Advertisement

RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

12:06 AM Jun 20, 2024 | Team Udayavani |

ಕುಂದಾಪುರ: ರೈತರ ಪಹಣಿಗಳಿಗೆ ಆಧಾರ್‌ ಜೋಡಣೆ ಮಾಡುವ ಪ್ರಕ್ರಿಯೆಯ ಗೊಂದಲ ಇನ್ನೂ ಪೂರ್ಣಪ್ರಮಾಣದಲ್ಲಿ ಬಗೆಹರಿದಿಲ್ಲ. ಈ ಬಗ್ಗೆ ಕಂದಾಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಕುಂದಾಪುರದ ಕಂದಾಯ ಇಲಾಖೆ ಇದಕ್ಕಾಗಿಯೇ ಸಿಬಂದಿಯನ್ನು ಪ್ರತ್ಯೇಕಿಸಿ ರೈತರನ್ನು ಸಂಪರ್ಕಿಸಿ ಲಿಂಕ್‌ ಮಾಡಿಸುತ್ತಿದೆ.

Advertisement

ಗೊಂದಲ ನಿವಾರಣೆ
ಕೇಂದ್ರ ಸರಕಾರದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಶೇ. 44ರಷ್ಟು ರೈತರು 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದಾರೆ. ಆದರೆ ರಾಜ್ಯ ಸರಕಾರ, ರಾಜ್ಯದಲ್ಲಿ ಶೇ.70ರಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ ಎನ್ನುತ್ತಿದೆ. ಈ ಗೊಂದಲ ಆಧಾರ್‌ಲಿಂಕ್‌ ಮೂಲಕ ನಿವಾರಣೆಯಾಗಲಿದೆ. ಆಂಧ್ರಪ್ರದೇಶದಲ್ಲಿ ಈಗಾಗಲೇ ಆಧಾರ್‌ ಜತೆ ಪಹಣಿಯನ್ನು ಜೋಡಿಸಲಾಗಿದೆ.

ಯಾಕಾಗಿ ಜೋಡಣೆ?
ಸ‌ಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಲು ಹಾಗೂ ಸರಕಾರದ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಲು, ರೈತರು ತಮ್ಮ ಪಹಣಿಗಳನ್ನು ಆಧಾರ್‌ ಜತೆಗೆ ಜೋಡಿಸಬೇಕು ಎನ್ನುವುದು ಸರಕಾರದ ಯೋಚನೆ. ಇದರಿಂದ ಕೃಷಿ ಭೂಮಿ ಸಂಬಂಧಿಸಿದ ವಂಚನೆಗಳನ್ನು ಕಡಿಮೆ ಮಾಡಬಹುದು ಮತ್ತು ಮಾಲಕತ್ವಕ್ಕೆ ಸಂಬಂ ಧಿಸಿದ ಗೊಂದಲವೂ ನಿವಾರಣೆಯಾಗಲಿದೆ.

ಸ್ವತಃ ಜೋಡಣೆ ಸಾಧ್ಯ
ಈ ಪ್ರಕ್ರಿಯೆ ಉಚಿತವಾಗಿದ್ದು, ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ನಿಮ್ಮ ಆಧಾರ್‌ ಕಾರ್ಡ್‌ನಲ್ಲಿರುವ ಹೆಸರು ಮತ್ತು ಪಹಣಿಯಲ್ಲಿರುವ ಹೆಸರು ಒಂದೇ ಆಗಿರಬೇಕು. ರೈತರು ತಮ್ಮ ಭೂಮಿ ಪಹಣಿ ಮತ್ತು ಆಧಾರ್‌ ದಾಖಲೆಗಳೊಂದಿಗೆ
https://landrecords.karnataka.gov.in/
https://landrecords.karnataka.gov.in/service
ವೆಬ್‌ಸೈಟ್‌ಗೆ ಲಾಗ್‌ಇನ್‌ ಮಾಡಬಹುದು. ಬಳಿಕ ಪಹಣಿಯನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡಬಹುದು.

ವ್ಯತ್ಯಾಸ ಇದ್ದರೆ ಆಗದು
ಆಧಾರ್‌ ಮತ್ತು ಪಹಣಿಯಲ್ಲಿ ನಮೂದಾದ ಹೆಸರಿನಲ್ಲಿ ವ್ಯತ್ಯಾಸ ಇದ್ದರೆ ಸ್ವತಃ ಲಿಂಕ್‌ ಮಾಡಲು ಸಾಧ್ಯವಾಗುವುದಿಲ್ಲ. ಈ ಮೊದಲು ಆರ್‌ಟಿಸಿಯಲ್ಲಿ ಹೆಸರು ತಿದ್ದುಪಡಿ ಮಾಡಬೇಕು, ಅದಕ್ಕಾಗಿ ಸಹಾಯಕ ಕಮಿಷನರ್‌ಗೆ ಮೇಲ್ಮನವಿ ಮಾಡಬೇಕು, ವಕೀಲರನ್ನು ನೇಮಿಸಬೇಕು ಎಂಬ ಗೊಂದಲಗಳಿದ್ದವು. ಆದರೆ ಈ ಬಗೆಯ ಎಲ್ಲ ಗೊಂದಲಗಳನ್ನು ಸರಕಾರ ಬಗೆಹರಿಸಿದೆ. ಪಹಣಿ ಮತ್ತು ಆಧಾರ್‌ ನೋಂದಣಿಯೊಂದಿಗೆ ಸಂಬಂ ಧಿಸಿದ ಗ್ರಾಮ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅಧಿ ಕಾರಿಗಳು ಸಹಾಯ ಮಾಡುತ್ತಾರೆ.

Advertisement

ಸ್ವಯಂ ಮಾಡಿದರೂ ಕರೆ
ಕೆಲವು ಕಡೆ ಸ್ವತಃ ಲಿಂಕ್‌ ಮಾಡಿದವರಿಗೆ ವಿಎಗಳು ಕರೆ ಮಾಡಿ ಮತ್ತೆ ವಿಎ ಕಚೇರಿಗೆ ಬರುವಂತೆ ತಿಳಿಸುತ್ತಿದ್ದಾರೆ. ಸ್ವತಃ ಲಿಂಕ್‌ ಮಾಡುವಾಗ ಖಾತೆದಾರರ ಭಾವಚಿತ್ರ ಅಪ್‌ಲೋಡ್‌ ಮಾಡಲು ಅವಕಾಶ ಇಲ್ಲ. ಆದ್ದರಿಂದ ವಿಎ ಕಚೇರಿಗೆ ತೆರಳಬೇಕಾಗುತ್ತದೆ. ವಿಎ ಕಚೇರಿಯಲ್ಲಿ ಆಧಾರ್‌ ಭಾವಚಿತ್ರವನ್ನೇ ಅದಕ್ಕೆ ಅಳವಡಿಸುವ ಅಥವಾ ಪ್ರತ್ಯೇಕ ಭಾವಚಿತ್ರ ಅಪ್‌ಲೋಡ್‌ ಮಾಡುವ ಸೌಲಭ್ಯ ಇದೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗಲಿ ಎಂದು ಸರಕಾರ ಮಾಡಿದ ವೆಬ್‌ಸೈಟ್‌ ಗೊಂದಲದ ಗೂಡಾಗಿದೆ.

ಆಧಾರ್‌ ಜೋಡಣೆಗೆ
ಮನೆ ಮನೆ ಭೇಟಿ
ಕಂದಾಯ ಸಚಿವ ಕೃಷ್ಣ ಭೈರೇಗೌಡರ ಸೂಚನೆಯಂತೆ, ಕೃಷಿ ಭೂಮಿ ಖಾತೆಗೆ ಆಧಾರ್‌ ಜೋಡಣೆ ಕಾರ್ಯ ವೇಗವಾಗಿ ನಡೆಯುತ್ತಿದೆ. ತಿಂಗಳ ಹಿಂದೆ ದ.ಕ. ಜಿಲ್ಲೆಯಲ್ಲಿ 7.05 ಶೇ., ಉಡುಪಿ ಜಿಲ್ಲೆಯಲ್ಲಿ 7.35 ಶೇ. ಮಾತ್ರ ಪ್ರಗತಿಯಾಗಿರುವ ಕಾರಣ ಈಗ ಖಾತೆದಾರರ ಮನೆಮನೆಗೆ ಭೇಟಿ ನೀಡಿ ಲಿಂಕ್‌ ಮಾಡಿಸಲಾಗುತ್ತಿದೆ. ಗ್ರಾಮ ಲೆಕ್ಕಾ ಧಿಕಾರಿಗಳು ಖಾತೆದಾರರ ಮನೆಗಳಿಗೆ ಭೇಟಿ ನೀಡಿ ಅವರ ಆಧಾರ್‌ ಕಾರ್ಡ್‌ಗಳನ್ನು ಖಾತೆಗಳೊಂದಿಗೆ ಜೋಡಿಸುತ್ತಿದ್ದಾರೆ. ಕಂದಾಯ ಇಲಾಖೆಗೆ ಜೂ.14ರ ಗಡುವು ನೀಡಲಾಗಿದ್ದು, ಸಾಮಾನ್ಯವಾಗಿ ಕರಾವಳಿಯಲ್ಲಿ ಸರಾಸರಿ ಒಬ್ಬ ಕೃಷಿಕನಿಗೆ 10-15 ಸರ್ವೇ ನಂಬರ್‌ ಇದ್ದು, ಇವೆಲ್ಲವನ್ನೂ ಈಗ ಪತ್ತೆ ಮಾಡಿ ಮತ್ತೆ ಲಿಂಕ್‌ ಮಾಡುವುದು ಸವಾಲಾಗಿದೆ.

ಗೊಂದಲ ಬೇಡ
ಆಧಾರ್‌ ಹಾಗೂ ಪಹಣಿಯಲ್ಲಿ ಹೆಸರು ವ್ಯತ್ಯಾಸ ಇದ್ದರೆ ವೆಬ್‌ಸೈಟ್‌ ಸೀÌಕರಿಸುವುದಿಲ್ಲ. ಹಾಗಂತ ಆರ್‌ಟಿಸಿ ತಿದ್ದುಪಡಿಯಾಗಬೇಕೆಂಬ ಗೊಂದಲ ಬೇಡ. ವಿಎ ಬಳಿ ತೆರಳಿದರೆ ಅವರ ಲಾಗಿನ್‌ ಮೂಲಕ ಲಿಂಕ್‌ ಮಾಡಲು ಸಾಧ್ಯವಿದೆ. ಈ ಬಗ್ಗೆ ಎಲ್ಲ ವಿಎಗಳಿಗೆ ಸೂಚನೆ ನೀಡಲಾಗಿದೆ.
-ರಶ್ಮೀ ಎಸ್‌.ಆರ್‌. ಸಹಾಯಕ ಕಮಿಷನರ್‌, ಕುಂದಾಪುರ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next