Advertisement

ಗೋವಾ ಇಫಿ ಸಿನಿಮೋತ್ಸವದಲ್ಲಿ ಕನ್ನಡದ “ಡೊಳ್ಳು ಚಿತ್ರ”;ನಗರೀಕರಣ ಇಡೀ ಜಗತ್ತಿನ ಸಮಸ್ಯೆ

10:15 AM Nov 24, 2021 | Team Udayavani |

ಪಣಜಿ:ನಗರೀಕರಣ ನಮ್ಮನ್ನು ನಮ್ಮ ಬೇರುಗಳಿಂದ ಬೇರ್ಪಡಿಸುತ್ತಿದೆ ಎನ್ನುತ್ತಾರೆ ಸಾಗರ್ ಪುರಾಣಿಕ್ ಬದುಕಿನ ಜೀವನಮಟ್ಟ ಸುಧಾರಣೆಯ ಶೋಧನೆಯಲ್ಲಿ ನಮ್ಮ ಪ್ರದಾಯಗಳನ್ನು,ಬೇರುಗಳನ್ನು ಮರೆಯುತ್ತಿದ್ದೇವೆ ಎಂಬುದು ಚಲನಚಿತ್ರ ನಿರ್ದೇಶಕ ಸಾಗರ್ ಪುರಾಣಿಕ್ ಅಭಿಪ್ರಾಯ.

Advertisement

ಅವರ ನಿರ್ದೇಶನದ ‘ಡೊಳ್ಳು’ ಚಲನಚಿತ್ರ ಭಾರತೀಯ ಅಂತಾರಾಷ್ಟ್ರೀಯ ಸಿನಿಮೋತ್ಸವ (ಇಫಿ) ದಲ್ಲಿಚೊಚ್ಚಲ ನಿರ್ದೇಶನದ ವಿಭಾಗದಲ್ಲಿ ಪ್ರಶಸ್ತಿಗಾಗಿ ಸ್ಪರ್ಧಿಸುತ್ತಿದೆ. ಇದರೊಂದಿಗೆ ಈ ವರ್ಷ ಭಾರತೀಯ ಪನೋರಮಾ ವಿಭಾಗದಲ್ಲಿ ಆಯ್ಕೆಗೊಂಡ ನಾಲ್ಕು ಕನ್ನಡ ಚಲನಚಿತ್ರಗಳಲ್ಲಿ ಇದೂ ಒಂದಾಗಿದೆ.

ಮಾಧ್ಯಮಗೋಷ್ಠಿಯಲ್ಲಿ ತಮ್ಮ ಚಿತ್ರದ ಕುರಿತು ವಿವರಿಸಿದ ಸಾಗರ್, ‘ನನ್ನ ಚಿತ್ರದ ಮೂಲಕ ನಗರಗಳ ಅಭಿವೃದ್ಧಿ, ನಗರೀಕರಣ ಹೇಗೆ ನಮ್ಮ ಜಾನಪದ ಕಲೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ಹೇಳಲು ಪ್ರಯತ್ನಿಸಿದ್ದೇನೆ. ನಗರೀಕರಣ ಇಡೀ ಜಗತ್ತಿನ ಸಮಸ್ಯೆ. ಅದು ಕರ್ನಾಟಕವನ್ನೂ ಬಿಟ್ಟಿಲ್ಲ. ಅತ್ಯುತ್ತಮ ಬದುಕಿನ ನಿರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ನಿರಂತರವಾಗಿ ನಡೆಯುತ್ತಿದೆ. ಇದು ಕೆಟ್ಟದು ಎಂದು ಹೇಳಲಾರೆ. ಸಂದರ್ಭದ ಅನಿವಾರ್ಯತೆ ಇರಬಹುದು. ಆದರೆ ಈ ಪ್ರಕ್ರಿಯೆಯಲ್ಲಿ ನಾವು ನಮ್ಮ ಬೇರುಗಳನ್ನು ಮರೆಯಬಾರದು ಎಂಬುದಷ್ಟೇ ನನ್ನ ಆಗ್ರಹ’ಎಂದರು ಸಾಗರ್.

‘ನನ್ನ ದೃಷ್ಟಿಯಲ್ಲಿ ಒಂದು ಕಲೆ ನೋಡ ನೋಡುತ್ತಿದ್ದಂತೆ ನಾಶವಾಗದು. ಯಾಕೆಂದರೆ, ಸಾವಿರಾರು ಮಂದಿ ಅದನ್ನು ಉಳಿಸುವತ್ತ, ಸಂರಕ್ಷಿಸುವತ್ತ, ಬೆಳೆಸುವತ್ತ ಪ್ರಯತ್ನಿಸುತ್ತಿರುತ್ತಾರೆ. ಯುವಜನರು ಹೆಚ್ಚು ಅದರೊಳಗೆ ತೊಡಗಿಸಿಕೊಳ್ಳದ ಕಾರಣ ಜನಪ್ರಿಯತೆ ಕೊಂಚ ಕಡಿಮೆಯಾಗಬಹುದಷ್ಟೇ’ ಎಂಬುದು ಅವರ ಅಭಿಪ್ರಾಯ.

Advertisement

ನನ್ನ ಈ ಸಿನಿಮಾದೊಂದಿಗೆ ಹೇಳಲು ಇಚ್ಛಿಸಿರುವ ಮತ್ತೊಂದು ಸಂಗತಿಯೆಂದರೆ, ‘ಕಲೆ ಎಂಬುದಕ್ಕೆ ಯಾವುದೇ ನಿಯಮಗಳಿಲ್ಲ. ಅದನ್ನು ಸಮಾಜವೂ ನಿರ್ದೇಶಿಸಲಾರದು’ ಎಂಬುದನ್ನು ಎಂದು ತಿಳಿಸಿದ ಸಾಗರ್, ಈ ಸಿನಿಮಾದಲ್ಲಿ ನಾನು ಪ್ರಯೋಗಶೀಲತೆಗೆ ಪ್ರಯತ್ನಿಸಿಲ್ಲ. ಹಳೆಯ ನಿರೂಪಣಾ ಕ್ರಮವನ್ನೇ ಬಳಸಿ ಸಾವಯವ ರೀತಿಯಲ್ಲಿ ಹೇಳಲು ಪ್ರಯತ್ನಿಸಿದ್ದೇನೆ. ತಾಂತ್ರಿಕವಾಗಿ ಕೆಲವೊಂದು ಸವಾಲುಗಳಿತ್ತು ಎಂದು ತಮ್ಮ ಸಿನಿಮಾ ರೂಪಿಸಿದ ಬಗೆಯ ಕುರಿತು ವಿವರಿಸಿದರು.

ನನ್ನ ಸಿನಿಮಾ ಸಾಗುವುದು ಕಥಾನಾಯಕನ ದೃಷ್ಟಿಕೋನದಿಂದಲೇ. ಪ್ರಮುಖ ಸವಾಲು ಎನಿಸಿದ್ದು ಕಥೆಯ ನಿರೂಪಣೆಯಲ್ಲಿ. ನಾವು ವೃತ್ತಿಪರ ಡೊಳ್ಳು ಕುಣಿತದ ಕಲಾವಿದರಿಗೆ ನಟನೆಯನ್ನು ಹೇಳಿಕೊಡಬೇಕಿತ್ತು. ಹಾಗೆಯೇ ವೃತ್ತಿಪರ ಕಲಾವಿದರಿಗೆ ಡೊಳ್ಳಿನ ಕುಣಿತದ ಹೆಜ್ಜೆಯನ್ನು ಅಭ್ಯಾಸ ಮಾಡಿಸಬೇಕಿತ್ತು ಎಂದು ಹೇಳಿದರು ಸಾಗರ್.

ಈ ಚಿತ್ರವನ್ನು ಕನ್ನಡ ಚಿತ್ರ ನಿರ್ದೇಶಕ ಪವನ್ ಒಡೆಯರ್ ಮತ್ತು ಅಪೇಕ್ಷಾ ನಿರ್ಮಿಸಿದ್ದಾರೆ. ಡೊಳ್ಳು ಸಿನಿಮಾ ಜಾನಪದ ಕಲೆಯ ಉಳಿವಿನ ಅಗತ್ಯ ಮತ್ತು ನಗರೀಕರಣದ ಪರಿಣಾಮವನ್ನು ಕುರಿತು ಹೇಳುವ ಚಲನಚಿತ್ರ. ಕಥಾನಾಯಕ ತನ್ನ ಗೆಳೆಯರೊಂದಿಗೆ ಹಳ್ಳಿಯಲ್ಲಿ ಒಂದು ಡೊಳ್ಳು ಕುಣಿತದ ತಂಡವನ್ನು ಕಟ್ಟಿರುತ್ತಾನೆ. ಊರಿನ ದೇವರ ಜಾತ್ರೆಗೆ ಡೊಳ್ಳು ಕುಣಿತ ನಡೆಯಬೇಕಾದದ್ದು ಸಂಪ್ರದಾಯ. ಈ ಮಧ್ಯೆ ತಂಡದ ಒಬ್ಬ ಸದಸ್ಯ ನಗರವೊಂದರಲ್ಲಿ ಕೆಲಸವಾಗಿ, ಮದುವೆ ನಿಗದಿಯಾಗಿರುತ್ತದೆ.

ಆದರೆ ಉದ್ಯೋಗ ರದ್ದಾದಾಗ ಮದುವೆಯೂ ರದ್ದಾಗುತ್ತದೆ. ಈ ಹಿನ್ನೆಲೆಯಲ್ಲಿ ಅವನು ಹತಾಶಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದರ ಜತೆಯಲ್ಲೇ ಡೊಳ್ಳು ಕುಣಿತದಿಂದ ಹೊಟ್ಟೆ ಹೊರೆಯದು ಎಂದೆನಿಸಿ ಉಳಿದ ಸದಸ್ಯರೆಲ್ಲರೂ ನಗರದತ್ತ ಮುಖ ಮಾಡುತ್ತಾರೆ. ಊರ ಜಾತ್ರೆಗೆ ಕಥಾ ನಾಯಕ ಅವರೆಲ್ಲರನ್ನೂ ಕರೆತರುವ, ಡೊಳ್ಳು ಕುಣಿತದ ಸಂಪ್ರದಾಯ ಮುಂದುವರಿಸುವ ಪ್ರಯತ್ನ ವಿಫಲವಾಗುತ್ತದೆ. ಆಗ ಊರಿನ ಸದಸ್ಯರು ಜತೆಗೂಡಿ ಸಂಪ್ರದಾಯ ಮುಂದುವರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next