Advertisement

ಪಾಳುಬಿದ್ದಿದೆ ಹಳೆಯ ಉಪನೋಂದಣಿ ಕಚೇರಿ ಕಟ್ಟಡ

03:35 PM Apr 27, 2019 | Team Udayavani |

 

Advertisement

ನಗರ ಎ. 26: ಉಪನೋಂದಣಿ ಕಚೇರಿ ಹಳೇ ಕಟ್ಟಡವೀಗ ಪಾಳುಬಿದ್ದಿದೆ. ಸರಕಾರಿ ಸೇವೆಗಳನ್ನು ನೀಡುವ ಇಲಾಖೆ ಗಳನ್ನು ಒಂದೇ ಸೂರಿನಡಿ ತರುವ ಉದ್ದೇಶ ದಿಂದ ಪುತ್ತೂರು ಉಪನೋಂದಣಿ ಕಚೇರಿ ಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಿದ ಅನಂತರ ಹಳೆ ಉಪನೋಂದಣಿ ಕಚೇರಿ ಕಟ್ಟಡ ಭಿಕ್ಷುಕರ, ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ.

ಈ ಹಿಂದೆ ಇದ್ದ ಪುತ್ತೂರು ಉಪ ನೋಂದಣಿ ಕಚೇರಿ ಇಕ್ಕಟ್ಟಾಗಿದ್ದು, ವಿಸ್ತರಿಸುವ ಅಗತ್ಯವಿರುವ ಕಾರಣ ಈ ಕಚೇರಿ ಪುತ್ತೂರು ಮಿನಿ ವಿಧಾನಸೌಧಕ್ಕೆ ಶಿಫ್ಟ್‌ ಮಾಡಲಾಯಿತು. ಇದಕ್ಕೂ ಮುನ್ನ ಈ ಕಟ್ಟಡದಲ್ಲೇ ಉಪನೋಂದಣಿ ಕಚೇರಿಯನ್ನು ಉಳಿಸಿಕೊಂಡು ಕಟ್ಟಡ ವಿಸ್ತರಣೆ, ಹಳೇ ಕಟ್ಟಡ ನವೀಕರಣ ಯೋಜನೆಗೂ ಕೈ ಹಾಕಲಾಯಿತು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಪ್ರಸ್ತಾವನೆಯನ್ನು ಆಹ್ವಾನಿಸಲಾಗಿತ್ತು. ಆಗ ಉಪನೋಂದಣಿ ಕಚೇರಿಯ ಬದಿಯಿಂದ ಒಂದು ಹಾಲ್ ತೆಗೆದುಕೊಳ್ಳುವ ರೂಪುರೇಷೆ ತಯಾರಿಸಲಾಯಿತು. ಇದರ ನೀಲನಕಾಶೆಯನ್ನು ತಯಾರಿಸಲಾಯಿತು. ಈಗಿನ ಕಟ್ಟಡಕ್ಕೆ ಒಂದು ಬದಿಯಿಂದ ಹಾಲ್ ತೆಗೆದುಕೊಳ್ಳುವುದನ್ನು ನಕಾಶೆಯಲ್ಲಿ ತೋರಿಸಲಾಗಿದೆ.

ಸಚಿವಾಲಯಕ್ಕೆ ಪ್ರಸ್ತಾವನೆ:

ಹಳೇ ಉಪನೋಂದಣಿ ಕಚೇರಿಯಿರುವ ಜಾಗ ಪುತ್ತೂರು ಸರಕಾರಿ ಆಸ್ಪತ್ರೆಯ ಹೆಸರಿನಿಂದ ಉಪನೋಂದಣಿ ಕಚೇರಿಗೆ ವರ್ಗಾಯಿಸಿ ಕಟ್ಟಡ ನಿರ್ಮಿಸುವ ಯೋಜನೆ ಇರಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪುತ್ತೂರು ಜಿಲ್ಲೆ ಆಗುವ ನಿಟ್ಟಿನಲ್ಲಿ ಪುತ್ತೂರಿಗೆ ಸುಸಜ್ಜಿತ ಉಪನೋಂದಣಿ ಕಚೇರಿ ಅಗತ್ಯ. ಉಪನೋಂದಣಿ ಕಚೇರಿ ನಿರ್ಮಾಣ ಮಾಡುವ ಯೋಜನೆ ಸದ್ಯ ಚೆಂಡು ರಾಜ್ಯ ಸರಕಾರದ ಹಣಕಾಸು ಸಚಿವಾಲಯದ ಅಂಗಳದಲ್ಲಿದೆ. ಅಂದರೆ ಪುತ್ತೂರು ನೋಂದಣಿ ಕಚೇರಿಯಿಂದ ಕಳುಹಿಸಿದ ಪ್ರಸ್ತಾವನೆ ಜಿಲ್ಲಾ ನೋಂದಣಿ ಅಧಿಕಾರಿ ಮೂಲಕ ರಾಜ್ಯದ ನೋಂದಣಿ ಪರಿವೀಕ್ಷಕ ಮತ್ತು ಮುದ್ರಾಂಕ ಆಯುಕ್ತರ ಕಚೇರಿಗೆ ಕಳುಹಿಸಲಾಯಿತು. ಅವರು ಅನುದಾನ ಬಿಡುಗಡೆ ಮಾಡಲು ಹಣಕಾಸು ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

Advertisement

ಕಟ್ಟಡ ನಿರ್ಮಾಣ ಕಷ್ಟ:

ಎ.ಬಿ. ಇಬ್ರಾಹಿಂ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಗೆ ವೇಗ ಸಿಕ್ಕಿತು. ಇದರ ಮೊದಲ ಹಂತವಾಗಿ ಉಪನೋಂದಣಿ ಕಚೇರಿ ಜಾಗ ಪಹಣಿ ತಿದ್ದುಪಡಿ ಮಾಡಲಾಯಿತು. ಆರ್‌ಟಿಸಿ ಕಲಂ 9ರಲ್ಲಿದ್ದ ಉಪನೋಂದಣಿ ಕಚೇರಿ ಹೆಸರನ್ನು ತೆಗೆದು ಹಾಕಿ ಸರಕಾರ ಎಂದು ನಮೂದಿಸಲಾಯಿತು. ಕಲಂ 11ರಲ್ಲಿ ಸರಕಾರ ಎಂದೇ ಇತ್ತು. ಆದ್ದರಿಂದ ಉಪನೋಂದಣಿ ಕಚೇರಿಗೆ ಜಾಗವನ್ನು ಹಸ್ತಾಂತರ ಮಾಡಿಲ್ಲ ಎಂದು ಪರಿಗಣಿಸಿ, ಸರಕಾರಕ್ಕೆ ಮತ್ತೆ ಪಡೆದುಕೊಳ್ಳಲಾಯಿತು. ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಅರ್ಜಿ ಆಹ್ವಾನಿಸಿ ಈ ಜಾಗವನ್ನು ಆಸ್ಪತ್ರೆ ಹೆಸರಿಗೆ ವರ್ಗಾಯಿಸಲಾಯಿತು.

ಪಾಳುಬಿದ್ದ ಕಟ್ಟಡ:

ಪ್ರಸ್ತುತ ಉಪನೋಂದಣಿ ಕಚೇರಿ ಇರುವ ಜಾಗ ಆಸ್ಪತ್ರೆಯ ಹೆಸರಿನಲ್ಲಿದೆ. ಹಾಗಿರುವಾಗ, ಉಪನೋಂದಣಿ ಕಚೇರಿ ಕಟ್ಟಡವನ್ನು ವಿಸ್ತರಿಸುವುದು ಹೇಗೆ? ಇದಕ್ಕೆ ಇಲಾಖೆಯಿಂದ ಅನುಮತಿ ಸಿಗುತ್ತದೆಯೇ? ಒಂದು ವೇಳೆ ಕಟ್ಟಡ ನಿರ್ಮಿಸಿದರೂ, ಮುಂದೊಂದು ದಿನ ಕಚೇರಿ ಶಿಫ್ಟ್‌ ಆದಾಗ ಕಟ್ಟಡ ಪಾಳು ಬೀಳುವುದಿಲ್ಲವೇ? ಎನ್ನುವ ಪ್ರಶ್ನೆಗಳು ಮೂಡಿವೆ.

ಈ ಕಟ್ಟಡಕ್ಕೆ ಅಂದಾಜು 15.40 ಲಕ್ಷ ರೂ. ಅನುದಾನದ ಅಗತ್ಯವಿದೆ ಎಂದು ತಿಳಿಸಲಾಗಿದೆ. ಆದರೆ ಹಳೇ ಉಪನೋಂದಣಿ ಕಚೇರಿಯಿರುವ ಜಾಗ ಪುತ್ತೂರು ಸರಕಾರಿ ಆಸ್ಪತ್ರೆಗೆ ಸೇರಿದ್ದು ಎನ್ನುವ ತಕರಾರು ಬಂದ ಕಾರಣ ತತ್‌ಕ್ಷಣದಲ್ಲಿ ಯೋಜನೆ ಕೈಬಿಟ್ಟು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಲಾಯಿತು.

 

ಆಸ್ಪತ್ರೆಯ ಸುಪರ್ದಿಯಲ್ಲಿದೆ:

ಉಪನೋಂದಣಿ ಕಚೇರಿ ಹಳೆಯ ಕಟ್ಟಡ ಪುತ್ತೂರು ಸರಕಾರಿ ಆಸ್ಪತ್ರೆ ಸುಪರ್ದಿಯಲ್ಲಿದೆ. ಅದರ ನಿರ್ವಹಣೆಯನ್ನು ಅವರೇ ನೋಡಿಕೊಳ್ಳಬೇಕು. -ಎಚ್.ಕೆ.ಕೃಷ್ಣಮೂರ್ತಿ ಪುತ್ತೂರು ಉಪವಿಭಾಗಾಧಿಕಾರಿ

.ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next