Advertisement

ವಿಪಕ್ಷಕ್ಕೆ ಮಾಹಿತಿ ಇಲ್ಲದೆ ವಿಷಯ ಸೇರ್ಪಡೆ; ಸಾಮಾನ್ಯ ಸಭೆಯಲ್ಲಿ ಸದಸ್ಯೆ ಏಕಾಂಗಿ ಪ್ರತಿಭಟನೆ

07:44 PM Apr 30, 2022 | Team Udayavani |

ಸಾಗರ: ನಗರದ ವೃತ್ತವೊಂದಕ್ಕೆ ಜಿಲ್ಲೆಯ ಮೊದಲ ಸಂಸದ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೆ.ಜಿ. ಒಡೆಯರ್ ಹೆಸರು ಇರಿಸುವ ಸಂಬಂಧದ ವಿಷಯವನ್ನು ವಿಪಕ್ಷದ ಸದಸ್ಯರ ಗಮನಕ್ಕೆ ತಾರದೆ ಹಿಂದಿನ ಸಭಾ ನಡಾವಳಿಯಲ್ಲಿ ಸೇರಿಸಿರುವುದನ್ನು ವಿರೋಧಿಸಿ ವಿಪಕ್ಷ ಕಾಂಗ್ರೆಸ್ ಸದಸ್ಯೆ ಎನ್.ಲಲಿತಮ್ಮ ಬಾವಿಗಿಳಿದು ಏಕಾಂಗಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ಸಾಗರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆದಿದೆ.

Advertisement

ಲಲಿತಮ್ಮ ಆಕ್ರೋಶ ವ್ಯಕ್ತಪಡಿಸಿ, ಕಳೆದ ಸಾಮಾನ್ಯ ಸಭೆಯಲ್ಲಿ ನಗರದ ಮುಖ್ಯ ಬಸ್ ನಿಲ್ದಾಣದ ವೃತ್ತಕ್ಕೆ ಕೆ.ಜಿ. ಒಡೆಯರ್ ಹೆಸರು ಇರಿಸುವ ಸಂಬಂಧ ಚರ್ಚೆ ಆಗಿರಲಿಲ್ಲ. ಆದರೆ ಹಿಂದಿನ ಸಭೆಯ ನಡಾವಳಿಯಲ್ಲಿ ವಿಷಯ ಸೇರಿಸಲಾಗಿದೆ. ಸಭೆಯ ಗಮನಕ್ಕೆ ತರದೆ ವಿಷಯ ಸೇರಿಸಿದ್ದು ಕಾನೂನುಬಾಹಿರ. ವಿಪಕ್ಷಗಳಿಗೆ ಗೊತ್ತಿಲ್ಲದಂತೆ ಇಂತಹ ಎಷ್ಟು ಕೆಲಸ ನೀವು ಮಾಡಿದ್ದೀರಿ ಎಂದು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ತಿರುಗೇಟು ನೀಡಿದ ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಗಣೇಶಪ್ರಸಾದ್, ಅರವಿಂದ ರಾಯ್ಕರ್ ಮೊದಲಾದವರು ಸಭೆಯ ಗಮನಕ್ಕೆ ತರದೆ ಯಾವ ನಿರ್ಣಯ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿ ಎಂದು ಪಟ್ಟು ಹಿಡಿದರು.

ಇದರಿಂದ ಕುಪಿತರಾದ ಲಲಿತಮ್ಮ ಏಕಾಂಗಿಯಾಗಿ ಬಾವಿಗಳಿದು, ನಮಗೆ ಕೆ.ಜಿ.ಒಡೆಯರ್ ಅವರ ಬಗ್ಗೆ ಗೌರವವಿದೆ. ಹೆಸರು ಇರಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಣಯ ತೆಗೆದುಕೊಂಡಿದ್ದು ತಪ್ಪು ಎಂದು ಧರಣಿ ಕುಳಿತರು. ನಂತರ ಆಡಳಿತ ಮತ್ತು ವಿಪಕ್ಷ ಸದಸ್ಯರ ಮನವಿಗೆ ಸ್ಪಂದಿಸಿ ತಮ್ಮ ಸ್ಥಾನ ಮರಳಿದರು. ಈ ವೇಳೆ ಬಿಜೆಪಿಯ ಟಿ.ಡಿ.ಮೇಘರಾಜ್ ಮಾತನಾಡಿ, ಈಗಾಗಲೇ ಸಾಗರದಲ್ಲಿ ರಸ್ತೆಯೊಂದಕ್ಕೆ ಬಂಗಾರಪ್ಪ ಅವರ ಹೆಸರು ಇರಿಸಲಾಗಿದೆ. ಅದನ್ನು ವಿರೋಧ ಮಾಡಲು ಸಾಧ್ಯವಿಲ್ಲ. ಒಡೆಯರ್, ಬಂಗಾರಪ್ಪ ಅಂತಹವರ ಹೆಸರನ್ನು ಸಾಮಾನ್ಯ ಸಭೆಯ ಚರ್ಚೆಗೆ ತಂದು ಅವಮಾನ ಮಾಡುವುದು ಸರಿಯಲ್ಲ. ಎಲ್ಲರೂ ಒಮ್ಮತದಿಂದ ಇಂತಹ ಮಹಾತ್ಮರ ಹೆಸರು ಉಳಿಸಿಕೊಳ್ಳುವ ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ : ಹುಣಸೂರು ತಾಲೂಕಿನದ್ಯಾಂತ 9 ಕೋ. ರೂ ಅಭಿವೃದ್ದಿ ಕಾಮಗಾರಿಗೆ ಚಾಲನೆ : ಶಾಸಕ ಮಂಜುನಾಥ್

ಸ್ಪಷ್ಟನೆ ನೀಡಿದ ಅಧ್ಯಕ್ಷೆ ಮಧುರಾ ಶಿವಾನಂದ್, ಸ್ವಾತಂತ್ರ್ಯ ಹೋರಾಟಗಾರರ ಸಂಘವು ವೃತ್ತಕ್ಕೆ ಒಡೆಯರ್ ಹೆಸರು ಇರಿಸಲು ಮನವಿ ಸಲ್ಲಿಸಿದೆ. ವಿಷಯ ಪ್ರಸ್ತಾಪಕ್ಕೆ ತರುವ ಮೊದಲು ವಿಪಕ್ಷ ನಾಯಕ ಮಂಡಗಳಲೆ ಗಣಪತಿ ಅವರ ಗಮನಕ್ಕೆ ತಂದಿದ್ದೇನೆ. ಅವರು ಒಪ್ಪಿಗೆ ಸೂಚಿಸಿದ್ದಾರೆ. ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಲಾಗುತ್ತದೆ. ನಿಮ್ಮ ಆಕ್ಷೇಪ ಇದ್ದರೆ ಲಿಖಿತ ರೂಪದಲ್ಲಿ ಕೊಡಿ ಎಂದು ವಿಷಯಕ್ಕೆ ತೆರೆ ಎಳೆದರು.

Advertisement

ಜೋಗ ರಸ್ತೆಯ ಗುಡಿಗಾರ ಸಮಾಜದ ಶ್ರೀರಾಮ ದೇವಸ್ಥಾನದ ಗರ್ಭಗುಡಿವರೆಗಿನ ಜಾಗ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಹೋಗುತ್ತಿರುವುದರಿಂದ ಪರ್ಯಾಯ ಜಾಗ ಕೊಡಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ವಿಷಯ ಕುರಿತು ಗಣಪತಿ ಮಂಡಗಳಲೆ, ಟಿ.ಡಿ.ಮೇಘರಾಜ್, ಗಣೇಶಪ್ರಸಾದ್, ಎನ್.ಲಲಿತಮ್ಮ, ಮಧುಮಾಲತಿ, ದೀಪಕ್ ಇನ್ನಿತರರು ಮಾತನಾಡಿದರು. ಪೌರಕಾರ್ಮಿರಿಗೆ ಗುಣಮಟ್ಟದ ಬೆಳಗಿನ ಉಪಹಾರ ಕಲ್ಪಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಿತು. ಪೌರಾಯುಕ್ತ ರಾಜು ಡಿ. ಬಣಕಾರ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next