Advertisement

ರಷ್ಯಾದ ಕೋವಿಡ್ ಕಥನ ; ಮಾದರಿಯಾಗಲಿ ಪ್ರಯತ್ನ

10:00 AM Jun 06, 2020 | mahesh |

ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ತಮ್ಮ ಪೂರ್ಣ ಶಕ್ತಿಯನ್ನು ಉಪಯೋಗಿಸುತ್ತಿವೆಯಾದರೂ, ಈಗಲೂ ಕೂಡ ವೈರಸ್‌ ಅನ್ನು ಹತ್ತಿಕ್ಕುವಂಥ ಲಸಿಕೆಯಾಗಲಿ ಅಥವಾ ವೈರಸ್‌ ರೂಪಾಂತರಗೊಂಡು ದುರ್ಬಲವಾಗುತ್ತಿದೆ ಎಂಬ ಸುದ್ದಿಯಾಗಲಿ ಬರುತ್ತಿಲ್ಲ. ಆರಂಭಿಕ ಸಮಯದಲ್ಲಿ ಯುರೋಪಿಯನ್‌ ರಾಷ್ಟ್ರಗಳಲ್ಲಿ ತಾಂಡವವಾಡಿದ ಈ ವೈರಸ್‌ ಈಗ ಉಳಿದ ದೇಶಗಳಲ್ಲಿ ಹಾವಳಿ ಎಬ್ಬಿಸಲಾರಂಭಿಸಿದೆ. ಆದಾಗ್ಯೂ, ದಕ್ಷಿಣ ಏಷ್ಯಾದಲ್ಲಿ ಈ ಸಾಂಕ್ರಾಮಿಕದ ತೀವ್ರತೆ ಕಡಿಮೆಯಿದೆ ಎನ್ನಲಾಗುತ್ತಿದೆಯಾದರೂ, ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿಷಯದಲ್ಲಿ ಸೋಂಕಿತರ ಸಂಖ್ಯೆ ಗಾಬರಿಹುಟ್ಟಿಸುವಂತೆ ಏರುತ್ತಿದೆ.

Advertisement

ಭಾರತದಲ್ಲಿ ಮಾಸ್ಟರ್‌ಸ್ಟ್ರೋಕ್‌ ಎಂದು ಕರೆಸಿಕೊಂಡ ಲಾಕ್‌ಡೌನ್‌ನಿಂದಾಗಿ ಆರಂಭದಲ್ಲಿ ಎದುರಾಗಬಹುದಾಗಿದ್ದ ಅನಾಹುತ ತಪ್ಪಿದಂತಾಗಿದೆ. ಆದರೆ ಮೇ 18ರಿಂದ ದೇಶದಲ್ಲಿ ನಿತ್ಯ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಲೇ ಇದೆ. ಆದಾಗ್ಯೂ, ಸ್ಥಿತಿಯನ್ನು ತುಲನಾತ್ಮಕವಾಗಿ ಅರ್ಥಮಾಡಿಕೊಳ್ಳಬೇಕು ಎಂದರೆ, ನಾವು ಬ್ರಿಟನ್‌ ಅಥವಾ ಇಟಲಿಯತ್ತ ನೋಡದೆ, ಅಧಿಕ ಉಪಯುಕ್ತವಾಗುವಂಥ ಉದಾಹರಣೆಗಳನ್ನು ಆಯ್ದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ರಷ್ಯಾ. ಗಮನಾರ್ಹ ಸಂಗತಿಯೆಂದರೆ ಜಾಗತಿಕ ಹಾಟ್‌ಸ್ಪಾಟ್‌ಗಳಲ್ಲಿ ಮೂರನೇ ಸ್ಥಾನದಲ್ಲಿರುವ ರಷ್ಯಾದಲ್ಲಿ ಸೋಂಕಿತರ ಸಂಖ್ಯೆ ಶುಕ್ರವಾರದ ವೇಳೆಗೆ 4 ಲಕ್ಷ 49 ಸಾವಿರಕ್ಕೇರಿದರೂ, ಆ ದೇಶದಲ್ಲಿ ಮೃತಪಟ್ಟವರ ಸಂಖ್ಯೆ ಭಾರತಕ್ಕಿಂತಲೂ ಕಡಿಮೆಯಿದೆ. ಅಲ್ಲಿ 5 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದರೆ, ಏಳನೇ ಸ್ಥಾನದಲ್ಲಿರುವ ಭಾರತದಲ್ಲಿ ಮೃತಪಟ್ಟವರ ಸಂಖ್ಯೆ 6 ಸಾವಿರದ ಗಡಿ ದಾಟಿದೆ. ರಷ್ಯಾ ವ್ಯಾಪಕ ಟೆಸ್ಟಿಂಗ್‌ಗಳ ಮೂಲಕ ಆರಂಭದ ದಿನಗಳಲ್ಲೇ ರೋಗಿಗಳನ್ನು ಪತ್ತೆಹಚ್ಚಲಾರಂಭಿಸಿತು.

ಜೂನ್‌ 5ರ ವೇಳೆಗೆ ಆ ದೇಶದಲ್ಲಿ 1 ಕೋಟಿ 20 ಲಕ್ಷ ಟೆಸ್ಟ್‌ಗಳನ್ನು ನಡೆಸಲಾಗಿದ್ದರೆ, ಭಾರತದಲ್ಲಿ 43 ಲಕ್ಷ ಟೆಸ್ಟ್‌ಗಳನ್ನು ನಡೆಸಲಾಗಿದೆ. ಇದೇನೇ ಇದ್ದರೂ, ರಷ್ಯಾ ಕೋವಿಡ್‌-19 ಚಿಕಿತ್ಸೆಗೆ ಎವಿಫ‌ವಿರ್‌ ಎಂಬ ಡ್ರಗ್‌ ಬಳಸುತ್ತಿದ್ದು, ಈ ಔಷಧ ನಿಜಕ್ಕೂ ಪರಿಣಾಮಕಾರಿಯೇ, ಕೊರೊನಾ ವಿರುದ್ಧದ ಹೋರಾಟಕ್ಕೆ ಪ್ರಬಲ ಅಸ್ತ್ರವಾಗಬಲ್ಲದೇ ಎನ್ನುವ ಚರ್ಚೆ ಆರಂಭವಾಗಿದೆ. ಎವಿಫ‌ವಿರ್‌ ಅನ್ನು ಆರಂಭಿಕ ಸಮಯದಲ್ಲೇ ಬಳಸುವುದರಿಂದ, ರೋಗ ಉಲ್ಬಣಿಸುವ ಸಾಧ್ಯತೆಯನ್ನು 50 ಪ್ರತಿಶತದಷ್ಟು ಕಡಿತಗೊಳಿಸಬಹುದು ಎಂದು ಆ ದೇಶದ ಸಂಶೋಧನಾ ವರದಿಗಳು ಹೇಳುತ್ತಿವೆ. ಭಾರತದಲ್ಲಿ ಎವಿಫ‌ವಿರ್‌ ಪರಿವಾರದ್ದೇ ಒಂದು ಔಷಧ ಇದ್ದು ಇದರ ಮೇಲೀಗ ಪರೀಕ್ಷೆಗಳು ನಡೆದಿವೆ. ಮರಣ ಪ್ರಮಾಣ ತಗ್ಗಿಸುವಲ್ಲಿ ಅದು ಪರಿಣಾಮಕಾರಿ ಎಂದು ತಿಳಿದರೆ ಅದಕ್ಕಿಂತ ಶುಭಸುದ್ದಿ ಮತ್ತೂಂದಿಲ್ಲ. ಏನೇ ಇದ್ದರೂ, ಸೋಂಕಿತರ ಸಂಖ್ಯೆ ಭಯಹುಟ್ಟಿಸುವ ರೀತಿಯಲ್ಲಿ ಬೆಳೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಮರಣ ಪ್ರಮಾಣವೂ ಹೆಚ್ಚುತ್ತದೆ. ಆದಷ್ಟು ಹಾನಿಯನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶದ ಸಂಶೋಧನಾ ವಲಯವು ನಡೆಸಿರುವ ಪ್ರಯತ್ನ ಸಫ‌ಲವಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next