Advertisement

ಕಲಬುರ್ಗಿಯಲ್ಲಿ ಗ್ರಾಮೀಣ ಕಾಲ್‌ಸೆಂಟರ್‌

08:07 AM Jun 18, 2020 | mahesh |

ಹುಬ್ಬಳ್ಳಿ: “ಗ್ರಾಮೀಣ ಮಹಿಳೆಯರು ತಮ್ಮ ಮನೆಗೆಲಸಗಳನ್ನು ಮುಗಿಸಿ ಕಾಲ್‌ಸೆಂಟರ್‌ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಮನೆಯಿಂದಲೇ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. ಮಹಾನಗರಗಳಿಗೆ ಸೀಮಿತ ಎನ್ನುವಂತಿದ್ದ ಕಾಲ್‌ಸೆಂಟರ್‌ ಇದೀಗ ಹಿಂದುಳಿದ ಪ್ರದೇಶ ಹಣೆಪಟ್ಟಿಯ ಕಲ್ಯಾಣ ಕರ್ನಾಟಕದ ಗ್ರಾಮೀಣದಿಂದ ಹೊರಹೊಮ್ಮಿದೆ’ ಗ್ರಾಮೀಣ ಮಹಿಳೆಯರಿಂದ ನಿರ್ವಹಣೆಯಾಗುತ್ತಿರುವ ಕಾಲ್‌ಸೆಂಟರ್‌ ಪ್ರಸ್ತುತ ರೇಷ್ಮೆ ಗೂಡುಗಳ ಖರೀದಿ ವಿಚಾರದಲ್ಲಿ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಿಗೂ ವಿಸ್ತರಿಸಲು, ಇನ್ನಷ್ಟು ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಒದಗಿಸುವ ಮಹದಾಸೆಯನ್ನು ಹೊಂದಿದೆ.

Advertisement

ಕಲಬುರಗಿಯಲ್ಲಿನ “ನಿಸರ್ಗ’ ಸಂಸ್ಥೆ ಹಾಗೂ ವಿಧಿ ಟೆಕ್ನಾಲಾಜಿಸ್‌ ಅಡಿಯಲ್ಲಿ ಗ್ರಾಮೀಣ ಮಹಿಳೆಯರಿಂದ ನಿರ್ವಹಣೆಯಾಗುವ ಕಾಲ್‌ಸೆಂಟರ್‌ ಆರಂಭಿಸಲಾಗಿದೆ. ಕಾಲ್‌ಸೆಂಟರ್‌ ಗಳೆಂದರೆ ಬಹುತೇಕವಾಗಿ ವಿದೇಶಿ ಗ್ರಾಹಕರನ್ನು ಹೊಂದಿರುತ್ತವೆ. ಅಲ್ಲಿ ಕೆಲಸ ಮಾಡಲು ಕನಿಷ್ಟ ಪದವಿ ಓದಿದರಬೇಕು, ಇಂಗ್ಲಿಷ್‌ ಚೆನ್ನಾಗಿ ಮಾತನಾಡಲು ಬರುತ್ತಿರಬೇಕು, ಅತ್ಯುತ್ತಮ ಸಂವಹನ ಕಲೆ ಗೊತ್ತಿರಬೇಕು ಎಂದೆಲ್ಲ ಹೇಳಾಗುತ್ತದೆ. ಆದರೆ, ಇದಾವುದರ ಗೋಜು ಇಲ್ಲದೆಯೇ ನಮ್ಮ ಕಾಲ್‌ಸೆಂಟರ್‌ ಗಳು ಯಾವುದೋ ದೇಶದ ಗ್ರಾಹಕರ ಸಮಸ್ಯೆ, ಬೇಡಿಕೆಗಳಿಗೆ ಪರಿಹಾರ, ಸ್ಪಂದನೆ ನೀಡುವ ಬದಲು ನಮ್ಮದೇ ಜನರಿಗೆ ಸ್ಪಂದಿಸುವ, ಅಗತ್ಯ ಸಂಪರ್ಕ ಕಲ್ಪಿಸುವ ಕಾರ್ಯವನ್ನು ಮಾಡುವಂತಾಗಬೇಕೆಂಬ ಉದ್ದೇಶದಿಂದ ಕಲ್ಯಾಣ ಕರ್ನಾಟಕದಲ್ಲಿ ಆರಂಭಗೊಂಡಿರುವ ಗ್ರಾಮೀಣ ಕಾಲ್‌ ಸೆಂಟರ್‌, ಹೊಸದೊಂದು ಭರವಸೆಯನ್ನು ಮೂಡಿಸಿದೆ.

ಪಿಯು ಓದು, ಕಂಪ್ಯೂಟರ್‌ ಜ್ಞಾನ ಸಾಕು: ನಿಸರ್ಗ ಸಂಸ್ಥೆ ಹಾಗೂ ವಿಧಿ ಟೆಕ್ನಾಲಾಜಿಸ್‌ ಆರಂಭಿಸಿರುವ ಗ್ರಾಮೀಣ ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡಲು ಕನಿಷ್ಟ ಪಿಯುಸಿ ಓದಿರುವ, ಕನ್ನಡ ಮಾತನಾಡಲು ಬರುವ ಹಾಗೂ ಕಂಪ್ಯೂಟರ್‌, ಇಂಟರ್‌ನೆಟ್‌ ಬಳಕೆ ಬಗ್ಗೆ ತಿಳಿಸಿದ್ದರೆ ಸಾಕು. ಕಂಪ್ಯೂಟರ್‌, ಇಂಟರ್‌ನೆಟ್‌ ಜ್ಞಾನ ಇಲ್ಲದಿದ್ದರೂ, ಸಂಸ್ಥೆಯಿಂದ ತರಬೇತಿ ನೀಡಲಾಗುತ್ತಿದೆ. ಪಿಯು ಓದಿದ ಮಹಿಳೆಯರನ್ನು ಗುರುತಿಸಿ ಕಾಲ್‌ಸೆಂಟರ್‌ ನಿರ್ವಹಣೆಗೆ ನಿಯೋಜಿಸಲಾಗುತ್ತಿದೆ. 2-3 ಜನರ ತಂಡ ಮಾಡಿ ಒಂದು ಪ್ರೊಜೆಕ್ಟ್ ನೊಂದಿಗೆ ಅವರಿಗೆ ಕಾಲ್‌ಸೆಂಟರ್‌ ನಿರ್ವಹಣೆ ನೀಡಲಾಗುತ್ತಿದೆ. ಮನೆಯಲ್ಲಿಯೇ ಇದನ್ನು ನಿರ್ವಹಿಸಬಹುದಾಗಿದೆ. ಗ್ರಾಮೀಣ ಮಹಿಳೆಯರು ಮನೆ ಕೆಲಸ, ಮಕ್ಕಳ ಪಾಲನೆ ಜತೆಯಲ್ಲಿಯೇ ಕಾಲ್‌ ಸೆಂಟರ್‌ ನಿರ್ವಹಣೆಗೆ ಅನುಕೂಲವಾಗುವಂತೆ ಇದನ್ನು ರೂಪಿಸಲಾಗಿದೆ.

ರೇಷ್ಮೆಗೂಡು ವಹಿವಾಟಿಗೆ ಸಂಪರ್ಕ: ಗ್ರಾಮೀಣ ಕಾಲ್‌ಸೆಂಟರ್‌ನಲ್ಲಿ ಪ್ರಸ್ತುತ ರೇಷ್ಮೆ ಗೂಡುಗಳ ಮಾರಾಟ ಕುರಿತಾಗಿ ಬೆಳೆಗಾರರು ಹಾಗೂ ಮಂಡಿಗೆ ಸಂಪರ್ಕ
ಕಲ್ಪಿಸುವ, ಮಾಹಿತಿ ಪಡೆಯುವ ಕಾರ್ಯವನ್ನು ಮಾಡಲಾಗುತ್ತಿದೆ. ಇಬ್ಬರು ಮಹಿಳೆಯರು ಕಾಲ್‌ಸೆಂಟರ್‌ ನಿರ್ವಹಣೆಯಲ್ಲಿ ತೊಡಗಿದ್ದು, ಬೆಂಗಳೂರಿನ “ರೇಷ್ಮೆ ಮಂಡಿ’ ಎಂಬ ಸಂಸ್ಥೆಯೊಂದಿಗೆ ಗ್ರಾಮೀಣ ಕಾಲ್‌ ಸೆಂಟರ್‌ ಒಡಂಬಡಿಕೆ ಮಾಡಿಕೊಂಡಿದೆ. ರೇಷ್ಮೆ ಮಂಡಿ ನೀಡುವ ಮಾಹಿತಿ ಆಧರಿಸಿ ಕಾಲ್‌ಸೆಂಟರ್‌ನಿಂದ ಮಹಿಳೆಯರು, ರೇಷ್ಮೆ ಬೆಳೆಗಾರರನ್ನು ಸಂಪರ್ಕಿಸಿ, ರೇಷ್ಮೆಗೂಡುಗಳ ಮಾರಾಟ ಕುರಿತಾಗಿ ಸಂಪರ್ಕ ಕಲ್ಪಿಸುವ, ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡುತ್ತಿದ್ದಾರೆ. ಇದೇ ಮಾದರಿಯನ್ನು ಇನ್ನಷ್ಟು ವಿಸ್ತರಿಸುವ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಗ್ರಾಮೀಣ ಕಾಲ್‌ಸೆಂಟರ್‌ ನಿಂದ ನಿರ್ವಹಣೆ ಮಾಡುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಮಹಿಳೆಯರಿಗೆ ತರಬೇತಿ ನೀಡಿಕೆ ಕಾರ್ಯ ಕೈಗೊಳ್ಳಲಾಗುತ್ತಿದೆ.

300 ಮಹಿಳೆಯರಿಗೆ ಹೊಲಿಗೆ ತರಬೇತಿ
ನಿಸರ್ಗ ಸಂಸ್ಥೆ ಕಾಲ್‌ಸೆಂಟರ್‌ ಅಲ್ಲದೆ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆ, ರೈತರಿಗೆ ಸಹಾಯದಂತಹ ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ
ತೊಡಗಿಕೊಂಡಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಾಸ್ಕ್ಗಳನ್ನು ತಯಾರಿಸಿದೆ. ಇದಕ್ಕಾಗಿ ಕಲಬುರಗಿ ಜಿಲ್ಲೆಯ ಸೇಡಂ, ಮಳಖೇಡ ಇನ್ನಿತರ ಕಡೆಯ ಸುಮಾರು 300ಕ್ಕೂ ಅಧಿಕ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲಾಗಿದೆ. ಜತೆಗೆ ಸುಮಾರು 50ಕ್ಕೂ ಹೆಚ್ಚು ಫೇಸ್‌ಶೀಲ್ಡ್‌ ಗಳನ್ನು ತಯಾರಿಸಲಾಗಿದೆ. ಮಹಿಳೆಯರಿಗೆ ಸಣ್ಣ- ಅತಿಸಣ್ಣ ಉದ್ಯಮ ಕುರಿತಾಗಿ ತರಬೇತಿ ನೀಡಲಾಗುತ್ತಿದ್ದು, ಕೋವಿಡ್‌-19 ಹಿನ್ನೆಲೆಯಲ್ಲಿ ರೈತರು ಬೆಳೆದ ತರಕಾರಿ-ಪಲ್ಯ, ಹಣ್ಣುಗಳನ್ನು ಖರೀದಿಸಿ, ಅವುಗಳನ್ನು ಮನೆ, ಮನೆಗೆ ತಲುಪಿಸುವುದರ ಜತೆಗೆ ಬಡವರು, ದಿನಗೂಲಿಗಳು, ನಿರ್ಗತಿಕರಿಗೂ ಉಚಿತವಾಗಿ ನೀಡಲಾಗಿದೆ.
ಇದೇ ವೇಳೆ 300ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಲಾಗಿದೆ.

Advertisement

ಗ್ರಾಮೀಣ ಮಹಿಳೆಯರಿಗೆ ಬಟ್ಟೆಯಿಂದ ಹ್ಯಾಂಡ್‌ ಮೇಡ್‌ ಬ್ಯಾಗ್‌ ತಯಾರಿಕೆ ತರಬೇತಿ ನೀಡಲಾಗುತ್ತಿದ್ದು, ಜತೆಗೆ ಮಹಿಳೆಯರು ತಯಾರಿಸುವ ಚಟ್ನಿಪುಡಿ,  ರೊಟ್ಟಿ, ಉಪ್ಪಿನಕಾಯಿ ಇನ್ನಿತರ ಪದಾರ್ಥಗಳಿಗೆ ಮಾರುಕಟ್ಟೆ ಕಲ್ಪಿಸುವ ಕಾರ್ಯವನ್ನು ನಿಸರ್ಗ ಸಂಸ್ಥೆ ಕೈಗೊಳ್ಳುತ್ತಿದೆ. ಆ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಹೊಸ ಚೈತನ್ಯ ಮೂಡಿಸುವ, ಆರ್ಥಿಕವಾಗಿ ಅವರನ್ನು ಸಬಲರನ್ನಾಗಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದೆ.

ಗ್ರಾಮೀಣ ಮಹಿಳೆಯರಿಗೆ ಸಾಕಷ್ಟು ಪ್ರತಿಭೆ ಇದ್ದರೂ ಅವರಿಗೆ ಅವಕಾಶ ಇಲ್ಲವಾಗಿದೆ. ಅನೇಕ ಪದಾರ್ಥಗಳನ್ನು ತಯಾರಿಸುವ ಕೈ ರುಚಿ ಇದ್ದರೂ, ಸೂಕ್ತ ಮಾರುಕಟ್ಟೆ ಇಲ್ಲವೆಂದು ಸುಮ್ಮನೆ ಕೂಡುವಂತಾಗಿದೆ. ಇದಕ್ಕೆ ವೇದಿಕೆ ಕಲ್ಪಿಸುವ ಕಾರ್ಯವನ್ನು ನಿಸರ್ಗ ಹಾಗೂ ವಿಧಿ ಟೆಕ್ನಾಲಾಜಿಸ್‌ ಮಾಡುತ್ತಿದೆ. ಗ್ರಾಮೀಣ ಮಹಿಳೆಯರೂ ಸಹ ಕಾಲ್‌ ಸೆಂಟರ್‌ ನಿರ್ವಹಣೆ ಮಾಡಬಲ್ಲರು ಎಂಬುದನ್ನು ಸಾಬೀತು ಪಡಿಸಲಾಗಿದೆ. ಅದರ ವಿಸ್ತರಣೆ ನಮ್ಮ ಮುಂದಿನ ಗುರಿಯಾಗಿದೆ.
ದಿವ್ಯಾರಾಣಿ ಕುಲಕರ್ಣಿ, ಸಂಸ್ಥಾಪಕಿ, ವಿಧಿ ಟೆಕ್ನಾಲಾಜಿಸ್‌.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next