Advertisement

ತ್ಯಾಗದ ದ್ಯೋತಕ, ಸಮರ್ಪಣೆಯ ಸಂಕೇತ ಬಕ್ರೀದ್‌

08:04 AM Jul 31, 2020 | mahesh |

ಮಾನವರ ಜೀವನದಲ್ಲಿ ಮರೆಯಾಗುತ್ತಿರುವ ನೈತಿಕ ಮೌಲ್ಯಗಳನ್ನು ಜಾಗೃತಗೊಳಿಸಿ, ಬದುಕಿಗೆ ಸ್ಫೂರ್ತಿ ಮತ್ತು ನವ ಚೈತನ್ಯವನ್ನು ತುಂಬುವುದೇ ಹಬ್ಬಗಳ ಆಚರಣೆಯ ಪ್ರಮುಖ ಉದ್ದೇಶ. ಹಬ್ಬಗಳು ಎಂದರೆ ಬರೀ ತಿಂದುಂಡು ತೇಗುವ ಕ್ಷಣಗಳಾಗಿರದೇ ಅವುಗಳ ಹಿನ್ನೆಲೆಯಲ್ಲಿ ಅಡಕವಾಗಿರುವ ಧಾರ್ಮಿಕ ವೈಚಾರಿಕತೆಯತ್ತ ನಮ್ಮನ್ನು ಸೆಳೆಯುವ ಮಾಧ್ಯಮಗಳಾಗಿವೆ. ಪ್ರವಾದಿ ಇಬ್ರಾಹಿಂ ಅವರು ದೈವಾಜ್ಞೆಯಂತೆ ನಿರ್ವಹಿಸಿದ ಅಪೂರ್ವ ತ್ಯಾಗದ ಸ್ಮರಣಾರ್ಥ ಆಚರಿಸಲ್ಪಡುವ ಹಬ್ಬವೇ ಬಕ್ರೀದ್‌. ತ್ಯಾಗ, ತನ್ನ ಸುಂದರ ಅರ್ಥವ್ಯಾಪ್ತಿಯೊಂದಿಗೆ ಬದು ಕನ್ನು ತುಂಬಿದಾಗಲೇ ಜೀವನದಲ್ಲಿ ಸುಭಿಕ್ಷೆಯೂ ನೆಮ್ಮ ದಿಯೂ ಸಾಧ್ಯವಾಗುತ್ತದೆ.

Advertisement

ಪ್ರವಾದಿ ಇಬ್ರಾಹಿಂ ಅವರಿಗೆ ಬೀವಿ ಹಾಜಿರಾ ಮತ್ತು ಬೀವಿ ಸಾರಾ ಎಂಬೀರ್ವರು ಪತ್ನಿಯರು. ಇಬ್ರಾಹಿಂ ಅವರಿಗೆ ಇಳಿವಯಸ್ಸಾದರೂ ಮಕ್ಕಳಾಗಲಿಲ್ಲ. ಕೊನೆಗೂ ದೈವಾನುಗ್ರಹದಿಂದ ಬೀವಿ ಹಾಜಿರಾ ಅವರು ಇಸ್ಮಾಯಿಲ್‌ ಮತ್ತು ಬೀವಿ ಸಾರಾ ಅವರು ಇಸ್‌ಹಾಕ್‌ ಎಂಬ ಕಂದಮ್ಮಗಳನ್ನು ಹಡೆದರು. ಮಗು ಇಸ್ಮಾಯಿಲ್‌ ಮಾತಾಪಿತರ ಪ್ರೀತಿಯ ಕಣ್ಮಣಿಯಾಗಿ ಬೆಳೆಯತೊಡಗಿದನು.

ಒಮ್ಮೆ ಪ್ರವಾದಿ ಇಬ್ರಾಹಿಂ ಅವರ ಪತ್ನಿಯರ ನಡುವೆ ವಿರಸ ತಲೆದೋರಿದಾಗ, ದೈವಾಜ್ಞೆಯಂತೆ ಇಬ್ರಾಹಿಂ ಅವರು ಎಳೆ ಹಸುಳೆ ಇಸ್ಮಾಯಿಲ್‌ ಮತ್ತು ಬೀವಿ ಹಾಜಿರಾ ಅವರನ್ನು ದೂರದ ನಿರ್ಜನ ಮರುಭೂಮಿಯಲ್ಲಿ ಬಿಟ್ಟು ಬಂದರು. ಮರುಭೂಮಿಯಲ್ಲಿ ಉರಿಬಿಸಿಲ ಬೇಗೆಗೆ ಕಂದ ಇಸ್ಮಾಯಿಲ್‌ ಬಾಯಾರಿಕೆಯಿಂದ ಚಡಪಡಿಸುತ್ತಿರಲು ಬೀವಿ ಹಾಜಿರಾ ಮಗು ಇಸ್ಮಾಯಿಲ್‌ನನ್ನು ನೆಲದಲ್ಲಿ ಮಲಗಿಸಿ, ನೀರಿಗಾಗಿ ಹುಡುಕುತ್ತಾ ಮರುಭೂಮಿಯ ಇಕ್ಕೆಲಗಳಲ್ಲಿರುವ ಸಫಾ ಮತ್ತು ಮರ್ವಾ ಬೆಟ್ಟಗಳನ್ನು ಏಳು ಬಾರಿ ಹತ್ತಿ ಇಳಿಯುತ್ತಾರೆ. ಆದರೆ ಎಲ್ಲೂ ಹನಿ ನೀರೂ ಸಿಗದೆ ಮಗು ಇಸ್ಮಾಯಿಲ್‌ನ

ಬಳಿ ಹಿಂದಿರುಗಿದಾಗ ಮಗುವಿನ ಕಾಲಬುಡದಲ್ಲಿ ನೀರಿನ ಬುಗ್ಗೆಯು ಏಕಾಏಕಿ ಚಿಮ್ಮಲಾರಂಭಿಸುತ್ತದೆ. ಇದನ್ನು ಕಂಡ ಬೀವಿ ಹಾಜಿರಾ ಆನಂದದಿಂದ ಉನ್ಮತ್ತರಾಗಿ “ಝಂ ಝಂ’ (ನಿಲ್ಲು, ನಿಲ್ಲು) ಎನ್ನಲು ಚಿಮ್ಮುತ್ತಿದ್ದ ನೀರು ತತ್‌ಕ್ಷಣವೇ ನಿಲ್ಲುತ್ತದೆ. ಬೀವಿ ಹಾಜಿರಾ ಈ ಪುಣೊದಕವನ್ನು ಮಗುವಿನ ಬಾಯಾರಿಕೆ ನೀಗುವಷ್ಟು ಕುಡಿಸಿ ಸಂತೃಪ್ತಳಾಗುತ್ತಾಳೆ.

ಒಂದು ರಾತ್ರಿ ಪ್ರವಾದಿ ಇಬ್ರಾಹಿಂ ಅವರಿಗೆ ಕನಸಿನಲ್ಲಿ ದೇವದೂತ ಜಿಬ್ರಿಲರು ಪ್ರತ್ಯಕ್ಷರಾಗಿ “ಇಬ್ರಾಹಿಮರೇ ನಿಮ್ಮ ಮುದ್ದು ಕಂದ ಇಸ್ಮಾಯಿಲ್‌ನನ್ನು ಅಲ್ಲಾಹನ ಹೆಸರಿನಲ್ಲಿ ಬಲಿ ನೀಡುವಂತೆ ದೈವಾಜ್ಞೆಯಾಗಿದೆ’ ಎನ್ನುತ್ತಾರೆ. ಪ್ರವಾದಿ ಇಬ್ರಾಹಿಮರು ಧೀರ ಬಾಲಕ ಇಸ್ಮಾಯಿಲ್‌ಗೆ ದೈವಾಜ್ಞೆಯನ್ನು ಅರುಹಿದಾಗ ಆತ ಒಂದಿಷ್ಟೂ ಅಳುಕದೆ “ಮಿನಾ’ ಪ್ರದೇಶವನ್ನು ತಲುಪಿ ಶಾಲೆಯೊಂದರ ಮೇಲೆ ನಿರ್ವಿಕಾರ ಚಿತ್ತದಿಂದ ಮಲಗಲು, ಪ್ರವಾದಿ ಇಬ್ರಾಹಿಮರು ತನ್ನ ಕಣ್ಣಿಗೆ ಬಟ್ಟೆ ಕಟ್ಟಿ ಅಲ್ಲಾಹನ ಸ್ಮರಣೆಯೊಂದಿಗೆ ಹರಿತವಾದ ಕತ್ತಿಯನ್ನು ತನ್ನ ಪ್ರೀತಿಯ ಕಂದನ ಕತ್ತಿನಲ್ಲಿ ಹಾಯಿಸುತ್ತಾರೆ.

Advertisement

ಬಳಿಕ ಪ್ರವಾದಿ ಇಬ್ರಾಹಿಮರು ತನ್ನ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿ ನೋಡುತ್ತಿದ್ದಂತೆ, ಅದೇನು ಅದ್ಭುತವೋ ಎಂಬಂತೆ ಬಲಿದಾನದ ಸ್ಥಳದಲ್ಲಿ ಟಗರೊಂದು ರುಂಡಮುಂಡ ಬೇರೆ ಬೇರೆಯಾಗಿ ಸತ್ತು ಬಿದ್ದಿತ್ತು. ಪಕ್ಕದಲ್ಲಿಯೇ ಇಸ್ಮಾಯಿಲ್‌ ನಿರ್ವಿಕಾರ ಚಿತ್ತದಿಂದ ನಿಂತಿದ್ದನು. ಅಲ್ಲಾಹನಿಗೆ ಬೇಕಾದುದು ಪ್ರವಾದಿ ಇಬ್ರಾಹಿಮರ ಸಣ್ತೀ ಪರೀಕ್ಷೆಯೇ ಹೊರತು ಬಾಲಕ ಇಸ್ಮಾಯಿಲ್‌ನ ಪ್ರಾಣವಾಗಿರಲಿಲ್ಲ.

ಪ್ರವಾದಿ ಇಬ್ರಾಹಿಮರ ಪುತ್ರ ಬಲಿದಾನದ ನೆನಪನ್ನು ಶಾಶ್ವತವಾಗಿರಿಸಲು ಬಕ್ರೀದ್‌ ದಿನದಂದು ಪ್ರಾಣಿ ಬಲಿ ನೀಡುವ ಪದ್ಧತಿ ಇಸ್ಲಾಮಿನಲ್ಲಿದೆ. ಪ್ರವಾದಿ ಇಬ್ರಾಹಿಂ ಅವರು ಪರಮಾತ್ಮನ ಆ ಸಣ್ತೀ ಪರೀಕ್ಷೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿ, ಅಲ್ಲಾಹನಿಂದ “ಖಲೀಲುಲ್ಲಾ’-ಅಲ್ಲಾಹನ ಆಪ್ತ ಎಂದು ಸಂಬೋಧಿಸಲ್ಪಟ್ಟರು.

ಪ್ರವಾದಿ ಇಬ್ರಾಹಿಂ ಮತ್ತು ಇಸ್ಮಾಯಿಲ್‌ ಮೆಕ್ಕಾದಲ್ಲಿ ಪುನರ್‌ ನಿರ್ಮಿಸಿರುವ ಭವ್ಯ ಕಾಬಾ ಮಂದಿರವು ಪ್ರತೀ ವರ್ಷವು ವಿಶ್ವದೆಲ್ಲೆಡೆಯಿಂದ ಅಸಂಖ್ಯಾತ ಮುಸ್ಲಿಮರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಇದು ಸಮಾನತೆ, ಏಕತೆ ಸಹೋದರತೆ ಮತ್ತು ವಿಶ್ವ ಬಾಂಧವ್ಯದ ಪ್ರತೀಕ.

ಬಕ್ರೀದ್‌ ಹಬ್ಬವು ತ್ಯಾಗ, ಸಹನೆ ಮತ್ತು ಪರಿಶ್ರಮ ಎಂಬ ಮೂರು ಉನ್ನತ ತತ್ತ್ವದರ್ಶಗಳನ್ನು ಮತ್ತು ಇತಿಹಾಸವನ್ನು ವಿಶ್ವದ ಜನತೆಗೆ ಸಾರುತ್ತದೆ. ಪರರ ಒಳಿತಿಗಾಗಿ ತ್ಯಾಗ, ಕಷ್ಟಗಳ ಮುಂದೆ ಸಹನೆ ಮತ್ತು ಸಾಮಾಜಿಕ ಹಿತಾಸಕ್ತಿಗಾಗಿ ಪರಿಶ್ರಮ ಎಂಬ ಉದಾತ್ತ ಆದರ್ಶಗಳೊಂದಿಗೆ ಬಕ್ರೀದ್‌ ಹಬ್ಬವನ್ನು ಮುಸ್ಲಿಮರು ಇಂದು ವಿಶ್ವಾದ್ಯಂತ ಆಚರಿಸುತ್ತಾರೆ.

ಕೆ.ಪಿ. ಅಬ್ದುಲ್‌ ಖಾದರ್‌, ಕುತ್ತೆತ್ತೂರು

Advertisement

Udayavani is now on Telegram. Click here to join our channel and stay updated with the latest news.

Next