Advertisement

ಗ್ರಾಮೀಣ ಭಾಗ: ಕೋವಿಡ್‌ ಸೋಂಕು ನಾಲ್ಕೂವರೆ ಪಟ್ಟು ಹೆಚ್ಚಳ

11:39 PM Jan 25, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಏರಿಳಿತಗಳು ಕಂಡು ಬರುತ್ತಿರುವ ನಡುವೆ ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ನಾಲ್ಕೂವರೆ ಪಟ್ಟು ಏರಿಕೆಯಾಗಿದ್ದು, ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಶೇ. 32ರಷ್ಟು ಏರಿಕೆಯಾಗಿದೆ.

Advertisement

ಕಳೆದ ಹದಿನೈದು ದಿನದಲ್ಲಿ 2,97,595 ಸೋಂಕಿನ ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ ಬಳಲುತ್ತಿದ್ದ 151 ಮಂದಿ ಮೃತಪಟ್ಟಿದ್ದು, 1.37 ಲಕ್ಷ ಮಂದಿ ಸೋಂಕಿನಿಂದ ಗುಣಮುಖ ಹೊಂದಿದ್ದಾರೆ. ಪ್ರಸ್ತುತ ಬೆಂಗಳೂರು ನಗರವನ್ನು ಹೊರತುಪಡಿಸಿ, ಉಳಿದೆಲ್ಲ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣದಲ್ಲಿ ಶೇ. 32ರಷ್ಟು ಏರಿಕೆಯಾಗಿರುವುದರ ಜತೆಗೆ ಗ್ರಾಮೀಣ ಭಾಗದಲ್ಲಿಯೂ ಸೋಂಕಿನ ಪ್ರಮಾಣ ಏರಿಕೆಯಾಗಿದೆ.

81,408 ಪಾಸಿಟಿವ್‌
ರಾಜ್ಯದ 30 ಜಿಲ್ಲೆಗಳಲ್ಲಿ ಗ್ರಾಮೀಣ ಭಾಗದಲ್ಲಿ ಕಳೆದ ಹದಿನೈದು ದಿನದಲ್ಲಿ ಪಾಸಿಟಿವಿ ಏರಿಕೆಯಾಗಿದೆ. ಜ. 1ರಿಂದ 15ರ ವರೆಗೆ ರಾಜ್ಯದ ಗ್ರಾಮೀಣ ಭಾಗದಲ್ಲಿ 17,500 ಪಾಸಿಟಿವ್‌ ಪತ್ತೆಯಾಗಿತ್ತು. ಜ. 16ರಿಂದ 23ರ ವರೆಗೆ 81,408 ಪಾಸಿಟಿವ್‌ ವರದಿಯಾಗಿದೆ. ಆ ಮೂಲಕ ಕೇವಲ 15 ದಿನದಲ್ಲಿ ಗ್ರಾಮೀಣ ಭಾಗದಲ್ಲಿ 63,000 ಪ್ರಕರಣಗಳು ಅಧಿಕವಾಗಿವೆ.

ರಾಜ್ಯದ 15 ಜಿಲ್ಲೆಯಲ್ಲಿನ ಗ್ರಾಮೀಣ ಭಾಗದಲ್ಲಿ ನಗರ ಭಾಗಕ್ಕಿಂತ ಅಧಿಕ ಸಂಖ್ಯೆಯಲ್ಲಿ ಸೋಂಕು ದೃಢಗೊಂಡಿದೆ. ಹಾಸನ 9,866, ಮಂಡ್ಯ 9,144, ಬೆಂಗಳೂರು ಗ್ರಾಮಾಂತರ 4,818, ಉಡುಪಿ 5,145, ಕೋಲಾರ 3,899, ಚಿಕ್ಕಬಳ್ಳಾಪುರ 2,114, ಉತ್ತರ ಕನ್ನಡ 2899, ಚಾಮರಾಜನಗರ2479, ಕೊಡಗು 2357, ಚಾಮರಾಜ ನಗರ 1580, ಕೊಪ್ಪಳ 1076, ಚಿಕ್ಕಮಗಳೂರು 1,530, ಕೊಪ್ಪಳ 1076, ಹಾವೇರಿ 412, ಯಾದಗಿರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 206 ಪ್ರಕರಣಗಳು ಪತ್ತೆಯಾಗಿವೆ.

ಇದನ್ನೂ ಓದಿ:ರಾಜ್ಯದಲ್ಲಿ ಇಂದು ಕೋವಿಡ್ ಗೆ 52 ಬಲಿ : 41,400 ಹೊಸ ಪ್ರಕರಣಗಳು

Advertisement

15 ದಿನದಲ್ಲಿ 56 ಸಾವಿರ ಮಕ್ಕಳಿಗೆ ಕೊರೊನಾ
ರಾಜ್ಯ ದಲ್ಲಿ ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗಿರುವ ಪರಿಣಾಮ, ಕಳೆದ 15 ದಿನಗಳಲ್ಲಿ 56 ಸಾವಿರ ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

1ರಿಂದ 9ನೇ ವಯಸ್ಸಿನ 8,656 ಮಕ್ಕಳು ಹಾಗೂ 10ರಿಂದ 19ನೇ ವಯಸ್ಸಿನ 47,791 ಮಕ್ಕಳಲ್ಲಿ ಸೋಂಕು ಕಾಣಿಸಿ ಕೊಂಡಿದೆ. ಒಟ್ಟಾರೆ 56,447 ಮಕ್ಕಳಲ್ಲಿ ಕೊರೊನಾ ದೃಢಪಟ್ಟಿದ್ದು, 8 ಮಕ್ಕಳು ಕೂಡ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶದಲ್ಲಿ ತಿಳಿದುಬಂದಿದೆ.

ಕೊರೊನಾ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಮೈಸೂರು, ಹಾಸನ, ಬೆಳಗಾವಿ, ಹುಬ್ಬಳ್ಳಿ ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಾಲೆಗಳಿಗೆ ಸಂಪೂರ್ಣವಾಗಿ ರಜೆ ನೀಡಲಾಗಿತ್ತು. ಇದಲ್ಲದೆ, ಸೋಂಕು ಕಾಣಿಸಿಕೊಂಡಿದ್ದ ರಾಜ್ಯದ ಇತರ 21 ಜಿಲ್ಲೆಗಳ ಸುಮಾರು 146 ಶಾಲೆಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.

ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ. 22ರಿಂದ ಶೇ. 32ಕ್ಕೆ ಏರಿಕೆಯಾಗಿದೆ. ಕಳೆದೆರಡು ಅಲೆಗಳಲ್ಲಿ ಸಹ ಬೆಂಗಳೂರಿನಲ್ಲಿ ಸೋಂಕು ಇಳಿಕೆ ಪ್ರಾರಂಭವಾಗುತ್ತಿದ್ದಂತೆ ಇತರ ಜಿಲ್ಲೆಗಳಲ್ಲಿ ಸೋಂಕು ತೀವ್ರತೆ ಕಾಣುತ್ತಿದೆ. ಆರೋಗ್ಯದ ಮೇಲೆ ಸೋಂಕಿನ ತೀವ್ರತೆ ಕಮ್ಮಿ ಇದೆ. ಸೋಂಕಿತರು 6 ದಿನಗಳಲ್ಲಿ ಗುಣಮುಖರಾಗುತ್ತಿದ್ದಾರೆ. ಎರಡರಿಂದ ಮೂರು ವಾರ ಜನರು ಸರಕಾರದೊಂದಿಗೆ ಸಹಕಾರ ನೀಡಿದರೆ ಮೂರನೇ ಅಲೆಯಿಂದ ಹೊರ ಬರಲು ಸಾಧ್ಯ.
– ಡಾ| ಕೆ. ಸುಧಾಕರ್‌, ಆರೋಗ್ಯ ಸಚಿವ

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next