Advertisement

ತಾಪಂ ಅಧ್ಯಕ್ಷ- ವೈದ್ಯಾಧಿಕಾರಿ ನಡುವೆ ಚಕಮಕಿ

01:33 PM Jul 17, 2019 | Naveen |

ಸಾಗರ: ಉಪ ವಿಭಾಗೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಪ್ರಕಾಶ್‌ ಬೋಸ್ಲೆ ಕೆ.ಆರ್‌. ಅವರ ಕಚೇರಿಗೆ ಸೋಮವಾರ ಹೋಗಿದ್ದ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರು ಅವಹೇಳನಕಾರಿಯಾಗಿ ಮಾತನಾಡಿ, ಹಲ್ಲೆಗೆ ಯತ್ನಿಸಿದ ಘಟನೆಗೆ ಸಂಬಂಧಪಟ್ಟಂತೆ ಉಪ ವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಹಾಯಕ ಆಯುಕ್ತ ದರ್ಶನ್‌ ಎಚ್.ವಿ. ಅವರು ರಾಜಿ ಸಂಧಾನ ಸಭೆ ನಡೆಸಿ, ಪರಸ್ಪರರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದು ಸಮಾಧಾನ ಸೂಚಿಸಿದ ಘಟನೆ ಮಂಗಳವಾರ ನಡೆದಿದೆ. ಸಭೆಯ ಒಂದು ಹಂತದಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಉಪ ವಿಭಾಗಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

Advertisement

ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ವಿಷಯ ಪ್ರಸ್ತಾಪಿಸಿ, ಸರ್ಕಾರಿ ಆದೇಶವಿದೆ ಎಂದು ಉಪ ವಿಭಾಗೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಪ್ರಕಾಶ್‌ ಬೋಸ್ಲೆ 13 ಗುತ್ತಿಗೆ ನೌಕರರನ್ನು ಏಕಾಏಕಿ ಕೆಲಸದಿಂದ ವಜಾ ಮಾಡಿದ್ದಾರೆ. ನೌಕರರ ಕುಟುಂಬ ಬೀದಿಗೆ ಬಂದಿದೆ. ಈ ಸಂಬಂಧ ಬೋಸ್ಲೆ ಅವರ ಬಳಿ ವಿಚಾರಿಸಲು ಹೋದಾಗ ಅವರು ಜನಪ್ರತಿನಿಧಿ ಎನ್ನುವುದನ್ನು ಪರಿಗಣಿಸದೆ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ದೂರಿದರು.

ಅವರು ಆಸ್ಪತ್ರೆಯಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುವವರ ಹತ್ತಿರ ತಮ್ಮ ತೋಟದ ಕೆಲಸ, ಮನೆಯಲ್ಲಿ ಬಟ್ಟೆ ಒಗೆಯುವ ಕೆಲಸ ಮಾಡಿಸಿಕೊಂಡಿದ್ದಾರೆ. ಒಳ ಉಡುಪುಗಳನ್ನು ಸಹ ಒಗೆಸಿಕೊಂಡಿದ್ದಾರೆ ಎಂದು ನೌಕರರು ದೂರಿದ್ದಾರೆ. ಗುತ್ತಿಗೆ ನೌಕರರಿಂದ ಇಂತಹ ಕೆಲಸ ಮಾಡಿಸಿಕೊಳ್ಳಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದೇನೆ. ನಾವು ಹೊಡೆದಾಟದ ಮೂಲಕ ರಾಜಕಾರಣಕ್ಕೆ ಬಂದವರಲ್ಲ. ಹೋರಾಟದ ಮೂಲಕ ಜನಪರ ಕೆಲಸ ಮಾಡಿಕೊಂಡು ಬಂದಿದ್ದೇವೆ. ನೌಕರರ ಸಮಸ್ಯೆ ಕೇಳಲು ಹೋದಾಗ ಅಗೌರವ ತೋರಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ತಾಪಂ ಸದಸ್ಯ ಅಶೋಕ ಬರದವಳ್ಳಿ ಇದನ್ನು ಬೆಂಬಲಿಸಿ, ಕೆಲವು ತಿಂಗಳುಗಳ ಹಿಂದೆ 17 ವರ್ಷದ ಯುವಕನೊಬ್ಬನಿಗೆ ಹಾವು ಕಚ್ಚಿದಾಗ ಆಸ್ಪತ್ರೆಯಲ್ಲಿ ಸೂಕ್ತ ಔಷಧ ಇದ್ದರೂ ಡಾ| ಜಯಲಕ್ಷ್ಮಿ ಎಂಬುವವರು ಹೊರಗೆ ಔಷಧ ತರಲು ಚೀಟಿ ಬರೆದು ಕೊಟ್ಟಿದ್ದರು. ಸುಮಾರು ಒಂದೂವರೆ ಗಂಟೆ ಹುಡುಕಿದರೂ ಔಷದಿ ಸಿಗಲಿಲ್ಲ. ನಂತರ ವೈದ್ಯರು ರೋಗಿಯನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದರು. ಹಾವು ಕಚ್ಚಿದ ಯುವಕನನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಯುವಕನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು, ಗ್ರಾಮಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ಮಾಡಿದಾಗ ಬೋಸ್ಲೆ ನನ್ನ ವಿರುದ್ಧ ಪೊಲೀಸ್‌ ದೂರು ನೀಡಿದ್ದರು. ಕಾನೂನಿನ ಅಸ್ತ್ರವನ್ನು ಇರಿಸಿಕೊಂಡು ನಮ್ಮಂತಹ ಜನಪ್ರತಿನಿಧಿಗಳನ್ನು ಬೆದರಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಪ್ರಾಮಾಣಿಕ ವೈದ್ಯರು ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಭೋಸ್ಲೆ ಅವಕಾಶ ಕೊಡುತ್ತಿಲ್ಲ, ನೌಕರರನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಳ್ಳುತ್ತಿರುವುದು, ರೋಗಿಗಳ ಪೋಷಕರ ಮೇಲೆ ದಬ್ಟಾಳಿಕೆ ನಡೆಸುವುದು ಸೇರಿದಂತೆ ಹಲವು ಆರೋಪಗಳು ಕೇಳಿಬಂದಿತು.

Advertisement

ಇದಕ್ಕೆ ಸ್ಪಷ್ಟನೆ ನೀಡಿದ ಡಾ| ಪ್ರಕಾಶ್‌ ಬೋಸ್ಲೆ ಕೆ.ಆರ್‌., ತಾಪಂ ಅಧ್ಯಕ್ಷರಿಗೆ ನಾನು ಅಗೌರವ ತೋರಿಸಿಲ್ಲ. ಸರ್ಕಾರಿ ಸುತ್ತೋಲೆಯಂತೆ ಹೆಚ್ಚುವರಿಯಾಗಿರುವ 13 ಗುತ್ತಿಗೆ ನೌಕರರನ್ನು ತೆಗೆದು ಹಾಕಲಾಗಿದೆ. ಇದರಲ್ಲಿ ನನ್ನ ಯಾವುದೇ ತಪ್ಪು ಇರಲಿಲ್ಲ. ಆದರೆ ಅಧ್ಯಕ್ಷರು ನನ್ನ ಕಚೇರಿಗೆ ಬಂದು ನನಗೆ ಅವಹೇಳನಕಾರಿಯಾಗಿ ಮಾತನಾಡುವ ಜೊತೆಗೆ ನನ್ನ ಮೇಲೆ ಹಲ್ಲೆಗೆ ಪ್ರಯತ್ನ ನಡೆಸಿದ್ದಾರೆ. ಇಂತಹ ವಾತಾವರಣದಲ್ಲಿ ನಾವು ನಿರ್ಭೀತಿಯಿಂದ ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

ಎಸಿ ದರ್ಶನ್‌ ಎಚ್.ವಿ., ವೈದ್ಯರು ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣವಿರಬೇಕು. ವೈದ್ಯರು ಕರ್ತವ್ಯ ಪಾಲನೆಯಲ್ಲಿ ಲೋಪ ಎಸಗಿದ್ದರೆ ನನ್ನ ಗಮನಕ್ಕೆ ತನ್ನಿ. ದೂರನ್ನು ಸಮಗ್ರವಾಗಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಸಕ್ಷಮ ಪ್ರಾಧಿಕಾರದ ಎದುರು ನೀವು ದೂರು ನೀಡದೆ ಏಕಾಏಕಿ ವೈದ್ಯರನ್ನು ಬೈಯುವುದು, ಹಲ್ಲೆಗೆ ಮುಂದಾಗುವ ಪ್ರಯತ್ನ ಮಾಡಬೇಡಿ. ಗುತ್ತಿಗೆ ನೌಕರರನ್ನು ತೆಗೆದು ಹಾಕಿರುವುದಕ್ಕೆ ಸಂಬಂಧಪಟ್ಟಂತೆ ಆರೋಗ್ಯ ರಕ್ಷಾ ಸಮಿತಿಯಲ್ಲಿ ವಿಷಯ ಚರ್ಚೆ ಮಾಡಲಾಗುತ್ತದೆ. ಗುತ್ತಿಗೆ ನೌಕರರನ್ನು ತೆಗೆದು ಹಾಕುವ ಮೊದಲು ಅವರಿಗೆ ನೊಟೀಸ್‌ ಕಡ್ಡಾಯವಾಗಿ ನೀಡಬೇಕು. ಆರೋಗ್ಯ ರಕ್ಷಾ ಸಮಿತಿ ಸಭೆ ಸೇರಿ ತೀರ್ಮಾನ ಕೈಗೊಳ್ಳುವವರೆಗೂ ಸಂಬಂಧಪಟ್ಟ ಗುತ್ತಿಗೆದಾರ ನೌಕರರಿಗೆ ಸಂಬಳ ಪಾವತಿ ಮಾಡಬೇಕು. ವೈದ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುವವರ ಬೆಂಬಲಕ್ಕೂ ಸಹ ಜನಪ್ರತಿನಿಧಿಗಳು ನಿಲ್ಲಬಾರದು ಎಂದು ಹೇಳಿದರು.

ಪ್ರಸ್ತುತ ವೈದ್ಯರ ಕೊರತೆ ಇದೆ. ಇರುವ ವೈದ್ಯರನ್ನು ಕಳೆದುಕೊಂಡರೆ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ವೆಚ್ಚ ಪಾವತಿ ಮಾಡಿ ಚಿಕಿತ್ಸೆ ಪಡೆಯುವ ಸ್ಥಿತಿ ಉಂಟಾಗುತ್ತದೆ. ಇದಕ್ಕೆ ನಾವೆಲ್ಲ ಹೊಣೆಗಾರರು ಆಗಬೇಕಾಗುತ್ತದೆ. ಇಂತಹ ಘಟನೆಗಳಿಂದ ವೈದ್ಯರು ಕೆಲಸ ಬಿಟ್ಟು ಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ. ಎಲ್ಲರೂ ಸಣ್ಣಪುಟ್ಟ ಲೋಪಗಳಾದಾಗ ಕುಳಿತು ಚರ್ಚೆ ನಡೆಸಿ, ಸೌಹಾರ್ದಯುತವಾಗಿ ಹೋಗೋಣ ಎಂದು ತಿಳಿಸಿದರು.

ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಮ.ಸ. ನಂಜುಂಡಸ್ವಾಮಿ, ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ| ಗುಡದಪ್ಪ ಕಸವಿ, ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಮಂಜುನಾಥಸ್ವಾಮಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next