Advertisement

ಕನ್ನಡದಲ್ಲಿ ಗ್ರಾಮೀಣ ಬ್ಯಾಂಕಿಂಗ್‌ ಪರೀಕ್ಷೆ

03:06 AM Jul 05, 2019 | sudhir |

ಹೊಸದಿಲ್ಲಿ: ಬ್ಯಾಂಕಿಂಗ್‌ ಪರೀಕ್ಷೆ ತೆಗೆದುಕೊಳ್ಳುವವರಿಗೊಂದು ಸಿಹಿ ಸುದ್ದಿ. ಶೀಘ್ರದಲ್ಲೇ ಕನ್ನಡಿಗರು, ಕನ್ನಡದಲ್ಲೇ ಬ್ಯಾಂಕ್‌ಗಳ ಸಿಬಂದಿ ನೇಮಕಾತಿ ಪರೀಕ್ಷೆ ಬರೆಯಬಹುದು. ಕರ್ನಾಟಕ ಸರಕಾರದ ಬಹುದಿನಗಳ ಬೇಡಿಕೆಗೆ ಕೇಂದ್ರ ಸರಕಾರ ಕಡೆಗೂ ಒಪ್ಪಿಗೆ ನೀಡಿದೆ.

Advertisement

ಈವರೆಗೆ ಕೇವಲ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ನಡೆಸಲಾಗುತ್ತಿದ್ದ ಬ್ಯಾಂಕ್‌ಗಳ ಸಿಬಂದಿ ನೇಮಕಾತಿ ಪರೀಕ್ಷೆಗಳನ್ನು ಇನ್ನು ಮುಂದೆ ಕನ್ನಡ ಸಹಿತ 13 ಪ್ರಾಂತೀಯ ಭಾಷೆಗಳಲ್ಲಿ ನಡೆಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ ಗುರುವಾರ ಘೋಷಿಸಿದರು.

ವಿವಿಧ ರಾಜ್ಯಗಳಲ್ಲಿನ ಪ್ರಾಂತೀಯ ಹಾಗೂ ಗ್ರಾಮೀಣ ಬ್ಯಾಂಕ್‌ (ಆರ್‌ಆರ್‌ಬಿ)ಗಳಲ್ಲಿನ ಅಧಿಕಾರಿಗಳು (ಶ್ರೇಣಿ-1) ಹಾಗೂ ಕಚೇರಿಯ ಸಹಾಯಕ ಸಿಬಂದಿಯ ನೇರ ನೇಮಕಾತಿ ಪರೀಕ್ಷೆಗಳನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಬೇಕು ಎಂಬುದು ಕರ್ನಾಟಕ ಸಹಿತ ಹಲವಾರು ರಾಜ್ಯ ಸರಕಾರಗಳ ಬೇಡಿಕೆಯಾಗಿತ್ತು.

ಇತ್ತೀಚೆಗಷ್ಟೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಚಂದ್ರಶೇಖರ್‌, ಬ್ಯಾಂಕಿಂಗ್‌ ಪರೀಕ್ಷೆಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾವಿಸಿದ್ದರು. ಆಗ ಉತ್ತರಿಸಿದ್ದ ನಿರ್ಮಲಾ ಸೀತಾರಾಮನ್‌, ಈ ಬಗ್ಗೆ ಹಲವಾರು ಸಂಸದರಿಂದ ಮನವಿಗಳು ಬಂದಿವೆ ಎಂದು ಹೇಳಿದ್ದರು.

ಇದೇ ವಿಚಾರವಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸ್ವಯಂ ಪ್ರೇರಿತವಾಗಿ ಉತ್ತರಿಸಿದ ಸಚಿವರು, ಪ್ರಾಂತೀಯ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಗ್ರಾಮೀಣ ಅಭ್ಯರ್ಥಿಗಳಿಗೆ ಪ್ರಾದೇಶಿಕ ಬ್ಯಾಂಕ್‌ಗಳಲ್ಲಿ ಉದ್ಯೋಗ ಸಂಪಾದಿಸುವ ಅವಕಾಶಗಳನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.

Advertisement

ಸೌಲಭ್ಯ ವಿಸ್ತರಣೆಗೆ ಆಗ್ರಹ

ವಿತ್ತ ಸಚಿವರ ಘೋಷಣೆಯನ್ನು ಸ್ವಾಗತಿಸಿದ ರಾಜ್ಯಸಭೆ ಸಂಸದ ಎಲ್. ಹನುಮಂತಯ್ಯ, ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ, ರಾಷ್ಟ್ರೀಯ ಬ್ಯಾಂಕ್‌ಗಳ ಸಿಬಂದಿ ನೇಮಕಾತಿಗೂ ಅನ್ವಯವಾಗುವಂತಾಗಲಿ ಎಂದು ಆಶಿಸಿದರು.

ಗಡುವು ಮುಗಿದ ದಿನವೇ ಘೋಷಣೆ!

ಆರ್‌ಆರ್‌ಬಿ ನೇಮಕಾತಿ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಬ್ಯಾಂಕಿಂಗ್‌ ಪರ್ಸನಲ್ ಸೆಲೆಕ್ಷನ್‌ (ಐಬಿಪಿಎಸ್‌) ಹೊತ್ತಿದೆ. ಪ್ರಸಕ್ತ ವರ್ಷದಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಸಿಬಂದಿ ನೇಮಕಾತಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜು. 4ರಂದು ಕೊನೆಯ ದಿನವಾಗಿತ್ತು. ಇದೇ ದಿನ ವಿತ್ತ ಸಚಿವರು 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಒಪ್ಪಿಗೆ ಘೋಷಿಸಿದ್ದಾರೆ. ಹೀಗಾಗಿ ಈ ವರ್ಷ ನಡೆಯುತ್ತದೆಯೋ ಅಥವಾ ಮುಂದಿನ ವರ್ಷವೋ ಎಂಬ ಬಗ್ಗೆ ಖಾತ್ರಿಯಾಗಿಲ್ಲ. ಒಂದು ವೇಳೆ ಐಬಿಪಿಎಸ್‌ ಎಲ್ಲ ಸಿದ್ಧತೆ ಮಾಡಿಕೊಂಡರೆ ಈ ವರ್ಷ ನಡೆಸಬಹುದು. ಈಗಾಗಲೇ ಪ್ರಕಟಿಸಿರುವಂತೆ ಈ ವರ್ಷದ ಪರೀಕ್ಷೆಗಳು ಆ. 3, 4, 11, 17, 18ರಂದು ನಡೆಯಲಿವೆ.
ಹೊಸ ಭಾಷೆಗಳು ಯಾವುವು?

ಕನ್ನಡ, ತೆಲುಗು, ತಮಿಳು, ಬಂಗಾಲಿ, ಅಸ್ಸಾಮಿ, ಗುಜರಾತಿ, ಕೊಂಕಣಿ, ಮಲಯಾಳ, ಮಣಿಪುರಿ, ಮರಾಠಿ, ಒರಿಯಾ, ಪಂಜಾಬಿ ಹಾಗೂ ಉರ್ದು. ಹಾಗೆಯೇ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲೂ ಪರೀಕ್ಷೆಗಳು ಮುಂದುವರಿಯಲಿವೆ.
ಎಲ್ಲರ ಪ್ರಯತ್ನಕ್ಕೆ ಫ‌ಲ ದೊರಕಿದ್ದು, ಕನ್ನಡ ಭಾಷೆಗೆ ಜಯ ಸಿಕ್ಕಿದೆ. ಇದಕ್ಕಾಗಿ ನಾಡಿನ ಸಮಸ್ತ ಜನರ ಪರವಾಗಿ ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಅಭಿನಂದನೆ ಸಲ್ಲಿಸಲಾಗುವುದು.
– ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ
ಕೇಂದ್ರದ ನಿರ್ಧಾರ ಸ್ವಾಗತಿಸುತ್ತೇನೆ. ಸ್ಥಳೀಯ ಬ್ಯಾಂಕ್‌ಗಳಿಗೆ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಥಳೀಯ ಭಾಷೆಯನ್ನು 1ರಿಂದ 10ನೇ ತರಗತಿಯವರೆಗೆ ಕಡ್ಡಾಯವಾಗಿ ಓದಿರಲೇಬೇಕೆಂಬ 2014ರ ನಿಯಮ ಹಿಂಪಡೆದರೆ ಕನ್ನಡಿಗರಿಗೆ ಇನ್ನಷ್ಟು ಅನುಕೂಲವಾಗುತ್ತದೆ.
– ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ
Advertisement

Udayavani is now on Telegram. Click here to join our channel and stay updated with the latest news.

Next