Advertisement

ಮದ್ಯಕ್ಕಾಗಿ ಜನರ ನೂಕುನುಗ್ಗಲು

01:57 PM May 05, 2020 | Suhan S |

ಮಹಾಲಿಂಗಪುರ: ಪಟ್ಟಣದಲ್ಲಿ ಒಂದು ಎಂಎಸ್‌ಎಸ್‌ಐಎಲ್‌ ಹಾಗೂ ಮೂರು ಸಿಎಲ್‌ 2 ಅಂಗಡಿಗಳು ಸೇರಿದಂತೆ ಪಟ್ಟಣದಲ್ಲಿ ನಾಲ್ಕು ಮದ್ಯದ ಅಂಗಡಿಗಳು ಸೋಮವಾರ ಆರಂಭಗೊಂಡವು. ಮುಧೋಳದ ಅಬಕಾರಿ ಇಲಾಖೆಯ ಅಧಿಕಾರಿಗಳು ಅಂಗಡಿ ಆರಂಭಿಸುವ ಮುಂಚೆ ಮದ್ಯಪ್ರಿಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

Advertisement

ನಾಲ್ಕು ಅಂಗಡಿಗಳ ಎದುರು ಜನರುಜಮಾಯಿಸಿ, ಮದ್ಯ ಖರೀದಿಗಾಗಿ ಗದ್ದಲ ಹೆಚ್ಚಾಗಿದ್ದರಿಂದ ಪೊಲೀಸರು ಬಂದು ಸರದಿ ಸಾಲಿನಲ್ಲಿ ನಿಲ್ಲಿಸಿದರು. ರನ್ನಬೆಳಗಲಿ, ಸಮೀರವಾಡಿ ಗ್ರಾಮಗಳಲ್ಲಿನ ಮದ್ಯದ ಅಂಗಡಿಗಳ ಎದುರು ಜನರು ಸುಡು ಬಿಸಿಲಲ್ಲಿ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ರನ್ನಬೆಳಗಲಿಯಲ್ಲಿ ಎರಡು ಗಂಟೆಗಳ ಕಾಲ ಅಂಗಡಿ ಬಂದ್‌ ಮಾಡಿ, ಮತ್ತೇ ಅಂಗಡಿ ಆರಂಭಿಸಿದರು.

ಸರಕಾರದ ನಿಯಮದಂತೆ ಸಾಮಾಜಿಕ ಅಂತರ ಮತ್ತು  ಕಡ್ಡಾಯವಾಗಿ ಮಾಸ್ಕ್ ಧರಿಸಿ, ಮದ್ಯ ಖರೀದಿಸಬೇಕು. ಆದರೆ, ಪಟ್ಟಣ ಮತ್ತು ಗ್ರಾಮೀಣ ಭಾಗದ ಮದ್ಯ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತವರು ಮಾಸ್ಕ್ ಧರಿಸಿರಿಲಿಲ್ಲ. ಸಾಮಾಜಿಕ ಅಂತರವೂ ಇಲ್ಲವಾಗಿತ್ತು. ಕಳೆದ ಒಂದುವರೆ ತಿಂಗಳಿನಿಂದ ಮದ್ಯ ಮಾರಾಟ ಬಂದಾಗಿ ಸಾಮಾನ್ಯ ಮತ್ತು ಬಡ ಕುಟುಂಬದ ಹೆಣ್ಣು ಮಕ್ಕಳು ಮನೆಯಲ್ಲಿ ಜಗಳ, ತೊಂದರೆಯಿಲ್ಲದೇ ನೆಮ್ಮದಿಯಿಂದ ಇದ್ದರು. ಆದರೆ ಸರಕಾರ ಮತ್ತೆ ಮದ್ಯ ಮಾರಾಟ ಆರಂಭಿಸಿದ್ದರಿಂದ, ತಮ್ಮ ಪತಿಯಂದಿರು ಹೊಲಮನೆಗಳಲ್ಲಿನ ಕೆಲಸ ಬಿಟ್ಟು, ಮದ್ಯಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲಲು ಹೋಗಿದ್ದಾರೆ. ಇಂದಿನಿಂದ ನಮ್ಮ ಮನೆಗಳಲ್ಲಿ ಮತ್ತೇ ಜಗಳ ಪ್ರಾರಂಭವಾಗುತ್ತವೆ ಎಂಬ ಅಳಲು ತೋಡಿಕೊಂಡ ಗ್ರಾಮೀಣ ಭಾಗದ ಮಹಿಳೆಯರು ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ರಾಜ್ಯ ಸರಕಾರಕ್ಕೆ ಹಿಡಿಶಾಪ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next