Advertisement

ರಾಜಕಾರಣಿಗಳಿಗೆ ಸಾಮಾಜಿಕ ಇಚ್ಛಾಶಕ್ತಿ ಅಗತ್ಯ: ಹರ್ಷ

05:29 PM Sep 01, 2019 | Naveen |

ಸಾಗರ: ರಾಜಕಾರಣಿಗಳಿಗೆ ಸಾಮಾಜಿಕ ಇಚ್ಛಾಶಕ್ತಿ ಇರಬೇಕು. ಇಂತಹ ಇಚ್ಛಾಶಕ್ತಿಯನ್ನು ತಮ್ಮ ಅಧಿಕಾರಾವಧಿಯಲ್ಲಿ ಅಕ್ಷರಶಃ ತೋರಿಸಿಕೊಟ್ಟವರು ದೇವರಾಜ ಅರಸು ಎಂದು ಬರಹಗಾರ ಹರ್ಷಕುಮಾರ್‌ ಕುಗ್ವೆ ತಿಳಿಸಿದರು.

Advertisement

ನಗರದ ಜಂಬಗಾರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ಕರ್ನಾಟಕ ಮುನ್ನಡೆ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ‘ಅರಸು ನೆನಪು’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಇಂದು ಮಾಹಿತಿ ಗುಡ್ಡೆಗಟ್ಟಲೆ ಸಿಗುತ್ತಿದೆ. ಆದರೆ ಜ್ಞಾನ ಸಿಗುತ್ತಿಲ್ಲ. ಆಧುನಿಕ ಸಾಮಾಜಿಕ ಜಾಲತಾಣಗಳು ಅರಸುರಂತಹ ಸಾಮಾಜಿಕ ಹರಿಕಾರರನ್ನು ವಿದ್ಯಾರ್ಥಿ ಯುವಜನರಿಗೆ ತಲುಪಿಸುವಲ್ಲಿ ವಿಫಲವಾಗಿವೆ. ನಮ್ಮ ದೇಶದಲ್ಲಿ ಮೀಸಲಾತಿ ಎರಡು ರೀತಿಯಲ್ಲಿದೆ. ಸಂವಿಧಾನಬದ್ಧವಾಗಿ ಮತ್ತು ಕಳೆದ 2 ಸಾವಿರ ವರ್ಷಗಳಿಂದ ಜಾರಿಯಲ್ಲಿರುವ ಮನುಸ್ಮೃತಿ ಮೂಲಕ ಕೆಲವು ಸಮುದಾಯಕ್ಕೆ ನೀಡಿದ ಮೀಸಲಾತಿ. ತಾರತಮ್ಯವನ್ನು ಹುಟ್ಟುಹಾಕುವಂತಹ ಮೀಸಲಾತಿಯನ್ನು ಮನುಸ್ಮೃತಿ ಮೀಸಲಾತಿ ಪ್ರತಿಪಾದಿಸಿತು. ಅಸಮಾನತೆಯ ಮೀಸಲಾತಿಯ ವಿರುದ್ಧವಾಗಿ ನಮ್ಮ ರಕ್ಷಣೆಗೆ ಬಂದದ್ದು ಅಂಬೇಡ್ಕರ್‌ ರಚಿಸಿದ ಭಾರತದ ಸಂವಿಧಾನ ಎಂದರು.

ಮಹಿಳೆಯರಿಗಾಗಿ, ಅಸ್ಪೃಶ್ಯ ವರ್ಗಗಳಿಗೆ ರಕ್ಷಣೆ ಕೊಡಲು ಸಂವಿಧಾನದ ಅನುಚ್ಛೇದ 15/4 ಮೂಲಕ ಅವಕಾಶ ಕಲ್ಪಿಸಿದೆ. ಸಂವಿಧಾನದ ಆಶಯವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದವರು ಅರಸು. ಮೀಸಲಾತಿಯ ಮೂಲ ಉದ್ದೇಶ ಎಲ್ಲ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವುದೇ ಆಗಿದೆ. ಜನಸಂಖ್ಯೆ ಆಧಾರದ ಮೀಸಲಾತಿಗಿಂತ ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದವರನ್ನು ಗಮನದಲ್ಲಿ ಇರಿಸಿಕೊಂಡು ಮೀಸಲಾತಿ ನೀಡಬೇಕು ಎಂದು ವಾದಿಸಿದ್ದ ಅರಸು ಅವರು 1972ರ ತಮ್ಮ ಅಧಿಕಾರಾವಧಿಯಲ್ಲಿ ಹಾವನೂರು ಆಯೋಗ ನೇಮಕ ಮಾಡಿದ್ದರು ಎಂದು ತಿಳಿಸಿದರು.

ಹಾವನೂರು ಆಯೋಗದ ಆಶಯದಂತೆ ಹಿಂದುಳಿದ ವರ್ಗಗಳ ಏಳಿಗೆಗಾಗಿ ಮೀಸಲಾತಿ ಜಾರಿಗೆ ತಂದು ಅವರ ಬದುಕಿನಲ್ಲಿ ಬೆಳಕಾದರು. ಮಂಡಲ್ ವರ್ಷದ ವರದಿ ಜಾರಿಗಾಗಿ ಹೋರಾಟ ಮಾಡಿದ್ದು ದಲಿತ ಸಂಘಟನೆಗಳು. ಮಂಡಲ್ ವರದಿ ಜಾರಿಗೆ ಬಂದರೆ ಹಿಂದುಳಿದ ವರ್ಗಗಳಿಗೆ ಉಪಯೋಗ ಎಂಬುದನ್ನು ಅರಿಯದ ಹಿಂದುಳಿದ ವರ್ಗ ಅದರ ವಿರುದ್ದ ಹೋರಾಟ ಮಾಡುವಂತೆ ಹುನ್ನಾರ ಈ ದೇಶದಲ್ಲಿ ನಡೆಯಿತು. ಸಂವಿಧಾನದ ಎದುರು ಮನುಸ್ಮೃತಿಯನ್ನು ತರುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ವಿದ್ಯಾರ್ಥಿ ಯುವಜನರು ಜಾಗೃತವಾಗಿರಬೇಕು ಎಂದು ಹೇಳಿದರು.

Advertisement

ಕಾರ್ಯಕ್ರಮವನ್ನು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ ಉದ್ಘಾಟಿಸಿದರು. ಲೇಖಕಿ ವೃಂದಾ ಹೆಗಡೆ ಪ್ರತಿಸ್ಪಂದನೆ ನೀಡಿದರು. ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ, ಶಿವಾನಂದ ಕುಗ್ವೆ, ರತ್ನಾಕರ ಸಿ. ಕಾನುಗೋಡು, ಬಿ.ಸಿ.ಎಂ. ವಿಸ್ತರಣಾಧಿಕಾರಿ ಸಿ.ಲಕ್ಷ್ಮೀನಾರಾಯಣ್‌, ಆರ್‌. ನಾರಾಯಣ್‌ ಮಂಡಗಳಲೆ ಇದ್ದರು. ಭೂಮಿಕಾ ಪ್ರಾರ್ಥಿಸಿದರು. ಲಕ್ಷ್ಮೀನಾರಾಯಣ ಸ್ವಾಗತಿಸಿದರು. ಪರಮೇಶ್ವರ ಕೆ. ಆಲಳ್ಳಿ ವಂದಿಸಿದರು. ಶಂಕರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next