Advertisement

ಸಿಸಿಟಿವಿಯಲ್ಲಿ ಸೇಫ್ ಕುಂದಾಪುರ ಪ್ರಾಜೆಕ್ಟ್

10:31 PM Nov 05, 2019 | mahesh |

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ದೇವಾಲಯ, ವಾಣಿಜ್ಯ ಕಟ್ಟಡಗಳು, ಜುವೆಲರಿ, ಶೋರೂಂಗಳು ಮೊದಲಾದವುಗಳ ಭದ್ರತೆಗೆ ಸಂಬಂಧಿಸಿದಂತೆ ಸೇಫ್ ಕುಂದಾಪುರ ಪ್ರಾಜೆಕ್ಟ್‌ನು° ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದಕ್ಕೆ ಎಲ್ಲ ಕಡೆ ಸಿಸಿಟಿವಿ ಅಳವಡಿಸಿ ರಾತ್ರಿ ಅದರ ಮಾನಿಟರಿಂಗ್‌ ಮಾಡುವ ವ್ಯವಸ್ಥೆ ಮಾಡಲಾಗುವುದು. ನಗರದಲ್ಲಿ ಯಶಸ್ವಿ ಅನುಷ್ಠಾನವಾದ ಬಳಿಕ ಎರಡನೇ ಹಂತವಾಗಿ ತಾಲೂಕಿನ ವಿವಿಧ ಠಾಣೆ ವ್ಯಾಪ್ತಿಯಲ್ಲಿ, ಮೂರನೆ ಹಂತವಾಗಿ ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಉಪವಿಭಾಗ ಎಎಸ್‌ಪಿ ಹರಿರಾಮ್‌ ಶಂಕರ್‌ ಹೇಳಿದರು.

Advertisement

ಅವರು ಮಂಗಳವಾರ ಇಲ್ಲಿನ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಮಾದರಿ ಯೋಜನೆಯ ವಿವರ ನೀಡಿದರು. ಕಳ್ಳತನಕ್ಕೆ ಒಳಗಾಗುವ ಸಾಧ್ಯತೆಯಿರುವ ಪ್ರಮುಖ ಕಟ್ಟಡಗಳಲ್ಲಿ ಅಳವಡಿಸಿದ ಸಿಸಿಟಿವಿಗಳ ಸಂಪರ್ಕವು ಇಂಟರ್‌ನೆಟ್‌ ಮೂಲಕ ಮಾನಿಟರಿಂಗ್‌ ಕೇಂದ್ರದ ಸಂಪರ್ಕ ದಲ್ಲಿರುತ್ತದೆ. ಮಾನಿಟರಿಂಗ್‌ ಕೇಂದ್ರದಲ್ಲಿ 8 ಕೆಮರಾಗಳಿಗೊಂದರಂತೆ ಟಿವಿಗಳನ್ನು ಅಳವಡಿಸ ಲಾಗುತ್ತದೆ. ಪ್ರತಿ ಟಿವಿಗೊಬ್ಬ ವ್ಯಕ್ತಿಯನ್ನು ನೇಮಿಸಿ ವೀಕ್ಷಿಸುವಂತೆ ಮಾಡಲಾಗುತ್ತದೆ. ಈ ಸಂದರ್ಭ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ನಡೆದರೆ, ಅಪರಾಧಿಕ ಸಂಚಿನ ಭಾಗಗಳು ಕಂಡುಬಂದರೆ ತತ್‌ಕ್ಷಣ ಪೊಲೀಸ್‌ ಠಾಣೆಗೆ, 112 ಕಂಟ್ರೋಲ್‌ ರೂಂಗೆ, ಬೀಟ್‌ ಸಿಬಂದಿಗೆ, ಹೈವೇ ಪ್ಯಾಟ್ರೋಲಿಂಗ್‌ ವಾಹನಕ್ಕೆ, ಸಂಬಂಧಪಟ್ಟ ಮಳಿಗೆಯವರಿಗೆ ಕರೆ ಮಾಡಲಾಗುತ್ತದೆ. ಅವರು ಘಟನ ಸ್ಥಳಕ್ಕೆ ಹಾಜರಾಗಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಪ್ರಸ್ತುತ ಕೆಮರಾಗಳ ಮಾನಿಟರಿಂಗ್‌ ಕೇಂದ್ರದ ನಿರ್ವಹಣೆಯನ್ನು ಖಾಸಗಿಯವರು ನಡೆಸಲಿದ್ದು ಅಲ್ಲಿ ಖಾಸಗಿತನಕ್ಕೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಪೊಲೀಸ್‌ ಸಿಬಂದಿಯನ್ನೂ ನೇಮಿಸಲಾಗುತ್ತದೆ ಎಂದರು.

ಸ್ಥಳೀಯರ ಕೃತ್ಯ
ಉಡುಪಿ ಜಿಲ್ಲೆಯಲ್ಲಿ ಈವರೆಗೆ ನಡೆದ ಮನೆ ಕಳವು ಪ್ರಕರಣಗಳಲ್ಲಿ ಅಂತಾರಾಜ್ಯ ಕಳ್ಳರ ಕೈವಾಡವಿಲ್ಲ. ಸ್ಥಳೀಯ ಜಿಲ್ಲೆಗಳ ಪರಿಚಿತ ಕಳ್ಳರ ತಂಡವೇ ನಡೆಸಿದೆ. ಸಿಸಿಟಿವಿಗಳಲ್ಲಿ ದಾಖಲಾದ ಅನೇಕ ಪ್ರಕರಣಗಳನ್ನು ಈವರೆಗೂ ಪತ್ತೆಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಸಿಸಿಟಿವಿ ಇದ್ದರಷ್ಟೇ ಸಾಕು, ಕ್ಷೇಮ ಎಂಬ ಭಾವನೆಯೂ ಅಗತ್ಯವಿಲ್ಲ. ಸಿಸಿಟಿವಿಗಳಲ್ಲಿ ನೇರಪ್ರಸಾರ ವೀಕ್ಷಿಸುವುದರಿಂದ ಕೃತ್ಯವೇ ಆಗದಂತೆ ತಡೆಯಬಹುದು. ಈ ನಿಟ್ಟಿನಲ್ಲಿ ಹೊಸ ಪ್ರಯತ್ನ ಮಾಡಲಾಗುತ್ತಿದೆ. ಘಟನೆ ಆದ ಬಳಿಕ ಪತ್ತೆಹಚ್ಚುವುದಕ್ಕಿಂತ ದುರ್ಘ‌ಟನೆಯೇ ಆಗದಂತೆ ತಡೆಯುವುದು ಒಳ್ಳೆಯ ಲಕ್ಷಣ. ಕಷ್ಟಪಟ್ಟು ದುಡಿದ ಹಣ ಕಳ್ಳರ ಪಾಲಾಗಲು ಬಿಡಬಾರದು ಎಂದರು.

ವಿಸ್ತರಣೆ
ಈಗ ದೇವಾಲಯ, ಚಿನ್ನದ ಮಳಿಗೆ, ಶೋರೂಂ ಇತ್ಯಾದಿಗಳಿಗೆ ಸಿಸಿಟಿವಿ ಅಳವಡಿಸಿ ನಂತರದ ದಿನಗಳಲ್ಲಿ ಇದನ್ನು ವಿಸ್ತರಿಸಲಾಗುವುದು. ಕೇವಲ ಕಳ್ಳತನವಲ್ಲ. ಬೇರೆ ವಿಧ್ವಂಸಕ, ಶಾಂತಿಭಂಗ ಚಟುವಟಿಕೆ ನಡೆಸುವುದನ್ನೂ ತಪ್ಪಿಸಬಹುದು. ಈ ಕುರಿತು ಬೈಂದೂರು, ಕುಂದಾಪುರ ಶಾಸಕರಲ್ಲಿ ಮಾತನಾಡಲಾಗಿದ್ದು ಅವರು ಬೆಂಬಲಿಸಿದ್ದಾರೆ. ಜಂಕ್ಷನ್‌, ಚೆಕ್‌ಪೋಸ್ಟ್‌ಗಳಲ್ಲಿ ಅಳವಡಿಸಿದ ಸಿಸಿಟಿವಿಗಳ ಸಂಪರ್ಕವನ್ನೂ ಮಾನಿಟರಿಂಗ್‌ ಕೇಂದ್ರಕ್ಕೆ ನೀಡಲು ಸಲಹೆ ನೀಡಿದ್ದಾರೆ ಎಂದರು. ಸದ್ಯ ಮಾನಿಟರಿಂಗ್‌ ಕೇಂದ್ರವನ್ನು ಖಾಸಗಿಯವರು ನಡೆಸಲಿದ್ದು ಅವರ ಜತೆಗಿನ ಹಣಕಾಸಿನ ವ್ಯವಸ್ಥೆಯಲ್ಲಿ ಪೊಲೀಸ್‌ ಸಹಭಾಗಿತ್ವ ಇಲ್ಲ. ಸಾರ್ವಜನಿಕ ಅನುಕೂಲಕ್ಕಾಗಿ ಪೊಲೀಸರು ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ರವೀಂದ್ರ ಕಾವೇರಿ, ಡಾ| ಪ್ರಮೀಳಾ ನಾಯಕ್‌, ಉದ್ಯಮಿ ಅಭಿನಂದನ್‌ ಶೆಟ್ಟಿ ಮೊದಲಾದವರು ಅಭಿಪ್ರಾಯ ತಿಳಿಸಿದರು.

Advertisement

ಕುಂದಾಪುರ ಠಾಣೆ ಎಸ್‌ಐ ಹರೀಶ್‌ ಆರ್‌. ನಾಯ್ಕ, ಅಪರಾಧ ತಡೆಗೆ ಸಿಸಿಟಿವಿ ಮಾನಿಟರಿಂಗ್‌ ಕೇಂದ್ರ ವಿನೂತನ ಹೆಜ್ಜೆಯಾಗಿದ್ದು ಯಶಸ್ಸಿಗಾಗಿ ಎಲ್ಲರೂ ಕೈ ಜೋಡಿಸಿ. ಪೊಲೀಸ್‌ ಅಧಿಕಾರಿಗಳು ಸ್ವಲ್ಪ ಸಮಯ ಕೆಲಸ ನಿರ್ವಹಿಸಿ ಅನಂತರ ವರ್ಗವಾಗುತ್ತಾರೆ. ಆದರೆ ಕುಂದಾಪುರದ ಭದ್ರತೆಗಾಗಿ ಮಾಡಿದ ವ್ಯವಸ್ಥೆ ಶಾಶ್ವತವಾಗಿರುತ್ತದೆ. ರಾಜ್ಯದಲ್ಲೇ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಮಾಡಿದ ಎಎಸ್‌ಪಿಯವರು ನಿಜಕ್ಕೂ ಅಭಿನಂದನಾರ್ಹರು ಎಂದರು. ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಬ್ಯಾಂಕ್‌, ಜುವೆಲರಿ, ಶೋರೂಂಗಳಿಗೆ ಸಂಬಂಧಪಟ್ಟವರು ಉಪಸ್ಥಿತರಿದ್ದರು.

ದರ ನಿಗದಿ
ಮಾನಿಟರಿಂಗ್‌ ಕೇಂದ್ರ ನಿರ್ವಹಿಸಲಿರುವ ಸೈನ್‌ಇನ್‌ ಸೆಕ್ಯುರಿಟಿ ಕುಂದಾಪುರ ಸಂಸ್ಥೆಯ ಕೃಷ್ಣ ವಿವರ ನೀಡಿ, ತಿಂಗಳಿಗೆ ಇಂಟರ್‌ನೆಟ್‌ ದರ ಸೇರಿ 1,600 ರೂ. ದರ ವಿಧಿಸಲಾಗುತ್ತದೆ. ಅನಂತರದ ಪ್ರತಿ ಕೆಮರಾಗೆ 4 ಕೆಮರಾ ವರೆಗೆ ತಲಾ 400 ರೂ.ಗಳಂತೆ ದರ ನಿಗದಿಯಾಗಿದೆ. ಕಡ್ಡಾಯ ಇಲ್ಲ. ಭದ್ರತೆಯ ಆವಶ್ಯಕತೆಯಿದ್ದವರು ನೋಂದಾಯಿಸಬಹುದು. ಕಾವಲುಗಾರ ಇದ್ದರೂ, ಇಲ್ಲದಿದ್ದರೂ ಈ ವ್ಯವಸ್ಥೆಯಿಂದ ಭದ್ರತೆಗೆ ಅನುಕೂಲವಾಗಲಿದೆ ಎಂದರು.

ರಾತ್ರಿ 8 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಕೆಮರಾಗಳ ಚಿತ್ರಣ ವೀಕ್ಷಣೆ ನಡೆಯಲಿದೆ. ಈ ಕಾರ್ಯ ಯಾವುದೇ ಅಡಚಣೆಯಿಲ್ಲದೇ ನಡೆಯುತ್ತಿದೆ ಎಂಬುದರ ಖಚಿತತೆಗಾಗಿ ತಿಂಗಳಿಗೊಮ್ಮೆ ಪೊಲೀಸರು, ಮಾಲಕರು ಹಾಗೂ ಸಂಸ್ಥೆಯವರು ಪ್ರತ್ಯೇಕ ಅಣಕು ಕಾರ್ಯಾಚರಣೆ ಮಾಡಲಿದ್ದಾರೆ. ಇದು ಪೈಲಟ್‌ ಪ್ರಾಜೆಕ್ಟ್ ಆಗಿದ್ದು ಕಾರ್ಯಸಾಧ್ಯತೆಗಳು° ನೋಡಿಕೊಂಡು ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ವಿವಿಧೆಡೆ ಅನುಷ್ಠಾನ ಮಾಡಲಾಗುವುದು. ಸಿಸಿಟಿವಿ ಫ‌ೂಟೇಜ್‌ಗಳ ಸಂಗ್ರಹ ವ್ಯವಸ್ಥೆಯಿಲ್ಲ. ನೇರಪ್ರಸಾರ ವೀಕ್ಷಣೆ ಮಾತ್ರ. ಮಳಿಗೆ ಮಾಲಕರು ಇಚ್ಛಿಸಿದರೆ ಮಾತ್ರ ಕಂಟ್ರೋಲ್‌ರೂಂನಲ್ಲಿ ವೀಕ್ಷಣೆ ಸಾಧ್ಯ. ಇದಕ್ಕಾಗಿ ಪ್ರತ್ಯೇಕ ವೈಫೈಯನ್ನು ಆನ್‌ ಆಫ್ ಮಾಡುವ ವ್ಯವಸ್ಥೆ, ಡಿವಿಆರ್‌ನಲ್ಲಿ ಚಿಪ್‌ ಅಳವಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹರಿರಾಮ್‌ ಶಂಕರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next