Advertisement

Rusty vehicles: ವಿಲೇವಾರಿ ಆಗದೆ ತುಕ್ಕು ಹಿಡಿದು ಕಸವಾದ ವಾಹನಗಳು

10:16 AM Aug 14, 2023 | Team Udayavani |

1.16 ಕೋಟಿ ವಾಹನ ಸಂಚರಿಸುವ ಬೆಂಗಳೂರಿನಲ್ಲಿ ಪ್ರತಿದಿನ 2,600 ವಾಹನ ಹೊಸದಾಗಿ ನೋಂದಣಿ ಆಗುತ್ತಿವೆ. ನಿತ್ಯ ಕನಿಷ್ಠ 6 ಲಕ್ಷ ವಾಹನ ಬೆಂಗಳೂರಿಗೆ ಬಂದು ಹೋಗುತ್ತವೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳು ರಸ್ತೆಗಿಳಿಯುವುರಿಂದ 2022ರಲ್ಲಿ ವಿಶ್ವದ ಸಂಚಾರ ದಟ್ಟಣೆ ಪಟ್ಟಿಯಲ್ಲಿ 2ನೇ ಸ್ಥಾನವನ್ನೂ ಪಡೆದಿದೆ. ಇದೆಲ್ಲದರ ಜತೆಗೆ ಬೆಂಗಳೂರಲ್ಲಿರುವ ಒಟ್ಟಾರೆ ವಾಹನಗಳ ಶೇ.20 ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಧೂಳು ಹಿಡಿಯುತ್ತಿವೆ. ನಾನಾ ಕಾರಣದಿಂದ ಮಾಲೀಕರು ಸಿಗದೆ, ನ್ಯಾಯಾಲಯದಿಂದ ಹರಾಜು ಪ್ರಕ್ರಿಯೆಗೆ ಒಪ್ಪಿಗೆ ಮುದ್ರೆ ಬೀಳುತ್ತಿದ್ದಂತೆ ಜಪ್ತಿಯಾಗಿದ್ದ ವಾಹನಗಳನ್ನು ಎಂಎಸ್‌ಟಿಸಿ ಎಂಬ ಸರ್ಕಾರಿ ಸ್ವಾಮ್ಯದ ಕಂಪನಿ ಆನ್‌ಲೈನ್‌ ಮೂಲಕ ಹರಾಜು ಹಾಕುತ್ತಿದೆ. ಇಷ್ಟಾದರೂ ಜಕ್ಕರಾಯನಕೆರೆ ಮೈದಾನದಲ್ಲಿ 1 ಸಾವಿರ, ಮಲ್ಲಸಂದ್ರದಲ್ಲಿ 1500 ಸೇರಿ ವಿವಿಧೆಡೆ 15 ಸಾವಿರಕ್ಕೂ ಅಧಿಕ ವಾಹನಗಳು ಮಾಲೀಕರ ಕೈ ಸೇರಲು ಕಾಯುತ್ತಿವೆ. ಅನಾಥ ವಾಹನಗಳ ಗೋಳಿನ ಕತೆ ವಾರದ “ಸುದ್ದಿ ಸುತ್ತಾಟ’ದಲ್ಲಿ…

Advertisement

“ಚಿರಪರಿಚಿತನಿಂದ ಹಿಡಿದು ಅಪರಿಚಿತನವರೆಗೆ ಎಲ್ಲರನ್ನೂ ಹೊತ್ತು ಸಾಗಿದ್ದೇನೆ. ಬಿಸಿಲು, ಮಳೆ, ಬಿರುಗಾಳಿ, ಚಳಿಗೆ ಸಿಲುಕಿ ನಲುಗಿದ್ದೇನೆ. ಮಾಲೀಕ ಎಲ್ಲಿದ್ದಾನೋ ಗೊತ್ತಿಲ್ಲ. ಇಷ್ಟು ವರ್ಷ ಅವನು ತೋರಿಸಿದ ಕಡೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದೇನೆ. ಆದರೆ, ಇವತ್ತು ಅವನೇ ನನ್ನನ್ನು ಮರೆತಿದ್ದಾನೆ. ನೀವಾದರೂ ನಮ್ಮ ಕಷ್ಟ-ಸುಖ ವಿಚಾರಿಸುವಿರಾ? ಕನಿಷ್ಠ ಪಕ್ಷ ನಮ್ಮ ಫೋಸ್ಟ್‌ ಮಾರ್ಟಂ(ಗುಜರಿಗೆ)ನಾದರೂ ಮಾಡಿ’…

-ಇದು, ಗೊತ್ತಿಧ್ದೋ ಗೊತ್ತಿಲ್ಲದೆಯೋ ನಾನಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಕಾರಣಕ್ಕೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವರ್ಷಗಟ್ಟಲೆಯಿಂದ ಅನಾಥವಾಗಿ ನಿಂತಿರುವ ವಾಹನಗಳ ಗೋಳಿನ ಸ್ವಾಗತ.

ಕೆಲವೊಮ್ಮೆ ಬ್ರೇಕ್‌ ವೈಫ‌ಲ್ಯ ಮತ್ತಿತರ ತಾಂತ್ರಿಕ ದೋಷದಿಂದ, ಎದುರಿನಿಂದ ಬರುವ ವಾಹನ ಗುದ್ದಿ, ಹಲವು ಪ್ರಕರಣಗಳಲ್ಲಿ ಸವಾರರ ತಪ್ಪಿನಿಂದ ಅಪಘಾತ ಆಗುವುದೇ ಹೆಚ್ಚು. ಇದಲ್ಲದೆ, ಕೊಲೆ, ಸುಲಿಗೆ, ದರೋಡೆ, ಕಳ್ಳತನ ಸೇರಿ ಇನ್ನಿತರ ಪ್ರಕರಣಗಳಲ್ಲಿ ಸಿಕ್ಕಿಬಿದ್ದವನಿಗೆ ಜಾಮೀನು ಸಿಕ್ಕರೂ, ಇದಕ್ಕಾಗಿ ಬಳಕೆ ಆದ ವಾಹನಗಳಿಗೆ ಮಾತ್ರ ಅಷ್ಟು ಬೇಗ ಶಿಕ್ಷೆ ತಪ್ಪುವುದಿಲ್ಲ.

ಠಾಣೆ ಎದುರು, ರಸ್ತೆ ಬದಿಗಳಲ್ಲಿ ಮಗ್ಗಲು ಮಲಗಲಾಗದೆ ನಿಂತು, ಪಕ್ಕದಲ್ಲಿ ಭರ್ರನೆ ಸಾಗುವ ಬೇರೆ ವಾಹನಗಳ ಹೊಗೆ, ಧೂಳಿನಿಂದ ತುಕ್ಕು ಹಿಡಿಯುತ್ತಿವೆ. ಇವುಗಳಿಗೆ ಬಯಲೇ ಆಶ್ರಯ. ತಮ್ಮ ಮೇಲಿನ ಅಪರಾಧ ಪ್ರಕರಣ ಇತ್ಯರ್ಥವಾಗುವವರೆಗೂ ನಿಂತಲ್ಲಿಯೇ ನಿಲ್ಲುವ ಶಿಕ್ಷೆ. ಇಷ್ಟು ಕಾಲ ಜತೆಗಿದ್ದ ಯಜಮಾನ ಇದೀಗ ಇಲ್ಲ. ಆತನ ನಿರೀಕ್ಷೆಯÇÉೇ ಈ ವಾಹನಗಳು ದಿನ ದೂಡುತ್ತಿವೆ. ಅಪರಾಧಿ ನಾನಲ್ಲ, ಅಪರಾಧ ಎನಗಿಲ್ಲ ಎನ್ನಿತ್ತಾ ನಿಂತ ವಾಹನಗಳು, ಹಳೆ ಮಾಲೀನಾದರೂ ಸರಿ, ಹರಾಜಿನಲ್ಲಿ ಕೊಳ್ಳುವ ಹೊಸ ಮಾಲೀಕನಾದರೂ ಸರಿ ಅನಾಥವಾಗಿ ನಿಲ್ಲುವ ಶಿಕ್ಷೆಯಿಂದ ಮುಕ್ತಿ ಕೊಡಿಸಲಿ ಎಂದು ಹಪಹಪಿಸುತ್ತಿವೆ.

Advertisement

ಈ ಹಿಂದೆ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ವಾಹನಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಹೈಕೋರ್ಟ್‌ ಸಲಹೆ ನೀಡಿತ್ತು. ಅನಗತ್ಯವಾಗಿ ಠಾಣೆಗಳ ಮುಂದೆ ನಿಲ್ಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಬಾಂಡ್‌ ಪಡೆದುಕೊಂಡು ವಾಹನಗಳ ಬಿಡುಗಡೆಗೆ ಸೂಚಿಸಿತ್ತು. ಇದಕ್ಕೆ ಕಾನೂನು ಪ್ರಕ್ರಿಯೆಗಳಷ್ಟೇ ಅಲ್ಲದೆ, ಇನ್ನಷ್ಟು ಅಂಶಗಳಿಂದ ಹಿನ್ನಡೆಯಾಗುತ್ತಿರುವುದು ಅಷ್ಟೇ ಸತ್ಯ.

ಮಾಲೀಕರ ಪತ್ತೆಯೇ ಸವಾಲು: ಪ್ರಮುಖವಾಗಿ ವಾಹನಗಳನ್ನು ಜಪ್ತಿ ಮಾಡಿಕೊಂಡ ಪೊಲೀಸರು ಪ್ರಕರಣಗಳ ಆಧಾರದ ಮೇಲೆ ಕಾನೂನು ಪ್ರಕ್ರಿಯೆ ನಡೆಸಲು ಒಂದಿಷ್ಟು ಸಮಯಾವಕಾಶ ಬೇಕಾಗುತ್ತದೆ. ಆ ವಾಹನಗಳ ಬಿಡುಗಡೆ ಆಗಬೇಕಾದರೆ, ಪೊಲೀಸರು ಆರೋಪಪಟ್ಟಿ ಸಲ್ಲಿಸಬೇಕು. ಆ ಬಳಿಕ ಕೋರ್ಟ್‌ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಲಿದೆ. ಈ ಎಲ್ಲ ಪ್ರಕ್ರಿಯೆಗಳಿಗೆ ಕನಿಷ್ಠ ಆರು ತಿಂಗಳಿಂದ ಒಂದು ವರ್ಷ ಸಮಯ ಬೇಕಾಗುತ್ತದೆ.

ಈ ಮಧ್ಯೆ ವಶಕ್ಕೆ ಪಡೆದ ವಾಹನಗಳ ಮಾಲೀಕರ ಪತ್ತೆಯೂ ಸವಾಲಿನ ಕೆಲಸ. ಬೆಂಗಳೂರಿನಲ್ಲಿ ಎಷ್ಟೋ ಜನರ ವಿಳಾಸವೇ ಬದಲಾಗಿರುತ್ತದೆ. ಸಾರಿಗೆ ಇಲಾಖೆ ನೆರವು ಪಡೆದು ಅವರ ಮೂಲ ವಿಳಾಸ ಪತ್ತೆಗೆ ತಿಂಗಳುಗಳೇ ಕಳೆಯುತ್ತವೆ. ಕೆಲ ಸಂದರ್ಭದಲ್ಲಿ ಎಂಜಿನ್‌ ಮತ್ತು ಚಾಸ್ಸಿ ನಂಬರ್‌ ಹೊಂದಾಣಿಕೆ ಆಗುವುದಿಲ್ಲ. ಹೀಗಾಗಿ ಪೊಲೀಸರು ಕಾನೂನು ಪ್ರಕ್ರಿಯೆ ಬೇಗ ಮುಗಿಸಲು ದೂರುದಾರ ಅಥವಾ ವಾಹನ ಮಾಲೀಕನ ವಿಳಾಸಕ್ಕೆ ನಾಲ್ಕೈದು ನೋಟಿಸ್‌ ನೀಡಿ, ಪ್ರತಿಕ್ರಿಯೆ ಬಾರದಿದ್ದಾಗ ಆ ವಾಹನ ಠಾಣೆ ಆವರಣದಲ್ಲಿ ನಿಲ್ಲಿಸಿ ವರ್ಷ ಕಳೆದ ಬಳಿಕ ವಿಲೇವಾರಿ ಮಾಡುತ್ತಾರೆ.

ವಾಹನಗಳ ಬಗ್ಗೆ ಮಾಲೀಕರಿಗೆ ಆಸಕ್ತಿ ಇಲ್ಲ: ವಾಹನ ಕಳೆದುಕೊಂಡ ಮಾಲೀಕ ಒಮ್ಮೆ ದೂರು ಕೊಟ್ಟ ಬಳಿಕ ಠಾಣೆ ಕಡೆ ಬರುವುದೇ ಇಲ್ಲ. ಅಲ್ಲದೆ, ವಾಹನ ಪತ್ತೆಯಾಗಿದ್ದು, ಬಿಡಿಸಿಕೊಳ್ಳಿ ಎಂದು ಕರೆ ಮಾಡಿದರೆ, ಕೆಲವರು ಬರುತ್ತಾರೆ. ಇನ್ನು ಕೆಲವರಿಂದ ಸ್ಪಂದನೆಯೇ ಇರುವುದಿಲ್ಲ. ಏಕೆಂದರೆ, ಒಮ್ಮೆ ಎಫ್ಐಆರ್‌ ಪ್ರತಿ ಪಡೆದುಕೊಂಡು ಒಂದಷ್ಟು ದಿನಗಳ ಬಳಿಕ ನೇರವಾಗಿ ವಿಮೆ ಕಂಪನಿಗಳಿಗೆ ಭೇಟಿ ನೀಡಿ ಇನ್ಶೂರೆನ್ಸ್‌ ಕ್ಲೈಮ್‌ ಮಾಡಿಕೊಳ್ಳುತ್ತಾರೆ. ಅಂತಹ ವಾಹನಗಳ ಮಾಲೀಕರನ್ನು ಪತ್ತೆ ಹಚ್ಚಿ ಕರೆಯಿಸಿ, ಠಾಣೆಯಲ್ಲಿ ವಾಹನ ಬೇಡವೆಂದು ಬರೆಸಿಕೊಂಡು, ಅದನ್ನು ಕೋರ್ಟ್‌ಗೆ ಸಲ್ಲಿಸಬೇಕು. ಈ ವೇಳೆ ಸುಸ್ಥಿತಿಯಲ್ಲಿ ಇಲ್ಲದ ವಾಹನ ಪಡೆದುಕೊಂಡು ಏನು ಮಾಡುವುದು? ಹೀಗಾಗಿ ವಾಹನ ಬೇಡ ಎಂದು ಹೇಳುತ್ತಾರೆ. ಆದರಿಂದ ಕೋರ್ಟ್‌ ಅನುಮತಿ ಪಡೆದು ವಿಲೇವಾರಿ ಮಾಡಲಾಗುತ್ತದೆ.

ವರ್ಷಗಳೇ ಕಳೆಯುತ್ತವೆ: ಕೊಲೆ, ಕೊಲೆ ಯತ್ನ, ಸುಲಿಗೆ, ಡಕಾಯಿತಿ ಪ್ರಕರಣದಲ್ಲಿ ಆರೋಪಿಯೇ ವಾಹನ ಮಾಲೀಕನಾದರೆ ಕೋರ್ಟ್‌ ವಿಲೇವಾರಿ ಮಾಡುವುದಿಲ್ಲ. ಅಥವಾ ಬೇರೆ ಮಾಲೀಕನಾದರೆ ಆತ ತನ್ನ ವಾಹನ ಎಂದು ಕೋರ್ಟ್‌ಗೆ ಸೂಕ್ತ ದಾಖಲೆ ಸಲ್ಲಿಸಬೇಕು. ಆಗ ಕನಿಷ್ಠ 3ಕ್ಕೂ ಹೆಚ್ಚು ಬಾರಿ ವಿಚಾರಣೆ ನಡೆದ ಬಳಿಕ ಕೋರ್ಟ್‌ ಅಂತಹ ವಾಹನಗಳ ವಿಲೇವಾರಿಗೆ ಅನುಮತಿ ನೀಡುತ್ತದೆ. ಮತ್ತೂಂದೆಡೆ ರಸ್ತೆ ಅಪಘಾತದಂತಹ ಪ್ರಕರಣಗಳಲ್ಲಿ ಇತ್ಯರ್ಥವಾಗುವ ತನಕ ಮಾಲೀಕನಿಗೆ ಹಸ್ತಾಂತರ ಮಾಡುವಂತೆಯೇ ಇಲ್ಲ. ಒಂದು ವೇಳೆ ಪ್ರಕರಣ ಮುಗಿದರೂ ಅದನ್ನು ಪಡೆಯಲು ಕೆಲ ಮಾಲೀಕರು ಮುಂದೆ ಬರುವುದಿಲ್ಲ. ಹಾಗಾಗಿ ಅಪಘಾತ ಪ್ರಕರಣಗಳ ವಾಹನಗಳಿಗೆ ಠಾಣೆಯಿಂದ ಮುಕ್ತಿ ಸಿಗುವುದೇ ಇಲ್ಲ ಎಂದು ಮೂಲಗಳು ತಿಳಿಸಿವೆ.

ಅಪಶಕುನ ಎಂಬ ನಂಬಿಕೆ: ಅಪಘಾತಕ್ಕೆ ಒಳಗಾದ ವಾಹನ ಅಪಶಕುನ ಎಂಬ ನಂಬಿಕೆ ಜನರಲ್ಲಿದೆ. ಅಪಘಾತಕ್ಕೊಳಗಾದ ವಾಹನ ಪುನಃ ಬಳಸುವುದರಿಂದ ದಾರಿಯಲ್ಲಿ ಹೋಗೋ ಮಾರೀನ ಮನೆಗೆ ತಂದಂತೆ ಎಂದೇ ಹಲವರು ಹಿಂಜರಿಯುತ್ತಾರೆ. ಅಪಘಾತಕ್ಕೆ ಒಳಗಾದ ವಾಹನವನ್ನು ಇಟ್ಟುಕೊಳ್ಳಬಾರದೆಂಬ ಬಲವಾದ ನಂಬಿಕೆ ಹಲವರಲ್ಲಿದೆ.

ಠಾಣೆ ಆವರಣದಲ್ಲಿದ್ದ 58 ವಾಹನಕ್ಕೆ ಬಿದ್ದಿತ್ತು ಬೆಂಕಿ:

ಇತ್ತೀಚೆಗೆ ಕೊಡಿಗೇಹಳ್ಳಿ ಠಾಣೆ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಟ್ರಾನ್ಸ್‌ ಫಾರ್ಮರ್‌ನಿಂದ ಬೆಂಕಿ ತಗುಲಿ 58 ದ್ವಿಚಕ್ರ ವಾಹನ ಸುಟ್ಟು ಕರಕಲಾಗಿವೆ. ವಾಹನಗಳ ಅವಶೇಷಗಳು ಠಾಣೆ ಆವರಣದಲ್ಲಿದ್ದು, ಅವುಗಳ ಚಾಸ್ಸಿ ನಂಬರ್‌ ಆಧರಿಸಿ ವಾಹನಗಳ ಪತ್ತೆ ಕಾರ್ಯ ಈಗಲೂ ನಡೆಯುತ್ತಿದೆ. ಇನ್ನು ಕೆಲವು ಕಡೆಗಳಲ್ಲಿ ವಾಹನಗಳ ಬಿಡಿಭಾಗಗಳು ಕಳುವಾಗಿರುವ ಉದಾಹರಣೆಗಳು ಕೂಡ ಇದೆ.

ಪೊಲೀಸ್‌ ಠಾಣೆ, ನಗರ ಸೌಂದರ್ಯಕ್ಕೂ ಹಾನಿ:

ಬೆಂಗಳೂರು ನಗರದಲ್ಲಿ ಒಟ್ಟು 155 ಠಾಣೆಗಳಿವೆ. ಪ್ರತಿ ಠಾಣೆಯಿಂದ ತಿಂಗಳಿಗೆ 60 ಜಪ್ತಿ ವಾಹನ ಎಂದು ಲೆಕ್ಕ ಹಾಕಿದರೂ ಅಂದಾಜು ಹತ್ತು ಸಾವಿರ ವಾಹನಗಳು ಠಾಣೆ ಮುಂದೆ ಧೂಳು ತಿನ್ನುತ್ತಿವೆ. ಇದು ಸಾಲದೆಂಬಂತೆ, ಆಡುಗೋಡಿ ಮತ್ತು ಶೇಷಾದ್ರಿಪುರದಲ್ಲಿರುವ ಜಕ್ಕರಾಯನ ಕೆರೆ ಆವರಣದಲ್ಲಿ 15 ಸಾವಿರಕ್ಕೂ ಅಧಿಕ ವಾಹನಗಳು ತುಕ್ಕು ಹಿಡಿಯುತ್ತಿವೆ. ಪೊಲೀಸ್‌ ಠಾಣೆಗಳ ಮುಂದೆ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಹಳೇ ಹಾಗೂ ಗುಜರಿಗೆ ಸೇರುವ ವಾಹನಗಳನ್ನು ನಿಲ್ಲಿಸುವುದರಿಂದ ಠಾಣೆ ಹಾಗೂ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಜತೆಗೆ ಕೆಲವೆಡೆ ಸಂಚಾರ ದಟ್ಟಣೆ ಕೂಡ ಆಗಲಿದೆ. ಇತ್ತೀಚೆಗೆ ಹೊಸ ಠಾಣೆಗಳ ಸ್ಥಾಪನೆ ವೇಳೆ ಜಪ್ತಿ ವಾಹನಗಳಿಗಾಗಿಯೇ ಪ್ರತ್ಯೇಕ ಮಾಡಲಾಗಿದೆ. ಆದರೆ, ಹಳೇ ಪೊಲೀಸ್‌ ಠಾಣೆಗಳಿಗೆ ಪ್ರವೇಶಿಸಿದರೆ ಈಗಲೂ ತುಕ್ಕು ಹಿಡಿದ ವಾಹನಗಳ ಸ್ವಾಗತಿಸುತ್ತವೆ. ಈ ಮಧ್ಯೆ ಶೇಷಾದ್ರಿಪುರದ ಜಕ್ಕರಾಯನಕೆರೆಯಲ್ಲಿ ಪೊಲೀಸರು ಸಾವಿರಾರು ವಾಹನಗಳನ್ನು ನಿಲ್ಲಿಸಿದ್ದಾರೆ ಎಂದು ಹಿರಿಯ ನಾಗರೀಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಯಾವುದೇ ಪ್ರಕರಣದಲ್ಲಿ ಜಪ್ತಿ ಮಾಡಲಾದ ವಾಹನವನ್ನು ಕೋರ್ಟ್‌ ವಿಚಾರಣೆ ಮುಕ್ತಾಯಗೊಂಡ ಬಳಿಕವಷ್ಟೇ ಅನುಮತಿ ಪಡೆದು ವಿಲೇವಾರಿ ಮಾಡಬೇಕು. ಹೀಗಾಗಿ, ಆಗಾಗ್ಗೆ ಕೋರ್ಟ್‌ ಅನುಮತಿ ಮೇರೆಗೆ ವಿಲೇವಾರಿ ಮಾಡಲಾಗುತ್ತದೆ.-ಎಸ್‌.ಡಿ.ಶರಣಪ್ಪ, ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ  

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next