾಗ ತಾನೇ ಮುಂದಿನ ಆಡಳಿತ ವಹಿಸಿಕೊಳ್ಳುವಂತಾಗುವುದು ನಿಶ್ಚಿತವಾದಾಗ ಹೆಚ್ಚಿನ ಶ್ರಮ ಏಕೆ ಎಂಬ ಆಲೋಚನೆಯೂ ಆ ಪಕ್ಷದಲ್ಲಿ ಸುಳಿದಾಡಿರಬಹುದು. ಸಾಗರ ನಗರದಲ್ಲಿ ಜೆಡಿಎಸ್‌ನ ಪ್ರಭಾವ ಒಂದು ಸ್ಥಾನಕ್ಕೆ, ಅದೂ ಜಾತಿ ಆಧಾರಿತವಾಗಿ ಸೀಮಿತವಾದ ಹಿನ್ನೆಲೆಯಲ್ಲಿ ಆ ಪಕ್ಷ ಗಂಭೀರ ಸ್ಪರ್ಧೆಯಲ್ಲಿಲ್ಲ ಎಂದೇ ಹೇಳಬೇಕಾಗಿದೆ.

ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆಯುವುದು ಖಚಿತವಾಗಿದೆ. ಕಳೆದ ಐದು ವರ್ಷಗಳಲ್ಲಿ ತಾಲೂಕಿನ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸುವ ಮೂಲಕ ಬಿಜೆಪಿ ತನ್ನ ಪ್ರಾಬಲ್ಯ ಮೆರೆದಿದೆ. ಶಾಸಕ ಎಚ್. ಹಾಲಪ್ಪ ನಗರಸಭೆಯ ಸಾಮಾನ್ಯ ಸಭೆಗಳಿಗೆ ಹಾಜರಾಗುವ ಹಾಗೂ ನಗರಸಭೆ ಆವರಣದಲ್ಲಿಯೇ ತಮ್ಮ ಶಾಸಕ ಕಚೇರಿ ತೆರೆಯುವ ಮೂಲಕ ನಗರಸಭೆ ಆಡಳಿತದ ಮೇಲೆ ಹಿಡಿತ ಸಾಧಿಸಬೇಕು ಎಂಬ ಇಂಗಿತವನ್ನು ಪರೋಕ್ಷವಾಗಿ ಈಗಾಗಲೇ ವ್ಯಕ್ತಪಡಿಸಿದ್ದಾರೆ.

ಬೇಳೂರು ರಾಜಕೀಯ ಅಸ್ತಿತ್ವದ ಪ್ರಶ್ನೆ
ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಚುನಾವಣಾ ರಾಜಕಾರಣಕ್ಕೆ ಖ್ಯಾತರು. ಆದರೆ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಪದೇ ಪದೆ ಹಿನ್ನೆಲೆಯಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ಸಿಗದು ಎಂಬ ಸುದ್ದಿ ಹೊರಟು ಅವರು ಸಾಗರದ ಕಾರ್ಯಕರ್ತರ ಸಭೆ ಕರೆದಾಗ ದೊಡ್ಡ ಸಂಖ್ಯೆಯಲ್ಲಿ ನಗರಸಭೆ ವ್ಯಾಪ್ತಿಯ ಬಿಜೆಪಿ ಪ್ರಮುಖರು ಅವರನ್ನು ಬೆಂಬಲಿಸಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಅವರು ಕಾಂಗ್ರೆಸ್‌ ಕಡೆ ಬೆಂಬಲ ವ್ಯಕ್ತಪಡಿಸಿದಾಗ ಅನಿವಾರ್ಯವಾಗಿ ಬಿಜೆಪಿಗೆ ಮರಳಿರುವ ಆ ಪ್ರಮುಖರ ಟಿಕೆಟ್ ಆಕಾಂಕ್ಷೆಗೆ ಶಾಸಕ ಹಾಲಪ್ಪ ಬಳಗದಿಂದ ಕೊಡಲಿ ಏಟು ಬೀಳುತ್ತದೆಯೇ ಎಂಬುದು ಕುತೂಹಲಕಾರಿ ಅಂಶ. ತಮ್ಮ ರಾಜಕೀಯ ಶಕ್ತಿ ವೃದ್ಧಿಸಿಕೊಳ್ಳಲು ಬೇಳೂರು ಅವರಿಗೆ ನಗರಸಭೆ ಚುನಾವಣೆ ಕೊನೆಯ ಅವಕಾಶವನ್ನು ಕಲ್ಪಿಸಿದೆ ಎಂಬ ಪ್ರತಿಪಾದನೆಯೂ ಕೇಳಿಬಂದಿದೆ. ಎರಡೂ ಪಕ್ಷಗಳಲ್ಲಿ ವಾರ್ಡ್‌ಗಳಲ್ಲಿ ಸ್ಪರ್ಧಿಸುವ ಮೂಲಕ ಪಕ್ಷದ ಅಧಿಕಾರ ವ್ಯಾಪ್ತಿಯಲ್ಲಿ ತಮ್ಮ ರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸಿರುವವರು ಹೆಚ್ಚುತ್ತಿದ್ದಾರೆ. ಇದರಿಂದ ಅನೇಕ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಎರಡೂ ಪಕ್ಷಗಳಲ್ಲೂ ಭಿನ್ನಮತ, ಬಂಡಾಯ ಎದುರಿಸಬೇಕಾದ ಅನಿವಾರ್ಯ ಭೀತಿ ಕಾಡುತ್ತಿದೆ. ನಗರದ ಮಟ್ಟಿಗೆ ಸಣ್ಣ ಶಕ್ತಿಯಾದ ಜೆಡಿಎಸ್‌ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳುತ್ತದೆಯೇ ಎಂಬುದನ್ನು ಕೂಡ ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next