Advertisement

ಖುಷಿ, ಸಂಭ್ರಮದ ಬೌಂಡರಿ-ಸಿಕ್ಸರ್‌!

05:37 PM Feb 24, 2020 | Naveen |

ಸಾಗರ: ಸಾಗರದಲ್ಲಿ ನಾಡಿನ ದೊಡ್ಡ ಜಾತ್ರೆಗಳಲ್ಲೊಂದಾದ ಮಾರಿಕಾಂಬಾ ಜಾತ್ರೆಯ ಹಿನ್ನೆಲೆಯಲ್ಲಿ ನಗರದೊಳಗೆ ಜನರ ಗೌಜು, ವಾಹನಗಳ ಅಬ್ಬರದಲ್ಲಿ ಟ್ರಾಫಿಕ್‌ ಜಾಮ್‌, ಹೆಜ್ಜೆಗಳ ಭಾರಕ್ಕೆ ನಲುಗಿ ಭೂಮಿಯಿಂದ ಎದ್ದ ಧೂಳಿನ ಹಬ್ಬದ ವಾತಾವರಣಕ್ಕೆ ಭಿನ್ನವಾಗಿ ಭಾನುವಾರ ಸಂಜೆ ತಾಲೂಕಿನ ತಾಳಗುಪ್ಪ ಸಮೀಪದ ಕಲಗಾರಿನಲ್ಲಿ ಆಹ್ಲಾದಕರ ಚುಮುಚುಮು ಚಳಿ ವಾತಾವರಣದಲ್ಲಿ ಸಮುದಾಯ, ಸಂಬಂಧಗಳನ್ನು ಗಟ್ಟಿ ಮಾಡುವ ಹೊನಲು ಬೆಳಕಿನ ಕ್ರಿಕೆಟ್‌ ಹಬ್ಬ ನಡೆದಿತ್ತು. ಬೇರೆ ಬೇರೆ ಊರುಗಳಲ್ಲಿ ಉದ್ಯೋಗ ನಿಮಿತ್ತ ವಾಸ್ತವ್ಯ ಹೂಡಿದ ಈ ಭಾಗದ ಹವ್ಯಕ ಸಮುದಾಯದ ಯುವಕರೂ ಸೇರಿದಂತೆ ಊರಿನ ಹಿರಿಯರು, ಕಿರಿಯರು ಒಟ್ಟಾಗಿ ಕ್ರಿಕೆಟ್‌ ಆಡಿದರು.

Advertisement

ಬೌಲಿಂಗ್‌, ಬ್ಯಾಟಿಂಗ್‌ ಜೊತೆಗೆ ಭಾಷಣಗಳೂ ಇದ್ದವು. ಅಂತಿಮವಾಗಿ ರುಚಿಕರವಾದ ಊಟ ಕೂಡ ಕಾದಿತ್ತು. ಕಲಗಾರಿನಲ್ಲಿ ನಡೆದ ದ್ವಿತೀಯ ವರ್ಷದ ಹವ್ಯಕ ಕ್ರಿಕೆಟ್‌ ಹಬ್ಬದಲ್ಲಿ ಹಿರಿಯರಾದ ಸೀತಾರಾಮ ಹೆಗಡೆ, ಮೋಹನ ಹೆಗಡೆ, ಜಯಕೃಷ್ಣ ಜಿ.ಎಸ್‌. ಮೊದಲಾದವರು ಬ್ಯಾಟು ಬೀಸಿ, ಬೌಲ್‌ ಮಾಡುವ ಮೂಲಕ ಹುರಿದುಂಬಿಸಿದರು. ಹಿರಿಯರು ಮತ್ತು ಕಿರಿಯರ ನಡವೆ ಪ್ರತ್ಯೇಕವಾಗಿ ಪ್ರದರ್ಶನ ಪಂದ್ಯವೇರ್ಪಡಿಸಿದಾಗಲೂ ಹಿರಿಯರೇ ಗೆದ್ದರು. ಮ್ಯಾಚ್‌ ಫಿಕ್ಸಿಂಗ್‌ ಆಗಿತ್ತೇ ಎಂಬ ಅನುಮಾನಕ್ಕೆ ಆಸ್ಪದ ನೀಡುವಂತೆ ಸೋತ ಕಿರಿಯರೇ ಹಿರಿಯರ ಜಯವನ್ನು ಆಚರಿಸಿ ಖುಷಿಯನ್ನು ಇಮ್ಮಡಿಗೊಳಿಸಿದರು.

ಬೌಲಿಂಗ್‌ ಮಾಡುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದ ಹಿರಿಯ ತಬಲ ಮತ್ತು ವೇಣುವಾದಕ ನಟೇಶ್‌ ಹೆಗಡೆ, ಕೇವಲ ಯುವಜನರಿಗೆ ಮಾತ್ರ ಸೀಮಿತವಾಗದೆ ಸುತ್ತಮುತ್ತಲಿನ ಎಲ್ಲ ಪೋಷಕರಿಗೂ ಸಹ ಅವಕಾಶವಿಟ್ಟಿರುವುದು ವಿನೂತನ ಕ್ರಮ. ವರ್ಷಕ್ಕೊಮ್ಮೆಯಾದರೂ ಹೀಗೆ ಊರಿನ ಮಕ್ಕಳು ಒಂದೆಡೆ ಸೇರಿ ಆಡಿ ನಕ್ಕು ನಲಿಯುವುದರಿಂದ ದೂರವಾಗುವ ಮನಸ್ಸುಗಳು ಒಂದಾಗುತ್ತವೆ. ಹಾಡು, ಹರಟೆ, ಹರ್ಷಗಳ ಸಮ್ಮಿಳನವಾಗುವ ಇಂತಹ ಹಬ್ಬಗಳು ಕೋಟಿ ರೂ. ಕೊಟ್ಟರೂ ಸಿಗದಂತವು ಎಂಬುದನ್ನು ನಾವು ಮರೆಯಬಾರದು ಎಂದರು.

ಗ್ರಾಮದ ಹಿರಿಯ ಛಾಯಾಗ್ರಾಹಕ ಆರ್‌. ಎಂ. ಹೆಗಡೆ ಮಾತಿನ ಬ್ಯಾಟ್‌ ಬೀಸಿ, ತಾಲೂಕಿನಲ್ಲಿ ಹವ್ಯಕ ಸಮುದಾಯದ ಬಹುತೇಕ ಯುವಕರು ಉದ್ಯೋಗ ನಿಮಿತ್ತ ಹಾಗೂ ಭವಿಷ್ಯದ ವಿವಾಹ ವಿಚಾರಗಳಲ್ಲಿ ಪರ ಊರಿನಲ್ಲಿ ಬದುಕು ಕಟ್ಟಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹಳ್ಳಿಗಳಲ್ಲಿ ಕೇವಲ ಹಿರಿಯರು ಅನಿವಾರ್ಯ ಕಾರಣಗಳಿಂದ ಉಳಿದು ಊರುಗಳು ವೃದ್ಧಾಶ್ರಮದ ಅನುಭವ ಬರುವಂತೆ ಆಗುತ್ತಿದೆ. ಈ ನಿಟ್ಟಿನಲ್ಲಿ ಈ ರೀತಿಯ ಚಟುವಟಿಕೆ ಊರಿನವರ ಸೋರಿಹೋಗುತ್ತಿರುವ ಉತ್ಸಾಹವನ್ನು ಮರಳಿ ತರುವಂತೆ ಆಗಿದೆ ಎಂದು ಸ್ಟ್ರೆಟ್‌ ಡ್ರೈವ್‌ ಮಾಡಿದರು.

ರಾತ್ರಿ 7-30ರಿಂದ ಬೆಳಗಿನ 6 ಗಂಟೆಯವರೆಗೆ 8 ತಂಡಗಳು ಸತತವಾಗಿ ಒಬ್ಬರ ಮೇಲೊಬ್ಬರು ಹೋರಾಡಿ ಅಂತಿಮವಾಗಿ ಬಚ್ಚಗಾರು ತಂಡವು ಹಬ್ಬದ ಪ್ರಥಮ ಹಾಗೂ ಹೂವಿನ ಮನೆ ತಂಡವು ದ್ವಿತೀಯ ಉತ್ತಮ ತಂಡಗಳಾಗಿ ಹೊರಹೊಮ್ಮಿದವು. ಅತ್ಯುತ್ತಮ ದಾಂಡುಗಾರನಾಗಿ ಸಚಿನ್‌ ತಲವಾಟ, ಅತ್ಯುತ್ತಮ ಎಸೆತಗಾರನಾಗಿ ಮಂಜುನಾಥ ಕೆ.ಎಸ್‌. ದೊಂಬೆ ಪ್ರದರ್ಶನ ನೀಡಿದರು.

Advertisement

ನಿರ್ಣಾಯಕರಾಗಿ ಬಿ.ಆರ್‌. ದೇವಪ್ಪ ಮತ್ತು ಪುಟ್ಟಸ್ವಾಮಿ ಕಾರ್ಯನಿರ್ವಹಿಸಿದರು. ಆರಂಭಿಕ ಸಾಂಕೇತಿಕ ಸಮಾರಂಭದಲ್ಲಿ ಗಿರಿಧರ ಟಿ. ಸ್ವಾಗತಿಸಿದರು. ಪ್ರಶಾಂತ ಕೆ.ಜಿ. ಪ್ರಾಸ್ತಾವಿಕ ನುಡಿಗಳನ್ನು ಆಡಿದರೆ ಹಿರಿಯ ಕ್ರಿಕೆಟ್‌ ಆಟಗಾರ ಮತ್ತು ಪಂಡಿತ್‌ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥ ನಾಗೇಂದ್ರ ಪಂಡಿತ್‌, ಸಾಗರ ನಗರಸಭಾ ಸದಸ್ಯ ಗಣೇಶ ಪ್ರಸಾದ, ತಾಳಗುಪ್ಪದ ಯುವ ಉದ್ಯಮಿ, ಕೃಷಿಕ ಗಣೇಶ ಹೆಗಡೆ ಸಂಭ್ರಮಕ್ಕೆ ಸಾಕ್ಷಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next