Advertisement

ರಿಯಾನ್‌ ಪರಾಗ್‌-ಹರ್ಷಲ್‌ ಪಟೇಲ್‌: ಏನಿದು ಜಗಳ?

10:50 PM Apr 27, 2022 | Team Udayavani |

ಪುಣೆ: ಆರ್‌ಸಿಬಿ ಮತ್ತು ರಾಜಸ್ಥಾನ್‌ ನಡುವಿನ ಮಂಗಳವಾರ ರಾತ್ರಿಯ ಪಂದ್ಯ ಅನಗತ್ಯ ಕಾರಣಕ್ಕಾಗಿ ಸುದ್ದಿಯಾಗಿದೆ. ಹರ್ಷಲ್‌ ಪಟೇಲ್‌ ಮತ್ತು ರಿಯಾನ್‌ ಪರಾಗ್‌ ಈ ಸುದ್ದಿಯ ಪಾಲುದಾರರು.

Advertisement

ರಾಜಸ್ಥಾನ್‌ ಇನ್ನಿಂಗ್ಸ್‌ ವೇಳೆ ಹರ್ಷಲ್‌ ಪಟೇಲ್‌ ಎಸೆದ ಕೊನೆಯ ಓವರ್‌ನಲ್ಲಿ ರಿಯಾನ್‌ ಪರಾಗ್‌ ಒಂದು ಬೌಂಡರಿ, 2 ಸಿಕ್ಸರ್‌ ಸೇರಿದಂತೆ 18 ರನ್‌ ಚಚ್ಚಿದರು. ಅಂತಿಮ ಎಸೆತ ಸಿಕ್ಸರ್‌ ಸಿಡಿದಾಗ ಪಟೇಲ್‌ ಆಕ್ರೋಶಗೊಂಡಿದ್ದಾರೆ. ಇನ್ನಿಂಗ್ಸ್‌ ಮುಗಿಸಿ ಡಗೌಟ್‌ನತ್ತ ಸಾಗುತ್ತಿದ್ದಾಗ ಪರಾಗ್‌ ಜತೆ ಜಗಳಕ್ಕಿಳಿದಿದ್ದಾರೆ. ಪರಾಗ್‌ ಕೂಡ ತಕ್ಕ ಜವಾಬು ನೀಡಿದ್ದಾರೆ. ಆಗ ಉಳಿದ ಆಟಗಾರರು ಇವರಿಬ್ಬರನ್ನು ಸಮಾಧಾನಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪರಾಗ್‌-ಪಟೇಲ್‌ ಮುಂದಿನ “ಮುಖಾಮುಖಿ’ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗುವ ರೀತಿಯಲ್ಲಿತ್ತು. ಆರ್‌ಸಿಬಿ ಸೋಲು ಖಚಿತವಾದರೂ ಮುನ್ನುಗ್ಗಿ ಬಾರಿಸುತ್ತಿದ್ದ ಹರ್ಷಲ್‌ ಪಟೇಲ್‌, ಅಂತಿಮವಾಗಿ ಪರಾಗ್‌ ಕೈಗೇ ಕ್ಯಾಚ್‌ ನೀಡಿ ವಾಪಸಾದರು. ಪಟೇಲ್‌ಗೆ ಇದು ಒಂಥರ “ಶೇಮ್‌’ ಅನಿಸಿತು. ಇದು ಕೂಡ ಪಟೇಲ್‌ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲಿಗೆ ರಾಜಸ್ಥಾನ್‌ ಜಯಭೇರಿಯೂ ಮೊಳಗಿದೆ.

ಕೊನೆಗೆ ಇತ್ತಂಡಗಳ ಆಟಗಾರರು ಪರಸ್ಪರ ಕೈ ಕುಲುಕುವ ವೇಳೆ ಪರಾಗ್‌-ಪಟೇಲ್‌ ಆಕ್ರೋಶ ಮತ್ತೂಮ್ಮೆ ಕಾಣಿಸಿಕೊಂಡಿದೆ. ಸಿಟ್ಟಿನಲ್ಲಿದ್ದ ಪಟೇಲ್‌, ಪರಾಗ್‌ ಅವರ ಕೈ ಕುಲುಕದೆಯೇ ಮುಂದಡಿ ಇರಿಸಿದ್ದಾರೆ. ಪರಾಗ್‌ ಶೇಕ್‌ಹ್ಯಾಂಡ್‌ ಮಾಡಲು ಬಂದರೂ ಪಟೇಲ್‌ ಇದಕ್ಕೆ ಸ್ಪಂದಿಸದೇ ಸಾಗಿದ್ದಾರೆ. ಕ್ರೀಡಾಸ್ಫೂರ್ತಿ ಮರೆತ ಪಟೇಲ್‌ ಅವರ ಈ ವರ್ತನೆಗೆ ಕ್ರಿಕೆಟ್‌ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next