Advertisement

ಧರ್ಮ ಸಮನ್ವಯತೆ ಸಾರುವ ಕೇರಿಗೊರಿ ಕೇಸರಿ

06:58 PM Jan 24, 2020 | mahesh |

ರಾಷ್ಟ್ರಭಕ್ತಿ ಮತ್ತು ಸರ್ವಧರ್ಮ ಸಮನ್ವಯತೆಯನ್ನು ಸಾರುವ ನಾಟಕವಿದು. ರಾಷ್ಟ್ರಭಕ್ತಿ, ಧರ್ಮಗಳ ಸಂಘರ್ಷಗಳ ಸಂದೇಶದ ನಡುವೆಯೂ ನಾಟಕದ ಹಾಸ್ಯ ಸನ್ನಿವೇಶಗಳು ನಿರಂತರವಾಗಿ ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ.

Advertisement

ಎರಡು ದಶಕಗಳಿಂದ ತುಳು ರಂಗಭೂಮಿಯಲ್ಲಿ ಸುಮಾರು 30ಕ್ಕೂ ಮಿಕ್ಕಿ ವಿಭಿನ್ನ ಪರಿಕಲ್ಪನೆಯ ತುಳು ನಾಟಕಗಳನ್ನು ನೀಡಿ ಜನಪ್ರಿಯತೆ ಗಳಿಸಿರುವ ಶರತ್‌ ಶೆಟ್ಟಿ ನೇತೃತ್ವದ ಕಿನ್ನಿಗೋಳಿಯ ವಿಜಯಾ ಕಲಾವಿದರು ನಾಟಕ ಸಂಸ್ಥೆಯ ಈ ವರ್ಷದ “ಕೇರಿಗೊರಿ ಕೇಸರಿ’ ತುಳು ನಾಟಕ ಈಗಾಗಲೇ ಭಾರೀ ಜನಮನ್ನಣೆ ಗಳಿಸಿದೆ.

ಹರೀಶ್‌ ಪಡುಬಿದ್ರೆಯವರ ರಚನೆಯ ದಿನೇಶ್‌ ಅತ್ತಾವರ್‌ರವರ ನಿರ್ದೇಶನದ “ಕೇರಿಗೊರಿ ಕೇಸರಿ’ ರಾಷ್ಟ್ರಭಕ್ತಿ ಮತ್ತು ಸರ್ವಧರ್ಮ ಸಮನ್ವಯತೆಯನ್ನು ಸಾರು ತ್ತದೆ.

ನಿವೃತ್ತ ಮುಖ್ಯ ಶಿಕ್ಷಕನೋರ್ವನ ಕುಟುಂಬದ ಸುತ್ತ ಹೆಣೆಯಲಾದ ನಾಟಕದಲ್ಲಿ ತಂಡದ ಎಲ್ಲಾ ಕಲಾವಿದರೂ ಪರಿಪೂರ್ಣ ಅಭಿನಯದೊಂದಿಗೆ ಜೀವ ತುಂಬಿದ್ದಾರೆ. ಶಿಕ್ಷಕನ ಪುತ್ರ ಸಂಘಟನೆಯ ಪ್ರಮುಖನಾಗಿ ಸಮಾಜ ಸೇವೆಯ ಜತೆ ಎಲ್ಲಾ ಧ‌ರ್ಮಗಳ ಜನರ ಕಷ್ಟಗಳಿಗೆ ಬೆಂಗಾವಲಾಗಿ ನಿಂತು ಪ್ರೀತಿ ವಿಶ್ವಾಸಗಳೊಂದಿಗೆ ಊರಿಗೆ ಉಪಕಾರಿಯೆನಿಸುತ್ತಾನೆ. ಮನೆಗೆ ಮಾರಿಯೆಂಬ ರೀತಿಯಲ್ಲಿ ಆತನ ಸಮಾಜಸೇವೆ ಸಂಘಟನೆಗಳನ್ನು ಬದುಕಿನುದ್ದಕ್ಕೂ ದ್ವೇಷಿಸುತ್ತಾ ಬಂದಿರುವ ಶಿಕ್ಷಕ ತನ್ನ ಮಗನ ಬಗ್ಗೆ ಕೊನೆಗೆ ತಳೆಯುವ ನಿರ್ಧಾರ ಇಡೀ ನಾಟಕದ ಪ್ರಧಾನ ಅಂಶ.

ಸಂಘಟನೆಗಳ ಸಾಧಕ-ಬಾಧಕಗಳನ್ನು ನಾಟಕದಲ್ಲಿ ಸಂದೇಶಗಳ ಮೂಲಕ ಎತ್ತಿ ತೋರಿಸಲಾಗಿದ್ದು ನಾಟಕ ಮುಂದುವರಿದಂತೆಲ್ಲಾ ಇದು ನಮ್ಮ ಸಮಾಜದಲ್ಲಿ, ನಮ್ಮ ಪರಿಸರಗಳಲ್ಲಿ ನಡೆಯುತ್ತಿರುವ ವಾಸ್ತವವೋ ಎನ್ನುವಷ್ಟು ತಲ್ಲೀನಕ್ಕೊಳಗಾಗಿಸುತ್ತದೆ. ಜಾತಿ ಧರ್ಮಗಳ ಸಂಘರ್ಷ, ಈ ದೇಶದಲ್ಲಿ ಓರ್ವ ಮಹಿಳೆ ಹೇಗಿರಬೇಕು, ನಮ್ಮ ರಾಜಕಾರಣಿಗಳ ಸ್ಥಿತ್ಯಂತರ ಇವೆಲ್ಲವುಗಳನ್ನು ಎತ್ತಿ ತೋರಿಸಿದ ನಾಟಕ ಕೊನೆಗೆ ಧರ್ಮವೇ ಗೆಲ್ಲುತ್ತದೆ ಎನ್ನುವುದನ್ನು ಸಾರಿ ಹೇಳಿದೆ.

Advertisement

ರಾಷ್ಟ್ರಭಕ್ತಿ, ಧರ್ಮಗಳ ಸಂಘರ್ಷಗಳ ಸಂದೇಶದ ನಡುವೆಯೂ ನಾಟಕದ ಹಾಸ್ಯ ಸನ್ನಿವೇಶಗಳು ನಿರಂತರವಾಗಿ ನಗೆಗಡಲಲ್ಲಿ ತೇಲುವಂತೆ ಮಾಡಿವೆ.

ಸಂಘಟನೆಯ ಪ್ರಮುಖ ಗುಣಕರನ ಪಾತ್ರವನ್ನು ನಿರ್ವಹಿಸಿದ ನಿತೇಶ್‌ ಕಾಂತಾವರ ಪ್ರಧಾನ ಪಾತ್ರಧಾರಿಯಾಗಿ ಮನ ಮುಟ್ಟುವ ಅಭಿನಯ ನೀಡಿದ್ದಾರೆ. ಪುತ್ರನನ್ನು ವಿರೋಧಿಸುವ ತಂದೆಯಾಗಿ ನಿವೃತ್ತ ಶಿಕ್ಷಕ ರಾಮದಾಸ ಮಾಸ್ತರರ ಪಾತ್ರದಲ್ಲಿ ಉದಯ ಕುಮಾರ್‌ ಹಳೆಯಂಗಡಿ ನಾಟಕದ ಗೆಲುವಿಗೆ ಕಾರಣರಾಗಿದ್ದಾರೆ. ಮಾಸ್ತರರ ಹಿರಿಯ ಮಗ ಶುಭಕರನ ಪಾತ್ರವನ್ನು ನಿರ್ವಹಿಸಿದ ಭಾಸ್ಕರ ಪಕ್ಷಿಕೆರೆ, ಮಾಸ್ತರರ ಪತ್ನಿ ಭಾರತಿಯಾಗಿ ಆಭಿನಯಿಸಿದ ಚಿತ್ರಲೇಖಾ ಭಗವಾನ್‌,ಶುಭಕರನ ಪತ್ನಿ ಸೋನುವಿನ ಪಾತ್ರ ನಿರ್ವಹಿಸಿದ ಸುಶ್ಮಿತಾ ಏಳಿಂಜೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಗುಣಕರನ ಮಿತ್ರ ಶಿಲೀಂದ್ರನಾಗಿ ಹರೀಶ್‌ ಪಡುಬಿದ್ರೆ ಹಾಗೂ ಇನ್ನೋರ್ವ ಮಿತ್ರ ಯಾದವನಾಗಿ ಹಾಸ್ಯನಟ ಸೀತಾರಾಮ ಶೆಟ್ಟಿ ಎಳತ್ತೂರು ಹಾಸ್ಯದ ಹೊನಲು ಹರಿಸಿದ್ದಾರೆ. ಪ್ರಬುದ್ಧ ಹಾಸ್ಯನಟ ಭಗವಾನ್‌ ಸುರತ್ಕಲ್‌ ಸಂಗೀತ ಶಿಕ್ಷಕ ಸಾರಂಗಿಯಾಗಿ ವಿಭಿನ್ನ ಸಂಭಾಷಣೆ ಹಾಗೂ ಹಾಡುಗಳಿಂದ ಗಮನ ಸೆಳೆದಿದ್ದಾರೆ. ಸಾರಂಗಿಯ ಪತ್ನಿ ಟಿಕ್‌ಟಾಕ್‌ ತಾರಾಳ ಪಾತ್ರದಲ್ಲಿ ನರೇಂದ್ರ ಕೆರೆಕಾಡು ನಿರಂತರವಾಗಿ ಹಾಸ್ಯದ ಸನ್ನಿವೇಶ ಹಾಗೂ ಡೈಲಾಗ್‌ಗಳಿಗೆ ಪಂಚ್‌ ನೀಡಿದ್ದಾರೆ. ಮಾಡರ್ನ್ ಹುಡುಗಿ ಸಂಗೀತಳ ಪಾತ್ರದಲ್ಲಿ ರಕ್ಷಿತಾ ಸುದೀರ್‌ ನಂದಳಿಕೆ ಮನೋಜ್ಞ ಅಭಿನಯ ನೀಡಿದ್ದಾರೆ.

ಸುಧಾಕರ ಸಾಲ್ಯಾನ್‌ ಕ್ರೈಸ್ತ ಕುಟುಂಬದವರಾಗಿ ಮೆಸ್ಕಾಂ ಲೈನ್‌ಮ್ಯಾನ್‌ ಆಲ್ವಿನ್‌ನ ಪಾತ್ರದಲ್ಲಿ ನಕ್ಕು ನಗಿಸಿದರೆ ಆತನ ಪತ್ನಿ ಲಿಲ್ಲಿಯಾಗಿ ಸತೀಶ್‌ ಶಿರ್ವ ಸುಧಾಕರನ ಜತೆ ಕೊಂಕಣಿ ಸಂಭಾಷಣೆಗಳ ಮೂಲಕ ಗಮನ ಸೆಳೆದಿದ್ದಾರೆ. ಬಾಲ ಕಲಾವಿದೆ ಮಂಜೂಷಾ ಭಗವಾನ್‌ ಈ ದಂಪತಿಯ ಪುತ್ರಿ ಶಾಲೆಟ್‌ಳ ಪಾತ್ರದಲ್ಲಿ ಭಾವನಾತ್ಮಕ ಅಭಿನಯ ನೀಡಿದ್ದಾರೆ.

ಆಹಾರ ವಿತರಣ ಸಂಸ್ಥೆಯ ಪ್ರತಿನಿಧಿಯ ಪಾತ್ರವನ್ನು ನಿರ್ವಹಿಸಿದ ಹರಿಪ್ರಸಾದ್‌ ನಂದಳಿಕೆ ಹಾಸ್ಯದ ಪಂಚ್‌ ಮೂಲಕ ಮನರಂಜಿಸಿದರೂ ಕೊನೆಗೆ ಭಾವನಾತ್ಮಕ ಡೈಲಾಗ್‌ ಮೂಲಕ ಮನದಲ್ಲಿ ನಿಲ್ಲುವ ನಿರ್ವಹಣೆ ಮಾಡಿದ್ದಾರೆ. ಶರತ್‌ ಶೆಟ್ಟಿ ಶಾಸಕ ಭಗವಾನ್‌ದಾಸರಾಗಿ ಒಂದು ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ಅಶೋಕ್‌ ಪಳ್ಳಿಯವರ ರಚನೆಯ ರಾಷ್ಟ್ರಭಕ್ತಿಯ ಟೈಟಲ್‌ ಸಾಂಗ್‌, ನಾಟಕದ ಮಧ್ಯೆ ಬರುವ ಗ್ರೂಪ್‌ ಹಾಡು ಹಾಗೂ ಕೊನೆಗೆ ಬರುವ ಮಾರ್ಮಿಕ ಪ್ಯಾಥೋ ಹಾಡು ಕೇರಿಗೊರಿ ಕೇಸರಿಯನ್ನು ಗೆಲ್ಲಿಸಿದೆ. ಮುಂಡ್ಕೂರು ದಿನೇಶ್‌ ಪಾಪುರವರ ಹಿನ್ನೆಲೆ ಸಂಗೀತ, ಹಮ್ಮಿಂಗ್ಸ್‌ಗಳು, ಸಂಗೀತದ ತುಣುಕುಗಳು ನಾಟಕದ ಯಶಸ್ಸಿನ ಪ್ರಧಾನ ಅಂಶಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next