Advertisement

ಯುವಕರ ಶ್ರಮಕ್ಕೆ ಒಲಿದ ಬಂಗಾರಮ್ಮನ ಕೆರೆ!

11:32 AM May 05, 2019 | Naveen |

ಸಾಗರ: ನಿಧಾನವಾಗಿ ಹಳ್ಳಿಗಳಲ್ಲಿ ಹಬ್ಬಗಳು ಕೇವಲ ಸಂಪ್ರದಾಯಗಳಾಗಿ, ಸಂಭ್ರಮವನ್ನು ತರುತ್ತವೆ ಎಂಬ ಮಾತು ಸವಕಲಾಗಿರುವ ಸಮಯದಲ್ಲಿ ಭಾನುವಾರ ಅಕ್ಷರಶಃ ಚಿಪಿÛ ಲಿಂಗದಹಳ್ಳಿಯ ಜನ ವಿನೂತನ ಹಬ್ಟಾಚರಣೆಯ ಉತ್ಸುಕತೆಯಲ್ಲಿದ್ದಾರೆ. ಅಲ್ಲಿ ನಡೆಯುವ ಕೆರೆ ಹಬ್ಬ ಆ ಭಾಗದ ಯುವಕರು ಹಾಗೂ ತಾಲೂಕಿನ ಪರಿಸರಾಸಕ್ತರ ವಿಜಯೋತ್ಸವ ಸಮಾರಂಭವಾಗಿಯೂ ದಾಖಲಾಗಲಿದೆ.

Advertisement

ಹೂಳಲ್ಲಿ ಸಿಲುಕಿದ ಯುವಕರು!: ನಗರದ ಗಣಪತಿ ಕೆರೆಗೆ ಜಲಮೂಲದ ಸರಪಳಿಯ ಏಳು ಕೆರೆಗಳಲ್ಲಿ ಒಂದಾದ ಚಿಪಿÛ ಲಿಂಗದಹಳ್ಳಿಯ ಬಂಗಾರಮ್ಮನ ಕೆರೆ ಹೂಳು ತೆಗೆದರೆ ನಗರದ ಹಿತವನ್ನೂ ಕಾಪಾಡಿದಂತಾಗುತ್ತದೆ. ಇಲ್ಲಿಗೆ ಬರುವ ಕಾಡುಪ್ರಾಣಿಗಳಿಗೂ ನೀರಿನ ಆಸರೆಯಾಗುತ್ತದೆ. ಇಲ್ಲಿನ ಹೂಳು ನಿರ್ವಹಣೆಗೂ ಸಾಕಷ್ಟು ಅವಕಾಶಗಳಿವೆ ಎಂಬುದನ್ನು ಪರಿಗಣಿಸಿ 2017ರ ಮೇ ತಿಂಗಳಿನಲ್ಲಿ ಸಾಗರ ಜೀವಜಲ ಕಾರ್ಯಪಡೆ ನಿರ್ಧರಿಸಿದಾಗ ತಾವೇ ಸಾಲದ ಹೂಳಿನಲ್ಲಿ ಸಿಲುಕಿಕೊಳ್ಳುತ್ತೇವೆ ಎಂಬ ಚಿಕ್ಕ ಅನುಮಾನವೂ ಯುವಕರ ಸಮೂಹದಲ್ಲಿರಲಿಲ್ಲ. ಆರು ಸಾವಿರ ಕ್ಯೂಬಿಕ್‌ ಹೂಳು ತೆಗೆಯಲಾಯಿತಾದರೂ ಅದಕ್ಕೆ ಆದ ವೆಚ್ಚ ತುಂಬುವಷ್ಟು ದೇಣಿಗೆ ಸಂಗ್ರಹವಿರಲಿಲ್ಲ.

ಅಂದಿನ ಸಾಲ ನಿರ್ವಹಿಸುವಲ್ಲಿ ಈಗ ಕಾರವಾರದ ಅಪರ ಜಿಲ್ಲಾಧಿಕಾರಿಯಾಗಿರುವ ನಾಗರಾಜ್‌ ಆರ್‌. ಸಿಂಗ್ರೇರ್‌, ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್‌ ಉಪಾಧಿಧೀಕ್ಷಕರಾಗಿರುವ ಮಂಜುನಾಥ್‌ ಬಿ. ಕವರಿ ಅವರಂತಹ ಸರ್ಕಾರಿ ಅಧಿಕಾರಿಗಳು ಸಹಾಯ ಮಾಡಿದರು ಎಂದು ಪರಿಸರವಾದಿ ಅಖೀಲೇಶ್‌ ಸ್ಮರಿಸಿಕೊಳ್ಳುತ್ತಾರೆ. ಮೂರು ವರ್ಷಗಳ ಸಾಹಸದಲ್ಲಿ ಕಾರ್ಯಪಡೆಯ ಹೆಸರಿನಲ್ಲಿ ಚಿಪಿÛ ಲಿಂಗದಹಳ್ಳಿಯ ಯುವಕರು ಬಂಗಾರಮ್ಮನ ಕೆರೆಯ ಹೂಳು ತೆಗೆಯುವ ಕೆಲಸವನ್ನು ಯಶಸ್ವಿಯಾಗಿ ಪೂರೈಸುವ ಜೊತೆಗೆ ಕೆರೆ ಹೂಳು ತೆಗೆಯುವ ತಾಂತ್ರಿಕತೆಯ ಬಗ್ಗೆ ಮಾತನಾಡಬಹುದಾದಷ್ಟು ಬೆಳೆದಿದ್ದಾರೆ.

2017ರ ಏ. 28ರಂದು ಸಾಗರದ ಪವಿತ್ರ ಸಭಾಂಗಣದಲ್ಲಿ ಮೊತ್ತ ಮೊದಲ ಬಾರಿಗೆ ಸಾಗರದ ಪರಿಸರಾಸಕ್ತರ ಸಭೆ ನಡೆಯಿತು. ಜಲ ಪತ್ರಕರ್ತ ಶಿವಾನಂದ ಕಳವೆ ಅವರ ನೇತೃತ್ವದಲ್ಲಿ ಶಿರಸಿಯಲ್ಲಿ ಕಂಡುಕೊಂಡ ಯಶಸ್ವಿ ಹೂಳು ತೆಗೆಯುವ ಆಂದೋಲನದಿಂದ ಪ್ರೇರಿತವಾಗಿ ನಡೆದ ಸಭೆ ನಗರದೊಳಗಿನ ತಿಮ್ಮಣ್ಣ ನಾಯಕನ ಕೆರೆಯ ಹೂಳು ತೆಗೆಯುವುದರಿಂದ ಸಾಗರದ ಆಂದೋಲನದ ಶುರು ಎಂದು ಘೋಷಿಸಿತ್ತು. ಪ್ರಾಥಮಿಕ ಸಭೆಯಲ್ಲಿ ಪಾಲ್ಗೊಂಡ ಶಿವಾನಂದ ಕಳವೆ ಭಾನುವಾರದ ಸಂಭ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ.

ಬಂಗಾರಮ್ಮ ಆಕಸ್ಮಿಕ ಆಯ್ಕೆ!: ಆದರೆ ತಿಮ್ಮಣ್ಣ ನಾಯಕನ ಕೆರೆಯ ಅವತ್ತಿನ ಪರಿಸ್ಥಿತಿ ತಕ್ಷಣಕ್ಕೆ ಹೂಳು ತೆಗೆಯುವ ಕಾಮಗಾರಿ ಆರಂಭಿಸಲು ಲಗತ್ತಾಗಿರಲಿಲ್ಲ. ಕೆರೆಯಲ್ಲಿ ಸಾಕಷ್ಟು ನೀರಿನ ಸಂಗ್ರಹವಿತ್ತು. ಇದಕ್ಕೆ ನಗರದ ವಿವಿಧ ಬಡಾವಣೆಗಳಿಂದ ತ್ಯಾಜ್ಯ ನೀರು ಕೂಡ ಹರಿದುಬರುತ್ತಿತ್ತು. ಈ ಹಂತದಲ್ಲಿ ಒಮ್ಮೆಗೆ ಕೆರೆಯ ನೀರನ್ನು ಖಾಲಿ ಮಾಡಲು ಸೂಕ್ತ ವ್ಯವಸ್ಥೆಗಳೂ ಇರಲಿಲ್ಲ. ತ್ಯಾಜ್ಯ ನೀರಿನ ಹರಿವನ್ನು ಬೇರೆಡೆಗೆ ತಿರುಗಿಸುವ ಕೆಲಸವೂ ಆಗಬೇಕಾಗಿತ್ತು. ಈ ಚಟುವಟಿಕೆಗಳಿಗೇ ತಿಂಗಳ ಸಮಯ ಬೇಕಾಗುವಂತಿತ್ತು. ಈ ಹಿನ್ನೆಲೆಯಲ್ಲಿ ಮೇ ತಿಂಗಳಿನಷ್ಟು ತಡವಾಗಿ ಆರಂಭವಾದ ಕೆಲಸಕ್ಕೆ ಈ ಕೆರೆ ಸೂಕ್ತವಲ್ಲ ಎಂದು ಭಾವಿಸಿ ಲಿಂಗದಹಳ್ಳಿಯ ಬಂಗಾರಮ್ಮನ ಕೆರೆಗೆ ಆದ್ಯತೆ ನೀಡಲಾಯಿತು.

Advertisement

ಆ ಸಮಯದಲ್ಲಿ ಹೂಳು ತೆಗೆಯುವ ಕಾಮಗಾರಿಗೆ 5.3 ಲಕ್ಷ ರೂ. ವೆಚ್ಚದ ಅಂದಾಜು ಮಾಡಲಾಗಿತ್ತು. ಆದರೆ ನಗರದಿಂದ ದೂರವಾದ ಕೆರೆಯಾದ ಹಿನ್ನೆಲೆಯಲ್ಲಿಯೂ ಸಾರ್ವಜನಿಕರಿಂದ ನಿರೀಕ್ಷಿತವಾದ ದೇಣಿಗೆ ಸಂಗ್ರಹವಾಗಲಿಲ್ಲ. ಕೆಲವು ವ್ಯಾಪಾರಿಗಳು ಅದನ್ನು ಬಹಿರಂಗವಾಗಿಯೂ ಪ್ರಸ್ತಾಪಿಸಿದರು. ಹಣ ಸಂಗ್ರಹದಲ್ಲಾದ ಹಿನ್ನಡೆಯ ಜೊತೆಗೆ ಸುಮಾರು 11.5 ಲಕ್ಷ ರೂ.ಗಳ ವೆಚ್ಚ ಮಾಡಿಯೂ ಶೇ. 30ರಷ್ಟು ಮಾತ್ರ ಆಗಿತ್ತು.

ಈ ಬಗ್ಗೆ ವಿವರಿಸುವ ಕಲ್ಮನೆ ಗ್ರಾಪಂ ಸದಸ್ಯ ಎಲ್.ವಿ. ಅಕ್ಷರ, ಒಂದು ರೀತಿಯಲ್ಲಿ ಆ ದಿನದ ಹಿನ್ನಡೆ ನಮಗೆ ಒಳ್ಳೆಯದನ್ನೇ ಮಾಡಿತು. ಯಾವುದೇ ಕೆರೆಯ ಹೂಳು ತೆಗೆಯಲು ನಿರ್ಧರಿಸಿದ ವರ್ಷವೇ ಹೂಳು ತೆಗೆಯಲು ಮುಂದಾಗಬಾರದು. ಒಂದು ವರ್ಷ ಕಾಲ ಕೆರೆಯ ನೀರಿನ ತೂಬು ತೆಗೆದು ಕೆರೆ ಸಂಪೂರ್ಣವಾಗಿ ಒಣಗಲು ಅವಕಾಶ ಕಲ್ಪಿಸಬೇಕು. ಇದರಿಂದ ಕರೆಯ ಒಳಗೆ ಇಳಿದು ಜೆಸಿಬಿ, ಹಿಟಾಚಿಗಳು ಸುಲಭವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಶುಷ್ಕ ಹೂಳು ಸಾಗಿಸುವುದು ಕೂಡ ಸಲೀಸು. ಇದರಿಂದ ಕಾಮಗಾರಿಯ ಶೇ. 40ರಷ್ಟು ಕೆಲಸ ಸುಲಭವಾಗುತ್ತದೆ. ನಮಗೆ ಹಣದ ಮುಗ್ಗಟ್ಟು ಎದುರಾದುದರಿಂದ 2018ರಲ್ಲಿ ಯಾವುದೇ ಚಟುವಟಿಕೆ ನಡೆಸದಿದ್ದುದು ಈಗ ಕೌಶಲ್ಯದಿಂದ ಕೆಲಸ ಮಾಡುವುದಕ್ಕೆ ಕಾರಣವಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕರ್ನಾಟಕ ಬ್ಯಾಂಕ್‌ನಿಂದ ಜೀವ!
2019ರಲ್ಲಿ ಸ್ವಾನ್‌ ಆ್ಯಂಡ್‌ ಮ್ಯಾನ್‌ ಸಂಸ್ಥೆ ವತಿಯಿಂದ ಬಂಗಾರಮ್ಮನ ಕೆರೆ ಹೂಳೆತ್ತಲು ಬೇರೆಬೇರೆ ಸಂಘ-ಸಂಸ್ಥೆಗಳಿಗೆ, ದಾನಿಗಳಿಗೆ ಪತ್ರ ಬರೆಯಲಾಗಿತ್ತು. ಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕರ್ನಾಟಕ ಬ್ಯಾಂಕ್‌ 5 ಲಕ್ಷ ರೂ. ಕೆರೆ ಹೂಳೆತ್ತುವ ಕಾಮಗಾರಿಗೆ ನೀಡಿತು. ಇದರಿಂದ ಮತ್ತೆ ಹೂಳೆತ್ತುವ ಕಾಮಗಾರಿಗೆ ಜೀವ ಬಂದಿತು. ಸ್ಥಳೀಯವಾಗಿಯೂ ಮತ್ತೆ ಜನ ದೇಣಿಗೆ ನೀಡಿದರು. ಸ್ಥಳೀಯ ಗ್ರಾಮದ ಮಹಿಳೆಯರು ತಮ್ಮ ಉಳಿತಾಯದ 20 ಸಹಸ್ರ ರೂಪಾಯಿಗಳನ್ನು ಲಿಂಗದಹಳ್ಳಿಯ ಸುಜಲಶ್ರೀ ಲಕ್ಷ್ಮೀ ಸ್ವ-ಸಹಾಯ ಸಂಘದ ಹೆಸರಿನಲ್ಲಿ ನೀಡಿದರು. ಸಂಪೂರ್ಣ ಕಾಮಗಾರಿ ಮುಕ್ತಾಯವಾಗಿದ್ದು ಈ ಮೇ ಬಿಸಿಲಿನಲ್ಲಿಯೂ ಕೆರೆಗೆ ನೀರು ಹರಿದು ಬಂದು ತುಂಬುತ್ತಿರುವುದು ವಿಸ್ಮಯ ಉಂಟು ಮಾಡುವಂತಿದೆ. ಊರಿನ ಯುವಕರು ಮದುವೆ ಮನೆಯ ಸಿದ್ಧತೆ ನಡೆಸಿದಂತೆ ಕೆರೆ ಹಬ್ಬದ ಕೆಲಸದಲ್ಲಿದ್ದಾರೆ. ಸುತ್ತಮುತ್ತಲ ಗ್ರಾಮದವರು, ಕೆರೆಗೆ ಹೂಳು ತೆಗೆಯಲು ಹಣಕಾಸಿನ ನೆರವಿತ್ತವರಿಗೆ ಕರೆಯಿತ್ತು ಊಟ ಮಾಡಿ ಹೋಗಿ ಎಂದು ಆಹ್ವಾನಿಸುತ್ತಿದ್ದಾರೆ. ತಂಡದ ರೂವಾರಿ ಸ್ವಾನ್‌ ಆ್ಯಂಡ್‌ ಮ್ಯಾನ್‌ ಸಂಸ್ಥೆಯ ಅಖೀಲೇಶ್‌ ಚಿಪ್ಳಿ, ಹಾಪ್‌ಕಾಮ್ಸ್‌ ಉಪಾಧ್ಯಕ್ಷ ಎಲ್.ವಿ. ಸತೀಶ್‌, ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್‌ ಗೋಳಿಕೊಪ್ಪ, ಗ್ರಾಪಂ ಮಾಜಿ ಸದಸ್ಯ ಸುರೇಶ್‌ ಗೌಡ, ದಿನೇಶ್‌ ಎಲ್.ಟಿ., ಎಲ್.ವಿ. ಅಶೋಕ್‌ ಮೊದಲಾದವರ ತಂಡ ಉತ್ಸಾಹದಲ್ಲಿದ್ದು, ಮಲೆನಾಡಿನ ಹಳ್ಳಿಗಳಲ್ಲಿ ಬೋರ್‌ವೆಲ್ಗಳ ವ್ಯಾಮೋಹಕ್ಕೆ ಸಿಲುಕಿರುವವರ ಮಧ್ಯೆ ಭಿನ್ನರಾಗಿ ಕಾಣಿಸುತ್ತಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next