Advertisement

ಗಾರ್ಗಿ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ

12:45 PM Sep 15, 2019 | Naveen |

ಸಾಗರ: ಸೆ. 23ರಂದು ತಾಲೂಕಿನ ಹೊಸಗುಂದದ ಉಮಾಮಹೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯಲಿರುವ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ತಾಲೂಕಿನ ಬಂದಗದ್ದೆ ಗ್ರಾಮದ ಗಾರ್ಗಿ ಸೃಷ್ಟೀಂದ್ರ ಆಯ್ಕೆಯಾಗಿದ್ದಾರೆ. ಈ ಮುನ್ನ ಗಾರ್ಗಿ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ನಗರದ ನಿರ್ಮಲಾ ಬಾಲಿಕಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಗಾರ್ಗಿ ಸಾಹಿತ್ಯದ ಜೊತೆಗೆ ವಿವಿಧ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.

Advertisement

ಗಾರ್ಗಿ ತಂದೆ ಕೃಷಿಕ, ಚಿಂತಕ ಶೈಲೇಂದ್ರ ಬಂದಗದ್ದೆ ಹೆಗ್ಗೋಡಿನ ನೀನಾಸಂ, ಸಾಗರ್‌ ಫೋಟೋಗ್ರಾಫಿಕ್‌ ಸೊಸೈಟಿ, ಬಳಕೆದಾರರ ವೇದಿಕೆ, ಅಡಕೆ ಬೆಳೆಗಾರರ ಸಂಘ, ಕವನ, ಲೇಖನ ಮೊದಲಾದೆಡೆ ತಮ್ಮನ್ನು ಗುರುತಿಸಿಕೊಂಡವರು. ತಾಯಿ ಸರಸ್ವತಿ ಹೆಗಡೆ ಯಕ್ಷಗಾನದ ಹಿನ್ನೆಲೆಯವರು. ಅವರ ತಂದೆ ಪ್ರಸಿದ್ಧ ಯಕ್ಷಗಾನ ಪಾತ್ರಧಾರಿಯಾಗಿ ಹೆಸರು ಮಾಡಿದ್ದರು.

ಸತತ ಮೂರು ವರ್ಷ ಪ್ರಾಥಮಿಕ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯ ‘ಕಥೆ ಹೇಳುವ ಸ್ಪರ್ಧೆ’ಯಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುವ ಗಾರ್ಗಿ 8ನೇ ವಯಸ್ಸಿನಲ್ಲಿಯೇ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿ, ಪ್ರಸ್ತುತಪಡಿಸಿದ ‘ಅಮ್ಮ’ ಮತ್ತು ‘ಅಕ್ಕ’ ಕವಿತೆಗಳು ಜನಮೆಚ್ಚುಗೆ ಗಳಿಸಿತು. ಶಿವಮೊಗ್ಗದಲ್ಲಿ ನಡೆದ ‘ಚಿಣ್ಣರ ಸಾಹಿತ್ಯ ಚಿಲುಮೆ’ ಕಾರ್ಯಾಗಾರದಲ್ಲಿ ಭಾಗವಹಿಸಿ, ‘ಕನಸು’ ಆಶುಕವನಕ್ಕೆ ಪ್ರಥಮ ಸ್ಥಾನ ಲಭಿಸಿದೆ.

2013 ಮತ್ತು 2014ರಲ್ಲಿ ಸತತ ಎರಡು ವರ್ಷ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಕಥಾ ಗೋಷ್ಠಿಯಲ್ಲಿ ಹೇಳಿದ ಸ್ವರಚಿತ ಕಥೆ ‘ದೇವರು’ ಹಾಗೂ ಕವಿಗೋಷ್ಠಿಯಲ್ಲಿ ಹೇಳಿದ ‘ವಿಸ್ಮಯ’ ಕವನ ಹಂಸಲೇಖ ಹಾಗೂ ಬಿ.ಆರ್‌. ಲಕ್ಷ್ಮಣ ರಾವ್‌ ಅವರ ಪ್ರಶಂಸೆಗೆ ಪಾತ್ರವಾಗಿತ್ತು.

ಗಾರ್ಗಿ ಅವರು ಕರಿಬೇವು ಎಂಬ ನಾಟಕ ಬರೆದಿದ್ದಾರೆ. ದೇವರು, ಕೇಕಿನ ಗೃಹದತ್ತ ನನ್ನ ಚಿತ್ತ, ವಿವಿಧತೆಯಲ್ಲಿ ಏಕತೆ ಎಂಬ ತಲೆಬರಹದ ಕಥೆ ಬರೆದಿದ್ದಾರೆ. ಅಕ್ಕ, ಅಮ್ಮ, ಅಪ್ಪ, ನಮ್ಮ ಶಾಲೆ, ಮಳೆ, ಗುಲಾಬಿ, ಕನಸು, ವಿಸ್ಮಯ, ಪರಿಸರ, ಗಣಪ, ನಮ್ಮ ದೇಶ ಎಂಬ ಕವಿತೆಗಳನ್ನು ಹೆಣೆದಿದ್ದಾರೆ. ಇತೀಚೆಗೆ ನಡೆದ ಪ್ರೌಢಶಾಲಾ ಮಟ್ಟದ ‘ರಾಬಿಯಾ ಕ್ವಿಜ್‌ ಕಾಂಟೆಸ್ಟ್‌’ನಲ್ಲಿ ಇವರ ಶಾಲಾ ತಂಡ ಪ್ರಥಮ ಸ್ಥಾನ ಗಳಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next