Advertisement

RSS;ಶತಮಾನ ಸಂಭ್ರಮಕ್ಕೆ ‘ಪಂಚಪರಿವರ್ತನ’: 3 ಹಂತದಲ್ಲಿ 5 ತತ್ತ್ವಗಳ ಪಾಲನೆ

01:28 AM Oct 13, 2024 | Team Udayavani |

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರೆಸ್ಸೆಸ್‌) 100 ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಸಮಾಜದಲ್ಲಿ ಗುಣಾತ್ಮಕ ಬದಲಾವಣೆಗಾಗಿ “ಪಂಚ ಪರಿವರ್ತನಾ’ ಎಂಬ ಕಾರ್ಯಕ್ರಮ ಜಾರಿಗೆ ಮುಂದಾಗಿದೆ.

Advertisement

ಮುಂದಿನ 1 ವರ್ಷ ಕಾಲ ಈ ಅಭಿಯಾನವನ್ನು ನಿತ್ಯ ಜೀವನದ ಭಾಗವಾಗಿ ಜೋಡಿಸುವುದಕ್ಕೆ ಸಂಘ ಚಿಂತಿಸಿದ್ದು, ಪಂಚ ಪರಿವರ್ತನೆಯನ್ನು “ಶತಾಬ್ದ ಘೋಷಣೆ’ ಎಂದು ಪರಿಗಣಿಸಿದೆ.ಸರಸಂಘ ಚಾಲಕ ಮೋಹನ್‌ ಭಾಗವತ್‌ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ನಿರ್ದೇಶನದಂತೆ ಸಮಾಜದ ಗುಣಾತ್ಮಕ ಪರಿವರ್ತನೆ ದೃಷ್ಟಿಯಿಂದ ಈ ಕಲ್ಪನೆ ರೂಪಿಸಿದ್ದು, ವಿವಿಧ ಸ್ತರಗಳಲ್ಲಿರುವ ಕೋಟ್ಯಂತರ ಕಾರ್ಯಕರ್ತರು ಈ 5 ತಣ್ತೀಗಳನ್ನು 3 ಹಂತದಲ್ಲಿ ಪಾಲನೆ ಮಾಡುವುದರೊಂದಿಗೆ ಅಭಿಯಾನ ನಡೆಯಲಿದೆ.

ಇಡೀ ದೇಶಕ್ಕೆ ಅನ್ವಯವಾಗುವಂಥ ಬೃಹತ್‌ ಅಭಿಯಾನ, ಶಿಬಿರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಅನುಭವ ಇರುವ ಆರೆಸ್ಸೆಸ್‌ ಶತಮಾನದ ಸಂಭ್ರಮದಲ್ಲಿ ಇದ್ಯಾವುದಕ್ಕೂ ಆದ್ಯತೆ ನೀಡದೆ “ಪಂಚ ಪರಿವರ್ತನೆ’ಯನ್ನೇ ಪ್ರಧಾನವಾಗಿಟ್ಟುಕೊಳ್ಳಲು ನಿರ್ಧರಿಸಿದೆ.

ಸಂಘಟನೆಯೊಂದು 100 ವರ್ಷ ತಲುಪುವುದು ನಾಗರಿಕ ಸಮಾಜದಲ್ಲಿ ಒಂದು ಮೈಲುಗಲ್ಲು. ಆದರೆ ವಿಶ್ವದ ಅತಿದೊಡ್ಡ ಸಾಮಾಜಿಕ ಸಂಘಟನೆಯಾದ ಆರೆಸ್ಸೆಸ್‌ ಈ ಸಂದರ್ಭದಲ್ಲಿ ವಿನೂತನವಾಗಬೇಕು. “ಸಮಾಜದಲ್ಲಿ ಆರೆಸ್ಸೆಸ್‌ ಅಲ್ಲ, ಸಮಾಜವೇ ಆರೆಸ್ಸೆಸ್‌’ ಎಂಬ ಕಲ್ಪನೆಯೊಂದಿಗೆ ಪಂಚಪರಿವರ್ತನಾ ಅಭಿಯಾನ ನಡೆಸಬೇಕೆಂದು ದತ್ತಾತ್ರಯ ಹೊಸಬಾಳೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಯಾವುದು ಈ ಸೂತ್ರ?
“ಸಾಮರಸ್ಯ, ಕುಟುಂಬ ಪ್ರಬೋಧನಾ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಹಾಗೂ ನಾಗರಿಕ ಶಿಷ್ಟಾಚಾರ ಪಾಲನೆ’ ಈ 5 ತಣ್ತೀಗಳಾಗಿವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಸಮಾಜದಲ್ಲಿ ಇನ್ನೂ ಜಾತೀಯತೆ ತೊಲಗಿಲ್ಲ. ಈ ಹಿನ್ನೆಲೆಯಲ್ಲಿ ಸಾಮರಸ್ಯ’ ಎಂಬ ತತ್ವವನ್ನು ವ್ರತದಂತೆ ಪಾಲಿಸಬೇಕೆಂಬುದು ಸಂಘದ ನಿಲುವಾಗಿದೆ. ದೇವಸ್ಥಾನ, ಸ್ಮಶಾನ, ಜಲಮೂಲಗಳ ಬಳಕೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಜಾತೀ ಯ ತೆ ಸಲ್ಲ. ಜಾತಿ ಮೀರಿದ ಬಾಂಧವ್ಯ ಸಮಾಜದಲ್ಲಿ ಬೆಳೆಯಬೇಕೆಂಬುದು ಈ ಪೈಕಿ ಮೊದಲನೆಯದಾಗಿದೆ.

Advertisement

ಎರಡನೆಯದಾಗಿ “ಕುಟುಂಬ ಪ್ರಬೋಧನಾ’. ಸಮಾಜದಲ್ಲಿ ಮೌಲ್ಯಗಳು ಶಿಥಿಲಗೊಳ್ಳುತ್ತಿವೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ 6 ಅಂಶಗಳ ಮೂಲಕ ಭಾರತೀಯ ಕುಟುಂಬ ಸಂಸ್ಕಾರದ ಮರು ಸ್ಥಾಪನೆ ಸಂಘದ ಉದ್ದೇಶವಾಗಿದೆ. ಭಾಷಾ (ಮಾತೃ ಭಾಷೆ ಪಾಲನೆ), ಭೂಷ (ಭಾರತೀಯ ವಸ್ತ್ರ ಪದ್ಧತಿ), ಭಜನ್‌ (ಆರಾಧನಾ ವಿಧಾನ), ಭೋಜನ (ಭಾರತೀಯ ಆಹಾರ ಪದ್ಧತಿ), ಭ್ರಮಣ್‌ ( ಕೌಟುಂಬಿಕ ಪ್ರವಾಸ) ಹಾಗೂ ಭವನ ( ಭಾರತೀಯ ಕುಟುಂಬ ಕಲ್ಪನೆ) ಇದರ ಭಾಗವಾಗಿದೆ.

ಪರಿಸರ ಸಂರಕ್ಷಣೆ 3ನೇ ಅಂಶವಾಗಿದ್ದು, ಸಸ್ಯ ಪಾಲನೆ, ಜಲ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್‌ ಹಠಾವೋ ಇದರಲ್ಲಿ ಸೇರುತ್ತದೆ. 4ನೇ ವಿಚಾರ ಸ್ವದೇಶಿ ಜೀವನ ಶೈಲಿಗೆ ಸಂಬಂಧಪಟ್ಟಿದ್ದು, ಇದರಲ್ಲಿ ಮಾತೃಭಾಷಾ ಶಿಕ್ಷಣವೂ ಸೇರಿದೆ. 5ನೇಯದು ಸಂಘದ ದೃಷ್ಟಿಯಲ್ಲಿ ಅತ್ಯಂತ ಮಹತ್ವಪೂರ್ಣವಾಗಿದ್ದು, ಸಂವಿಧಾನದಲ್ಲಿ ಉಲ್ಲೇಖಿತವಾದ ಮೂಲಭೂತ ಕರ್ತವ್ಯದ ಪಾಲನೆಯೂ ಸೇರಿದಂತೆ ಸಮಾಜದಲ್ಲಿ ನಾಗರಿಕ ಶಿಷ್ಟಾಚಾರ ಹಾಗೂ ನಾವೇ ಮಾಡಿದ ಕಾನೂನುಗಳ ಸ್ವಯಂ ಪಾಲನೆ ಸೇರಿದೆ.

100 ವರ್ಷದಲ್ಲಿ ಸಂಘ ತಲುಪದ ಕ್ಷೇತ್ರವೇ ಇಲ್ಲ. ಪಂಚ ಪರಿವರ್ತನೆ ಎಂಬ ಶತಾಬ್ದಿ ಘೋಷಣೆ ಸಮಾಜದ ಒಟ್ಟಾರೆ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ನಾಗರಿಕ ಕರ್ತವ್ಯ ಪಾಲನೆ ಕ್ಷೀಣಿಸುತ್ತಿದೆ. ಜವಾಬ್ದಾರಿಯುತ ಸಮಾಜ ಎಲ್ಲರ ಬಯಕೆಯಾಗಿದ್ದು, ಸಂಘದ ಈ ಉದಾತ್ತ ಕಲ್ಪನೆಯ ಅನುಷ್ಠಾನದಲ್ಲಿ ನಾವೆಲ್ಲರೂ ಮೊದಲಿಗರಾಗೋಣ.
ವಿ. ಸುನಿಲ್‌ ಕುಮಾರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next