Advertisement

ಸಂಸತ್‌ ಪ್ರವೇಶಿಸಿದ ಸೊಲ್ಲಾಪುರದ ಸಾಧು

11:18 AM May 27, 2019 | Suhan S |

ಸೊಲ್ಲಾಪುರ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ಸುಶೀಲಕುಮಾರ ಶಿಂಧೆ ಸತತ ಎರಡನೇ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದು ಅವರ ದೀರ್ಘ‌ ರಾಜಕೀಯ ಜೀವನಕ್ಕೆ ತಡೆಯೊಡ್ಡಿದಂತಾಗಿದ್ದು, ರಾಜಕೀಯ ಭವಿಷ್ಯಕ್ಕೆ ಮಾರಕವಾದಂತಾಗಿದೆ.

Advertisement

ಸೊಲ್ಲಾಪುರ ಲೋಕಸಭೆ ಚುನಾವಣೆಯಲ್ಲಿ 1.50 ಲಕ್ಷ ಮತಗಳ ಅಂತರದಿಂದ ಹೀನಾಯವಾಗಿ ಸೋಲುಂಡ ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸುಶೀಲಕುಮಾರ ಶಿಂಧೆ ಗೆಲುವಿಗಾಗಿ ಹರಸಾಹಸ ಪಟ್ಟಿದ್ದು ಸುಳ್ಳಲ್ಲ. ಸುಶೀಲಕುಮಾರ ಶಿಂಧೆ ಅವರು 3,54,994 ಮತಗಳನ್ನು ಪಡೆದರೆ, ಬಿಜೆಪಿಯ ಕನ್ನಡಿಗ ಡಾ| ಜಯಸಿದ್ಧೇಶ್ವರ ಸ್ವಾಮೀಜಿ 5,05,132 ಮತಗಳನ್ನು ಪಡೆಯುವ ಮೂಲಕ 1,50,138 ಮತಗಳ ಅಂತರದಿಂದ ಗೆಲುವು ಸಾಧಿಸಿ ಸಂಸತ್‌ ಪ್ರವೇಶಿಸಿದ್ದಾರೆ.

ಸೊಲ್ಲಾಪುರ ಮೀಸಲು ಮತಕ್ಷೇತ್ರದಿಂದ ಸ್ಪರ್ಧಿಸಿದ ವಂಚಿತ ಬಹುಜನ ಆಘಾಡಿ ಪಕ್ಷದ ಅಭ್ಯರ್ಥಿ ಪ್ರಕಾಶ ಅಂಬೇಡ್ಕರ್‌ ಅವರು 1,63,870 ಮತಗಳನ್ನು ಪಡೆದುಕೊಂಡಿದ್ದರಿಂದ ಸುಶೀಲಕುಮಾರ ಶಿಂಧೆ ಸೋಲಲು ಕಾರಣವಾಯಿತು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಬಹುತೇಕವಾಗಿ ದಲಿತ ಮತ್ತು ಮುಸ್ಲಿಂ ಸಮುದಾಯವನ್ನು ಮತ ಬ್ಯಾಂಕ್‌ನ್ನಾಗಿ ಪರಿವರ್ತಿಸಿಕೊಂಡ ಕಾಂಗ್ರೆಸ್‌ಗೆ ಪ್ರಕಾಶ ಅಂಬೇಡ್ಕರ್‌ ವಿರುದ್ಧವಾಗಿ ನಿಂತಿದ್ದರಿಂದ ಸುಶೀಲಕುಮಾರ ಶಿಂಧೆ ರಾಜಕೀಯ ಭವಿಷ್ಯಕ್ಕೆ ಎಳ್ಳು ನೀರು ಬಿಟ್ಟಂತಾಗಿದೆ.

ಬಿಜೆಪಿ, ಕಾಂಗ್ರೆಸ್‌ ಮತ್ತು ವಂಚಿತ ಬಹುಜನ ಆಘಾಡಿ ಪಕ್ಷ ಸೇರಿದಂತೆ ಮೂವರು ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಹೆಚ್ಚಿತ್ತು. ಜಾತಿ ಲೆಕ್ಕಾಚಾರದ ಮೇಲೆ ಚುನಾವಣೆ ರಂಗೇರಿತ್ತು. 2014ರ ಸೋಲಿನಿಂದ ಪಾಠ ಕಲಿತಿದ್ದ ಸುಶೀಲಕುಮಾರ ಶಿಂಧೆ ಹಲವಾರು ಸವಾಲುಗಳನ್ನು ಎದುರಿಸಿ ಹಣಬಲ ಮತ್ತು ಜನಬಲದಿಂದ ಪ್ರತಿ ಮತದಾರರನ್ನು ತಲುಪಲು ಪ್ರಯತ್ನಿಸಿದ್ದರು.

ಶಿಂಧೆ ಅವರು ಸೊಲ್ಲಾಪುರ ಮತಕ್ಷೇತ್ರದಲ್ಲಿ ಸುಮಾರು 27 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎನ್‌ಟಿಪಿಸಿ, ಪಾವರ್‌ ಗ್ರೇಡ್‌ ಹಾಗೂ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಈ ಕಾರ್ಯಗಳನ್ನು ಮುಂದಿಟ್ಟುಕೊಂಡು ಶಿಂಧೆ ಪ್ರಚಾರ ಕಾರ್ಯ ಕೈಗೊಂಡಿದ್ದರು. ಶಿಂಧೆ ಸೋಲಿನ ಭಯದಿಂದ ಪ್ರಚಾರ ಸಭೆಗಳಲ್ಲಿ ಪದೆ ಪದೇ ಇದು ತಮ್ಮ ಕೊನೆ ಚುನಾವಣೆಯಾಗಿದೆ ಎಂದು ಹೇಳುತ್ತಿದ್ದರು.

Advertisement

ಲಿಂಗಾಯತ ಸಮುದಾಯದಿಂದ ಬಂದ ಡಾ| ಜಯಸಿದ್ಧೇಶ್ವರ ಸ್ವಾಮೀಜಿ ಅವರನ್ನು ಕಣಕ್ಕಿಳಿಸುವುದರ ಮೂಲಕ ಬಿಜೆಪಿ ಶಿಂಧೆ ವಿರುದ್ಧ ಪ್ರಬಲವಾದ ಸವಾಲನ್ನು ಹುಟ್ಟುಹಾಕಿತ್ತು. ಸುಮಾರು 63 ವಯಸ್ಸಿನ ಡಾ| ಜಯಸಿದ್ಧೇಶ್ವರ ಶಿವಾಚಾರ್ಯರು ಮಠಗಳನ್ನು ನಡೆಸುತ್ತಿದ್ದಾರೆ. ಈ ಮಠಗಳಿಗೆ ಲಿಂಗಾಯತರು ದೊಡ್ಡ ಆಸ್ತಿ ಇದ್ದಂತೆ. ಅಲ್ಲದೇ ಈ ಭಾಗದಲ್ಲಿ ಪ್ರವಚನಗಳ ಮೂಲಕ ಜನರ ಮನಸ್ಸು ಸೆಳೆದಿದ್ದಾರೆ. ಇದೀಗ ಅಧ್ಯಾತ್ಮಿಕದಿಂದ ರಾಜಕೀಯ ಕ್ಷೇತ್ರದ ಕಡೆಗೆ ಬಂದು ಗೆಲುವು ಸಾಧಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲಿಂಗಾಯತ ಸಮುದಾಯದ ನಾಯಕ ವಿಜಯಕುಮಾರ ದೇಶಮುಖ ಮತ್ತು ಸಹಕಾರ ಸಚಿವ, ಮರಾಠಾ ಸಮುದಾಯದ ನಾಯಕ ಸುಭಾಷ್‌ ದೇಶಮುಖ ತಮ್ಮ ಆಂತರಿಕ ಮತ ಭೇದ ಮರೆತು ಸಕ್ರಿಯವಾಗಿ ಮತ ಬೇಟೆಯಲ್ಲಿ ತೊಡಗಿ ಲಿಂಗಾಯತ ಮತ್ತು ಮರಾಠಾ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಡಾ| ಶಿವಾಚಾರ್ಯರು ಮತ್ತು ಅಂಬೇಡ್ಕರ್‌ ಪ್ರವೇಶದೊಂದಿಗೆ ಹಿಂದುಳಿದ ಮತಗಳನ್ನು ಸೆಳೆಯುವ ಬೆಳವಣಿಗೆಯ ವಿಷಯಗಳ ನಡುವೆಯೂ ಸ್ಪರ್ಧೆ ಏರ್ಪಟ್ಟಿತ್ತು. ಇಡಿ ಚುನಾವಣೆಯು ನಿಜವಾದ ವಿಷಯಗಳಿಗಿಂತ ಜಾತಿ-ಧರ್ಮಗಳ ಮೇಲೆ ಹೋರಾಟ ನಡೆಸಿರುವುದು ಸುಳ್ಳಲ್ಲ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ. ಇವೆಲ್ಲ ಬೆಳವಣಿಗೆಯು ಕಾಂಗ್ರೆಸ್‌ ಹಿರಿಯ ನಾಯಕ ಸುಶೀಲಕುಮಾರ ಶಿಂಧೆ ಅವರ ರಾಜಕೀಯ ಭವಿಷ್ಯಕ್ಕೆ ತಡೆಯೊಡ್ಡಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next