Advertisement

ಅಭಿವೃದ್ಧಿಯ ವೇಗ; ವರದಪುರಕ್ಕೆ 2 ಬಸ್‌ಸ್ಟ್ಯಾಂಡ್‌!

01:25 PM May 02, 2019 | Naveen |

ಸಾಗರ: ಮರಸ, ಜಂಬಾನೆ ಮೊದಲಾದ ತಾಲೂಕಿನ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಬಸ್‌ ನಿಲ್ದಾಣಗಳಲ್ಲದೆ ಅಥವಾ ಇರುವ ಬಸ್‌ ಸ್ಟ್ಯಾಂಡ್‌ಗಳು ಸುಸ್ಥಿತಿಯಲ್ಲಿಲ್ಲದೆ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದರೆ ಶ್ರೀಧರ ಸ್ವಾಮಿಗಳು ನೆಲೆಸಿದಂತಹ ವರದಪುರದಲ್ಲಿ ಇರುವ ಬಸ್‌ ನಿಲ್ದಾಣ ಗಟ್ಟಿಮುಟ್ಟಾಗಿದ್ದಾಗಲೇ ಇನ್ನೊಂದು ಬಸ್‌ ನಿಲ್ದಾಣ ಲೋಕಸಭಾ ಸದಸ್ಯರ ಸಂಸದ ನಿಧಿಯಲ್ಲಿ ನಿರ್ಮಾಣವಾಗಿರುವುದು ಹಲವರ ಹುಬ್ಬೇರಿಸುವಂತೆ ಮಾಡಿದೆ.

Advertisement

ಸಮೃದ್ಧಿಯ ವರದಪುರ!
ಬಳಕೆಯಲ್ಲಿರುವ ಹಂಚಿನ ಮಾಡಿನ ಬಸ್‌ ನಿಲ್ದಾಣ ಇರುವಾಗಲೇ ನಿರ್ಮಾಣಗೊಂಡಿರುವ ಇನ್ನೊಂದು ಬಸ್‌ ನಿಲ್ದಾಣ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ.

2007-08ರ ಸಾಲಿನ ಶಾಸಕರ ಅನುದಾನದಲ್ಲಿ ಅಂದಿನ ಶಾಸಕ ಗೋಪಾಲಕೃಷ್ಣ ಬೇಳೂರು ವರದಪುರದ ಸ್ವಾಗತ ಕಮಾನಿನ ಪಕ್ಕದಲ್ಲಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದರು. ಒಂದು ಲಕ್ಷ ರೂ. ಅನುದಾನದಲ್ಲಿ ಇಲ್ಲಿನ ಉಮಾಮಹೇಶ್ವರ ದೇಗುಲದ ಕಾಂಪೌಂಡ್‌ಗೆ ಅಂಟಿಕೊಂಡಂತೆ ಬಸ್‌ ನಿಲ್ದಾಣ ನಿರ್ಮಾಣವಾಗಿತ್ತು. ಸಿಮೆಂಟ್ ಕಟ್ಟೆ, ಹಂಚಿನ ಹೊದಿಕೆಯ ಮಾಡು ಹೊಂದಿರುವ ಈ ನಿಲ್ದಾಣ ಇಂದಿಗೂ ಸುಸ್ಥಿತಿಯಲ್ಲಿದೆ. ಇದ್ದಕ್ಕಿದ್ದಂತೆ ಇದರ ಪಕ್ಕದಲ್ಲಿ ಈ ವರ್ಷ ಶಿವಮೊಗ್ಗದ ನಿರ್ಮಿತಿ ಕೇಂದ್ರ ಸಂಸತ್‌ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮತ್ತೂಂದು ಬಸ್‌ ನಿಲ್ದಾಣ ನಿರ್ಮಾಣವಾಗಿದೆ. 2017-18ನೇ ಸಾಲಿನ ಸಂಸದರ ನಿಧಿಯಡಿ ಶಿವಮೊಗ್ಗ ಕ್ಷೇತ್ರದ ಎಂಪಿ ಯಡಿಯೂರಪ್ಪ ಪಾಲಿನ ಮೂರು ಲಕ್ಷ ರೂ. ಬಳಸಿ ಈ ನಿಲ್ದಾಣ ನಿರ್ಮಿಸಲಾಗಿದೆ.

ತಾಲೂಕಿನ ಗಾಳಿಪುರ, ಅಂಬುಗಳಲೆ, ಕೌತಿ, ಮರಸ, ಜಂಬಾನಿ ಮೊದಲಾದೆಡೆ ಬಸ್‌ ನಿಲ್ದಾಣ ಇಲ್ಲದೆ ಅಥವಾ ಇರುವ ಬಸ್‌ ನಿಲ್ದಾಣ ಬಳಕೆಗೆ ಯೋಗ್ಯವಿಲ್ಲದೆ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅಂಬುಗಳಲೆಯ ಬಸ್‌ ನಿಲ್ದಾಣದಲ್ಲಿ ಪಕಾಶಿಯೇ ತುಂಡಾಗಿ ಬಿದ್ದು ಕುಳಿತುಕೊಳ್ಳುವುದೇ ಅಪಾಯ ಎನ್ನುವಂತಿದೆ. ಸಾಗರದ ರಾಮನಗರದಲ್ಲಿ ಎರಡು ವರ್ಷಗಳ ಹಿಂದೆ ತಂಗುದಾಣ ಬಿದ್ದ ನಂತರ ಮತ್ತೂಂದು ಬಸ್‌ ನಿಲ್ದಾಣ ನಿರ್ಮಾಣವಾಗಿಲ್ಲ. ಒಂದು ಬಸ್‌ ಓಡಾಡುವ ಗ್ರಾಮೀಣ ಭಾಗದಲ್ಲೂ ಬಸ್‌ ನಿಲ್ದಾಣ ಹೆಚ್ಚು ಅವಶ್ಯಕ. ಈ ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ಬಸ್‌ ನಿಲ್ದಾಣದ ಆಶ್ರಯದಲ್ಲಿ ಬಸ್‌ಗಾಗಿ ಕಾಯುವುದು ಅನಿವಾರ್ಯವಾಗುತ್ತದೆ. ಆದರೆ ಒಂದು ಬಸ್‌ ನಿಲ್ದಾಣ ಇರುವಲ್ಲಿಯೇ ಇನ್ನೊಂದು ಬಸ್‌ ನಿಲ್ದಾಣ ನಿರ್ಮಾಣ ತೀರಾ ಅನಗತ್ಯವಾದುದು ಎಂಬ ವಾದ ಕೇಳಿಬಂದಿದೆ. ಅಂತಹ ಸÊಮೃದ್ಧಿಯ ವರವನ್ನು ವರದಪುರ ಪಡೆದಿರುವುದರಲ್ಲಿ ರಾಜಕೀಯದ ಸೋಂಕು ಕೂಡ ಇದೆ ಎಂದೂ ಕೆಲವರು ವಿಶ್ಲೇಷಿಸುತ್ತಾರೆ.

ಪುಕ್ಕಟೆ ಪ್ರಚಾರ!
ಗ್ರಾಪಂ ಅನುದಾನದಲ್ಲಿ ಕೂಡ ಬಸ್‌ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಸಾಧ್ಯತೆ ಇದೆಯಾದರೂ, ಬಹುತೇಕ ಗ್ರಾಪಂಗಳು ಈ ರೀತಿಯ ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ಬೇರೆ ಬೇರೆ ಮನೆ ನಿರ್ಮಾಣಕ್ಕೆ ಆದ್ಯತೆ ನೀಡುತ್ತವೆ. ಇದೇ ವೇಳೆ ಶಾಸಕ ನಿಧಿ ಅಥವಾ ಸಂಸದರ ನಿಧಿ ಬಳಸಿ ಬಸ್‌ ನಿಲ್ದಾಣ ನಿರ್ಮಿಸಿಕೊಡಲು ಜನಪ್ರತಿನಿಧಿಗಳು ಕೂಡ ಉತ್ಸುಕರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಜನರಿಂದ ನೇರ ಮನವಿ ಪಡೆಯುವ ಜನಪ್ರತಿನಿಧಿಗಳು ತಮಗಿರುವ ಅವಕಾಶ ಬಳಸಿಕೊಂಡು ಶಿಫಾರಸು ಮಾಡುತ್ತಾರೆ. ಬಸ್‌ ನಿಲ್ದಾಣದಲ್ಲಿ ತಮ್ಮ ಅನುದಾನದಿಂದ ನಿರ್ಮಿಸಿರುವ ಕುರಿತು ದೊಡ್ಡ ಫಲಕ ಅಳವಡಿಸುವ ಮೂಲಕ ಪುಕ್ಕಟೆ ಪ್ರಚಾರ ಪಡೆಯುವ ಕೆಲಸವನ್ನೂ ಅವರು ಮಾಡುತ್ತಾರೆ.

Advertisement

ಅದರಲ್ಲೂ ರಾಜಕೀಯವಿದೆ!
ಬಸ್‌ ನಿಲ್ದಾಣಗಳ ನಿರ್ಮಾಣ ಎಂಬುದು ಕೇವಲ ಅಗತ್ಯಗಳನ್ನು ಪೂರೈಸುವ ಕೆಲಸವಲ್ಲ. ಓರ್ವ ಜನಪ್ರತಿನಿಧಿ ತನಗೆ ಹೆಚ್ಚು ಮತ ಕೊಟ್ಟಂತಹ ಸ್ಥಳಗಳ ಮತದಾರರನ್ನು ಓಲೈಸಲು ಈ ರೀತಿ ಬಸ್‌ ನಿಲ್ದಾಣಗಳ ನಿರ್ಮಾಣ ಮಾಡುತ್ತಾರೆ. ಈ ರೀತಿ ಬಸ್‌ ನಿಲ್ದಾಣ ಇದ್ದಲ್ಲೇ ಮತ್ತೂಂದು ಬಸ್‌ಸ್ಟ್ಯಾಂಡ್‌ ಕಟ್ಟುವ ಪರಂಪರೆ ಸಾಗರ ತಾಲೂಕಿನಲ್ಲಿ ಹೊಸದೇನೂ ಅಲ್ಲ. ತಾಲೂಕಿನ ಕಲ್ಮನೆ ಗ್ರಾಪಂ ವ್ಯಾಪ್ತಿಯ ಚಿಪ್ಳಿ ಲಿಂಗದಹಳ್ಳಿಯ ಸಾಗರ ವರದಾಮೂಲ ರಸ್ತೆ ಪಕ್ಕದ ಚಿಪ್ಳಿ ಕೆರೆಯ ದಡದಲ್ಲಿ ಆರು ವರ್ಷಗಳ ಹಿಂದೆ ನಿರ್ಮಿಸಲಾದ ಬಸ್‌ ಪ್ರಯಾಣಿಕರ ತಂಗುನಿಲ್ದಾಣದ ಪಕ್ಕದಲ್ಲಿ 2015ರಲ್ಲಿ ಅಂದಿನ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್‌ ಇನ್ನೊಂದು ತಂಗುದಾಣವನ್ನು ತಮ್ಮ ಸಂಸದ ನಿಧಿಯಿಂದ ಮಂಜೂರು ಮಾಡಿ ಕಟ್ಟಿಸಿದ್ದನ್ನೂ ಈ ಹಿಂದೆ ಕಂಡಿದ್ದೇವೆ ಎಂದು ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್‌ ಗಮನ ಸೆಳೆಯುತ್ತಾರೆ. ಶಾಸಕ ನಿಧಿ ಅಥವಾ ಸಂಸದ ನಿಧಿಯಲ್ಲಿ ಬಸ್‌ ನಿಲ್ದಾಣಗಳ ನಿರ್ಮಾಣದಲ್ಲಿ ಜನಪ್ರತಿನಿಧಿಗಳು ಶಿಫಾರಸು ಮಾಡುವ ಅಧಿಕಾರವನ್ನು ಮಾತ್ರ ಹೊಂದಿರುತ್ತಾರೆ. ಈ ಶಿಫಾರಸಿನ ಆಧಾರದಲ್ಲಿ ಅಗತ್ಯ, ಅರ್ಹತೆಯನ್ನು ಆಧರಿಸಿ ಕಾಮಗಾರಿ ಮಂಜೂರಿಗೆ ಅಧಿಕಾರಿಗಳು ಮುಂದಾಗಬೇಕು. ವರದಪುರದ ಪ್ರಕರಣದಲ್ಲಿ ಒಂದರ ಪಕ್ಕದಲ್ಲಿ ಮತ್ತೂಂದು ಬಸ್‌ ನಿಲ್ದಾಣ ನಿರ್ಮಾಣ ಸ್ಪಷ್ಟವಾಗಿ ಸಾರ್ವಜನಿಕ ಹಣದ ದುರುಪಯೋಗ ಕಂಡುಬರುತ್ತದೆ. ಸಂಸದರ ನಿಧಿ ಜಿಲ್ಲಾಧಿಕಾರಿಗಳ ಖಜಾನೆಗೆ ಬರುತ್ತದೆ. ಅವರು ಕಾಮಗಾರಿಗೆ ಹಣ ಬಿಡುಗಡೆ ಮಾಡುತ್ತಾರೆ. ಈ ಪ್ರಕರಣದಲ್ಲಿ ಸರ್ಕಾರದ ಹಣ ಲೂಟಿಯಾಗಲು ಕಾರಣರಾದವರನ್ನು ಶಿಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next